
-ಸೋಮನಾಥ ಎಸ್.ಕರ್ಕೇರ, ಮುಂಬಯಿ.
ಫೋನ್: 9819321186
ಪಾಶ್ಚಾತ್ಯ ಸಂಸ್ಕೃತಿಯ ಸುಳಿಗೆ ಸಿಲುಕಿರುವ ಇಂದಿನ ಯುವ ಜನಾಂಗವು ಆಧ್ಯಾತ್ಮಿಕತೆ್ಯಿಂದ ವಿಮುಖವಾಗುತ್ತಿರುವುದು ಅತ್ಯಂತ ಶೋಚನೀಯ ಸಂಗತಿಯಾಗಿದೆ. ಸನಾತನ ಧರ್ಮದ ಬಗ್ಗೆ ಅವರಲ್ಲಿ ಆಸಕ್ತಿ ಕುಂದುತ್ತಿರುವುದು ಕಂಡುಬರುತ್ತಿದೆ. ತಮ್ಮ ಗುರುಹಿರಿಯರು ನಂಬಿಕೊಂಡು ಬಂದಿರುವ ದೇವ ದೇವತೆಯರ ಮೇಲಿನ ಅವರ ನಂಬಿಕೆಯು ಕಡಿಮೆಯಾಗುತ್ತಿದೆ. ಕೆಲವರಿಗೆ ಭಗವಂತನ ಮೇಲೆ ಭಕ್ತಿ ಇದ್ದರೂ, ಆ ಭಕ್ತಿಯಲ್ಲಿ ಪ್ರಾಮಾಣಿಕತೆಯ ಕೊರತೆ ಕಂಡು ಬರುತ್ತಿದ್ದು ಅದು ವಾಣಿಜ್ಜ್ಯೀಕರಣಗೊಂಡಿದೆ. ಸತ್ಯ ಧರ್ಮದ ದಾರಿಯಲ್ಲಿ ನಡೆದು ಭಯ ಭಕ್ತಿಯಿಂದ ಭಗವಂತನ ಸ್ಮರಣೆ ಮಾಡಿದಲ್ಲಿ ಜೀವನದಲ್ಲಿ ಬರುವ ಕಷ್ಟ ಕಾರ್ಪಣ್ಯಗಳಿಗೆ ಸಮಾಧಾನ ದೊಕರುತ್ತದೆ ಎಂಬುದಕ್ಕೆ ನಮ್ಮ ಧರ್ಮ ಗ್ರಂಥಗಳಲ್ಲಿ ಹೇರಳ ನಿದರ್ಶನ ದೊರಕುತ್ತವೆ. ಹೀಗೆ ಭಗವಂತನ ಮೇಲೆ ಅನನ್ಯ ಭಕ್ತಿ ಇರಿಸಿ ಜೀವನದಲ್ಲಿ ಯಶಸ್ಸನ್ನು ಕಾಣುತ್ತಿರುವವರ ಸಂಖ್ಯೆ ಅಪಾರವಿದೆ. ಇವರಲ್ಲಿ ಮೊಗವೀರ ಸಮಾಜಕ್ಕೆ ಸೇರಿದ ಸುಧಾಕರ ಕಾಪು ಇವರೂ ಒಬ್ಬರು.
ಕಳೆದ ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಉದ್ಯೋಗ ನಿಮ್ಮಿತ್ತ ಬೆಂಗಳೂರಿನಲ್ಲಿ ನೆಲಸಿರುವ ಸುಧಾಕರ ಕಾಪು ಹಾಗೂ ಅವರ ಸಹಧರ್ಮಿಣಿ ಪುಷ್ಪಾ ಸುಧಾಕರರು ಉಚ್ಚಿಲ ಮಹಾಲಕ್ಷ್ಮೀ ಮಾತೆಯ ಪರಮ ಭಕ್ತರು. ಹುಟ್ಟೂರನ್ನು ತೊರೆದು ಬೆಂಗಳೂರಿಗೆ ಹೋಗಿ ನೆಲಸಿದ ನಂತರವೂ ಮಹಾಲಕ್ಷ್ಮಿಯ ಮೇಲಿನ ಅವರ ಭಕ್ತಿ ತಿಲಮಾತ್ರವೂ ಕಡಿಮೆಯಾಗಲಿಲ್ಲ. ಆರಂಭದಲ್ಲಿ ತಾವು ವಾಸಿಸುತ್ತಿದ್ದ ಚಿಕ್ಕದಾದ ಮನೆಯ ಕೋಣೆಯೊಂದರಲ್ಲಿ ದೇವಿಯ ಸಣ್ಣ ಫೊಟೋ ಇರಿಸಿ ಪೂಜಿಸಲಾರಂಭಿಸಿದರು. ಹೀಗಿರುವಾಗ ಒಂದು ದಿನ ದೇವಿಯು ಸುಧಾಕರರ ಕನಸಿನಲ್ಲಿ ಕಾಣಿಸಿಕೊಂಡು ತನಗಾಗಿ ಒಂದು ಪ್ರತ್ಯೇಕ ನೆಲೆಯನ್ನು ಕಲ್ಪಿಸಿ ಕೊಡಬೇಕೆಂದು ಸೂಚಿಸಿದಳು. ಆದರೆ ಆರ್ಥಿಕವಾಗಿ ಅಷ್ಟೇನೂ ಅನುಕೂಲತೆಯನ್ನು ಹೊಂದಿರದ ಸುಧಾಕರ ದಂಪತಿ ಈ ಬಗ್ಗೆ ಮೌನ ತಾಳಿದ್ದರು. ಆದರೆ ದೇವಿಯು ಪುನ: ಪುನ: ಕನಸಿನಲ್ಲಿ ಬಂದು ತನ್ನ ನೆಲೆಯ ಬಗ್ಗೆ ನೆನಪಿಸಿದಾಗ, ಸುಧಾಕರರಿಗೆ ಈ ಕುರಿತು ಗಂಭೀರವಾಗಿ ಯೋಚಿಸುವುದು ಅನಿವಾರ್ಯವಾಯ್ತು, ಅಂತೆಯೇ ಒಂದು ದಿನ ಅವರು ಬೇರೆ ಬೇರೆ ಕಡೆ ನೆಲಸಿರುವ ತಮ್ಮ ಕುಟುಂಬಸ್ಥರನ್ನು ಒಟ್ಟುಗೂಡಿಸಿ ಈ ವಿಷಯವನ್ನು ಅವರ ಮುಂದೆ ಪ್ರಸ್ತಾಪಿಸಿದರು. ಇದೇ ಮಹಾಲಕ್ಷ್ಮಿಯ ಇಚ್ಛೆ ಎಂದಾದರೆ ನಾವೆಲ್ಲಾ ಕೈಜೋಡಿಸಿ ಈ ಕೆಲಸವನ್ನು ಕೈಗೆತ್ತಿಕೊಳ್ಳೋಣ ಎಂದು ಅವರು ಒಮ್ಮತದ ನಿರ್ಧಾರಕ್ಕೆ ಬಂದರು. ಈ ಕಾರ್ಯಕ್ಕೆ ಸುಧಾಕರರ ಕುಟುಂಬಸ್ಥರಿಂದ ಮಾತ್ರವಲ್ಲದೆ ಇತರ ಕಡೆಗಳಲ್ಲಿನ ಮಹಾಲಕ್ಷ್ಮಿಯ ಭಕ್ತರಿಂದಲೂ ಸಹಾಯ ಧನ ಹರಿದು ಬಂತು. ಸ್ಥಳೀಯ ಶಾಸಕರಾದ ಮಂಜುನಾಥ ಮತ್ತು ನಗರ ಸೇವಕರಾದ ನಾಗಭೂಷಣರೂ ಈ ಶುಭ ಕಾರ್ಯಕ್ಕೆ ತಮ್ಮ ಸಹಾಯ ಹಸ್ತವನ್ನು ಚಾಚಿದರು. ಹೀಗೆ ಸುಧಾಕರ ದಂಪತಿ ವಾಸಿಸುತ್ತಿರುವ ಮನೆಯ ಪಕ್ಕದಲ್ಲೇ ಒಂದು ಮಂದಿರವನ್ನು ನಿರ್ಮಿಸಿ ಪದ್ಮಾಸನದಲ್ಲಿ ಕಮಲದ ಮೇಲೆ ಕುಳಿತಿರುವ ಮಹಾಲಕ್ಷ್ಮಿಯ ಭವ್ಯ ಮೂರ್ತಿಯನ್ನು ಕಾರ್ಕಳದಿಂದ ಕೆತ್ತಿಸಿ ಬೆಂಗಳೂರಿಗೆ ತರಲಾಯ್ತು. ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನದ ಪ್ರಧಾನ ಅರ್ಚಕರಾದ ವೆಂಕಟ ನರಸಿಂಹ ಉಪಾಧ್ಯಾಯ ಹಾಗೂ ವೇ. ಬ್ರ. ರಾಘವೇಂದ್ರ ಉಪಾಧ್ಯಾಯರ ನೇತೃತ್ವದಲ್ಲಿ ಸಕಲ ಪೂಜೆ, ಹೊಮ ಕಾರ್ಯಕ್ರಮಗಳೊಂದಿಗೆ ಈ ಮಂದಿರದಲ್ಲಿ ತಾರೀಖು 17.11.2011 ರಂದು ವಿಗ್ರಹದ ಪ್ರತಿಪ್ಠಾಪನೆಯನ್ನು ಸುಸಾಂಗವಾಗಿ ನೆರವೇರಿಸಲಾಯ್ತು.
ಅಂದಿನಿಂದ ಪ್ರತೀ ವರ್ಷವೂ ಪವಿತ್ರ ಕಾರ್ತಿಕ ಮಾಸದಲ್ಲಿ ಇಲ್ಲಿ ಅಮ್ಮನ ವರ್ಧಂತಿ ಉತ್ಸವ, ನವರಾತ್ರಿ ಪೂಜೆ, ವರಮಹಾಲಕ್ಷ್ಮೀ ಹಬ್ಬವನ್ನು ಬಹಳ ವಿಜ್ರಂಭಣೆಯಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಈ ಸಂದರ್ಭದಲ್ಲಿ ಸೀರೆ ದಾನದಂತಹ ಪುಣ್ಯಪ್ರದ ಕಾರ್ಯಕ್ರಮದೊಂದಿಗೆ ಸೇರುವ ಅಂದಾಜು 500 ಕ್ಕೂ ಅಧಿಕ ಭಕ್ತ ಜನರಿಗೆ ಅನ್ನ ಪ್ರಸಾದದ ವ್ಯವಸ್ಥೆಯನ್ನೂ ಮಾಡಲಾಗುತ್ತಿದೆ. ಇದರಲ್ಲಿ ಸ್ಥಳೀಯರು ಮಾತ್ರವಲ್ಲದೆ ಮುಂಬಯಿ,ಹೈದರಾಬಾದ್, ಉಡುಪಿ ಮುಂತಾದ ಕಡೆಗಳಲ್ಲಿ ನೆಲಸಿರುವ ಸುಧಾಕರರ ಕುಟ್ಬುಂಸ್ಥರು ಹಾಗೂ ಮಹಾಲಕ್ಷ್ಮೀ ದೇವಿಯ ಇತರ ಭಕ್ತರೂ ಪಾಲ್ಗೊಳ್ಳುತ್ತಿದ್ದಾರೆ.
ಇಲ್ಲಿನ ಒಂದು ವಿಶೇಷತೆ ಎಂದರೆ ಇಲ್ಲಿ ಪ್ರತಿ ದಿನ ಹಾಗೂ ಪ್ರತಿ ಶುಕ್ರವಾರ ನಡೆಯುವ ಪೂಜಾ ಕಾರ್ಯವನ್ನು ಸುಧಾಕರರ ಧರ್ಮಪತ್ನಿ ಶ್ರೀಮತಿ ಪುಷ್ಪಾ ಸುಧಾಕರರೇ ನಡೆಸಿಕೊಂಡು ಬರುತ್ತಿದ್ದಾರೆ. ಮಾತ್ರವಲ್ಲದೆ ಮಂತ್ರ ಪಠಣೆಯನ್ನೂ ಕೂಡಾ ಅವರೇ ಮಾಡುತ್ತಾರೆ. ಮಂದಿರ ನಿರ್ಮಾಣದ ಬಳಿಕ ಸುಧಾಕರ ದಂಪತಿ ಬೆಂಗಳೂರಿನಲ್ಲಿ ತಮ್ಮದೇ ಆದ ಒಂದು ಸುಸಜ್ಜಿತ ಬಂಗಲೆಯನ್ನು ಕಟ್ಟಿಸಿದ್ದು ಅವರ ಸುಪುತ್ರ ಕೆನಡಾದಲ್ಲಿ ತಮ್ಮ ಉಚ್ಛ ಶಿಕ್ಷಣವನ್ನು ಮುಂದುವರಿಸುತ್ತಿದ್ದಾನೆ. ಈ ಮಹಾತಾಯಿಯು ತನ್ನ ಸನ್ನಿಧಿಗೆ ಆಗಮಿಸುವ ಭಕ್ತಾದಿಗಳಿಗೆ ಅನುಗ್ರಹಿಸಿ ಅವರಿಗೆ ಇಷ್ಟಾರ್ಥ ಸಿದ್ಧಿಯನ್ನು ಕರುಣಿಸುತ್ತಾಳೆ ಎಂಬುದಕ್ಕೆ ದಿನೇ ದಿನೇ ಇಲ್ಲಿಗೆ ಬರುತ್ತಿರುವ ಭಕ್ತರ ಸಂಖ್ಯೆಯಲ್ಲಾಗುತ್ತಿರುವ ಏರಿಕೆಯೇ ನಿದರ್ಶನ ಎನ್ನುತ್ತಾರೆ ಸುಧಾಕರ ದಂಪತಿ.
ಈ ವರ್ಷ ದೇವಿಯ 12 ನೇ ಪ್ರತಿಷ್ಠಾ ವರ್ಧಂತಿ ಉತ್ಸವ ಮತ್ತು ಬ್ರಹ್ಮಕಳಸೊತ್ಸವು ಶುಕ್ರವಾರ 2-2-2024 ರಿಂದ ಮೊದಲ್ಗೊಂಡು ಭಾನುವಾರ 4-2-24 ರ ವರೆಗೆ ಜರಗಲ್ಲಿದ್ದು ಈ ಸಂದರ್ಭದಲ್ಲಿ ಗಣಪತಿ ಯಾಗ, ತೋರಣ ಮುಹೂರ್ತ, ವಾಸ್ತು ಶಾಂತಿ, ವಾಸ್ತುಬಲಿ , ಆಶ್ಲೇಷ ಬಲಿ, ಹಾಗೂ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಲಿದೆ. .
ಈ ಪುಣ್ಯಪ್ರದ ಧಾರ್ಮಿಕ ಕಾರ್ಯಕ್ರಮದಲ್ಲಿ ಎಲ್ಲರೂ ಕುಟುಂಬ ಸಮೇತ ಪಾಲ್ಗೊಂಡು ಜಗನ್ಮಾತೆಯ ಕೃಪಾಕಟಾಕ್ಷಕ್ಕೆ ಪಾತ್ರರಾಗಬೇಕೆಂದು ಸುಧಾಕರ ಕಾಪು ಮತ್ತು ಶ್ರೀಮತಿ ಪುಷ್ಪಾ ಸುಧಾಕರರು ಭಕ್ತರಲ್ಲಿ ವಿನಂತಿಸಿಕೊಂಡಿದ್ದಾರೆ.
ಈ ಶುಭ ಕಾರ್ಯದಲ್ಲಿ ಭಾಗವಹಿಸಲು ಮತ್ತು ದೇವಸ್ಥಾನಕ್ಕೆ ದೇಣಿಗೆಯನ್ನು ನೀಡಲು ಇಚ್ಛಿಸುವವರು ಈ ಕೆಳಗಿನ ವಿಳಾಸವನ್ನು ಸಂಪರ್ಕಿಸಬಹುದಾಗಿದೆ
:
ದೇವಸ್ಥಾನದ ವಿಳಾಸ: ಶ್ರೀ ಮಹಾಲಕ್ಷ್ಮೀ ಸನ್ನಿಧಿ, ಇಂದಿರಾ ಕ್ಯಾಂಟಿನ್ ರಸ್ತೆ, ವೀರಾಂಜನಪ್ಪ ಲೇಔಟ್, ಅಬ್ಬಿಗೆರೆ, ಬೆಂಗಳೂರು-560 090. ಫೋನ್ : 6363214104