
ತುಳುನಾಡಿನಲ್ಲಿರುವ ದೈವ ದೇವರುಗಳ ಆರಾಧನೆಯಿಂದ ತುಳುನಾಡಿನಲ್ಲಿ ಸಂಸ್ಕಾರ, ಸಂಸ್ಕೃತಿ ಒಳ್ಳೆಯ ರೀತಿಯಿಂದ ನಡೆದುಕೊಂಡು ಬಂದಿದೆ, ಮುಲ್ಕಿ ಕೊಳಚಿಕಂಬಳ ಜಾರಂದಾಯ ದೈವದ ಕಳೆಯು ಬೇರೆ ದೈವಕಿಂತ ವಿಭಿನ್ನವಾಗಿದೆ ಏಕೆಂದರೆ ಇದು ಮುಲ್ಕಿ ಶ್ರೀ ದುರ್ಗಾಪರಮೇಶ್ವರಿ ದೇವರ ದೈವವಾಗಿದೆ ಎಂದು ವಿದ್ವಾನ್ ಕೃಷ್ಣರಾಜ ಭಟ್ ಹೇಳಿದರು.
ಅವರು ಕೊಳಚಿಕಂಬಳ ಜಾರಂದಾಯ ಧೂಮಾವತಿ ಯೂತ್ ಕ್ಲಬ್ ನ 16ನೇ ವರ್ಷದ ವಾರ್ಷಿಕೋತ್ಸವದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು. ಕೊಳಚಿಕಂಬಳದ ಶ್ರೀ ಜಾರಂದಾಯ ದೇವಸ್ಥಾನದಲ್ಲಿ ಭಕ್ತರು ಭಕ್ತಿಯಿಂದ ಆರಾಧನೆ ಮಾಡಿಕೊಂಡು ಬಂದರೆ ಅವರಿಗೆ ದೈವ ಆಶೀರ್ವಾದ ಮಾಡುತ್ತದೆ.ದೈವಗಳು ಧರ್ಮ ತಪ್ಪಿ ನಡೆಯಬಾರದೆಂಬ ಸಂದೇಶವನ್ನು ಆಗಾಗ ಕೊಡುತ್ತಾ ಬರುತ್ತಿದೆ ಎಂದು ಹೇಳಿದರು.
ಮುಲ್ಕಿ ನಗರ ಪಂಚಾಯತಿನ ಅಧ್ಯಕ್ಷರಾದ ಸತೀಶ್ ಅಂಚನ್ ಅವರು ಗ್ರಾಮಸ್ಥರ ಬೇಡಿಕೆಯಂತೆ ಮುಲ್ಕಿಗೆ ಅಮೃತ ಯೋಜನೆಯ ಗುರುಪುರದಿಂದ ಕುಡಿಯುವ ನೀರಿನ ಯೋಜನೆಯನ್ನು ಕಾರ್ಯಗತ ಮಾಡಲಾಗುವುದು ಎಂದರು. ಅದರಂತೆ ಕೊಳಚಿಕಂಬಳಕ್ಕೆ ಕಾಂಕ್ರೀಟ್ ರಸ್ತೆಯನ್ನು ಮಾಡಲು ಯೋಜನೆಯನ್ನು ಮಾಡಲಾಗಿದೆ ಎಂದರು. ಕೊಳಚಿಕಂಬಳ ಊರಿನ ಗುರಿಕಾರರಾದ ಹರಿಶ್ಚಂದ್ರ ಪಿ ಸಾಲ್ಯಾನ್ ದೈವ ನೆಲೆಯಾಗಿರುವ ಬಗ್ಗೆ ವಿಷಯಗಳನ್ನು ಹೇಳಿದರು ಅಲ್ಲದೆ ಕೊಳಚಿಕಂಬಳದವರಿಗೆ ಬೇಕಾಗುವ ಅಭಿವೃದ್ಧಿ ಕೆಲಸವನ್ನು ಸಭೆಯಲ್ಲಿ ಹೇಳಿದರು.
ಲಯನ್ಸ್ ಕ್ಲಬ್ ನ ಅಧ್ಯಕ್ಷ ರಾಲ್ಫಿ ಡಿಕೊಸ್ಟ , ಮುಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ವಾಮನ ಕೋಟ್ಯಾನ್ ನಡಿಕುದ್ರು , ಹೆಜಮಾಡಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಮೋಹನ್ದಾಸ್ ಹೆಜಮಾಡಿ, ವಿಜಯ ರೈತರ ಸೇವಾ ಸಂಘದ ಅಧ್ಯಕ್ಷ ರಂಗನಾಥ ಶೆಟ್ಟಿ, ಸ್ವಯಂ ಭೂಲಿಂಗೇಶ್ವರ ಕ್ಷೇತ್ರದ ಅಧ್ಯಕ್ಷ ಲೋಕೇಶ್ ಆರ್ ಅಮೀನ್, ಬಿರುವೆರ್ ಕುಡ್ಲ ಮುಲ್ಕಿ ಘಟಕದ ಅಧ್ಯಕ್ಷ ಕಿಶೋರ್ ಸಾಲ್ಯಾನ್, ಕೊಳಚಿಕಂಬಳ ಮಹಿಳಾ ಸಂಘದ ಅಧ್ಯಕ್ಷೆ ಲತಾ ಶೇಖರ್, ಯೂತ್ ಕ್ಲಬ್ ನ ಅಧ್ಯಕ್ಷ ಜೀವನ ಕೋಟ್ಯಾನ್, ಪ್ರಾಣೇಶ್ ಪೂಜಾರಿ, ಜಾರಂದಾಯ ಸೇವಾ ಸಮಿತಿಯ ಯೂತ್ ಕ್ಲಬ್ ನ ಕಾರ್ಯದರ್ಶಿ ಕಾರ್ತಿಕ್ ಕೋಟ್ಯಾನ್, ಕೋಶಾಧಿಕಾರಿ ಪ್ರಪುಲ್ಲ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಜಾರಂದಾಯ ಸೇವಾ ಸಮಿತಿ ಅಧ್ಯಕ್ಷ ಪ್ರಕಾಶ್ ಸುವರ್ಣ ಸ್ವಾಗತಿಸಿದರೆ, ಲತಾ ಶೇಖರ್ ಅವರು ವಂದನಾರ್ಪಣೆ ಮಾಡಿದರು. ನಂತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.