
ಮುಂಬಯಿಯ ಪ್ರಸಿದ್ಧ ಭಜನಾ ಮಂಡಳಿಗಳಲ್ಲಿ ಒಂದಾದ ಶ್ರೀ ಉಮಾಮಹೇಶ್ವರಿ ಭಜನಾ ಮಂಡಳಿಯು ಕಳೆದ 7 ದಶಕಗಳಿಂದ ಮುಂಬೈಯಲ್ಲಿ ಹರಿನಾಮ ಸಂಕೀರ್ತನೆ ಮಾಡುತ್ತ ದಾಸ ಸಾಹಿತ್ಯ ಪ್ರಾಜೆಕ್ಟ್ ನ ಅಡಿಯಲ್ಲಿ ನೋಂದಾವಣೆಯಾದ ಮಹಾನಗರದ ಪ್ರಥಮ ಭಜನಾ ಮಂಡಳಿಯಾಗಿ ಮಹಾನಗರದ ವಿವಿಧ ಭಜನಾ ಮಂಡಳಿಗಳಲ್ಲಿ ನಡೆಯುವ ಎಕ್ಹ ಭಜನೆ, ಕಾರ್ಯಕ್ರಮದಲ್ಲಿ ಸಹಕರಿಸುತ್ತ ತನ್ನದೇ ಆದ ಚಾಪನ್ನು ಮೂಡಿಸಿದೆ.
ಶ್ರೀ ಕ್ಷೇತ್ರ ಉಮಾಮಹೇಶ್ವರಿ ದೇವಾಸ್ಥಾನದಲ್ಲಿ ಪ್ರತಿ ಶುಕ್ರವಾರ ಹಾಗೂ ಸಂಕ್ರಮಣದಂದು ಭಜನೆ ಹಾಗೂ ವಿಶೇಷ ದಿನಗಳಾದ ನವರಾತ್ರಿಯ , ಶಿವರಾತ್ರಿ, ಶ್ರೀ ಕೃಷ್ಣ ಜನ್ಮಾಷ್ಟಮಿ, ಗಣೇಶ ಚತುರ್ಥಿ, ರಾಮ ನವಮಿ, ಹನುಮಾನ್ ಜಯಂತಿ, ನಾಗರ ಪಂಚಮಿ, ಮಕರ ಸಂಕ್ರಾಂತಿ, ದೇವಸ್ಥಾನದ ವಾರ್ಷಿಕೋತ್ಸವದ ದಿನಗಳು ಇನ್ನಿತರ ವಿಶೇಷ ದಿನಗಳಲ್ಲಿ ಭಜನಾ ಕಾರ್ಯಕ್ರಮ ನಡೆಸುತ್ತಿದ್ದಾರೆ
ಕಲಿಯುಗದಲ್ಲಿ ದೇವರನ್ನು ಒಲಿಸುವ ಸುಲಭ ಸಾಧನ ಭಜನೆ ಎಂಬ ಜ್ಞಾನಿಗಳ ವಾಣಿಯಂತೆ ದಾಸ ಸಾಹಿತ್ಯ ಪ್ರಾಜೆಕ್ಟ್ ನ ಅಡಿಯಲ್ಲಿ ನೋಂದಾಣಿಯನ್ನು ಪಡೆದು ತಿರುಪತಿ ತಿರುಮಲ ದೇವಸ್ಥಾನದಲ್ಲಿ ರಿಜಿಸ್ಟ್ರೇಷನ್ ಆಗಿ ಸತತ 10 ವರ್ಷ ಶ್ರೀ ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ಹಾಗೂ ಹಲವಾರು ಸಲ ಮಂತ್ರಾಲಯದಲ್ಲಿ ಹರಿನಾಮ ಸಂಕೀರ್ತನೆಯನ್ನು ಹಾಗೂ ಅತ್ಯಂತ ಶ್ರೀಮಂತ ದೇವಾಲಯವಾದ ತಿರುವನಂತಪುರದ ಅನಂತಪದ್ಮನಾಭ ದೇವಸ್ಥಾನದಲ್ಲಿ ಭಜನಾ ಸಂಕೀರ್ತನೆಯನ್ನು ನಡೆಸಿರುವ ಭಜನಾ ತಂಡ ಎಂಬುವುದು ಶ್ಲಾಘನೀಯ.

ಈ ತಂಡದ ಹಲವಾರು ಸದಸ್ಯರು ಧರ್ಮಸ್ಥಳದಲ್ಲಿ ನಡೆಯುವ ಭಜನಾ ಕಮಟದಲ್ಲಿ ಕೂಡ ಭಾಗವಹಿಸಿರುತ್ತಾರೆ, ಮಂಡಳಿಯ ಪ್ರಸ್ತುತ ಭುವಾಜಿ ರವೀಂದ್ರ ಶಾಂತಿಯವರು ಸತತ ಮೂರು ವರ್ಷ ಧರ್ಮಸ್ಥಳ ಭಜನಾ ಪರಿಷತ್ತಿನ ಕಮ್ಮಟದಲ್ಲಿ ಭಾಗವಹಿಸಿ ಮುಂಬೈಯಲ್ಲಿ ಧರ್ಮಸ್ಥಳ ಭಜನಾ ಪರಿಷತ್ತಿನ ಘಟಕವನ್ನು ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುತ್ತಾರೆ. ಇವರ ನೇತೃತ್ವದ ಶ್ರೀ ಉಮಾ ಮಹೇಶ್ವರಿ ಭಜನ ಮಂಡಳಿ ಜರಿಮರಿಯ ಸದಸ್ಯರು ಕಲಾವಿದರ ಪರಿಷತ್ತು ಮಹಾರಾಷ್ಟ್ರ, ಇವರು ಏರ್ಪಡಿಸಿದ ಕುಣಿತ ಭಜನಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಹಾಗೂ ಇನ್ನಿತರ ಭಜನಾ ಸ್ಪರ್ಧೆಯಲ್ಲಿಯೂ ಭಾಗವಹಿಸಿ ಪಾರಿತೋಷಕಗಳನ್ನು ಪಡೆದಿದ್ದಾರೆ, ಮುಂಬಯಿ ಮಹಾನಗರ ಮಾತ್ರವಲ್ಲದೆ ಮಹಾರಾಷ್ಟ್ರ ಆಂಧ್ರಪ್ರದೇಶ, ತಮಿಳುನಾಡು, ತೆಲಂಗಾಣ, ಕೇರಳ, ಕರ್ನಾಟಕದ ವಿವಿಧ ಪ್ರಖ್ಯಾತ ಮಂದಿರಗಳಲ್ಲಿ ಮಾತ್ರವಲ್ಲದೆ ದೇಶದ ಹಲವಾರು ಪುಣ್ಯಕ್ಷೇತ್ರಗಳಲ್ಲಿ ಭಜನಾ ಕಾರ್ಯಕ್ರಮ ನಡೆಸಿ ಕೊಟ್ಟಿರುವ ಹೆಗ್ಗಳಿಕೆ ಮಂಡಳಿಗಿದೆ.

ಹಲವಾರು ವರ್ಷಗಳಿಂದ ನಗರ ಭಜನೆಯನ್ನು ನಡೆಸುತ್ತಾ ಬಂದಿರುವ ಇವರು ಇದೀಗ ಹೊಸಪೀಳಿಗೆಯನ್ನು ಭಕ್ತಿ ಮಾರ್ಗದಲ್ಲಿ ನಡೆಸಿ, ಭಜನೆಯಲ್ಲಿ ಆಸಕ್ತಿಯನ್ನು ಬೆಳೆಸಿ, ಮನೆ, ಮನೆಗಳಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಯಗಲೆಂಬ ಉದ್ದೇಶದಿಂದ ಉಚಿತವಾಗಿ ಮನೆ ಮನೆಯಲ್ಲಿ ಭಜನೆ ಕಾರ್ಯಕ್ರಮ ವನ್ನು ಅಯೋಜಿಸುತ್ತಿದ್ದಾರೆ.
ತುಳುನಾಡಿನ ಉಭಯ ಜಿಲ್ಲೆಗಳ ಹೆಚ್ಚಿನ ಪುಣ್ಯಕ್ಷೇತ್ರಗಳಲ್ಲಿ ಭಜನಾ ಕಾರ್ಯಕ್ರಮವನ್ನು ಭಕ್ತಿ ಭಾವದಿಂದ ನಡೆಸಿಕೊಟ್ಟು ತವರಿನಲ್ಲಿಯೂ ಮನೆಮಾತಾಗಿರುವರು.







ಇದರೊಂದಿಗೆ ಪರಿಸರದಲ್ಲಿ ಅಸಕ್ತರಿಗೆ ಶೈಕ್ಷಣಿಕ ಹಾಗೂ ವೈದ್ಯಕೀಯ ನೆರವನ್ನು ನೀಡಿರುವ ಹಲವರು ನಿದರ್ಶನಗಳಿವೆ.
ಪ್ರಸ್ತುತ ಮಂಡಳಿಯಲ್ಲಿ 20 ಪುರುಷರು, 15 ಮಹಿಳೆಯರು ಹಾಗೂ 12 ಮಕ್ಕಳ ಸಹಿತ 40 ಕ್ಕೂ ಅಧಿಕ ಸದಸ್ಯರಿದ್ದು, ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಯುತ್ತಿರುವ ಮಕ್ಕಳನ್ನು ಒಟ್ಟು ಸೇರಿಸಿ ಕನ್ನಡ, ತುಳುವಿನಲ್ಲಿ ಭಜನೆಯನ್ನು ಕಲಿಸಿ ಭಜನೆಯ ಬಗ್ಗೆ ಆಸಕ್ತಿಯನ್ನು ಮೂಡಿಸಿ, ಭಜನಾ ತರಬೇತಿ, ಕುಣಿತ ಭಜನೆ ತರಬೇತಿ ನೀಡಿ ಮಂಡಳಿಯನ್ನು ಉತ್ಕೃಷ್ಟ ಮಟ್ಟಕ್ಕೆ ಕೊಂಡೊಯ್ಯುವಲ್ಲಿ ಈ ಮಂಡಳಿ ಹಾಗೂ ಭೂವಾಜಿ ರವೀಂದ್ರ ಶಾಂತಿಯವರ ಪಾತ್ರ ಶ್ಲಾಘನೀಯ.
ಜ. 28, 29 ಹಾಗೂ 30ರಂದು ತಿರುಪತಿ ತಿರುಮಲದಲ್ಲಿ ಭಜನ ಕಾರ್ಯಕ್ರಮ.
ಶ್ರೀ ಉಮಾಮಹೇಶ್ವರಿ ಭಜನಾ ಮಂಡಳಿ, ಜೆರಿಮರಿ ಮುಂಬಯಿ ಇವರು ಸತತ 10 ನೇ ವರ್ಷದ ತಿರುಪತಿ ಯಲ್ಲಿ ಹರಿನಾಮ ಸಂಕೀರ್ತನೆಯಲ್ಲಿ ಪಾಲ್ಗೊಳ್ಳಲಿದ್ದು, ಈ ಬಾರಿ ಜನವರಿ 28, 29 ಹಾಗೂ 30ರಂದು ತಿರುಪತಿ, ತಿರುಮಲದಲ್ಲಿ ನಡೆಯುವ ಪುರಂದರದಾಸರ ಆರಾಧನಾ ಮಹೋತ್ಸವದಲ್ಲಿ ಭಜನಾ ಸೇವೆ ನಡೆಸಿ ಕೊಡಲಿದ್ದಾರೆ.
ಸುಮಾರು 25 ಸದಸ್ಯರ ತಂಡ ಭುವಾಜಿ ರವೀಂದ್ರ ಶಾಂತಿ ಯವರ ನೇತೃತ್ವದಲ್ಲಿ ಈ ಭಜನಾ ಸೇವೆಯಲ್ಲಿ ಪಾಲ್ಗೊಳ್ಳಲಿದ್ದಾರೆ, ಇವರಿಗೆ ಮಂದಿರದ ಮೊಕ್ತೇಸರರಾದ ಶ್ರೀಮತಿ ಲಲಿತ ಬಿ ಕೆ ಶೀನ, ಪ್ರದಾನ ಅರ್ಚಕ ಎಸ್. ಎನ್. ಉಡುಪ, ಹಾಗೂ ಮಂದಿರದ ಹಿರಿಯರಾದ ಬಿ. ಎನ್. ಶೆಟ್ಟಿ ಯವರು ಶುಭ ಕೋರಿದ್ದಾರೆ.