ವಿಡಿಯೋ
ಶ್ರೀ ಭುವನೇಶ್ವರಿ ಸೇವಾ ಸಮಿತಿ ಕೋಟೆ, ಮುಂಬಯಿ : 42ನೇ ವರ್ಷದ ನವರಾತ್ರಿ ಮಹೋತ್ಸವ.
ಸೆ. 22ರಿಂದ ಅ. 2ರ ತನಕ ನಡೆದ ಧಾರ್ಮಿಕ ಕಾರ್ಯಕ್ರಮಗಳು
ಸಾಮೂಹಿಕ ಸತ್ಯನಾರಾಯಣ ಪೂಜೆ, ಶನಿ ಗ್ರಂಥ ಪಾರಾಯಣ, ದೇವಿ ದರ್ಶನ.
ಮುಂಬಯಿ: ಕೋಟೆ ಮುಂಬಯಿಯ ಬೋರ ಬಜಾರ್ ಸ್ಟ್ರೀಟ್ನ ಸಿದ್ಧಿವಿನಾಯಕ್ ಸಂಕೀರ್ಣದಲ್ಲಿ ನೆಲೆಸಿರುವ ಶ್ರೀ ಭುವನೇಶ್ವರಿ ಸೇವಾ ಸಮಿತಿಯು ಆಯೋಜಿಸಿದ್ದ 42ನೇ ವರ್ಷದ ಐತಿಹಾಸಿಕ ದಸರಾ ಮಹೋತ್ಸವವು ಸೆಪ್ಟೆಂಬರ್ 22ರಿಂದ ಅಕ್ಟೋಬರ್ 2ರ ತನಕ ಅಪಾರ ಭಕ್ತಿ, ಶ್ರದ್ಧೆ ಮತ್ತು ವಿಜೃಂಭಣೆಯಿಂದ ನೆರವೇರಿತು. ಕೋಟೆ ಮುಂಬೈಯ ತುಳು-ಕನ್ನಡಿಗರ ಪ್ರಮುಖ ಶ್ರದ್ಧಾಕೇಂದ್ರಗಳಲ್ಲೊಂದಾದ ಈ ಸಮಿತಿಯು ಕಳೆದ ನಾಲ್ಕು ದಶಕಗಳಿಂದಲೂ ಮಾತೃಶ್ರೀ ಭುವನೇಶ್ವರಿ ತಾಯಿಯ ಆರಾಧನೆಯ ಮೂಲಕ ಸಾವಿರಾರು ಭಕ್ತರ ಕಷ್ಟ-ದುಃಖಗಳಿಗೆ ಸಾಂತ್ವನ ನೀಡುತ್ತಿದೆ.
ಬೋರ ಬಜಾರ್ ಸ್ಟ್ರೀಟ್ನ ತಳಮಹಡಿಯಲ್ಲಿ ನಡೆದ ಈ ನವರಾತ್ರಿ ಮಹೋತ್ಸವದಲ್ಲಿ ಪ್ರತಿದಿನವೂ ಧಾರ್ಮಿಕ ವಿಧಿಗಳು ಅತ್ಯಂತ ಸಡಗರದಿಂದ ಜರುಗಿದವು. ಬೆಳಿಗ್ಗೆ ಮತ್ತು ಸಂಜೆ ಶ್ರೀ ಭುವನೇಶ್ವರಿ ಮಾತೆಯ ಸನ್ನಿಧಿಯಲ್ಲಿ ಹೋಮ, ಅಭಿಷೇಕ, ಶ್ರೀದೇವಿ ಗ್ರಂಥ ಪಾರಾಯಣ, ಭಜನೆ ಮತ್ತು ಮಹಾಪೂಜೆಯಂತಹ ಪೂಜಾ ಕೈಂಕರ್ಯಗಳು ನೆರವೇರಿದವು. ಪ್ರತಿದಿನ ಸಂಜೆ 7.30ಕ್ಕೆ ನಡೆಯುತ್ತಿದ್ದ ಶ್ರೀ ದೇವಿ ಆವೇಶವು ಭಕ್ತರಿಗೆ ದೇವಿಯ ಸಾಕ್ಷಾತ್ಕಾರದ ಅನುಭವ ನೀಡಿತು.
ಸಮಿತಿಯ ಪ್ರಧಾನ ಅರ್ಚಕರೂ, ಧರ್ಮದರ್ಶಿಯೂ ಆದ ರಾಜೇಶ್ ಭಟ್ ಅವರ ಪೌರೋಹಿತ್ಯದಲ್ಲಿ ಈ ಎಲ್ಲಾ ಪೂಜಾ ವಿಧಿಗಳು ಶಾಸ್ತ್ರೋಕ್ತವಾಗಿ ಜರಗಿದವು.
- ಸೆಪ್ಟೆಂಬರ್ 26ರಂದು ಸಾಮೂಹಿಕ ಶ್ರೀ ಶನಿ ಮಹಾಪೂಜೆ
- ಸೆಪ್ಟೆಂಬರ್ 28ರಂದು ಸಾಮೂಹಿಕ ಶ್ರೀ ಸತ್ಯನಾರಾಯಣ ಮಹಾಪೂಜೆ ಮತ್ತು ರಂಗಪೂಜೆ
- ಸೆಪ್ಟೆಂಬರ್ 30ರಂದು ಮಧ್ಯಾಹ್ನ ನವಚಂಡಿಕಾ ಹೋಮಗಳು ವಿಜೃಂಭಣೆಯಿಂದ ಜರುಗಿದವು.
ದಸರಾ ಮಹೋತ್ಸವದ ಪ್ರಮುಖ ದಿನವಾದ ಅಕ್ಟೋಬರ್ 2ರಂದು ಬೆಳಿಗ್ಗೆ ಶ್ರೀ ದೇವರಿಗೆ ಪೂಜೆಯಾದ ಬಳಿಕ ಪಲ್ಲ ಪೂಜೆ ಆರಂಭವಾಯಿತು. ಸಮಿತಿಯ ಅಧ್ಯಕ್ಷರಾದ ಡಾ. ಪ್ರಕಾಶ್ ಮೂಡಬಿದ್ರೆ ದಂಪತಿಗಳು ಹಾಗೂ ಬೆಂಗಳೂರಿನ ಉದ್ಯಮಿ ಮತ್ತು ಅನ್ನದಾನದ ದಾನಿ ಕೇಶವ ಎಸ್. ಪೂಜಾರಿ ದಂಪತಿಗಳು ಪೂಜಾ ಯಜಮಾನಿಕೆಯನ್ನು ವಹಿಸಿ ದೇವಿಯ ಕೃಪೆಗೆ ಪಾತ್ರರಾದರು.
ನಂತರ ನಡೆದ ಮಹಾ ಅನ್ನಸಂತರ್ಪಣೆಯಲ್ಲಿ ಸುಮಾರು 3 ಸಾವಿರಕ್ಕೂ ಹೆಚ್ಚು ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು. ಭಕ್ತರಾದ ಕೇಶವ ಪೂಜಾರಿ ಬೆಂಗಳೂರು, ಮಾಸ್ಟರ್ ಸಾಂಗ್ರಾಮ್, ಪಿಂಕಿ ಪುರೋಹಿತ್, ಮತ್ತು ರೋಹಿಣಿ ಮೋತಿವಾಲ ಇವರ ಸೇವಾರೂಪದ ಅನ್ನಸಂತರ್ಪಣೆಯಲ್ಲಿ ಮಧ್ಯಹ್ನ ಮತ್ತು ರಾತ್ರಿಯೂ ಸಹ ಸಾವಿರಾರು ಜನರು ಪಾಲ್ಗೊಂಡರು.
ಮಹಾಪೂಜೆಯ ಬಳಿಕ ರಾಜೇಶ್ ಭಟ್ ಅವರಿಂದ ಪುನಃ ದೇವಿ ಆವೇಶ ನೆರವೇರಿತು. ಓಕುಳಿ ಅಭ್ಯಂಜನದ ನಂತರ ಶ್ರೀ ದೇವಿಯ ಉತ್ಸವ ಮೂರ್ತಿಯನ್ನು ಪಲ್ಲಕಿಯಲ್ಲಿರಿಸಿ ಗಂಗಾ ಜಳಕಕ್ಕೆ ಗಿರ್ಗಾವ್ (Girgaon) ಚೌಪಾಟಿ ಕಡೆಗೆ ವೈಭವದ ಮೆರವಣಿಗೆ ಮೂಲಕ ಕೊಂಡೊಯ್ಯಲಾಯಿತು. ಮುಂಬೈಯ ಹೆಸರಾಂತ ಸೇಕ್ಸೋಪೋನ್ ವಾದಕ ದಿನೇಶ್ ಕೋಟ್ಯಾನ್ ಬಳಗದವರು ತಮ್ಮ ಇಂಪಾದ ವಾದ್ಯ ಸಂಗೀತದಿಂದ ಮೆರವಣಿಗೆಗೆ ವಿಶೇಷ ಮೆರುಗು ನೀಡಿದರು. ಮಹಾಪೂಜೆ ಮತ್ತು ಮೆರವಣಿಗೆಯ ಸಂಪೂರ್ಣ ನಿರ್ವಹಣೆಯಲ್ಲಿ ವಿದ್ಯಾದಾಯಿನಿ ಸಭಾದ ಸೇವಾ ದಳದ ಸದಸ್ಯರ ಸಹಕಾರ ಅತ್ಯಂತ ಶ್ಲಾಘನೀಯವಾಗಿತ್ತು.
ಈ ಪುಣ್ಯ ಕಾರ್ಯಕ್ರಮಕ್ಕೆ ಮಹಾರಾಷ್ಟ್ರ ವಿಧಾನ ಸಭಾ ಸ್ಪೀಕರ್ ರಾಹುಲ್ ನಾರ್ವೇಕರ್ ಅವರು ಆಗಮಿಸಿದ್ದು, ಅವರನ್ನು ಸಮಿತಿಯ ವತಿಯಿಂದ ಆತ್ಮೀಯವಾಗಿ ಸ್ವಾಗತಿಸಿ, ಶ್ರೀ ದೇವಿಯ ಪ್ರಸಾದ ನೀಡಿ ಗೌರವಿಸಲಾಯಿತು. ನವರಾತ್ರಿ ಉತ್ಸವಕ್ಕೆ ವಿಶೇಷ ಸಹಕಾರ ನೀಡಿದ ಮಹೇಶ್ ಲಂಚ್ ಹೋಂನ ಮಹೇಂದ್ರ ಕರ್ಕೇರ ಅವರನ್ನು ಸಮಿತಿ ವತಿಯಿಂದ ಸತ್ಕರಿಸಲಾಯಿತು. ಪರಿಸರದ ವಿವಿಧ ರಾಜಕೀಯ ನಾಯಕರು, ಸಂಘಟನೆಗಳ ಪದಾಧಿಕಾರಿಗಳು, ಸಮಾಜ ಸೇವಕರು ಮತ್ತು ಉದ್ಯಮಿಗಳು ಉಪಸ್ಥಿತರಿದ್ದು ದೇವಿಯ ಆಶೀರ್ವಾದ ಪಡೆದರು.
42ನೇ ನವರಾತ್ರಿ ಮಹೋತ್ಸವವು ಯಶಸ್ವಿಯಾಗಿ ನೆರವೇರಲು ಶ್ರೀ ಭುವನೇಶ್ವರಿ ಸೇವಾ ಸಮಿತಿಯ ಶ್ರೀ ದೇವಿ ಪಾತ್ರಿ ಮತ್ತು ಧರ್ಮದರ್ಶಿ ರಾಜೇಶ್ ಭಟ್, ಗೌರವ ಅಧ್ಯಕ್ಷ ಆರ್ ಕೆ ಮೂಲ್ಕಿ, ಅಧ್ಯಕ್ಷ ಡಾ. ಪ್ರಕಾಶ್ ಮೂಡಬಿದ್ರೆ, ಗೌರವ ಕಾರ್ಯದರ್ಶಿ ಅಶೋಕ್ ಸೈನಿ, ಉಪಾಧ್ಯಕ್ಷ ಸಂಜೀವ ಬಂಗೇರ, ಕೋಶಾಧಿಕಾರಿ ಭಾಸ್ಕರ್ ಪೂಜಾರಿ, ಜತೆ ಕೋಶಾಧಿಕಾರಿಗಳಾದ ಅನಿಲ್ ಗೊರುಲೆ/ಅಭಿಷೇಕ್ ಸುವರ್ಣ, ಜೊತೆ ಕಾರ್ಯದರ್ಶಿ ಲಲಿತ್ ಪಟೇಲ್, ಸಲಹೆಗಾರರಾದ ಅಜಯ್ ಕೊಂಡೇಕರ್ ಮತ್ತು ರೋಹಿಣಿ ಮೋತಿವಾಲ ಅವರು ಹಗಲಿರುಳು ಶ್ರಮಿಸಿದರು.
ಸಮಿತಿಯ ಅಧ್ಯಕ್ಷರಾದ ಡಾ. ಪ್ರಕಾಶ್ ಮೂಡಬಿದ್ರಿ ಅವರು, “ಎಲ್ಲಾ ಭಕ್ತರ ಮತ್ತು ಪದಾಧಿಕಾರಿಗಳ ಸಹಕಾರದಿಂದ 42ನೇ ನವರಾತ್ರಿ ಉತ್ಸವವು ಸಾಂಗವಾಗಿ ಮತ್ತು ವಿಜೃಂಭಣೆಯಿಂದ ನೆರವೇರಿದೆ,” ಎಂದು ಹರ್ಷ ವ್ಯಕ್ತಪಡಿಸಿದರು. ರಾಜೇಶ್ ಭಟ್ ಅವರ ಮಾರ್ಗದರ್ಶನ ಹಾಗೂ ಅಮ್ಮನ ಕೃಪೆಯಿಂದಾಗಿ ಈ ಶ್ರದ್ಧಾ ಕೇಂದ್ರಕ್ಕೆ ದಿನದಿಂದ ದಿನಕ್ಕೆ ಆಗಮಿಸುವ ಭಕ್ತರ ಸಂಖ್ಯೆ ಹೆಚ್ಚುತ್ತಿರುವುದು ಸಮಿತಿಯ ಕಾರ್ಯಕ್ಕೆ ಸಂದ ಗೌರವವಾಗಿದೆ.




