
ಚಿತ್ರ ವರದಿ: ದಿನೇಶ್ ಕುಲಾಲ್
ಮುಂಬಯಿ: ಮೈಸೂರು ಅಸೋಸಿಯೇಷನ್ ಮುಂಬಯಿ ತನ್ನ ಶತಮಾನೋತ್ಸವದ ಅಂಗವಾಗಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ನಾಟಕ ಅಕಾಡೆಮಿ ಹಾಗೂ ಉಷಾ ದೇಸಾಯಿ ಮತ್ತು ಪರಿವಾರದ ಸಹಯೋಗದೊಂದಿಗೆ ‘ಶ್ರೀರಂಗ ಸ್ಮರಣೆ’ ಎಂಬ ಮೂರು ದಿನಗಳ ನಾಟಕೋತ್ಸವವನ್ನು ಮಾಟುಂಗದ ಬಹುದಾಜಿ ರಸ್ತೆಯಲ್ಲಿರುವ ಮೈಸೂರು ಅಸೋಸಿಯೇಷನ್ ಸಭಾಂಗಣದಲ್ಲಿ ಆಯೋಜಿಸಿದೆ.
ನಾಟಕೋತ್ಸವದ ಎರಡನೆಯ ದಿನವಾದ ಫೆಬ್ರವರಿ 28ರ ಸಂಜೆ, ಪ್ರೊ. ಕಿ.ರಂ. ನಾಗರಾಜ್ ಅವರ ರಚನೆ ಹಾಗೂ ಸಿ.ಜಿ.ಕೆ. ಅವರ ನಿರ್ದೇಶನದ, ಕನಕದಾಸರ ಬದುಕನ್ನು ಆಧರಿಸಿದ ‘ಕಾಲಜ್ಞಾನಿ ಕನಕ’ (ತಂಡ: ಪ್ರಯೋಗ ರಂಗ) ನಾಟಕ ಪ್ರದರ್ಶನಗೊಂಡಿತು.

12ನೇ ಶತಮಾನದ ವಚನ ಚಳವಳಿಯ ನಂತರ ಸಮಸಮಾಜದ ನಿರ್ಮಾಣಕ್ಕಾಗಿ ನಡೆದ ಸಾಹಿತ್ಯಿಕ ಹೋರಾಟದಲ್ಲಿ ಕನಕದಾಸರ ಪಾತ್ರ ಅತ್ಯಂತ ದೊಡ್ಡದು. ನಾಡಿನ ಮಹತ್ವದ ಅನುಭಾವಿ ಕವಿಯಾದ ಕನಕದಾಸರು, ಯುದ್ಧವೀರನಾಗಿದ್ದರೂ ಶಸ್ತ್ರತ್ಯಾಗ ಮಾಡಿ ಹರಿದಾಸರಾದವರು. ಮತದಾಸ್ಯ ಹಾಗೂ ರಾಜಕೀಯ ಅಹಂಕಾರಗಳನ್ನು ಜೀವನದುದ್ದಕ್ಕೂ ವಿರೋಧಿಸಿದ ಕನಕದಾಸರ ವ್ಯಕ್ತಿತ್ವ ಈ ನಾಟಕದ ಕೇಂದ್ರಬಿಂದು. ರೂಢಿಗತ ಪದ್ಧತಿಗಳ ಸುಳಿಯಲ್ಲಿ ಸಿಲುಕಿದ್ದ ಸಮಾಜವನ್ನು ಹೊಸ ಭಾಷೆ ಮತ್ತು ಸಂಕೇತಗಳ ಮೂಲಕ ಎಚ್ಚರಿಸಿದ ಕನಕದಾಸರ ವಿಚಾರಗಳ ಪ್ರಸ್ತುತತೆಯನ್ನು ‘ಕಾಲಜ್ಞಾನಿ ಕನಕ’ ನಾಟಕವು ಮನದಟ್ಟು ಮಾಡಿಕೊಟ್ಟಿತು ಮತ್ತು ಪ್ರೇಕ್ಷಕರನ್ನು ರಂಜಿಸಿತು.
ಮೂರು ದಿನಗಳ ರಂಗ ಸಂಭ್ರಮಕ್ಕೆ ಇಂದು ತೆರೆ
ಮೈಸೂರು ಅಸೋಸಿಯೇಷನ್ ಮುಂಬಯಿ ಸಭಾಂಗಣದಲ್ಲಿ ನಡೆಯುತ್ತಿರುವ ಈ ರಂಗೋತ್ಸವಕ್ಕೆ ಇಂದು, ಮಾರ್ಚ್ 1ರಂದು ವಿಚಾರಗೋಷ್ಠಿ ಮತ್ತು ನಾಟಕ ಪ್ರದರ್ಶನದ ಮೂಲಕ ತೆರೆ ಬೀಳಲಿದೆ.
ವಿಚಾರ ಸಂಕಿರಣ:
ಮಾರ್ಚ್ 01ರಂದು ಮಧ್ಯಾಹ್ನ ‘ಕನ್ನಡ ಮತ್ತು ಮರಾಠಿ ರಂಗಭೂಮಿಯ ಇತ್ತೀಚಿನ ಬೆಳವಣಿಗೆಗಳು’ ಎಂಬ ವಿಷಯದ ಕುರಿತು ವಿಚಾರ ಸಂಕಿರಣ ನಡೆಯಲಿದೆ. ಮುಂಬಯಿಯ ನಾಟಕಕಾರರಾದ ಡಾ. ಭರತ್ ಕುಮಾರ್ ಪೊಲಿಪು ಹಾಗೂ ಡಾ. ಬಿ.ಆರ್. ಮಂಜುನಾಥ್ ಅವರು ವಿಷಯದ ಕುರಿತು ಆಶಯ ನುಡಿಗಳನ್ನು ಆಡಲಿದ್ದಾರೆ.
- ಗೌರವ ಉಪಸ್ಥಿತಿ: ಪ್ರೊ. ಕೆ.ಎ. ಬನಟ್ಟಿ (ಸದಸ್ಯರು, ಕರ್ನಾಟಕ ನಾಟಕ ಅಕಾಡೆಮಿ).
- ಅಧ್ಯಕ್ಷತೆ: ಡಾ. ಕೆ.ವಿ. ನಾಗರಾಜಮೂರ್ತಿ (ಅಧ್ಯಕ್ಷರು, ಕರ್ನಾಟಕ ನಾಟಕ ಅಕಾಡೆಮಿ, ಬೆಂಗಳೂರು).
ನಾಟಕ ಪ್ರದರ್ಶನ:
ಸಂಜೆ 6:30ಕ್ಕೆ ಯು.ಆರ್. ಅನಂತಮೂರ್ತಿಯವರ ಕಥೆ ಆಧರಿಸಿದ, ಡಾ. ಕೆ.ವಿ. ನಾಗರಾಜಮೂರ್ತಿ ನಿರ್ದೇಶನದ ‘ಮೌನಿ’ (ತಂಡ: ರಂಗ ಸೌರಭ) ನಾಟಕ ಪ್ರದರ್ಶನಗೊಳ್ಳಲಿದೆ.
‘ಮೌನಿ’ ನಾಟಕದ ಬಗ್ಗೆ:
ಯು.ಆರ್. ಅನಂತಮೂರ್ತಿ ಅವರ ‘ಮೌನಿ’ ಒಂದು ಪ್ರಸಿದ್ಧ ಕನ್ನಡ ಕಥಾ ಸಂಕಲನ. ಇದು ಅಪ್ಪಣ್ಣ ಭಟ್ಟ ಮತ್ತು ಕುಪ್ಪಣ್ಣ ಭಟ್ಟ ಎಂಬ ಇಬ್ಬರು ವ್ಯಕ್ತಿಗಳ ಬದುಕಿನ ಮೂಲಕ ಸಾವು, ಸ್ವಾಭಿಮಾನ, ಸೋಲು-ಗೆಲುವು ಹಾಗೂ ಮೌನದ ತೀವ್ರತೆಯನ್ನು ಚರ್ಚಿಸುತ್ತದೆ. ಮಲೆನಾಡಿನ ಹಿನ್ನೆಲೆಯಲ್ಲಿ ಸಾಗುವ ಈ ಕಥೆಯು ಇಬ್ಬರು ಬ್ರಾಹ್ಮಣರ ನಡುವಿನ ಆಸ್ತಿ ವಿವಾದ, ಮಠದ ಹಕ್ಕಿನ ಸಂಘರ್ಷ ಹಾಗೂ ಮನುಷ್ಯನ ಅಂತರಂಗ-ಬಹಿರಂಗದ ಹೋರಾಟವನ್ನು ಬಿಂಬಿಸುತ್ತದೆ. ಜೀವನದಲ್ಲಿ ಸೋತು ಮೌನಕ್ಕೆ ಶರಣಾಗಿ, ತನ್ನ ಅಸ್ತಿತ್ವದ ಜೊತೆ ತಾನೇ ಕಳೆದುಹೋಗುವ ಯಾತನಾಮಯ ಚಿತ್ರಣವನ್ನು ಈ ನಾಟಕದ ಮೂಲಕ ಅನಂತಮೂರ್ತಿಯವರು ಅನಾವರಣಗೊಳಿಸಿದ್ದಾರೆ.




