
ಕಾರ್ಕಳ ತಾಲೂಕಿನ ಕಾಂತಾವರ ಗ್ರಾಮದ ಬೇಲಾಡಿಯ ಹಟ್ಟಿಯಲ್ಲಿ ಅಗ್ನಿ ಅವಘಡ ಸಂಭವಿಸಿ ಎರಡು ಕಂಬಳ ಕೋಣಗಳು ಅಸುನೀಗಿದ ಘಟನೆ ಮೇ 30ರಂದು ರಾತ್ರಿ ನಡೆದಿದೆ.
ಮೇಲಾಡಿ ಬಾವ ಅಶೋಕ್ ಶೆಟ್ಟಿ ಅವರಿಗೆ ಸೇರಿದ ಹಟ್ಟಿಯಲ್ಲಿ ಈ ಘಟನೆ ನಡೆದಿದ್ದು, ಹಲವಾರು ಕಂಬಳ ಕೂಟಗಳಲ್ಲಿ ಬಹುಮಾನ ಪಡೆದಿದ್ದ ಅಪ್ಪು ಮತ್ತು ತೋನ್ಸೆ ಎಂಬ ಕೋಣಗಳು ಮೃತಪಟ್ಟಿವೆ.
ಅಪ್ಪು ಮತ್ತು ತೋನ್ಸೆ ಕೋಣಗಳು 2022- 23 ಋತುವಿನ ಕಂಬಳದಲ್ಲಿ ಕನೆಹಲಗೆ ವಿಭಾಗದಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದಿದ್ದವು. ಅದರಲ್ಲೂ ತೋನ್ಸೆ ಕೋಣವು ನೇಗಿಲು ಕಿರಿಯ, ನೇಗಿಲು ಹಿರಿಯ, ಹಗ್ಗ ಹಿರಿಯ, ಅಡ್ಡ ಹಲಗೆ, ಕನೆಹಲಗೆ ವಿಭಾಗದಲ್ಲಿ ಸ್ಪರ್ಧಿಸಿ ಎಲ್ಲಾ ವಿಭಾಗದಲ್ಲಿ ಪ್ರಶಸ್ತಿ ಪಡೆದು ಸಾಧನೆ ಮಾಡಿದೆ. ಮತ್ತೊಂದು ಕೋಣ ಅಪ್ಪು ಕನೆಹಲಗೆ ಮತ್ತು ಅಡ್ಡ ಹಲಗೆ ವಿಭಾಗದಲ್ಲಿ ಸಾಧನೆ ಮಾಡಿದೆ.
ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಅವಘಡ ಸಂಭವಿಸಿದೆ ಎನ್ನಲಾಗುತಿದೆ. ಅದೆಷ್ಟೋ ಕಂಬಳ ಕರೆಗಳಲ್ಲಿ ಓಡಿ ಪ್ರಶಸ್ತಿಗೆ ಕೊರಳೋಡಿದ್ದ ಕೋಣಗಳೆರಡು ಯಾರೂ ಊಹಿಸದ ರೀತಿಯಲ್ಲಿ ಇಹಲೋಕ ತ್ಯಜಿಸಿದ್ದು ಒಂದು ದುರಂತ.