
ಪೂಜೆ, ಪುನಸ್ಕಾರಗಳು ನಮ್ಮೊಳಗಿನ ಆತ್ಮಲಿಂಗಕ್ಕೆ ಸಲ್ಲುವ ಸೇವೆ – ಪ್ರವೀಣ್ ಭಟ್
ಪಾಲ್ಘರ್- ಬೊಯಿಸರ್ ಪರಿಸರದಲ್ಲಿ 2008ರಲ್ಲಿ ಮುಂಬೈಯ ಖ್ಯಾತ ಜ್ಯೋತಿಷಿ, ಪುರೋಹಿತರಾದ ಎಂ. ಜೆ. ಪ್ರವೀಣ್ ಭಟ್ ಅವರ ಮಾರ್ಗದರ್ಶನದಲ್ಲಿ, ಧಾರ್ಮಿಕ ಮುಂದಾಳು ವಿಜಯ್ ಶೆಟ್ಟಿಯವರ ನೇತೃತ್ವದಲ್ಲಿ ಸ್ಥಾಪನೆಯಾದ ಸೋಮೇಶ್ವರ ಮಂದಿರದ 17ನೇ ವರ್ದಂತಿ ಮಹೋತ್ಸವ ಮಾರ್ಚ್ 1ರಂದು ಭಾನುವಾರ ಅಪಾರ ಸಂಖ್ಯೆಯ ಭಕ್ತರ ಕೂಡುವಿಕೆಯಿಂದ ವಿಜೃಂಭಣೆಯಿಂದ ಜರಗಿತು.
ಅಂದು ಬೆಳಗ್ಗೆ 06.00 ರಿಂದ ಸಂಜೆ 06.30 : ತೋರಣ ಮುಹೂರ್ತ ನಡೆದು ಬೆಳಗ್ಗೆ 06.30 ರಿಂದ 07.30 : ಗಣ ಹೋಮ, ಗಣೇಶ ಪೂಜೆ, 07.30 ರಿಂದ 09.00 AM : ನವಕಲಶಾಭಿಷೇಕ, ನಾಗಪೂಜೆ ನಡೆಯಿತು.
ನಂತರ ಬೆಳಗ್ಗೆ 09.00 ರಿಂದ 10.30 : ಶ್ರೀ ಸತ್ಯನಾರಾಯಣ ಪೂಜೆ,10.30 ರಿಂದ 12.00 ಭಜನೆಯಾದ ಬಳಿಕ ಶ್ರೀ ದೇವರಿಗೆ ಬೆಳಗಲಾಯಿತು.
ಧಾರ್ಮಿಕ ಪೂಜಾ ಕಾರ್ಯಗಳನ್ನು ನೆರವೇರಿಸಿದ ಮುಂಬೈ ನಗರದ ಪ್ರಸಿದ್ಧ ಪುರೋಹಿತರಾಗಿರುವ ಎಂ ಜೆ ಪ್ರವೀಣ್ ಭಟ್ ಅವರು ಪ್ರಾಥನೆಗೈಯುತ್ತಾ “ಈ ಪವಿತ್ರ ಕ್ಷೇತ್ರದಲ್ಲಿ, ಲಯಕರ್ತನಾದ ಆ ಪರಮೇಶ್ವರನ ವಾರ್ಷಿಕ ಮಹಾಪೂಜೆಯು ಅತ್ಯಂತ ಶ್ರದ್ಧಾಭಕ್ತಿಗಳಿಂದ ನೆರವೇರಿದೆ. ಜಗತ್ತಿನ ಕಣಕಣದಲ್ಲೂ ಶಿವನಿದ್ದಾನೆ. ಶಿವ ಎಂದರೆ ಮಂಗಳ ಎಂದರ್ಥ. ಇಂದು ನಾವೆಲ್ಲರೂ ಸೇರಿ ಮಾಡಿದ ಈ ಅಭಿಷೇಕ, ಅರ್ಚನೆಗಳು ಕೇವಲ ದೇವಸ್ಥಾನದ ವಿಗ್ರಹಕ್ಕಲ್ಲ, ಅದು ನಮ್ಮೊಳಗಿನ ಆತ್ಮಲಿಂಗಕ್ಕೆ ಸಲ್ಲುವ ಸೇವೆಯಾಗಿದೆ.ಸಂಸಾರವೆಂಬ ಈ ಸಾಗರದಲ್ಲಿ ನಮಗೆ ಶಾಂತಿ ಮತ್ತು ಸಮಾಧಾನ ಸಿಗುವುದು ಶಿವನ ಪಾದಕಮಲಗಳಲ್ಲಿ ಮಾತ್ರ. ಭೋಲೆನಾಥನು ಅಲ್ಪ ಸಂತೋಷಿ; ಭಕ್ತರು ಅರ್ಪಿಸುವ ಒಂದು ಬಿಲ್ವಪತ್ರೆ ಅಥವಾ ಒಂದು ಬೊಗಸೆ ನೀರಿಗೂ ಆತ ಪ್ರಸನ್ನನಾಗುತ್ತಾನೆ. ಅಂತಹ ಕರುಣಾಮಯಿ ಈಶ್ವರನು ಈ ಊರಿನ ಸಮಸ್ತ ಜನರಿಗೂ ಆಯುಷ್ಯ, ಆರೋಗ್ಯ ಮತ್ತು ಐಶ್ವರ್ಯವನ್ನು ಕರುಣಿಸಲಿ. ನಿಮ್ಮ ಸಂಸಾರದಲ್ಲಿ ಸುಖ-ಶಾಂತಿ ನೆಲೆಸಲಿ, ಕಷ್ಟ ಕಾರ್ಪಣ್ಯಗಳು ದೂರವಾಗಲಿ ಎಂದು ಆ ಶಿವನಲ್ಲಿ ಪ್ರಾರ್ಥಿಸುತ್ತೇನೆ” ಎಂದರು.

ಸಾವಿರ ಸಂಖ್ಯೆಯಲ್ಲಿ ಪರಿಸರದ ಭಕ್ತಾದಿಗಳು ವಾರ್ಷಿಕ ವರ್ದಂತಿಯಲ್ಲಿ ಪಾಲ್ಗೊಂಡು ಈ ದೇವರ ಪ್ರಸಾದ, ಅನ್ನ ಪ್ರಸಾದ ಸ್ವೀಕರಿಸಿದರು.
ಶ್ರೀ ಸೋಮೇಶ್ವರ ದೇವಸ್ಥಾನ ದ ವಿಜಯ್ ಶೆಟ್ಟಿ, ಅರ್ಚಕರಾದ ಪ್ರಮೋದ್ ಅಗ್ನಿಹೋತ್ರಿ ಮತ್ತು ಸದಸ್ಯರು ಮಹಾಪೂಜೆ ಸಾಂಗವಾಗಿ ಜರಾಗುವಲ್ಲಿ ಶ್ರಮಿಸಿದರು.




