
ಹಿರಿಯ ರಂಗ ತಪಸ್ವಿ, ಲೇಖಕ, ಚಿತ್ರ ನಿರ್ಮಾಪಕ
ಸದಾನಂದ ಸುವರ್ಣ ಇಂದು ವಯೋಸಹಜ ಅನಾರೋಗ್ಯದಿಂದ ನಿಧನ ಹೊಂದಿದರು, ಅವರಿಗೆ 92 ವರ್ಷ ವಯಸ್ಸಾಗಿತ್ತು.
ಮೂಲತಃ ಮುಲ್ಕಿಯವರಾದ ಸದಾನಂದ ಸುವರ್ಣ ಅವರು ಹಲವು ವರ್ಷಗಳ ಕಾಲ ಮುಂಬೈ ನಲ್ಲಿ ನೆಲೆಸಿದ್ದರು. ಮುಂಬೈಯಲ್ಲಿ ಬಹಳ ಕಷ್ಟದಲ್ಲಿ ವಿದ್ಯಾಭ್ಯಾಸ ಮಾಡಿದ ಸದಾನಂದ ಸುವರ್ಣರು 10 ವರ್ಷಗಳ ಕಾಲ ಖಾಸಾಗಿ ಸಂಸ್ಥೆಯಲ್ಲಿ ಉದ್ಯೋಗ ಮಾಡಿದ್ದರು. ಬಳಿಕ ಸಾಹಿತ್ಯ,ರಂಗಭೂಮಿ, ಸಿನಿಮಾಗಳಲ್ಲಿ ಆಸಕ್ತಿ ಬೆಳೆಸಿದ್ದ ಅವರು ಕಳೆದ ಹತ್ತು ವರ್ಷಗಳಿಂದ ಮಂಗಳೂರಿನಲ್ಲಿ ನೆಲೆಸಿದ್ದರು.
ಕನ್ನಡ ರಂಗಭೂಮಿಯಲ್ಲಿ ಹಲವು ವರ್ಷಗಳ ಸೇವೆ ಸಲ್ಲಿಸಿದ ಸದಾನಂದ ಸುವರ್ಣರ ಉರುಳು, ಕೋರ್ಟ್ ಮಾರ್ಷಲ್, ಡೊಂಕು ಬಾಲದ ನಾಯಕರು, ಧರ್ಮ ಚಕ್ರ, ಸುಳಿ ಅವರಿಗೆ ಬಹಳ ಖ್ಯಾತಿಯನ್ನು ತಂದಿತ್ತು. ಸುವರ್ಣರು ನಿರ್ಮಿಸಿ, ಗಿರೀಶ್ ಕಾಸರವಳ್ಳಿ ನಿರ್ದೇಶಿಸಿದ ಘಟಶ್ರಾದ್ಧ ಸಿನಿಮಾಕ್ಕೆ ಸ್ವರ್ಣ ಕಮಲ ಪ್ರಶಸ್ತಿ ಲಭಿಸಿದೆ, ಹಾಗೂ ಅವರ ಗುಡ್ಡೆದ ಭೂತ ಧಾರಾವಾಹಿ ದೂರದರ್ಶನದಲ್ಲಿ ಪ್ರಸಾರಗೊಂಡು ಜನ ಮೆಚ್ಚುಗೆ ಗಳಿಸಿತ್ತು.
ರಂಗಭೂಮಿಯಲ್ಲಿ ಅತ್ಯಂತ ಕ್ರಿಯಾಶೀಲರಾಗಿದ್ದ ಸುವರ್ಣರು ತಾನು ಬೆಳೆಯುತ್ತಾ ನೂರಾರು ಕಿರಿಯ ಕಲಾವಿದರನ್ನು ಬೆಳೆಸಿದ್ದರು, ಸದಾನಂದ ಸುವರ್ಣರು ಮುಂಬೈ ಹಾಗೂ ಮಂಗಳೂರಿನ ರಂಗಭೂಮಿಗೆ ನೀಡಿದ ಕೊಡುಗೆ ಅನನ್ಯ.
ಅವರು ಗಿರೀಶ್ ಕಾಸರವಳ್ಳಿ, ಪ್ರಕಾಶ್ ರೈ ಅವರಂಥ ಅಪ್ರತಿಮ ಪ್ರತಿಭೆಗಳನ್ನು ಗುರುತಿಸಿ ಅವರ ಪ್ರತಿಭಾ ಪ್ರಧರ್ಶನಕ್ಕೆ ಅವಕಾಶ ನೀಡಿದವರು. ಗಿರೀಶ್ ಕಾಸರವಳ್ಳಿ ನಿರ್ದೇಶಿಸಿದ ಮಾಡಿ ಬಾಲಿವುಡ್ ನ ಖ್ಯಾತ ನಟ ನಸಿರುದ್ಧಿನ್ ಶಾ ನಟಿಸಿದ ಮನೆ ಹಾಗೂ ಕಾಸರಳ್ಳಿ ಅವರ ನಿರ್ದೇಶನದ ಚಾರುಹಾಸನ್ ನಟಿಸಿದ ತಬರನ ಕಥೆ ಸಿನಿಮಾಕ್ಕೆ ಸುವರ್ಣರು ಕಾರ್ಯಕಾರಿ ನಿರ್ಮಾಪಕರಾಗಿ ಕೆಲಸ ಮಾಡಿದ್ದರು, ಅಲ್ಲದೆ ಕುಬಿ ಮತ್ತು ಇಯಲಾ ಸಿನಿಮಾವನ್ನು ನಿರ್ದೇಶನ ಮಾಡಿದ್ದರು.
ಮಂಗಳೂರಿನ ಪುರಭವನದಲ್ಲಿ ಮೃತರ ಅಂತಿಮ ದರ್ಶನ ನಾಳೆ (ಜು. 17)ಮಧ್ಯಾಹ್ನ 1 ರಿಂದ 3 ಗಂಟೆಗೆ ತನಕ ನಡೆಯಲಿದ್ದು, ಬಳಿಕ ಅವರ ಇಚ್ಛೆಯಂತ್ತೆ ದೇಹದಾನ ಮಾಡಲಾಗುವುದು ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ.