
ವಿದ್ಯಾಭ್ಯಾಸದಷ್ಟೇ ದೈಹಿಕ ಆರೋಗ್ಯಕ್ಕೆ ಕ್ರೀಡೆಯೂ ಮುಖ್ಯ: ಸಂತೋಷ್ ಜಿ. ಶೆಟ್ಟಿ
ನವಿ ಮುಂಬೈ: “ವಿದ್ಯಾರ್ಥಿ ಜೀವನದಲ್ಲಿ ವಿದ್ಯಾಭ್ಯಾಸ ಎಷ್ಟು ಮುಖ್ಯವೋ, ದೈಹಿಕ ಆರೋಗ್ಯ ಮತ್ತು ಮಾನಸಿಕ ಶಕ್ತಿಗಾಗಿ ಕ್ರೀಡೆಯೂ ಅಷ್ಟೇ ಮುಖ್ಯ. ಕ್ರೀಡಾಪಟುಗಳು ಗೆಲುವು-ಸೋಲನ್ನು ಸಮಾನವಾಗಿ ಸ್ವೀಕರಿಸಬೇಕು,” ಎಂದು ಪನ್ವೇಲ್ ಮಹಾನಗರ ಪಾಲಿಕೆಯ ಕಾರ್ಪೊರೇಟರ್ ಹಾಗೂ ಮಾಜಿ ಸಭಾಪತಿ ಸಂತೋಷ್ ಜಿ. ಶೆಟ್ಟಿ ಅಭಿಪ್ರಾಯಪಟ್ಟರು.

ನವಿ ಮುಂಬೈನ ಪನ್ವೇಲ್ನ ಕರ್ನಾಲ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ಇತ್ತೀಚೆಗೆ (ಮಾರ್ಚ್ 1) ಕುಲಾಲ ಸಂಘ ಮುಂಬೈ, ಇದರ 5 ಸ್ಥಳೀಯ ಸಮಿತಿಗಳು ಹಾಗೂ ಯುವ ವಿಭಾಗದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ‘ಕುಲಾಲ ಕ್ರೀಡೋತ್ಸವ-2026’ ಉದ್ಘಾಟಿಸಿ ಅವರು ಮಾತನಾಡಿದರು.
“ಪನ್ವೇಲ್ ಇಂದು ಏಷ್ಯಾದಲ್ಲೇ ವೇಗವಾಗಿ ಬೆಳೆಯುತ್ತಿರುವ ನಗರವಾಗಿದ್ದು, ಇಲ್ಲಿ ವೆಂಗಸರ್ಕಾರ್ ಅಕಾಡೆಮಿ ಸ್ಥಾಪನೆಯಾಗಲಿದೆ. ಉತ್ತಮ ಕ್ರೀಡಾಪಟುಗಳಿಗೆ ಅಗತ್ಯವಿರುವ ಎಲ್ಲ ಸಹಕಾರ ನೀಡಲು ನಾನು ಸದಾ ಸಿದ್ಧ,” ಎಂದು ಶೆಟ್ಟಿ ಭರವಸೆ ನೀಡಿದರು.

ಕಾರ್ಯಕ್ರಮದ ಮತ್ತೊಬ್ಬ ಮುಖ್ಯ ಅತಿಥಿ, ಬಂಟರ ಸಂಘ ನವಿ ಮುಂಬೈ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಭಾಸ್ಕರ್ ಶೆಟ್ಟಿ (ದಕ್ಷಿಣ) ಮಾತನಾಡಿ, “ರಾಷ್ಟ್ರೀಯ ಕ್ರೀಡಾ ದಿನದ ಸ್ಫೂರ್ತಿಯಾದ ಮೇಜರ್ ಧ್ಯಾನ್ ಚಂದ್ ಅವರ ಸಾಧನೆ ನಮಗೆಲ್ಲ ಮಾದರಿ. ಯುವಜನರಲ್ಲಿ ಶಿಸ್ತು ಮತ್ತು ತಂಡದ ಭಾವನೆ ಬೆಳೆಸಲು ಇಂತಹ ಕ್ರೀಡೋತ್ಸವಗಳು ಪೂರಕ,” ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ರಘು ಮೂಲ್ಯ ಮಾತನಾಡಿ, “ಸಂಘವು ಕಳೆದ 95 ವರ್ಷಗಳಿಂದ ಸಾಮಾಜಿಕ, ಶೈಕ್ಷಣಿಕ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಾ ಬಂದಿದೆ. ಯುವ ಪೀಳಿಗೆಯು ಬಿನ್ನಾಭಿಪ್ರಾಯಗಳನ್ನು ಮರೆತು ಒಂದೇ ಕುಟುಂಬದಂತೆ ಸಂಘಟಿತರಾಗಬೇಕು. ಕ್ರೀಡಾ ಚಟುವಟಿಕೆಗಳಿಗೆ ಆಡಳಿತ ಮಂಡಳಿಯು ಸಂಪೂರ್ಣ ಬೆಂಬಲ ನೀಡಲಿದೆ,” ಎಂದು ತಿಳಿಸಿದರು.

ಗೌರವಾಧ್ಯಕ್ಷ ದೇವದಾಸ್ ಕುಲಾಲ್ ಸಂಘದ ಕಿರು ಪರಿಚಯ ನೀಡಿದರು. ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಚಿತಾ ಬಂಜನ್ ಅನಿಸಿಕೆ ಹಂಚಿಕೊಂಡರು. ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಕರುಣಾಕರ್ ಸಾಲಿಯಾನ್ ಕಾರ್ಯಕ್ರಮ ನಿರೂಪಿಸಿದರೆ, ಜೊತೆ ಕಾರ್ಯದರ್ಶಿ ಲಕ್ಷ್ಮಣ್ ಸಿ. ಮೂಲ್ಯ ವಂದಿಸಿದರು. ಯುವ ವಿಭಾಗದ ಕಾರ್ಯಾಧ್ಯಕ್ಷ ವೇಣುಗೋಪಾಲ್ ಕರ್ಕೇರಾ ಅತಿಥಿಗಳನ್ನು ಗೌರವಿಸಿದರು.
ಕ್ರೀಡೋತ್ಸವದ ಅಂಗವಾಗಿ ಯುವಕರು, ಮಹಿಳೆಯರು ಹಾಗೂ ಹಿರಿಯರ ವಿಭಾಗದಲ್ಲಿ ನಡೆದ ಕ್ರಿಕೆಟ್ ಪಂದ್ಯಾವಳಿಗಳು ನೋಡುಗರ ಗಮನ ಸೆಳೆದವು. ವಿವಿಧ ಪ್ರದೇಶಗಳಿಂದ ಆಗಮಿಸಿದ ತಂಡಗಳು ಅತ್ಯಂತ ಉತ್ಸಾಹದಿಂದ ಭಾಗವಹಿಸಿದ್ದವು.

ಕಾರ್ಯಕ್ರಮದಲ್ಲಿ ಸಂಘದ ಕೋಶಾಧಿಕಾರಿಗಳಾದ ಜಯ ಅಂಚನ್, ರೇಣುಕಾ ಸಾಲಿಯಾನ್, ಆಡಳಿತ ಮಂಡಳಿಯ ಸಂಜೀವ ಎನ್. ಬಂಗೇರ, ಉಮೇಶ್ ಬಂಗೇರ ಹಾಗೂ ವಿವಿಧ ಸಮಿತಿಗಳ ಪದಾಧಿಕಾರಿಗಳಾದ ಸದಾನಂದ್ ಕುಲಾಲ್, ಆನಂದ್ ಕುಲಾಲ್, ಶಂಕರ್ ವೈ. ಮೂಲ್ಯ, ಉದಯ್ ಅತ್ತಾವರ, ಹರಿಯಪ್ಪ ಮೂಲ್ಯ, ಕುಶ ಕುಲಾಲ್, ನ್ಯಾ. ಉಮಾನಾಥ್ ಮೂಲ್ಯ, ಕೃಪೇಶ್ ಕುಲಾಲ್, ಸುಕುಮಾರ್ ಸಾಲಿಯಾನ್, ನಟೇಶ್ ಬಂಗೇರ ಉಪಸ್ಥಿತರಿದ್ದರು.
ಮಹಿಳಾ ವಿಭಾಗದ ರತ್ನಾ ಡಿ. ಕುಲಾಲ್, ಆರತಿ ಕೆ. ಸಾಲಿಯಾನ್, ರಸಿಕ ಸಿ. ಮೂಲ್ಯ, ಜಯಂತಿ ಬಂಗೇರ, ಬೇಬಿ ವಿ. ಬಂಗೇರ, ಉಷಾ ಆರ್. ಮೂಲ್ಯ, ಕುಶಲ ಜಿ. ಬಂಗೇರ, ಗೀತಾ ಡಿ. ಮೂಲ್ಯ, ಇಂದಿರಾ ಆರ್. ಮೂಲ್ಯ, ಹರಿಣಾಕ್ಷಿ ಬಂಗೇರ ಹಾಗೂ ಯುವ ವಿಭಾಗದ ಪ್ರಸಾದ್ ಮೂಲ್ಯ, ಸೂರಜ್ ಕುಲಾಲ್, ಅಕ್ಷತ್ ಮೂಲ್ಯ ಕ್ರೀಡೋತ್ಸವದ ಯಶಸ್ಸಿಗೆ ಸಹಕರಿಸಿದರು.




