April 1, 2025
ಸುದ್ದಿ

ಜಾಗತಿಕ ಬಂಟರ ಸಂಘಗಳ ಒಕ್ಕೂಟದಿಂದ ಸಮಾಜ ಕಲ್ಯಾಣ ಸಹಾಯಧನ ವಿತರಣೆ

ಐಕಳ ಹರೀಶ್ ಶೆಟ್ಟಿ ಸಾಮಾಜಿಕ ಸೇವೆಗೆ ರಾಷ್ಟ್ರಮಟ್ಟದ ಶ್ರೇಷ್ಠ ಸಮ್ಮಾನ ಸಿಗುವಂತಾಗಲಿ” : ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು

ಮಂಗಳೂರು: ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಆಶ್ರಯದಲ್ಲಿ ಸಮಾಜ ಕಲ್ಯಾಣ ಸಹಾಯಧನ ಚೆಕ್ ವಿತರಣಾ ಕಾರ್ಯಕ್ರಮ ಬುಧವಾರ  ಬಂಟ್ಸ್ ಹಾಸ್ಟೆಲ್ ನಲ್ಲಿರುವ ಬಂಟರ ಮಾತೃ ಸಂಘದ   ಅಮೃತೋತ್ಸವ ಕಟ್ಟಡದ ಸಭಾಂಗಣದಲ್ಲಿ ಜರುಗಿತು. ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು.

ಇದೇ ಸಂದರ್ಭದಲ್ಲಿ ಮಂಗಳೂರು ಮೇಯರ್ ಸುಧೀರ್ ಕುಮಾರ್ ಶೆಟ್ಟಿ  ಕಣ್ಣೂರು ಅವರನ್ನು ಒಕ್ಕೂಟದ ವತಿಯಿಂದ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತಾಡಿದ ಅವರು, “ಕೈಯಲ್ಲಿ ಹಣ ಇಲ್ಲದೆ ಇದ್ದಾಗಲೂ ಸಾಲ ಮಾಡಿಯಾದರೂ ನಮ್ಮ ಸಮಾಜದ ಜನರ ಕಣ್ಣೀರು ಒರೆಸುವ ಸಂಘ ಇದ್ದರೆ ಅದು ಬಂಟರ ಸಂಘಗಳ ಒಕ್ಕೂಟ ಮಾತ್ರ. ಐಕಳ ಹರೀಶ್ ಶೆಟ್ಟಿಯವರ ನೇತೃತ್ವದಲ್ಲಿ ಸಮಾಜದ ನೊಂದವರ ಕಣ್ಣೀರು ಒರೆಸುವ ಈ ಕಾರ್ಯ ಶ್ರೇಷ್ಠವಾದದ್ದು. ಮನುಷ್ಯ ಜನ್ಮ ಯಾವಾಗಲು ದೊಡ್ಡದು ನಮ್ಮ ಜೀವನ ನಿಂತ ನೀರಾಗಬಾರದು ಸದಾ ಹರಿಯುತ್ತ ಚಲನಶೀಲವಾಗಿರಬೇಕು. ಹೃದಯ ಶ್ರೀಮಂತಿಕೆಯ ಗುಣ ಇಂದು ಐಕಳ ಹರೀಶ್ ಶೆಟ್ಟಿ ಅವರಲ್ಲಿದೆ. ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅವರಿಗೆ ರಾಷ್ಟ್ರಮಟ್ಟದ ಶ್ರೇಷ್ಠ ಸಮ್ಮಾನ ಮುಂದಿನ ದಿನಗಳಲ್ಲಿ ಸಿಗುವಂತಾಗಲಿ. ಹುಟ್ಟಿ ಸಾಯುವ ನಮ್ಮ ನಾಲ್ಕು ದಿನಗಳ ಈ ಜೀವನದಲ್ಲಿ ನಾವು ಆಗಾಗ ತಿರುಗಿ ನೋಡುತ್ತಿರಬೇಕು. ಆಗ ನಮಗಿಂತ ಬಡವರು, ಒಂದು ಹೊತ್ತಿನ ಊಟಕ್ಕೂ ಗತಿಯಿಲ್ಲದವರು ಕಾಣಸಿಗುತ್ತಾರೆ. ಅವರಿಗಿಂತ ನಮ್ಮ ಜೀವನ ಚೆನ್ನಾಗಿದೆ ಎಂದುಕೊಂಡರೆ ನಾವು ಖುಷಿಯಾಗಿರಲು ಸಾಧ್ಯ. ಬಡವರ ಸೇವೆಯನ್ನು ನಾವು ಮಾಡುತ್ತಾ ಬಂದರೆ ಸ್ವರ್ಗ ಪ್ರಾಪ್ತಿಯಾಗುತ್ತದೆ. ನಾವು ಭೂಮಿ ಮೇಲಿರುವುದು ಬಾಡಿಗೆಗೆ ಬಂದಂತೆ. ಇಲ್ಲಿನ ಯಾವುದೂ ನಮ್ಮದಲ್ಲ, ಆದರೆ ಇರುವವರೆಗೆ ಬಳಸಿಕೊಳ್ಳಬಹುದು ಅಷ್ಟೇ” ಎಂದರು.

ಕರ್ನಿರೆ ವಿಶ್ವನಾಥ್ ಶೆಟ್ಟಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿ  “ಬಂಟ ಸಮಾಜದಲ್ಲಿಯೂ ಕಡು ಬಡತನದಿಂದ ದಿನದೂಡುತ್ತಿರುವ ಕುಟುಂಬಗಳಿವೆ. ದಿನದ ಒಂದು ಹೊತ್ತಿನ ಊಟಕ್ಕೂ ಪರದಾಡುವವರಿದ್ದಾರೆ. ಅವರನ್ನು ಕರೆದು ಸಮಸ್ಯೆ ಏನೆಂದು ತಿಳಿದು ಅದನ್ನು ಪರಿಹರಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಐಕಳ ಹರೀಶ್ ಶೆಟ್ಟಿ ಅವರು ಸಂಘಟನೆಯ ಅಧ್ಯಕ್ಷರಾಗುವ ವೇಳೆ 100 ಮನೆಗಳನ್ನು ಬಡ ಬಂಟ ಸಮಾಜಕ್ಕೆ ಕಟ್ಟಿಕೊಡುವುದಾಗಿ ಹೇಳಿದ್ದರು. ಆದರೆ ಇಂದು 350ರಷ್ಟು ಮನೆಗಳನ್ನು ಕಟ್ಟಿಕೊಡಲಾಗಿದೆ. ಇನ್ನೂ ಇಂತಹ ಸಮಾಜಮುಖಿ ಕಾರ್ಯಕ್ರಮಗಳನ್ನು ಮುಂದುವರಿಸುವುದಾಗಿ ಹೇಳಿದ್ದಾರೆ. ನಮ್ಮ ಬಂಟ ಸಮಾಜ ಅಭಿವೃದ್ಧಿಯಾಗಬೇಕು” ಎಂದರು.

ಸಭೆಯಲ್ಲಿ ಫಲಾನುಭವಿಗಳಿಗೆ ದತ್ತಿನಿಧಿಯನ್ನು ವಿತರಿಸಲಾಯಿತು. 

 ಒಕ್ಕೂಟದ ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿ ಕಾರ್ಯಕ್ರಮ ನಿರೂಪಿಸಿದರು. ಜೊತೆ ಕಾರ್ಯದರ್ಶಿ ಚಂದ್ರಹಾಸ ಶೆಟ್ಟಿ ಬಂಟ್ವಾಳ ಧನ್ಯವಾದ ಸಮರ್ಪಿಸಿದರು

————–

  ನೊಂದವರ ಕಣ್ಣೀರು ಒರೆಸುವುದು  ಒಬ್ಬನಿಂದ ಸಾಧ್ಯವಿಲ್ಲ. ಅದಕ್ಕೆ ದಾನಿಗಳ ನೆರವು ಬೇಕು.: ಐಕಳ ಹರೀಶ್ ಶೆಟ್ಟಿ

.  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅವರು ಮಾತನಾಡಿ, “ಮೇಯರ್ ಸುಧೀರ್ ಶೆಟ್ಟಿ ಅವರು ಸಜ್ಜನ ರಾಜಕಾರಣಿ. ಅವರನ್ನು ಇಂದಿನ ಅರ್ಥಪೂರ್ಣ ಕಾರ್ಯಕ್ರಮದಲ್ಲಿ ಸನ್ಮಾನಿಸಿರುವುದು ವಿಶೇಷವಾಗಿದೆ. ನಮ್ಮ ಒಕ್ಕೂಟದಿಂದ ಸಹಾಯಧನ ಪಡೆದವರಿಗೆಲ್ಲರನ್ನೂ ದೇವರು ಹರಸಲಿ. ಎಲ್ಲರಿಗೂ ಒಳಿತಾಗಲಿ. ನೊಂದವರ ಜೊತೆ ಎಂದಿಗೂ ನಾವಿದ್ದೇವೆ. ನಿಮ್ಮ ಕಣ್ಣೀರು ಒರೆಸುವುದು ನನ್ನಿಂದ ಒಬ್ಬನಿಂದ ಸಾಧ್ಯವಿಲ್ಲ. ಅದಕ್ಕೆ ದಾನಿಗಳ ನೆರವು ಬೇಕು. ಹೀಗಾಗಿ ಸಹಾಯಹಸ್ತ ಚಾಚುವ ದಾನಿಗಳು ನಿಜವಾದ ದೇವರು. ಅವರೆಲ್ಲರಿಗೂ ದೇವರು ಆಯುಷ್ಯ ಅರೋಗ್ಯ ಕೊಡಲಿ. ಸಮಾಜದಲ್ಲಿ ಜಾಗತಿಕ ಬಂಟರ ಸಂಘ ಎಲ್ಲಿಯವರೆಗೆ ಇರುತ್ತದೋ ಅಲ್ಲಿಯವರೆಗೆ ನಿಮ್ಮೆಲ್ಲರ ಸೇವೆಯನ್ನು ಮಾಡುತ್ತದೆ. ನಮ್ಮ ಸಮಾಜ ಎಲ್ಲರನ್ನೂ ಪ್ರೀತಿಸುವ ಸಂಘಟನೆ. ಜನರನ್ನು ಜಾತಿಯ ಆಧಾರದಲ್ಲಿ ವಿಂಗಡಣೆ ಮಾಡದೇ ಅವರ ಸೇವೆ ನಿರಂತರವಾಗಿ ಮುಂದುವರಿಸಬೇಕು” ಎಂದರು.

Related posts

ಜಾಗತಿಕ ಬಂಟರ ಸಂಘಗಳ ಒಕ್ಕೂಟದಿಂದ  ಮುಂಬೈ ಬಂಟರ ಸಂಘದ ನೂತನ ಅಧ್ಯಕ್ಷರಿಗೆ ಅಭಿನಂದನೆ

Mumbai News Desk

ಸರ್ಕಾರಿ ಶಾಲಾ ಮಕ್ಕಳಿಗೆ ಯಕ್ಷ ಶಿಕ್ಷಣ- ಪಟ್ಲ ಸತೀಶ್ ಶೆಟ್ಟಿ

Mumbai News Desk

ಅನಿತಾ ಪಿ.ತಾಕೊಡೆಯವರ ಕಥಾ ಸಂಕಲನಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೆ.ವಾಸುದೇವಾಚಾರ್ಯ ದತ್ತಿ ಪುರಸ್ಕಾರ

Mumbai News Desk

ಮಾತೃಭೂಮಿ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿಗೆ, ಬ್ಯಾಂಕೊ ಬ್ಲೂ ರಿಬ್ಬನ್”- 2022- 2023 ಪ್ರಶಸ್ತಿ,

Mumbai News Desk

ಮಹಾರಾಷ್ಟ್ರ ಪ್ರದೇಶ ಕಿಸನ್ ಕಾಂಗ್ರೆಸ್ ಸಮಿತಿಯ ಕಾರ್ಯಧ್ಯಕ್ಷರಾಗಿ ಸುರೇಶ್ ಶೆಟ್ಟಿ ಯೆಯ್ಯಾಡಿ ನಿಯುಕ್ತಿ.

Mumbai News Desk

ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಜಯಕರ ಸುವರ್ಣ ನಿಧನ

Mumbai News Desk