
“ನಮ್ಮ ಸಂಸ್ಕೃತಿ ಪರಂಪರೆಯನ್ನು ಪರಿಚಯಿಸಿ ಗೌರವಿಸುವ ಕಾರ್ಯಕ್ರಮಗಳಿಗೆ ಒತ್ತು ನೀಡಬೇಕು” – ವಿರಾರ್ ಶಂಕರ್ ಶೆಟ್ಟಿ.
ಚಿತ್ರ ಹಾಗೂ ಸುದ್ದಿ: ಪಿ.ಆರ್. ರವಿಶಂಕರ್
ಡಹಾಣೂ: ದಿನಾಂಕ 12.10.2025
”ನಮ್ಮ ಹಿರಿಯರು ಸವಾಲುಗಳನ್ನು ಎದುರಿಸಿ ಕಷ್ಟಪಟ್ಟು ದುಡಿದು ಬಂಟ್ಸ್ ಸಮಾಜದ ಒಟ್ಟು ಏಳಿಗೆಯನ್ನು ಸಾಧಿಸಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ನಮ್ಮ ಬಂಟ ಬಾಂಧವರು ಗಣನೀಯ ಸಾಧನೆಯನ್ನು ಮಾಡಿದ್ದಾರೆ. ಆಧುನಿಕತೆಯ ಓಟದ ನಡುವೆ ನಮ್ಮ ಮೂಲ ಸಂಸ್ಕೃತಿ ಹಾಗೂ ಪರಂಪರಾಗತ ಮೌಲ್ಯಗಳನ್ನು ಉಳಿಸಿಕೊಂಡು ಬರಬೇಕು.”
ತುಳುವ ಮಣ್ಣಿನಲ್ಲಿ ಚಿತ್ರೀಕರಣಗೊಂಡು, ಭೂತಾರಾಧನೆಯ ಹಿನ್ನೆಲೆಯ ಕಥಾವಸ್ತುವನ್ನು ಹೊಂದಿರುವ, ಈಗಿನ ಬ್ಲಾಕ್ ಬಸ್ಟರ್ “ಕಾಂತಾರ” ಕನ್ನಡ ಚಿತ್ರದ ಡಹಾಣೂವಿನಲ್ಲಿ ರವಿವಾರದಂದು ಏರ್ಪಡಿಸಲಾಗಿದ್ದ ಪ್ರಾಯೋಜಿತ ಪ್ರದರ್ಶನದಲ್ಲಿ ಭಾಗವಹಿಸಿ ಮೀರಾ ಡಹಾಣೂ ಬಂಟ್ಸ್ (ರಿ) ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾದ ವಿರಾರ್ ಶಂಕರ್ ಬಿ. ಶೆಟ್ಟಿ ಅವರು ಮಾತನಾಡುತ್ತಿದ್ದರು.

ಇದೇ ಅಕ್ಟೋಬರ್ ತಿಂಗಳ 12 ರಂದು ಬೆಳಿಗ್ಗೆ 11.30 ರಿಂದ 3 ಗಂಟೆಯ ತನಕ ಕನ್ನಡ ಭಾಷೆಯಲ್ಲಿನ ಈ ಒಂದೇ ದಿನದ ವಿಶೇಷ ಹೌಸ್ ಫುಲ್ ಪ್ರದರ್ಶನದಲ್ಲಿ ಪಾಲ್ಘರ್ ತಾಲೂಕಿನ ತುಳು ಕನ್ನಡಿಗರು ಪಾಲ್ಗೊಂಡಿದ್ದರು.
ಡಹಾಣೂ ಬಂಟ್ಸ್ ಸಂಘದವರು ಪ್ರಾಯೋಜಿಸಿ (ಮೀರಾ ಡಹಾಣೂ ಬಂಟ್ಸ್ ಪರಿವಾರದ ಸಹಯೋಗದೊಂದಿಗೆ) ಡಹಾಣೂ ಬೀಚ್ ಬಳಿಯ ಪೂರ್ಣಿಮಾ ಟಾಕೀಸ್ನಲ್ಲಿ ಏರ್ಪಡಿಸಿದ್ದ ಈ ಚಲನಚಿತ್ರ ಪ್ರದರ್ಶನದ ಆರಂಭದಲ್ಲಿ, ಅಗಲಿದ ಸ್ಥಳೀಯ ಬಂಟ್ಸ್ ಸಮಾಜದ ಮಹನೀಯರಿಗೆ ಸ್ಲೈಡ್ ಶೋ ಮೂಲಕ ನೆನಪು ನಮನಗಳನ್ನು ಸಲ್ಲಿಸಲಾಯಿತು.
ಮೀರಾ ಡಹಾಣೂ ಬಂಟ್ಸ್ನ ಟ್ರಸ್ಟೀ ಕೆ. ಭುಜಂಗ ಶೆಟ್ಟಿ ಅವರು ಮಾತನಾಡಿ, “ದೂರದ ಈ ಕರ್ಮಭೂಮಿಯಲ್ಲಿರುವ ನಮೆಲ್ಲರನ್ನೂ ಇಂತಹ ಕಾರ್ಯಕ್ರಮಗಳು ಒಂದೆಡೆ ಕಲೆತು ಪರಸ್ಪರ ಪರಿಚಯಿಸುತ್ತವೆ. ಡಹಾಣೂ ಬಂಟ್ಸ್ನ ಯುವಕರು ಸೇರಿ ಒಳ್ಳೆಯ ದೀಪಾವಳಿ ಗಿಫ್ಟ್ ನೀಡಿದ್ದಾರೆ. ಭವಿಷ್ಯದಲ್ಲಿನ ಕಾರ್ಯಕ್ರಮಗಳಿಗೂ ನಾವೆಲ್ಲರೂ ಇದೇ ರೀತಿ ಕಲೆತು ಬೆಂಬಲಿಸೋಣ” ಎಂದು ಹಾರೈಸಿದರು.
ಚಿತ್ರ ಪ್ರದರ್ಶನ ಆರಂಭದಲ್ಲಿ ನಡೆದ ಹತ್ತು ನಿಮಿಷಗಳ ಕಿರುಸಭಾ ಕಾರ್ಯಕ್ರಮದಲ್ಲಿ, ಡಹಾಣೂ ಬಂಟ್ಸ್ ಪರವಾಗಿ ಆಹ್ವಾನಿತ ಗಣ್ಯ ಅತಿಥಿಗಳನ್ನು ಗೌರವಿಸಿ ಆಶೀರ್ವಾದ ಪಡೆಯಲಾಯಿತು.
ಈ ಸಂದರ್ಭದಲ್ಲಿ ಡಹಾಣೂ ಬಂಟ್ಸ್ ಅಧ್ಯಕ್ಷರಾದ ರವೀಂದ್ರ ಡಿ. ಶೆಟ್ಟಿ, ಕೋಶಾಧಿಕಾರಿ ವೇದಾಂತ್ ಸಂತೋಷ್. ಶೆಟ್ಟಿ, ಮೀರಾ ಡಹಾಣೂ ಬಂಟ್ಸ್ (ರಿ) ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾದ ವಿರಾರ್ ಶಂಕರ್ ಬಿ. ಶೆಟ್ಟಿ, ಪಾಲ್ಘರ್ನ ಅಭಿಷೇಕ್ ಶೆಟ್ಟಿ, ವಿಜಯ್ ಶೆಟ್ಟಿ, ಬೊಯಿಸರ್ನ ಪ್ರಕಾಶ್ ಶೆಟ್ಟಿ, ಪ್ರವೀಣ್ ಶೆಟ್ಟಿ, ಭಾಸ್ಕರ್ ಶೆಟ್ಟಿ, ವಿನಯ್ ಅಡಪ್ಪ, ಕೆ. ಭುಜಂಗ ಶೆಟ್ಟಿ, ಡಹಾಣೂವಿನ ರವೀಂದ್ರ ಎಸ್. ಶೆಟ್ಟಿ, ಭರತ್ ಶೆಟ್ಟಿ, ಪ್ರಭಾಕರ್ ವಿ. ಶೆಟ್ಟಿ, ದಾಮೋದರ್ ಶೆಟ್ಟಿ ಹಾಗೂ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು. ಆನಂತರ ಕನ್ನಡ ಚಲನಚಿತ್ರ ‘ಕಾಂತಾರ ಭಾಗ 1’ರ ಪ್ರದರ್ಶನ ಜರುಗಿತು. ಇದರಲ್ಲಿ ಪಾಲ್ಘರ್ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ ಉದ್ಯಮಿಗಳು, ಮಹಿಳೆಯರು, ತುಳು-ಕನ್ನಡಿಗರು ಭಾಗವಹಿಸಿದ್ದರು.
ಸುದ್ದಿ ವಿವರ: ಪಿ.ಆರ್. ರವಿಶಂಕರ್ (ಸಂಪರ್ಕ ಸಂಖ್ಯೆ: 8483980035)




