ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಜಯಭೇರಿ ಬಾರಿಸಿ ಸರ್ಕಾರ ರಚಿಸಲು ಮಹಾಯುತಿ ಸಿದ್ಧವಾಗುತ್ತಿದ್ದಂತೆ ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ, ಉಪ ಮುಖ್ಯಮಂತ್ರಿಗಳಾದ ದೇವೇಂದ್ರ ಫಡ್ನವೀಸ್ ಮತ್ತು ಅಜಿತ್ ಪವಾರ್ ಹಾಗೂ ಮೈತ್ರಿ ಕೂಟದ ಮುಖಂಡರು ಇಂದು ಸುದ್ದಿಗೋಷ್ಠಿ ನಡೆಸಿ ಸಿಹಿ ವಿನಿಮಯ ಮಾಡಿಕೊಂಡರು. ಈ ವೇಳೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಜಿತ್ ಪವಾರ್, ಮಹಾರಾಷ್ಟ್ರದ ಅಭಿವೃದ್ಧಿಯಿಂದಾಗಿ ಮಹಾರಾಷ್ಟ್ರದ ಜನರು ಮಹಾಯುತಿಯನ್ನು ಬೆಂಬಲಿಸಿದ್ದಾರೆ ಎಂದಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಏಕನಾಥ್ ಶಿಂಧೆ, ನಮ್ಮ ಸರ್ಕಾರ ಶ್ರೀಸಾಮಾನ್ಯನ ಸರ್ಕಾರವಾಗಿತ್ತು. ಪ್ರಧಾನಿ ಮೋದಿ ಅವರ ಅತ್ಯುತ್ತಮ ಬೆಂಬಲಕ್ಕಾಗಿ ನಾನು ಅವರಿಗೆ ಕೃತಜ್ಞನಾಗಿದ್ದೇನೆ. ಮಹಿಳೆಯರು, ಮಕ್ಕಳು ಮತ್ತು ರೈತರು ನಮಗೆ ಕೇಂದ್ರ ಬಿಂದುವಾಗಿದ್ದರು. ನಾವು ಕಾಮನ್ ಮ್ಯಾನ್ ಅನ್ನು ಸೂಪರ್ಮ್ಯಾನ್ಗಳಾಗಿ ಪರಿವರ್ತಿಸಲು ಬಯಸುತ್ತೇವೆ ಎಂದಿದ್ದಾರೆ.
ನಿನ್ನೆಯಷ್ಟೇ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಮತ್ತು ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್ ಅವರು ಮುಖ್ಯಮಂತ್ರಿ ಹುದ್ದೆಗಾಗಿ ತಮ್ಮ ಮೈತ್ರಿಕೂಟದಲ್ಲಿ ಗದ್ದಲ ಉಂಟಾಗಿದೆ ಎಂಬ ವದಂತಿಯನ್ನು ನಿರಾಕರಿಸಿದರು. ಮತಗಳ ಎಣಿಕೆಯು ಬಿಜೆಪಿ ನೇತೃತ್ವದ ಸಮ್ಮಿಶ್ರವು ಪ್ರಚಂಡ ಗೆಲುವಿನತ್ತ ಸಾಗುತ್ತಿದೆ ಎಂದು ತೋರಿಸಿದೆ.
ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ದೇವೇಂದ್ರ ಫಡ್ನವೀಸ್, “ನಕಲಿ ನಿರೂಪಣೆಯನ್ನು ಪ್ರಚಾರ ಮಾಡುವ ವಿರೋಧ ಪಕ್ಷದವರ ಪ್ರಯತ್ನಗಳು ಮತ್ತು ಧರ್ಮದ ಆಧಾರದ ಮೇಲೆ ಮತದಾರರ ಧ್ರುವೀಕರಣವನ್ನು ಜನಸಾಮಾನ್ಯರು ವಿಫಲಗೊಳಿಸಿದ್ದಾರೆ” ಎಂದು ಹೇಳಿದ್ದಾರೆ.
“ಮಹಾಯುತಿ ಪಕ್ಷಗಳ ನಾಯಕರು (ಮುಂದಿನ ಸಿಎಂ) ನಿರ್ಧರಿಸುತ್ತಾರೆ” ಎಂದು ದೇವೇಂದ್ರ ಫಡ್ನವಿಸ್ ಮುಂಬೈನಲ್ಲಿ ಸುದ್ದಿಗಾರರಿಗೆ ತಿಳಿಸಿದರು. ಸಿಎಂ ಏಕನಾಥ್ ಶಿಂಧೆ ನೇತೃತ್ವದ ಪಕ್ಷವೇ ಬಾಳಾಸಾಹೇಬ್ ಠಾಕ್ರೆಯ ನಿಜವಾದ ಶಿವಸೇನೆ ಎಂಬುದನ್ನು ಮಹಾರಾಷ್ಟ್ರದ ಜನತೆ ತೋರಿಸಿಕೊಟ್ಟಿದ್ದಾರೆ ಎಂದಿದ್ದಾರೆ.