ಮುಂಬೈ: ಉಪನಗರ ಜೋಗೇಶ್ವರಿ ಪೂರ್ವದಲ್ಲಿ (Jogeshwari East) ಇತ್ತೀಚೆಗೆ ನಿರ್ಮಾಣ ಹಂತದಲ್ಲಿರುವ ಕಟ್ಟಡದಿಂದ ಸಿಮೆಂಟ್ ಬ್ಲಾಕ್ ಬಿದ್ದು, ಕುಮಾರಿ ಸಂಸ್ಕೃತಿ ಅಮೀನ್ ಎಂಬ ಯುವತಿ ದಾರುಣವಾಗಿ ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ, ಕಟ್ಟಡ ನಿರ್ಮಾಪಕರು, ಗುತ್ತಿಗೆದಾರರು ಮತ್ತು ಮೇಲ್ವಿಚಾರಕರ ನಿರ್ಲಕ್ಷ್ಯವನ್ನು ಖಂಡಿಸಿ ಬಿಲ್ಲವರ ಅಸೋಸಿಯೇಶನ್, ಮುಂಬೈ ವತಿಯಿಂದ ‘ಜಸ್ಟೀಸ್ ಫಾರ್ ಸಂಸ್ಕೃತಿ’ ಎಂಬ ಬೃಹತ್ ಮೌನ ಪ್ರತಿಭಟನೆಯನ್ನು ಅಕ್ಟೋಬರ್ 12ರಂದು ಆಯೋಜಿಸಲಾಗಿದೆ.
ಜೋಗೇಶ್ವರಿ ಪೂರ್ವದ ಮಜಾಸ್ವಾಡಿಯಲ್ಲಿ ವಾಸವಿದ್ದ 22 ವರ್ಷದ ಯುವತಿ ಸಂಸ್ಕೃತಿ ಅಮೀನ್ ಅವರು ತಮ್ಮ ಕಚೇರಿಗೆ ತೆರಳುತ್ತಿದ್ದಾಗ, ‘ಶ್ರದ್ಧಾ ಕನ್ಸ್ಟ್ರಕ್ಷನ್’ (Shraddha Construction) ನಿರ್ಮಿಸುತ್ತಿರುವ ಕಟ್ಟಡದಿಂದ ಸಿಮೆಂಟ್ ಬ್ಲಾಕ್ (Cement Block) ಅವರ ತಲೆಗೆ ಬಿದ್ದು ತೀವ್ರ ಗಾಯಗೊಂಡಿದ್ದರು. ಕೂಡಲೇ ಆಸ್ಪತ್ರೆಗೆ ಸಾಗಿಸಿದರೂ, ದುರದೃಷ್ಟವಶಾತ್ ಅವರು ಮೃತಪಟ್ಟಿದ್ದಾರೆ.
ಸಾರ್ವಜನಿಕ ಓಡಾಟದ ಮಾರ್ಗಗಳ ಮೇಲೆ ಸಾಕಷ್ಟು ಮತ್ತು ಸುರಕ್ಷಿತ ನೆಟ್ ಕವರ್ (Net Cover) ಒದಗಿಸುವಲ್ಲಿ ಬಿಲ್ಡರ್ಗಳ ನಿರ್ಲಕ್ಷ್ಯ ಮತ್ತು ಸುರಕ್ಷತಾ ಕ್ರಮಗಳ ಬಗ್ಗೆ ಸಮರ್ಪಕವಾಗಿ ಪರಿಶೀಲನೆ ನಡೆಸದ ಬಿಎಂಸಿ ಅಧಿಕಾರಿಗಳ (BMC Officials) ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿ ಈ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ. ಈ ದುರ್ಘಟನೆಗೆ ಕಾರಣರಾದ ಬಿಲ್ಡರ್ ಮತ್ತು ಇತರರನ್ನು ಇನ್ನೂ ಬಂಧಿಸಿ, ವಿಚಾರಣೆಗೊಳಪಡಿಸದಿರುವುದರ ಬಗ್ಗೆಯೂ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಕ್ಟೋಬರ್ 12, 2025 (ಭಾನುವಾರ)ಬೆಳಿಗ್ಗೆ 10:30 ರಿಂದ ಕೇವ್ಸ್ ರೋಡ್ (Caves Road), ಮಹಾರಾಜ ಭವನದ ಸಮೀಪ, ಮಜಾಸ್ ವಾಡಿ, ಜೋಗೇಶ್ವರಿ ಪೂರ್ವ ಇಲ್ಲಿ ಬ್ರಹತ್ ಮೌನ ಪ್ರತಿಭಟನೆ ನಡೆಯಲಿದೆ.
ಸಂಸ್ಕೃತಿ ಅಮೀನ್ ಅವರ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ಮತ್ತು ಈ ರೀತಿಯ ನಿರ್ಲಕ್ಷ್ಯದಿಂದಾಗಿ ಇನ್ನೊಬ್ಬ ಅಮಾಯಕ ಜೀವ ಬಲಿಯಾಗದಂತೆ ಎಚ್ಚರಿಕೆ ವಹಿಸುವಂತೆ ಸರ್ಕಾರ ಮತ್ತು ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಒತ್ತಡ ಹೇರಲು ಈ ಪ್ರತಿಭಟನೆಯನ್ನು ಆಯೋಜಿಸಲಾಗಿದೆ. ದಿ ಬಿಲ್ಲವರ ಅಸೋಸಿಯೇಶನ್ನ ಅಧ್ಯಕ್ಷರಾದ ಹರೀಶ್ ಅಮೀನ್ ಅವರು ಎಲ್ಲ ಬಂಧು-ಬಾಂಧವರು ಪ್ರತಿಭಟನೆಯಲ್ಲಿ ಭಾಗವಹಿಸಿ, ಈ ನಿರ್ಲಕ್ಷ್ಯದ ವಿರುದ್ಧ ತಮ್ಮ ಧ್ವನಿಯನ್ನು ಒಂದಾಗಿ ವ್ಯಕ್ತಪಡಿಸುವಂತೆ ಮನವಿ ಮಾಡಿದ್ದಾರೆ.




