April 2, 2025
ಧಾರಾವಾಹಿ

ವಿವಶ….

ವಿವಶ…. ಈ ಧಾರಾವಾಹಿಯ ಈ ಹಿಂದಿನ ಸಂಚಿಕೆಗಳ ಲಿಂಕ್ ಕೆಳಗೆ ಇದೆ…

💢 ಧಾರಾವಾಹಿ ಭಾಗ – 1

https://mumbainewskannada.blogspot.com/2023/10/aaaaar-aa-aavaau-aanvaua-eegaqaa.html

💢 ಧಾರಾವಾಹಿ ಭಾಗ – 2

https://mumbainewskannada.blogspot.com/2023/10/blog-post_181.html

💢 ಧಾರಾವಾಹಿ ಭಾಗ – 3

http://mumbainewskannada.blogspot.com/2023/10/blog-post_425.html

ಧಾರವಾಹಿ ಭಾಗ – 4

https://mumbainewskannada.blogspot.com/2023/10/blog-post_636.html

ಧಾರವಾಹಿ ಭಾಗ – 5

https://mumbainewskannada.blogspot.com/2023/11/blog-post.html https://mumbainewskannada.com/wp-admin/post.php?post=1460&action=edit

ಧಾರವಾಹಿ ಭಾಗ – 6

https://mumbainewskannada.com/2023/11/17/vivasha/

ಧಾರವಾಹಿ ಭಾಗ – 7

https://mumbainewskannada.com/wp-admin/post.php?post=1687&action=edit

ಧಾರವಾಹಿ ಭಾಗ – 8

https://mumbainewskannada.com/2023/11/25/vivasha7/


ಧಾರವಾಹಿ 9


ಆಂಥೋನಿ ಸಹೋದರರು ಈಗ ದುಬಾರಿ ಬೆಲೆ ತೆತ್ತು ತಾಜಾ ಹಣ್ಣು ಹಂಪಲುಗಳನ್ನು ಕೊಂಡು ಅಪ್ಪ, ಅಮ್ಮನಿಂದ ಬಳುವಳಿಯಾಗಿ ಬಂದಿದ್ದ ಉತ್ತಮಮಟ್ಟದ ಸಾರಾಯಿ ತಯಾರಿಸುವುದನ್ನು ಒಮ್ಮೆ ಇದ್ದಕ್ಕಿದ್ದ ಹಾಗೆ ನಿಲ್ಲಿಸಿಬಿಟ್ಟರು. ಬದಲಿಗೆ ಅದಕ್ಕಿಂತಲೂ ಅಧಿಕ ನಶೆ ಮತ್ತು ಹೆಚ್ಚು ಉನ್ಮಾದ ಕೊಡುವ ಹಾಗೂ ದುಪ್ಪಟ್ಟು ಲಾಭ ತರುವಂಥ ಮಾಲು ತಯಾರಿಸಲು ಹಂಚಿಕೆ ಹೂಡಿದರು. ಅದಕ್ಕಾಗಿ ಅಂಬರಬೆಟ್ಟು ಮತ್ತು ಶಿವಕಂಡಿಕೆಯ ಪ್ರತಿ ವಾರದ ಸಂತೆಗಳಿಗೆ ಹೋಗಿ ಅಲ್ಲೆಲ್ಲ ಜಾಲಾಡಿಸಿ ಕೊಳೆತು ನಾರುವ ಮತ್ತು ಅಗ್ಗಕ್ಕೆ ದೊರೆಯುವ ಹಣ್ಣುಹಂಪಲುಗಳನ್ನು ಕೊಂಡರು. ಹಾಳು ಬೆಲ್ಲ, ವಿಷಕಾರಕ ಅಮೋನಿಯಮ್ ಸಲ್ಫೇಟ್, ಯೂರಿಯಾ ಮತ್ತು ಬ್ಯಾಟರಿಶೆಲ್ಲಿನ ಒಳಗಿನ ಕಪ್ಪು ಪುಡಿಯನ್ನೂ ಕೋಳಿ ಹೇಲನ್ನೂ ಯಥೇಚ್ಛವಾಗಿ ಬಳಸಿ, ಕೆಲವು ದಿನಗಳ ಕಾಲ ಅದನ್ನು ಕೊಳೆಯಿಸಿ ಭಟ್ಟಿ ಇಳಿಸುವ ಹೊಸ ತಂತ್ರವೊoದನ್ನು ಶಿವಕಂಡಿಕೆಯ ಹಳೆಯ ಸಾರಾಯಿ ತಯಾರಕನೊಬ್ಬನಿಂದ ಮೊದಲೇ ಕಲಿತುಕೊಂಡು ಬಂದಿದ್ದವರು ಕೂಡಲೇ ಅದರ ಪ್ರಯೋಗಕ್ಕಿಳಿದು ಯಶಸ್ವಿಯೂ ಆಗಿಬಿಟ್ಟರು. ಈ ಸಾರಾಯಿಯನ್ನು ನಾಲ್ಕೈದು ಗುಟುಕು ಗಂಟಲಿಗೇರಿಸಿದ ಗಳಿಗೆಯೊಳಗೆ ರ‍್ರನೇ ಮತ್ತೇರುವುದನ್ನು ಅನುಭವಿಸಿದ ಊರ ಬಡ ಜನರು ಆಮೇಲೆ ಹೆಚ್ಚುಹೆಚ್ಚಾಗಿ ಆಂಥೋನಿಯ ಮನೆಯತ್ತ ಆಕರ್ಷಿತರಾದರು. ಹೀಗಾಗಿ ಸಂಜೆ ಸರಿದು ಕತ್ತಲೇರುವ ಹೊತ್ತಿಗೆ ರಾರ್ಬಟರ ಮನೆಯ ಹಿತ್ತಲನ್ನು ದೊಂದಿ ಬೆಳಕಿನ ವ್ಯವಸ್ಥೆಯು ಮಂದವಾಗಿ ಬೆಳಗಿಸುತ್ತಿತ್ತು. ಅದನ್ನು ದೂರದಿಂದ ನೋಡಿದವರಿಗೆ ಅಲ್ಲೊಂದು ವ್ಯವಸ್ಥಿತವಾದ, ‘ಬಾರ್ ಅಂಡ್ ರೆಸ್ಟೋರೆಂಟ್’ ತೆರದಿರುವಂತೆಯೇ ಭಾಸವಾಗುತ್ತಿತ್ತು. ಪರಿಣಾಮ, ವ್ಯಾಪಾರವೂ ಭರದಿಂದ ಸಾಗತೊಡಗಿತು.


ಆದರೆ ಅಣ್ಣ ತಮ್ಮಂದಿರ ಈ ವ್ಯವಹಾರವು ಬಹಳ ಬೇಗನೇ ಅವರ ಮನೆತನದ ಮಾನಮರ್ಯಾದೆಯನ್ನು ಗಂಗರಬೀಡಿನ ಹಾದಿಬೀದಿಯಲ್ಲಿ ಹರಾಜು ಹಾಕುವ ಮಟ್ಟಕ್ಕೆ ತಲುಪಿತು. ಇದರಿಂದ ರಾರ್ಬಟ್ ದಂಪತಿಗಳು ತುಂಬಾ ನೊಂದುಕೊoಡರು. ಮಕ್ಕಳನ್ನು ತಾವು ಬಾಲ್ಯದಲ್ಲೇ ತಿದ್ದಿತೀಡಿ ಸರಿದಾರಿಗೆ ತರಬೇಕಿತ್ತು. ತಪ್ಪು ಮಾಡಿಬಿಟ್ಟೆವು! ಎಂದು ಪಶ್ಚಾತ್ತಾಪ ಪಡುವ ಹಂತಕ್ಕೆ ತಲುಪಿದರು. ಆದರೆ ಈಗಲೂ ಕಾಲ ಮಿಂಚಿಲ್ಲ. ಇನ್ನಾದರೂ ಅವರನ್ನು ಸರಿಪಡಿಸಲೇಬೇಕು! ಎಂದೂ ಯೋಚಿಸಿದರು. ಹಾಗಾಗಿ ಆವತ್ತೊಮ್ಮೆ ಮೂವರನ್ನೂ ಪ್ರೀತಿಯಿಂದ ಕರೆದು ಕುಳ್ಳಿರಿಸಿಕೊಂಡರು. ಆದರೆ ಹೆತ್ತವರ ಮನದಿಂಗಿತವನ್ನು ಸೂಕ್ಷ್ಮ ವಾಗಿ ಅರಿತಿದ್ದ ಮಕ್ಕಳು ಅದಕ್ಕೆ ತಯಾರಾಗಿಯೇ ಬಂದಿದ್ದರು. ರಾಬರ್ಟರು ಮಾತಾಡಲಾರಂಭಿಸಿ, ‘ನೋಡಮ್ಮಾ ಗ್ರೇಟ್ಟಾ ನೀನು ಹಿರಿಯವಳು. ಈ ಮನೆಯನ್ನೂ, ಮನೆತನದ ಗೌರವವನ್ನೂ ಕಾಪಾಡಿಕೊಂಡು ಹೋಗಬೇಕಾದುದು ನಿನ್ನ ಜವಾಬ್ದಾರಿ. ಅದಕ್ಕೆ ತಕ್ಕಂತೆ ನಿನ್ನ ಒಡಹುಟ್ಟಿದವರನ್ನೂ ನೀನು ಮಕ್ಕಳಂತೆ ನೋಡಿಕೊಳ್ಳುತ್ತ ಬಂದಿದ್ದಿ, ಅದು ಸರಿ. ಆದರೆ ಅವರು ಈಗೀಗ ಹಾಳು ದಾರಿ ಹಿಡಿದಿರುವುದನ್ನೂ ನೋಡಿಕೊಂಡು ಸುಮ್ಮನಿರುವುದು ಸರಿಯಾ ಹೇಳು? ಈ ಸಂಸಾರಕ್ಕಾಗಿ ನಾನು ದುಡಿದು ಸಂಪಾದಿಸಿರುವುದೇ ಬೇಕಾದಷ್ಟಿರುವಾಗ ನೀವದನ್ನು ಉತ್ತಮ ರೀತಿಯಲ್ಲಿ ವೃದ್ಧಿಸಿಕೊಂಡು ಹೋಗುತ್ತ ಊರಲ್ಲಿ ಒಳ್ಳೆಯ ಹೆಸರು ಮಾಡುವುದನ್ನು ಬಿಟ್ಟು ಹೀಗೇಕೆ ಅಡ್ಡ ದಾರಿ ಹಿಡಿದಿರುವಿರಿ ಅಂತ ನಮಗಿಬ್ಬರಿಗೂ ಅರ್ಥವಾಗುತ್ತಿಲ್ಲ ಮಗಳೇ! ನಮ್ಮ ಹಿರಿಯರೂ ನಾವು ಈ ಊರಿನವರಲ್ಲಿ ಗಳಿಸಿದ ಪ್ರೀತಿ, ಗೌರವವನ್ನು ನೀವೂ ಉಳಿಸಿಕೊಳ್ಳುತ್ತ ನಾಲ್ಕು ಜನಕ್ಕೆ ಒಳ್ಳೆಯದನ್ನು ಮಾಡುತ್ತ ಬದುಕಿದರೆ ಮಾತ್ರ ಸ್ವರ್ಗದ ಆ ನಮ್ಮ ತಂದೆ ಏಸುವಿನ ಪ್ರೀತಿ, ಕರುಣೆಗೆ ಪಾತ್ರರಾಗಬಹುದು ಮಕ್ಕಳೇ! ಹಾಗಾಗಿ ಇನ್ನು ಮುಂದಕ್ಕೆ ನಿಮ್ಮ ಜೀವನವನ್ನು ಅವನಿಗರ್ಪಿಸುವ ಹೂವುಗಳನ್ನಾಗಿ ರೂಪಿಸಿಕೊಳ್ಳುತ್ತೀರೋ ಅಥವಾ ಯಾರೂ ಕಣ್ಣೆತ್ತಿ ನೋಡದೆ, ಅಸಹ್ಯಪಡುವಂತೆ ಬಾಳುತ್ತೀರೋ ಎಂಬುದನ್ನು ಮೂವರೂ ತಾಳ್ಮೆಯಿಂದ ಯೋಚಿಸಿ ನೋಡಿ!’ ಎಂದು ಮೃದುವಾಗಿ ಬುದ್ಧಿವಾದ ಹೇಳಿದರು.


ಆದರೆ ಆಂಥೋನಿಯು ಅಪ್ಪನ ಮಾತನ್ನು ತೀರಾ ಅಸಹನೆಯಿಂದಲೇ ಕೇಳಿಸಿಕೊಳ್ಳುತ್ತಿದ್ದವನು, ‘ಇಲ್ನೋಡಿ ಅಪ್ಪಾ, ನಾವೇನೂ ದರೋಡೆ, ವಂಚನೆ ಮಾಡಿ ಹಣ ಗಳಿಸಲು ಹೊರಟವರಲ್ಲ. ಸಾರಾಯಿ ಬೇಯಿಸುವ ಕಸುಬನ್ನು ನೀವೇ ನಮಗೆ ಕಲಿಸಿಕೊಟ್ಟಿರುವುದು ಎನ್ನುವುದೂ ನಿಮಗೆ ನೆನಪಿರಲಿ. ಆದರೆ ಅದನ್ನು ಸ್ವಲ್ಪ ದೊಡ್ಡ ಮಟ್ಟದಲ್ಲಿ ಬೆಳೆಸುತ್ತ ಶ್ರೀಮಂತರಾಗಬೇಕೆನ್ನುವುದರಲ್ಲಿ ತಪ್ಪೇನುಂಟು? ಹೋಗಲಿ, ನಿಮ್ಮ ದಾರಿಯಲ್ಲೇ ಹೋಗಿ ಬೇಸಾಯ ಮಾಡುವ ಅಂದುಕೊAಡರೆ, ಇಷ್ಟು ದೊಡ್ಡ ಹೊಲಗದ್ದೆಗಳಲ್ಲಿ ದುಡಿಯಲು ಅಷ್ಟೊಂದು ಆಳುಕಾಳುಗಳಾದರೂ ಈಗೆಲ್ಲಿ ಸಿಗುತ್ತಾರೆ? ಅಂಥ ತಾಪತ್ರಯಗಳೆಲ್ಲ ಬೇಡವೆಂದೇ ನಾವು ಈ ನಿರ್ಧಾರ ಮಾಡಿರುವುದು. ಇನ್ನು ನಿಮಗೂ ವಯಸ್ಸಾಯಿತಲ್ಲವಾ. ಹೀಗಾಗಿ ಅಮ್ಮನೂ ನೀವೂ ನಮ್ಮ ವ್ಯವಹಾರಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದನ್ನು ಬಿಟ್ಟು ನಿಮ್ಮ ಪಾಡಿಗೆ ನೀವು ಆರಾಮವಾಗಿದ್ದುಬಿಡುವುದನ್ನು ಅಭ್ಯಾಸ ಮಾಡಿಕೊಳ್ಳಿ. ನಮ್ಮ ಬದುಕನ್ನು ಹೇಗೆ ರೂಪಿಸಿಕೊಳ್ಳಬೇಕೆಂದು ನಮಗೆ ಚೆನ್ನಾಗಿ ಗೊತ್ತಿದೆ!’ ಎಂದು ಖಾರವಾಗಿ ನುಡಿದ. ಅದಕ್ಕೆ ಗ್ರೇಟ್ಟಾಳೂ, ‘ಹೌದೌದು, ಇನ್ನು ನಿಮಗೆ ಈ ಎಲ್ಲ ಉಸಾಬರಿಗಳು ಯಾಕೆ ಬೇಕಪ್ಪಾ? ಕಾಲ ಬದಲಾಗಿದೆ! ನಿಮ್ಮಂತೆಯೇ ಹಗಲುರಾತ್ರಿ ಮೂಕಪ್ರಾಣಿಗಳಂತೆ ದುಡಿದು ಸಾಯಲಿಕ್ಕೆ ನಮಗಿಷ್ಟವಿಲ್ಲ. ನಮಗೆ ತಿಳಿದಿರುವ ವಿದ್ಯೆಯನ್ನೇ ಬಳಸಿಕೊಂಡು ಇನ್ನಷ್ಟು ಸಂಪಾದಿಸುವ ದಾರಿಯನ್ನು ನಾವೇ ಕಂಡುಕೊoಡಿದ್ದೇವೆ. ನೀವು ಸುಮ್ಮನೆ ನಮ್ಮ ಜೀವನದ ಬಗ್ಗೆ ಚಿಂತಿಸುವುದನ್ನು ಬಿಟ್ಟುಬಿಡಿ ಅಷ್ಟೇ!’ ಎಂದು ಅಪ್ಪ, ಅಮ್ಮನನ್ನು ಗದರಿಸಿ ಎದ್ದು ಹೋದಾಗ ಅಣ್ಣತಮ್ಮಂದಿರೂ ಅವಳನ್ನು ಹಿಂಬಾಲಿಸಿದರು. ಆಗ ರಾರ್ಬಟ್ ದಂಪತಿಗೆ ಮಕ್ಕಳ ದೃಷ್ಟಿಯಲ್ಲಿ ತಾವಾಗಲೇ ಮೂಲೆ ಗುಂಪಾಗಿರುವುದು ಸ್ಪಷ್ಟವಾಯಿತು. ಅಂದಿನಿoದ ಅವರು ಕೂಡಾ ತಾವಾಯಿತು, ತಮ್ಮ ಕೆಲಸವಾಯಿತು ಎಂಬoತೆ ನೀರಸವಾಗಿ ಬದುಕತೊಡಗಿದರು.


ಆದರಿತ್ತ ರಾರ್ಬಟರ ಕೊನೆಯ ಮಗ ಹಿಲಾರಿಯು ಅಕ್ಕ, ಅಣ್ಣಂದಿರ ನೀತಿಗೆಟ್ಟ ಬದುಕಿನಿಂದ ಮೊದಲೇ ರೋಸಿದ್ದವನಿಗೆ ಅವರು ಹಿರಿಯರ ಮಾತುಗಳನ್ನು ಅರ್ಥೈಸಿಕೊಳ್ಳುವ ಮನಸ್ಥಿತಿಯನ್ನು ಯಾವತ್ತೋ ಕಳೆದುಕೊಂಡಿದ್ದುದೂ ಅರಿವಿಗೆ ಬಂದಿತ್ತು. ಹಾಗಾಗಿ ತಂದೆ, ತಾಯಿಗೆ ತಾನೇ ಆ ಕುರಿತು ಆಗಾಗ ಸಮಾಧಾನ ಹೇಳುತ್ತ ಅಕ್ಕ ಅಣ್ಣಂದಿರ ಬಗ್ಗೆ ಅವನೂ ಉದಾಸೀನ ತಳೆದಿದ್ದ. ಆದರೂ ಅವನಿಗೆ ತನ್ನ ಪ್ರೀತಿಯ ಹಿರಿಯರ ನೆನಪುಗಳನ್ನೂ ಹಾಗೂ ತಾನು ಹುಟ್ಟಿ ಬೆಳೆದ ಸುಂದರ ಸವಿನೆನಪುಗಳನ್ನು ಸಾರುತ್ತಿದ್ದಂಥ ವಿಶಾಲವಾದ ಮನೆಯು ಈಗ ಸಾರಾಯಿ ‘ಅಡ್ಡಾ’ ವಾದುದರ ನೋವು ತೀವ್ರವಾಗಿ ಕಾಡುತ್ತಿತ್ತು. ಆದ್ದರಿಂದ ಅವನು ಮುಂದೆ ತನ್ನ ಕಾಲೇಜು ವಿದ್ಯಾಭ್ಯಾಸ ಮುಗಿಯುತ್ತಲೇ ಅನಂತೂರಿನ ರಸಗೊಬ್ಬರದ ಕಾರ್ಖಾನೆಯೊಂದಕ್ಕೆ ನೌಕರಿಗೆ ಅರ್ಜಿ ಸಲ್ಲಿಸಿದವನು ಆಮೇಲೆ ತನ್ನ ತಾಯಿಯ ಅಣ್ಣನ ಅಂದರೆ, ಸೋದರ ಮಾವನ ಮನೆಯಲ್ಲೇ ಹೆಚ್ಚಾಗಿ ಇರತೊಡಗಿದ. ಹಿಲಾರಿಯ ಅತ್ತೆ ಮಾವಂದಿರೂ ಸುಸಂಸ್ಕೃತ ಮನುಷ್ಯರು. ಆದರೆ ರಾರ್ಬಟರ ಮನೆಯಲ್ಲಿ ಅವರ ಮಕ್ಕಳ ಹಾಳು ರಾಜ್ಯಭಾರ ಆರಂಭವಾದುದರಿoದಲೂ ಮತ್ತು ಊರಲ್ಲಿ ಆ ಮನೆತನದ ಹೆಸರು ಕೆಟ್ಟಿದ್ದರಿಂದಲೂ ಅವರು ಕೂಡಾ ಆ ಮನೆಯ ಸಂಬoಧವನ್ನು ಕಡಿದುಕೊಂಡಿದ್ದರು. ಆದರೂ ಅವರು ಹಿಲಾರಿಯ ಮೇಲೆ ಅಪಾರ ಪ್ರೀತಿ, ವಾತ್ಸಲ್ಯವನ್ನು ತೋರುತ್ತಿದ್ದರು. ಅದುವೇ ಹಿಲಾರಿಯ ನೋವಿಗೂ ಸಾಂತ್ವನವಾಗುತ್ತ ಅವನನ್ನು ಅವರೊಂದಿಗೆ ಬಾಳುವಂತೆ ಮಾಡಿತ್ತಲ್ಲದೇ ಅತ್ತೆಯ ಮಗಳು ನೀತಾಳನ್ನೂ ಅವನು ಮನಸಾರೆ ಪ್ರೀತಿಸುತ್ತಿದ್ದ. ನೀತಾ ಬೆಳ್ಳಗಿನ, ಸುಂದರವಾದ ಹುಡುಗಿ ಮತ್ತು ವಿದ್ಯಾವಂತೆ. ಅವಳು ಕೂಡಾ ಬಾಲ್ಯದಿಂದಲೇ ಹಿಲಾರಿಯನ್ನು ಇಷ್ಟಪಟ್ಟಿದ್ದಳು. ಕಾರಣ ಹಿಲಾರಿಯ ಸದ್ಗುಣ ಮತ್ತವನ ಶಿಸ್ತುಬದ್ಧ ಜೀವನ. ಅದು ಅವಳಿಗೂ, ಅವಳ ಹೆತ್ತವರಿಗೂ ಬಹಳ ಮೆಚ್ಚುಗೆಯಾಗಿತ್ತು. ಹೀಗಾಗಿ ಅವರು ತಮ್ಮ ಮಗಳ ಪ್ರೇಮಸಂಬoಧಕ್ಕೆ ಪರೋಕ್ಷವಾಗಿ ಸಮ್ಮತಿಸಿದ್ದರು. ಆದರೆ ತಾವು ಮುದ್ದಿನ ಗಿಣಿಯಂತೆ ಸಾಕಿ ಬೆಳೆಸಿದ ಏಕೈಕ ಪುತ್ರಿಯನ್ನು ಆ ಕಿರಾತಕರ ಹಾಳು ಕೊಂಪೆಗೆ ತಳ್ಳಲು ಅವರಿಗೆ ಸುತಾರಾಂ ಇಷ್ಟವಿರಲಿಲ್ಲ.


ಹಿಲಾರಿಯು ನೀತಾಳನ್ನು ತುಂಬಾ ಬಯಸುತ್ತಿದ್ದ. ಎಷ್ಟೆಂದರೆ ಅವಳ ಜೊತೆಯಿರದ ಒಂದೊoದು ಕ್ಷಣವೂ ಅವನಿಗೆ ಯುಗದಂತೆ ಭಾಸವಾಗುತ್ತಿತ್ತು. ಸದಾ ಅವಳಿಗಂಟಿಕೊoಡೇ ಓಡಾಡುತ್ತಿದ್ದ. ಅವಳೂ ಅಷ್ಟೇ, ಅವನು ತನ್ನ ಜೀವದ ಗೆಳೆಯನೆಂಬಷ್ಟು ಆಸೆ, ಪ್ರೀತಿ ತೋರಿಸುತ್ತಿದ್ದಳು. ಹಾಗಾಗಿ ಒಂದು ಹೆಣ್ಣು ತನ್ನ ಪ್ರೀತಿಯ ಗಂಡನಿಗೆ ಮಾಡುವಂತಹ ಸೇವೆಗಳೆಲ್ಲವನ್ನೂ ತಾನೂ ಚಾಚೂತಪ್ಪದೆ ಮಾಡುತ್ತಾ ಅವನ ಮೇಲೆ ಮಗುವಿನಂಥ ಅಕ್ಕರೆಯನ್ನು ತೋರುತ್ತಿದ್ದಳು. ಈ ಯುವ ಪ್ರೇಮಿಗಳು ಸಮಯ ಸಿಕ್ಕಾಗಲೆಲ್ಲಾ ತಮ್ಮ ಮಧುರ ಭಾವನೆಗಳಿಗೆ ರೆಕ್ಕೆ ಕಟ್ಟಿಕೊಂಡು ಸಮೀಪದ ಕಾಡು ಗುಡ್ಡ ಮತ್ತು ತಮ್ಮ ಸುತ್ತಲಿನ ತೋಟಗಳಲ್ಲಿ ವಿಹರಿಸುತ್ತ ಮೈಮರೆಯುತ್ತಿದ್ದರು. ಆದರೆ ಹಿಲಾರಿಯಾಗಲೀ, ನೀತಾಳಾಗಲೀ ಮದುವೆಯ ಮುಂಚೆ ತಮ್ಮ ವಯೋಸಹಜ ಕಾಮನೆಗಳಿಗೆ ಬಲಿಯಾದವರಲ್ಲ. ಹಿಲಾರಿ, ನೀತಾಳನ್ನು ತನ್ನ ಸರ್ವಸ್ವವೇ ಎಂದು ನಂಬಿದ್ದ. ಆದ್ದರಿಂದ ಆದಷ್ಟು ಬೇಗನೇ ಆಕೆಯನ್ನು ತನ್ನವಳನ್ನಾಗಿ ಮಾಡಿಕೊಳ್ಳಬೇಕೆಂಬ ಕನಸನ್ನೂ ಕಾಣುತ್ತಿದ್ದ.


ಇದೇ ಸಮಯದಲ್ಲಿ ಹಿಲಾರಿಗೆ ಅನಂತೂರಿನ ರಸಗೊಬ್ಬರದ ಕಂಪನಿಯಿoದ ಸಂದರ್ಶನಕ್ಕೆ ಕರೆ ಬಂತು. ಕೂಡಲೇ ಹೋಗಿ ಪಾಲ್ಗೊಂಡು ಕೆಲಸಕ್ಕೂ ಆಯ್ಕೆಯಾದ. ಕಂಪನಿಯು ಅವನನ್ನು ಒಂದು ವಿಭಾಗದ ಮೇಲ್ವಿಚಾರಕನನ್ನಾಗಿ ನೇಮಿಸಿಕೊಂಡು ಉಳಿದುಕೊಳ್ಳಲು ವಸತಿ ಸೌಲಭ್ಯವನ್ನೂ ಕಲ್ಪಿಸಿತು. ಇದರಿಂದ ಹಿಲಾರಿಯ ಆತ್ಮವಿಶ್ವಾಸ ಹೆಚ್ಚಿತು. ಕೆಲಸಕ್ಕೆ ಹಾಜರಾಗಿ ತಿಂಗಳ ಕಾಲ ಹುರುಪಿನಿಂದ ದುಡಿದು ಊರಿಗೆ ಮರಳಿದ. ಅತ್ತೆ ಮಾವಂದಿರೊಡನೆ ಮದುವೆಯ ವಿಚಾರವನ್ನು ಪ್ರಾಸ್ತಾಪಿಸಿದ. ಅವರಿಗೂ ಹಿಲಾರಿಯು ಅವನ ಅಣ್ಣಂದಿರoತಾಗದೇ ತನ್ನದೇ ಸ್ವತಂತ್ರ ಬದುಕನ್ನು ಆಯ್ದುಕೊಳ್ಳುವ ಉತ್ಸಾಹವನ್ನು ತೋರಿದ್ದು ಹೆಮ್ಮೆಯೆನಿಸಿತು. ಅಲ್ಲದೇ ಮಗಳ ಮದುವೆಯ ವಿಚಾರವನ್ನು ಅವರೂ ಯೋಚಿಸಿದ್ದುದರಿಂದ ಅವನ ಮಾತಿಗೆ ಒಪ್ಪಿಗೆ ನೀಡಿದರು. ಆದರೆ ಮಗಳೊಂದಿಗೆ ತಮ್ಮ ಮನೆಯಲ್ಲೇ ಸಂಸಾರ ಹೂಡುವ ನಿರ್ಬಂಧವನ್ನೂ ಹೇರಿದರು. ಅದು ಹಿಲಾರಿಗೂ ಇಷ್ಟದ ವಿಷಯವೇ ಆಗಿತ್ತು. ಹಾಗಾಗಿ ಮದುವೆಯ ತಯಾರಿ ಭರದಿಂದ ಸಾಗಿತು. ಹಿಲಾರಿಯು ದುಬೈ ಮತ್ತು ಮುಂಬೈಯಲ್ಲಿದ್ದ ಅಕ್ಕ, ಭಾವದಿಂದಿರನ್ನು ಕರೆಯಿಸಿಕೊಂಡ. ಅಣ್ಣ, ಅಕ್ಕಂದಿರ ದುರ್ವ್ಯವಹಾರಗಳಿಂದಾಗಿ ಅವರಿಗೂ ಮನೆಯ ಪರಿಸ್ಥಿತಿಯು ಬೀದಿಗೆ ಬಿದ್ದುದು ತುಂಬಾ ನೋವು ನೀಡಿತ್ತು. ಇದರಿಂದ ಅವರು ಕೂಡಾ ಮನೆಗೆ ಹೋಗಲಿಚ್ಛಿಸದೆ ಸೋದರ ಮಾವನ ಮನೆಯಲ್ಲೇ ಬಂದು ಉಳಿದುಕೊಂಡರು.


ಇತ್ತ ಹಿಂದಿನಿoದಲೂ ಅತ್ತೆ ಮಾವಂದಿರನ್ನು ಕಂಡರಾಗದ ಮತ್ತು ಸಂಬoಧದೊಳಗೆ ನೆಂಟಸ್ತಿಕೆ ಬೆಳೆಸಲೂ ಇಷ್ಟವಿಲ್ಲದ ಮಾತ್ರವಲ್ಲದೇ ಸಹೋದರ ತಮ್ಮನ್ನೊಂದು ಮಾತೂ ಕೇಳದೆ ದಿಢೀರ್ ಮದುವೆ ನಿಶ್ಚಯಿಸಿದ್ದು ಗ್ರೆಟ್ಟಾ, ಆಂಥೋನಿ ಮತ್ತು ತಾಮಸರನ್ನು ಕೆಟ್ಟದಾಗಿ ಕೆರಳಿಸಿಬಿಟ್ಟಿತು. ಆದ್ದರಿಂದ ಆವತ್ತು ಮದುವೆಗೆ ಆಹ್ವಾನಿಸಲು ಬಂದ ಹಿಲಾರಿಯನ್ನು ಕಂಡ ಅವರು ಕೆಂಡಾಮoಡಲರಾದರು. ಅವನು ಒಳಗಡಿಯಿಡುತ್ತಿದ್ದಂತೆಯೇ ಕೆಟ್ಟದಾಗಿ ಬೈಯ್ಯುತ್ತ ಹೊಡೆಯಲೇ ಅವನ ಮೇಲೆ ನುಗ್ಗಿದರು. ಮಕ್ಕಳ ದೌರ್ಜನ್ಯವನ್ನು ಕಂಡ ರಾರ್ಬಟರು ಮತ್ತು ಜೆಸಿಂತಾಬಾಯಿ ಅವರನ್ನು ತಡೆಯಲು ಮುಂದಾದರು. ಅಷ್ಟರಲ್ಲಿ ಗ್ರೆಟ್ಟಾ ರಪ್ಪನೇ ಮುನ್ನುಗ್ಗಿ ಹೋಗಿ ಅಪ್ಪ, ಅಮ್ಮನನ್ನು ಹಿಡಿದು ಎಳೆದೊಯ್ದು ಕೋಣೆಯೊಂದರಲ್ಲಿ ಕೂಡಿ ಹಾಕಿದಳು. ಅವೆಲ್ಲವನ್ನು ಕಂಡು ಹಿಲಾರಿ ತೀವ್ರ ವ್ಯಥೆಪಟ್ಟನಾದರೂ ಸಂಯಮದಿoದಲೇ ಹಿಂದಿರುಗಿದ. ಹೀಗಾಗಿ ಪರವೂರಿನ ಅಕ್ಕ ಭಾವಂದಿರೇ ಮುಂದೆ ನಿಂತು ಹಿಲಾರಿಯ ವಿವಾಹವನ್ನು ನಡೆಸಿಕೊಟ್ಟು ಹೊರಟು ಹೋದರು.


ಮದುವೆಯ ನಂತರ ಹಿಲಾರಿಯು ಕೆಲವು ಕಾಲ ಮಾವನ ಮನೆಯಲ್ಲಿಯೇ ಉಳಿದ. ಆದರೆ ತಾನೊಂದು ಸ್ವಂತ ಮನೆಯನ್ನು ಕಟ್ಟಿಕೊಳ್ಳಬೇಕು ಎಂಬುದು ಅವನ ಬಹುದಿನದ ಆಸೆಯಾಗಿತ್ತು. ಅದೀಗ ಅವನನ್ನು ಬಲವಾಗಿ ಕಾಡತೊಡಗಿತು. ಆದ್ದರಿಂದ ಆವತ್ತೊಮ್ಮೆ ಗ್ರೆಟ್ಟಾ, ಆಂಥೋನಿ ಮತ್ತು ತಾಮಸರು ಮೂವರೂ ಮನೆಯಲ್ಲಿರುವುದನ್ನು ಖಚಿತಪಡಿಸಿಕೊಂಡೇ ಅಲ್ಲಿಗೆ ಹೋದ. ಅಂಗಳದಲ್ಲಿ ನಿಂತುಕೊoಡು, ‘ಅಕ್ಕಾ…!’ ಎಂದು ಕರೆದ. ತಮ್ಮನ ಕೂಗು ಮೂವರಿಗೂ ಕೇಳಿಸಿತು. ಮರುಕ್ಷಣ ಅಣ್ಣ ತಮ್ಮಂದಿರ ರಕ್ತವು ಕುದಿಯಿತು. ಕೂಡಲೇ ಹೊರಗೆ ಧಾವಿಸಿದರು. ಅಷ್ಟರಲ್ಲಿ ಗ್ರೇಟ್ಟಾ ಅವರನ್ನು ತಳ್ಳಿಕೊಂಡು ಮುಂದೆ ಬಂದವಳು, ‘ಏನೂ…!’ ಎಂದು ಬಿಸಿಯುಸಿರು ದಬ್ಬುತ್ತ ಪ್ರಶ್ನಿಸಿದಳು. ಒಡಹುಟ್ಟಿದವರ ಕ್ರೋಧದ ಮುಖಗಳನ್ನು ಕಂಡ ಹಿಲಾರಿ ವಿಷಯ ಪ್ರಾಸ್ತಾಪಿಸಲು ತುಸು ಅಳುಕಿದ. ಆದರೂ ಅವನು ಧೈರ್ಯವಂತ. ತಕ್ಷಣ ಅಳುಕನ್ನು ಹಿಮ್ಮೆಟ್ಟಿ, ಬಂದ ವಿಷಯವನ್ನು ಮಾತಾಡಲು ಮುಂದಾದ. ‘ಅಕ್ಕಾ ನಾನು, ಸ್ವಂತ ಮನೆ ಕಟ್ಟಬೇಕೆಂದಿದ್ದೇನೆ. ಅದಕ್ಕೆ ನಮ್ಮ ಮೇಲಿನ ಗುಡ್ಡೆಯಲ್ಲಿ ಸ್ವಲ್ಪ ಜಾಗ ಬೇಕು!’ ಎಂದ ಮೃದುವಾಗಿ. ಮೊದಲೇ ಮದುವೆಯ ವಿಷಯದಲ್ಲಿ ಅವಮಾನಿತರಾಗಿದ್ದ ಸಹೋದರರು ತಮ್ಮನ ಮಾತು ಕೇಳಿ ಇನ್ನಷ್ಟು ಉರಿದವರು, ರಪ್ಪನೇ ಹಿಲಾರಿಯ ಮೇಲೆ ಬಿದ್ದು ಅವನನ್ನು ಯದ್ವಾತದ್ವ ಥಳಿಸತೊಡಗಿದರು. ಆದರಿತ್ತ ಮಾತೆತ್ತಿದರೆ ಸದಾ ಅಣ್ಣ ತಮ್ಮಂದಿರ ನಡುವೆ ಜಗಳ ಮತ್ತು ಹೊಡೆದಾಟವನ್ನೇ ಕಾಣುತ್ತ ತಾನೂ ಅದನ್ನು ಪ್ರೋತ್ಸಾಹಿಸುತ್ತ ಬಂದಿದ್ದ ಗ್ರೆಟ್ಟಾಳಿಗೆ ಇವತ್ತು ಯಾಕೋ ಆ ಕುರಿತು ಒಳಗೊಳಗೆ ಕಿರಿಕಿರಿ ಅನ್ನಿಸಿರಬೇಕು. ಅವಳು ಕೂಡಲೇ ಆಂಥೋನಿ ಮತ್ತು ತಾಮಸರಿಂದ ಹಿಲಾರಿಯನ್ನು ಬಿಡಿಸಿದವಳು, ‘ಇವನು ಯಾವತ್ತು ಹುಟ್ಟಿದ ಮನೆಯನ್ನೂ ಮತ್ತು ನಮ್ಮನ್ನೂ ಅಹಂಕಾರದಿoದ ಎಡವಿ ಹೋದನೋ ಆವತ್ತಿಗೆ ನಮ್ಮ ಪಾಲಿಗೂ ಇವನು ಸತ್ತು ಹೋದ! ಹಾಗಾಗಿ ಇನ್ನು ಮುಂದೆ ಅವನು ಎಲ್ಲಿದ್ದರೆಷ್ಟು ಬಿಟ್ಟರೆಷ್ಟು? ಹಾಳಾಗಿ ಹೋಗಲಿ. ಇನ್ನು ಮುಂದೆ ನೀವಿಬ್ಬರೂ ಅವನನ್ನು ಹೊಡೆಯುವುದಾಗಲೀ, ತಡೆಯುವುದಾಗಲೀ ಮಾಡಬಾರದು! ಅವನಿಗೆ ಹೇಗೆ ಬೇಕೋ ಹಾಗಿದ್ದುಕೊಂಡು ಸಾಯಲಿ!’ ಎಂದು ಬೈದು ರುಮ್ಮನೆ ಒಳಗೆ ನಡೆದುಬಿಟ್ಟಳು.


ಆವತ್ತಿನಿಂದ ಅಕ್ಕ ಮತ್ತು ಅಣ್ಣಂದಿರ ಮೇಲೆ ಹಿಲಾರಿಯ ಮನಸ್ಸು ಕೂಡಾ ಮುರಿದುಬಿತ್ತು. ಇವರು ಇನ್ನೆಂದಿಗೂ ಸರಿದಾರಿಗೆ ಬರುವ ಮನುಷ್ಯರಲ್ಲ! ಎಂದುಕೊoಡವನು, ಆ ದೇವರು ಇವರಿಗೆ ಎಂದಾದರೂ ಒಳ್ಳೆಯ ಬುದ್ಧಿ ಕೊಡುವ ತನಕ ತನ್ನ ಪಾಲಿಗೂ ಇವರು ಇಲ್ಲವಾದರು! ಎಂದು ತೀರ್ಮಾನಿಸಿ ಅಲ್ಲಿಂದ ಹಿಂದಿರುಗಿದವನು ಅಂದಿನಿoದ ಅವರ ಕುರಿತು ಸಂಪೂರ್ಣ ಉದಾಸೀನ ತಳೆದುಬಿಟ್ಟ. ಇಷ್ಟಾದ ಒಂದು ವರ್ಷದೊಳಗೆ ಗುಡ್ಡದ ಮೇಲೊಂದು ಸುಂದರವಾದ ಮನೆಯನ್ನು ಕಟ್ಟಿಕೊಂಡವನು ಒಂದು ಶುಭದಿನದಂದು ಗ್ರಹ ಪ್ರವೇಶವನ್ನು ಮುಗಿಸಿ ತನ್ನ ಜೀವನ ಸಂಗಾತಿಯೊoದಿಗೆ ಹೊಸ ಬದುಕನ್ನಾರಂಭಿಸಿದ.
ತಮ್ಮ ಮಕ್ಕಳ ಸಾರಾಯಿ ವ್ಯಾಪಾರವು ಉಚ್ಛಯ ಸ್ಥಿತಿಗೆ ತಲುಪುತ್ತಿದ್ದಂತೆಯೇ ರಾಬರ್ಟರು ಆವರೆಗೆ ಶ್ರಮಪಟ್ಟು ಕಾಪಾಡಿಕೊಂಡು ಬಂದಿದ್ದoಥ ತೆಂಗು, ಕಂಗು ಮತ್ತು ಬಾಳೆಯ ತೋಟಗಳೆಲ್ಲ ಆರೈಕೆಗಳಿಲ್ಲದೆ ಒಣಗಲಾರಂಭಿಸಿದ್ದವು. ವಿಶಾಲ ಹೊಲಗದ್ದೆಗಳು ಹಡಿಲು ಬಿದ್ದವು. ನಿಧಾನವಾಗಿ ಸತ್ತು ಧರೆಗುರುಳಿದ ತೆಂಗು, ಕಂಗುಗಳನ್ನು ಗೊಬ್ಬರವನ್ನಾಗಿಸಿಕೊಂಡ ಕರಿಮಾರು ಹಾಡಿಗಳು ಶೀಘ್ರವಾಗಿ ಬೆಳೆಯುತ್ತ ಸಾಗಿದುವು. ಆದರೆ ಇಂಥ ನಿಸರ್ಗದತ್ತ ಪ್ರಕ್ರಿಯೆಯು ಆಂಥೋನಿ ಮತ್ತು ತಾಮಸರ ದೊಡ್ಡ ಮಟ್ಟದ ಕಂಟ್ರಿ ದಂಧೆಗೆ ಹೊಸ ಮೆರುಗನ್ನೇ ನೀಡಿತೆನ್ನಬೇಕು. ಏಕೆಂದರೆ ಹಿಂದೆಲ್ಲಾ ಮನೆಯ ಹಿಂಬದಿಯ ಹಿತ್ತಲಲ್ಲಿ ಕದ್ದುಮುಚ್ಚಿ ನಡೆಯುತ್ತಿದ್ದ ವ್ಯಾಪಾರವು ಈಗ ದಟ್ಟ ಬನದಂಥ ಕರಿಮಾರು ಹಾಡಿಗಳೊಳಗೆ ನಿರ್ಭಿಡೆಯಿಂದ ಸಾಗತೊಡಗಿತು. ದೂರದ ಶಿವಕಂಡಿಕೆಗೂ, ಸುತ್ತಮುತ್ತಲಿನ ಇತರ ಗ್ರಾಮ ಮತ್ತು ಹಳ್ಳಿಗಳಿಗೂ ರಾರ್ಬಟರ ಹಾಡಿಯಿಂದ ಕ್ಯಾನುಗಟ್ಟಲೆ ಕಳ್ಳಭಟ್ಟಿಯು ಕಾರು, ಬಸ್ಸುಗಳ ಹಳೆಯ ಟ್ಯೂಬುಗಳೊಳಗೆ ತುಂಬಿಕೊoಡು ಖಾಸಗಿ ಆಟೋ, ಲಾರಿ, ಬಸ್ಸು ಮತ್ತು ಸೈಕಲ್ಲುಗಳ ಮೂಲಕ ಸರಬರಾಜು ಆಗತೊಡಗಿತು. ಇದರ ಜೊತೆಗೆ ಗ್ರೆಟ್ಟಾ ಹಂದಿಗಳನ್ನು ಕೂಡಾ ಸಾಕುತ್ತ ಮಾಂಸ ಮಾರಾಟದ ಉಪದಂಧೆಯಲ್ಲೂ ತೊಡಗಿದಳು.


ಇತ್ತ, ಸ್ವಲ್ಪಕಾಲ ಮಕ್ಕಳೊಂದಿಗೆ ಮುನಿಸಿಕೊಂಡು ತಮ್ಮಪಾಡಿಗೆ ತಾವಿದ್ದ ಜೆಸಿಂತಾಬಾಯಿಯ ಮನಸ್ಸು ನಿಧಾನವಾಗಿ ಮೃದುವಾಗತೊಡಗಿತು. ಎಷ್ಟಾದರೂ ತಾವೇ ಹೆತ್ತ ಮಕ್ಕಳಲ್ಲವಾ. ಹೇಗಾದರೂ ಇರಲಿ ಒಟ್ಟಾರೆ ಅವರು ಚೆನ್ನಾಗಿದ್ದರೆ ಸಾಕು. ತಾವಿನ್ನು ಎಷ್ಟು ಕಾಲಾಂತ ಬದುಕಿಯೇವು. ಇನ್ನು ಮುಂದೆ ದೇವರು ಹೇಗೆ ನಡೆಸುತ್ತಾನೋ ಹಾಗೆ ಸಾಗಿದರಾಯ್ತು ಎಂದುಕೊoಡವರು ಮೆಲ್ಲನೆ ಮಕ್ಕಳೊಂದಿಗೆ ಬೆರೆತು, ಹಂದಿ ಸಾಕಾಣೆ ಮತ್ತು ವಾಟೀಸು ತಯಾರಿಸುವುದರಲ್ಲಿ ತಾವೂ ತೊಡಗಿಕೊಂಡರು. ಆದರೆ ರಾರ್ಬಟರು ಬದಲಾಗಲಿಲ್ಲ. ಆದರೆ ಹೆಂಡತಿಯನ್ನೂ ಆಕ್ಷೇಪಿಸದೆ ನಿರ್ಲಿಪ್ತರಾಗಿಬಿಟ್ಟರು. ತಾಯಿಯು ತಮ್ಮೊಂದಿಗೆ ರಾಜಿಯಾಗಿ ವ್ಯವಹಾರದಲ್ಲಿ ಒಲವು ತೋರಿದ್ದು ಮಕ್ಕಳಿಗೂ ನೆಮ್ಮದಿಯಾಯಿತು. ಇದಾದ ಕೆಲವು ಕಾಲದ ನಂತರ ರಾರ್ಬಟರ ಆರೋಗ್ಯಸ್ಥಿತಿಯು ತೀವ್ರ ಹದಗೆಡತೊಡಗಿತು. ಅದರಿಂದ ಅವರ ಜೀವನೋತ್ಸಾಹವೂ, ಸಂಸಾರದ ಮೇಲಿನ ಮಮಕಾರವೂ ಕುಂದುತ್ತ ಸಾಗಿದ್ದರಿಂದ ಚಾಪೆ ಹಿಡಿದು ಮಲಗಿಬಿಟ್ಟರು.


*
ಗಂಗರಬೀಡಿನಲ್ಲಿ ಸಾರಾಯಿ ದಂಧೆಯಲ್ಲಿ ತೊಡಗಿದವರಲ್ಲಿ ಮಥಾಯಸ, ಲಿಲ್ಲಿಬಾಯಿ, ಮೋಂತು ಪರ್ಬು ಮತ್ತು ತೇಂಕು ನಾಯ್ಕರಂತಹ ಕಿರಿಸ್ತಾನ ಪ್ರಮುಖರು ಬೇಯಿಸುತ್ತಿದ್ದ ಸಾರಾಯಿ ಕೂಡಾ ಅಕ್ಕಪಕ್ಕದ ಗ್ರಾಮ, ಹಳ್ಳಿ ಮತ್ತು ನಗರಗಳಲ್ಲಿ ಪ್ರಸಿದ್ಧಿ ಪಡೆದಿತ್ತು. ಇದು ಪೊಲೀಸರಿಗೂ ಮತ್ತು ಮೇಲಾಗಿ ಅಬಕಾರಿ ಇಲಾಖೆಗೂ ತಿಳಿದ ವಿಚಾರವೇ ಆಗಿತ್ತು. ಆದರೆ ಪೆಡ್ಡಿ ಮತ್ತು ಇತರ ಕಾಳ ದಂಧಿಗರು ಅಧಿಕಾರಿಗಳೊಂದಿಗಿನ ಒಪ್ಪಂದದoತೆ ಆಗಾಗ ತಮ್ಮ ಉತ್ತಮ ಮಟ್ಟದ ಸಾರಾಯಿಯೊಂದಿಗೆ ಕೈ ತುಂಬಾ ಹಣವನ್ನೂ ಸರಬರಾಜು ಮಾಡುತ್ತ ಅವರ ಬಾಯಿಮುಚ್ಚಿಸುವುದರಲ್ಲಿ ಸಫಲರಾಗುತ್ತಿದ್ದರು. ಆದರೂ ಕೆಲವೊಮ್ಮೆ ಸರಕಾರದ ಕಟ್ಟುನಿಟ್ಟಿನ ಆಜ್ಞೆಯಿಂದಲೋ ಅಥವಾ ಪ್ರಾಮಾಣಿಕ ಮೇಲಾಧಿಕಾರಿಗಳ ಅಪ್ಪಣೆಯ ಮೇರೆಗೋ ಕೆಲವು ಅಧಿಕಾರಿಗಳು ಕಣ್ಣು ಕಟ್ಟಿಗೆಂಬoತೆ ಗಂಗರಬೀಡಿನ ಮೇಲೆ ದಾಳಿ ನಡೆಸುತ್ತಿದ್ದುದುಂಟು. ಆಗೆಲ್ಲ ಅವರು ಸಾಮಾನ್ಯ ಉಡುಗೆ ತೊಟ್ಟು ಬಾಡಿಗೆ ಕಾರು ಮತ್ತು ಜೀಪುಗಳಲ್ಲಿ ಒಂದಷ್ಟು ಖಾಸಗಿ ರೈಡರ್‌ಗಳನ್ನು ತುಂಬಿಕೊoಡು ಬಂದು ಆಂಥೋನಿಯoಥ ಕೆಲವು ಮುಖ್ಯ ಮನೆಗಳನ್ನು ಮುತ್ತಿಗೆ ಹಾಕಿ, ಒಳಗೆ ಹೊಕ್ಕು ಬಾಗಿಲು ಭದ್ರಪಡಿಸಿಕೊಳ್ಳುತ್ತಿದ್ದರು. ಒಂದೆರಡು ಗಂಟೆಗಳ ನಂತರ ಹೊರಗೆ ಬರುತ್ತಿದ್ದ ಆ ಅಧಿಕಾರಿಗಳ ಮುಖಗಳು ತೃಪ್ತಿಯಿಂದ ಅರಳಿರುತ್ತಿದ್ದವು. ರೈಡರುಗಳ ಕಣ್ಣುಗಳು ಮತ್ತೇರಿ ಕೆಂಪಡರಿರುತ್ತಿದ್ದುವು. ಅಂಥ ಸಮಯದಲ್ಲಿ ಆಂಥೋನಿಯ ಕುಟುಂಬಕ್ಕೆ ಆಗದವರು, ‘ಅಬ್ಬಾ ದೇವರೇ…ಕೊನೆಗೂ ನಮ್ಮ ಪ್ರಾರ್ಥನೆ ಫಲಿಸಿತಪ್ಪಾ, ಆಂಥೋನಿಯ ಮನೆಗೆ ಅಬಕಾರಿ ದಾಳಿಯಾಗಿದೆಯಂತೆ! ಆ ನಾಯಿಗಳನ್ನು ಒಂದ್ಹತ್ತು ವರ್ಷವಾದರೂ ಕಂಬಿ ಎಣಿಸುವಂತೆ ಮಾಡಪ್ಪಾ ದೇವರೇ…!’ ಎಂದು ಬೇಡಿಕೊಳ್ಳುತ್ತ ನೆಟ್ಟಿಗೆ ಮುರಿಯುತ್ತಿದ್ದರೆ, ಇನ್ನೊಂದಷ್ಟು ಮಂದಿ, ‘ಅಯ್ಯಯ್ಯೋ ದೇವರೇ…! ಆಂಥೋನಿಯ ಮನೆಗೆ ದಾಳಿಯಾಯಿಂತೆ! ಇನ್ನು ಮುಂದೆ ಒಳ್ಳೆಯ ಕಂಟ್ರಿ ಎಲ್ಲಿ ಸಿಗುತ್ತದಪ್ಪಾ…? ಆ ಅಧಿಕಾರಿಗಳಿಗೆ ನಮ್ಮ ಊರಿನ ಮೇಲೆಯೇ ಯಾಕೆ ಕಣ್ಣು ಬೀಳುತ್ತದೋ ಬೋಳಿಮಕ್ಕಳಿಗೆ, ಥೂ!’ ಎಂಬoಥ ಶಪಿಸುತ್ತ ದುಸ್ತರ ಚಿಂತೆಗೂ ಬೀಳುತ್ತಿದ್ದರು. ಆದರೆ ಅಧಿಕಾರಿಗಳ ದಿಢೀರ್ ಆಗಮನ ಮತ್ತು ಅಷ್ಟೇ ತುರ್ತಾದ ನಗುಮೊಗದ ನಿರ್ಗಮನಗಳು ಎರಡೂ ವರ್ಗದ ಜನರಲ್ಲಿ ಅಚ್ಚರಿಯನ್ನು ಮೂಡಿಸುತ್ತಿತ್ತು.


ಆದರೆ ಭ್ರಷ್ಟ ಅಧಿಕಾರಿಗಳ ನಡುವೆ ಒಂದಷ್ಟು ಪ್ರಾಮಾಣಿಕ ಅಧಿಕಾರಿಗಳೂ ಇರುತ್ತಿದ್ದರು. ಅಂಥವರು ಯಾವ ಆಮಿಷಕ್ಕೂ ಒಳಗಾಗದೆ ಗಂಗರಬೀಡಿನ ಜನಜೀವನದ ಶ್ರೇಯಸ್ಸಿನ ಉದ್ದೇಶದಿಂದ ಆಂಥೋನಿ ಮತ್ತು ಇತರ ಸಾರಾಯಿ ಬೇಯಿಸುವ ಮನೆಗಳಿಗೆ ಪದೇಪದೇ ಪಟ್ಟು ಬಿಡದೆ ದಾಳಿ ನಡೆಸುತ್ತಿದ್ದರು. ಆದರೆ ಆಂಥೋನಿ, ತಾಮಸನ ಜೊತೆಗಿದ್ದ ಕೆಲವು ಯುವಕರ ತಂಡವು ಅಂಥ ಸಂದರ್ಭವನ್ನು ಎದುರಿಸಲು ಸದಾ ಸಿದ್ಧವಾಗಿರುತ್ತಿತ್ತು. ದಾಳಿಯ ವೇಳೆಯಲ್ಲಿ ನುಗ್ಗಿ ಬರುವಂಥ ಅಧಿಕಾರಿಗಳನ್ನು ರಪ್ಪನೆ ಹಿಡಿದು ಕೈಕಾಲು ಕಟ್ಟಿ ನೆಲಕ್ಕೆ ಕೆಡವಿ ಹಿಗ್ಗಾಮುಗ್ಗ ಥಳಿಸಿ ಕಂಗೆಡಿಸಿಬಿಡುತ್ತಿದ್ದರು. ಅಷ್ಟಾದರೂ ಮತ್ತೂ ಎಗರಾಡುವವರನ್ನು ಗ್ರೆಟ್ಟಾ ಹಾಗು ಅಣ್ಣತಮ್ಮಂದಿರು ಕಡಿದು ಮುಗಿಸಲೂ ತಯಾರಿರುತ್ತಿದ್ದರು. ಇದರಿಂದ ಬೆದರಿ ಕಂಗಾಲಾಗುತ್ತಿದ್ದ ಅಧಿಕಾರಿಗಳು ಕಾಡು ಗುಡ್ಡವೆನ್ನದೆ ದಿಕ್ಕಾಪಾಲಾಗಿ ಓಡಿ ಹೋಗಿ ಜೀವ ಉಳಿಸಿಕೊಳ್ಳುವ ಸನ್ನಿವೇಶವೂ ಅನೇಕರಿಗೆ ಎದುರಾಗಿತ್ತು. ಆಗೆಲ್ಲ ತಮ್ಮ ಮೇಲೆ ನಡೆದ ದೌರ್ಜನ್ಯವನ್ನು ಅವರು ಮೇಲಾಧಿಕಾರಿಗಳ ಗಮನಕ್ಕೆ ತಂದು ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಒತ್ತಾಯಿಸುತ್ತಿದ್ದರು. ಆದರೆ ಮೇಲಾಧಿಕಾರಿಗಳಲ್ಲಿ ಅನೇಕರು ಯಾವತ್ತೋ ತಮ್ಮನ್ನು ಗಂಗರಬೀಡಿನ ಕಾಳ ದಂಧಿಗರಿಗೆ ಮಾರಿಕೊಂಡಾಗಿತ್ತು. ಆದ್ದರಿಂದ ಅಲ್ಲಿ ಮತ್ತೆ ಭ್ರಷ್ಟಾಚಾರವೇ ಮೆಲುಗೈ ಸಾಧಿಸುತ್ತಿತ್ತು. ಹೀಗಾಗಿ ಅಂಥ ಕೇಸುಗಳು ಹೇಳಹೆಸರಿಲ್ಲದಂತೆ ಕೊನೆಯುಸಿರೆಳೆಯುತ್ತಿದ್ದುವು. ಇದರಿಂದ ಬರಬರುತ್ತ ಗಂಗರಬೀಡಿನ ಮೇಲೆ ದಾಳಿ ನಡೆಸಲು ಯಾವ ಅಧಿಕಾರಿಯೂ ಮುಂದೆ ಬರುತ್ತಿರಲಿಲ್ಲ. ಪರಿಣಾಮ, ಕೆಲವೇ ವರ್ಷದೊಳಗೆ ಗಂಗರಬೀಡುವು ‘ಅಕ್ರಮ ಕಳ್ಳಭಟ್ಟಿ ಗ್ರಾಮ!’ ಎಂಬ ಕುಖ್ಯಾತಿ ಪಡೆದು ಸರಕಾರದ ಕೆಂಪು ಪಟ್ಟಿಯಲ್ಲಿ ಸೇರಿಕೊಂಡಿತು.


(ಮುoದುವರೆಯುವುದು)

Related posts

ವಿವಶ…..

Chandrahas

ವಿವಶ…..

Chandrahas

ವಿವಶ..

Mumbai News Desk

ವಿವಶ…

Mumbai News Desk

ವಿವಶ….

Chandrahas

ವಿವಶ..

Mumbai News Desk