ಕೆಲವೊಂದು ಕಾಣದ ಕೈಗಳು ತಮ್ಮ ಒಣ ಪ್ರತಿಷ್ಠೆಗೋಸ್ಕರ ಅಧಿಕಾರಿ ವರ್ಗವನ್ನು ದುರುಪಯೋಗಪಡಿಸಿಕೊಂಡು, ಸಾರ್ವಜನಿಕರಿಗೆ ಯಾವುದೇ ಮಾಹಿತಿ ಅಥವಾ ಖಾಲಿ ಇರುವ ವ್ಯವಸ್ಥಾಪನಾ ಸಮಿತಿಯ ಸದಸ್ಯತ್ವವನ್ನು ಭರ್ತಿ ಮಾಡುವ ಬಗ್ಗೆ ಸಾರ್ವಜನಿಕರ ಅವಗಾಹನೆಗೆ ತರದೆ ತರಾತುರಿಯಲ್ಲಿ, ಪ್ರಬಲ ಮೊಗವೀರ ಸಮುದಾಯವನ್ನು ಕಡೆಗಣಿಸಿ ಬೇರೊಬ್ಬರನ್ನು ನೇಮಕ ಮಾಡಿರುವುದು ನ್ಯಾಯ ಸಮ್ಮತವಲ್ಲ ಎಂದು ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿ ಯ ಅಧ್ಯಕ್ಷರಾದ ವೈ. ಸುಕುಮಾರ್ ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕರ್ನಾಟಕ ಸರ್ಕಾರದ ಧಾರ್ಮಿಕ ದತ್ತಿ ಮತ್ತು ಮುಜರಾಯಿ ಇಲಾಖೆಗೆ ಒಳಪಟ್ಟಿರುವ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯಲ್ಲಿ ಈ ಹಿಂದೆ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಮೊಗವೀರ ಸಮುದಾಯದವರಿಗೆ ಅವಕಾಶ ನೀಡಲಾಗಿರುತ್ತದೆ. ಅದರಂತೆ, ಈ ಬಾರಿಯೂ ಪ್ರಸಕ್ತ ವ್ಯವಸ್ಥಾಪನಾ ಸಮಿತಿಯಲ್ಲಿ ಮೊಗವೀರ ಸಮುದಾಯದ ಶ್ರೀಧರ ಕಾಂಚನ್ ರವರನ್ನು ಸದಸ್ಯರಾಗಿ ನೇಮಕ ಮಾಡಲಾಗಿತ್ತು. ಆದರೆ, ಅವರು ತೀರಾ ಅಸೌಖ್ಯದಿಂದಾಗಿ ಇತ್ತೀಚೆಗೆ ನಿಧನರಾಗಿದ್ದು, ಅವರಿಂದ ತೆರವಾದ ಸ್ಥಾನಕ್ಕೆ ಮೊಗವೀರ ಸಮುದಾಯದವರನ್ನೇ ನೇಮಕ ಮಾಡುವುದು ನ್ಯಾಯ ಸಮ್ಮತ ವಿಚಾರವಾಗಿರುತ್ತದೆ.
ಧಾರ್ಮಿಕ ದತ್ತಿ ಮತ್ತು ಮುಜರಾಯಿ ಇಲಾಖೆಗೆ ಸೇರಲ್ಪಟ್ಟಿರುವ, ಸರ್ಕಾರದ ಆಸ್ತಿಯಾಗಿರುವ ಶ್ರೀ ಹೊಸ ಮಾರಿಗುಡಿ ದೇವಸ್ಥಾನವು ಲಕ್ಷಾಂತರ ಭಕ್ತರನ್ನು ಹೊಂದಿದ್ದು, ಸಮಾಜದ ಎಲ್ಲಾ ವರ್ಗದ ಮತ್ತು ಜಾತಿಯ ಭಕ್ತಾದಿಗಳು ಶ್ರದ್ದೆ, ಭಕ್ತಿಯಿಂದ ಆರಾಧಿಸಿಕೊಂಡು ಬಂದಿರುವ ಧಾರ್ಮಿಕ ಕೇಂದ್ರವಾಗಿದೆ.
ಇಲ್ಲಿ ಅಧಿಕಾರ ಮುಖ್ಯವಲ್ಲ, ಬರುವ ಭಕ್ತಾದಿಗಳ ಶ್ರೇಯಸ್ಸು ಮುಖ್ಯವಾಗಿದೆ. ಆ ನಿಟ್ಟಿನಲ್ಲಿ ಹೊಸಮಾರಿಗುಡಿ ದೇವಸ್ಥಾನದ ಜೀರ್ಣೋದ್ದಾರದ ಸಂದರ್ಭದಲ್ಲಿ, ಈ ಭಾಗದಲ್ಲಿ ಇತರ ದೊಡ್ಡ ಸಮುದಾಯಗಳಂತೆ, ಅತೀ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಮೊಗವೀರ ಸಮುದಾಯದವರು ತಮ್ಮನ್ನು ಮಾತೆ ಮಾರಿಯಮ್ಮನ ಸೇವಾ ಕಾರ್ಯದಲ್ಲಿ ತೊಡಗಿಸಿಕೊಳ್ಳುವುದರ ಜೊತೆ ಜೊತೆಗೆ, ಅಪಾರ ಪ್ರಮಾಣದಲ್ಲಿ ದೇಣಿಗೆಯನ್ನು ಕೂಡಾ ನೀಡಿರುವುದು ಸತ್ಯ ವಿಚಾರವಾಗಿರುತ್ತದೆ.
ಆದ್ದರಿಂದ, ಅಧಿಕಾರಕ್ಕೋಸ್ಕರ ಒಂದು ದೊಡ್ಡ ಸಮುದಾಯವನ್ನು ಉದ್ದೇಶಪೂರ್ವಕವಾಗಿ ಕಡೆಗಣಿಸಿ, ಸಾರ್ವಜನಿಕ ರಲ್ಲಿ ಚರ್ಚೆ ನಡೆಯುತ್ತಿರುವುದು ಅತ್ಯಂತ ವಿಷಾದನೀಯ ಸಂಗತಿಯಾಗಿದೆ.
ಆದ್ದರಿಂದ, ನ್ಯಾಯಯುತವಾಗಿ ಮೊಗವೀರ ಸಮುದಾಯದ ವ್ಯಕ್ತಿಯನ್ನು ಕಾಪು ಹೊಸ ಮಾರಿಗುಡಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ನೇಮಕ ಮಾಡುವಂತೆ ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿಯು ಆಗ್ರಹಿಸುವುದರೊಂದಿಗೆ, ಸಂಪೂರ್ಣ ಬೆಂಬಲ ನೀಡಲು ಸಿದ್ಧರಿದ್ದೇವೆ ಎಂದು ವೈ. ಸುಕುಮಾರ್ ರವರು ತಿಳಿಸಿರುತ್ತಾರೆ.