
ರೂವಾರಿಗಳ ಮತ್ತು ಎಲ್ಲಾ ಸದಸ್ಯರ ಪರಿಶ್ರಮ ಅತ್ಯಂತ ಆದರಣೀಯವಾದುದು: ಮುಖ್ಯ ಅತಿಥಿ: ಶಿವರಾಮ ಕೆ. ಭಂಡಾರಿ
ಮುಂಬಯಿ ನ. 13: ಮಹಾರಾಷ್ಟ್ರದ ಮಣ್ಣಿನಲ್ಲಿ ಕನ್ನಡದ ಕಂಪನ್ನು ಪಸರಿಸುತ್ತಿರುವ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ ‘ಚಿಣ್ಣರ ಬಿಂಬ’ ಚಾರಿಟೇಬಲ್ ಟ್ರಸ್ಟ್ನ ಪೇಜಾವರ ಮತ್ತು ಮೀರಾ ಭಯಂದರ್ ಪ್ರಾದೇಶಿಕ ಸಮಿತಿಗಳನ್ನೊಳಗೊಂಡ ನೈರುತ್ಯ ವಲಯದ ಮಕ್ಕಳ ಉತ್ಸವದ ಸಮಾರೋಪ ಸಮಾರಂಭವು ನವೆಂಬರ್ 9 ರಂದು ಸ್ಯಾಂಟಾಕ್ರೂಝ್ನ ಪೇಜಾವರ ಮಠದ ಸಭಾಂಗಣದಲ್ಲಿ ಅದ್ದೂರಿಯಾಗಿ ನಡೆಯಿತು.
’ಚಿಣ್ಣರ ಬಿಂಬ’ದ ರೂವಾರಿ ಪ್ರಕಾಶ್ ಭಂಡಾರಿ ಹಾಗೂ ಅತಿಥಿ ಗಣ್ಯರೆಲ್ಲರೂ ಸೇರಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಅಂಬಿಕಾ ಗ್ರೂಪ್ ಕಂಪೆನಿಯ ಮಾಲಕರಾದ ಎಲ್. ವಿ. ಅಮೀನ್ರವರು ಮಾತನಾಡಿ, “ಈ ಸಂಸ್ಥೆಯ ಮಕ್ಕಳು ಎಲ್ಲಾ ಕ್ಷೇತ್ರಗಳಲ್ಲಿ ಮಿಂಚುತ್ತಿದ್ದಾರೆ. ಇದಕ್ಕೆ ‘ಚಿಣ್ಣರ ಬಿಂಬ’ ನೀಡುವ ತರಬೇತಿಯೇ ಮುಖ್ಯ ಕಾರಣವಾಗಿದೆ” ಎಂದು ಕೊಂಡಾಡಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಶಿವಾಸ್ ಹೇರ್ ಡಿಸೈನರ್ ಪ್ರೈವೇಟ್ ಲಿಮಿಟೆಡ್ನ ಮಾಲಕರಾದ ಶಿವರಾಮ ಕೆ. ಭಂಡಾರಿಯವರು, “ಚಿಣ್ಣರ ಸ್ಪರ್ಧಾ ಕಾರ್ಯಕ್ರಮ, ಭಜನೆ ಹಾಗೂ ಅವರು ಆತ್ಮೀಯತೆಯಿಂದ ಪರಿಚಯಿಸುವ ರೀತಿ ಅಂತರಂಗಕ್ಕೊಂದು ಆನಂದ ನೀಡಿತು. ರೂವಾರಿಗಳ ಮತ್ತು ‘ಚಿಣ್ಣರ ಬಿಂಬ’ದ ಎಲ್ಲಾ ಸದಸ್ಯರ ಪರಿಶ್ರಮ ಅತ್ಯಂತ ಆದರಣೀಯವಾದುದು” ಎಂದು ಪ್ರಶಂಸಿಸಿದರು.
ಗೌರವಾನ್ವಿತ ಅತಿಥಿಗಳಾಗಿ ಆಗಮಿಸಿದ್ದ ದಹಿಸರ್ ಮೆಜೆಸ್ಟಿಕ್ ಸೂಟ್ಸ್ ಬ್ಯೂಟಿಕ್ ಹೋಟೆಲ್ನ ಆಡಳಿತ ನಿರ್ದೇಶಕರಾದ ಶ್ರೀ ಉದಯ್ ಶೆಟ್ಟಿ ಪೇಲತ್ತೂರ್ ಮಾತನಾಡುತ್ತಾ, “ಇಂದು ತಾಯಿನಾಡಿನಲ್ಲಿಯೇ ಕಾಣೆಯಾಗುತ್ತಿರುವ ಸಂಸ್ಕಾರವು ‘ಚಿಣ್ಣರ ಬಿಂಬ’ದ ಮೂಲಕ ಮುಂಬೈನಂತಹ ಮಹಾನಗರಿಯಲ್ಲಿ ಮಕ್ಕಳಿಗೆ ಸಿಗುತ್ತಿದೆ. ‘ಚಿಣ್ಣರ ಬಿಂಬ’ವು ಮಹಾನಗರಿಗೆ ಒಂದು ದೊಡ್ಡ ಕೊಡುಗೆಯಾಗಿದೆ” ಎಂದು ಬಣ್ಣಿಸಿದರು.

”ಈ ಬಿಡುವಿಲ್ಲದ ಸಮಯದಲ್ಲಿ, ಮನೆಯಲ್ಲಿ ಮತ್ತು ಶಾಲೆಯಲ್ಲಿ ಕಲಿಸಲಾಗದಂತಹ ಹಲವಾರು ಉತ್ತಮ ವಿಷಯಗಳನ್ನು ‘ಚಿಣ್ಣರ ಕುಟುಂಬ’ದಲ್ಲಿ ಕಲಿಸುವ ಪ್ರಯತ್ನ ಮಾಡುತ್ತಿದ್ದೇವೆ” ಎಂದು ‘ಚಿಣ್ಣರ ಬಿಂಬ’ದ ರೂವಾರಿ ಪ್ರಕಾಶ್ ಭಂಡಾರಿ ನುಡಿದರು.
ಕೇಂದ್ರ ಸಮಿತಿಯ ರಮೇಶ್ ರೈಯವರು ಚಿಣ್ಣರ ಪ್ರತಿಭೆಯನ್ನು ಮನಸಾರೆ ಪ್ರಶಂಸಿಸಿದರು.
’ಚಿಣ್ಣರ ಬಿಂಬ’ದ ಟ್ರಸ್ಟಿಗಳಲ್ಲೊಬ್ಬರಾದ ಭಾಸ್ಕರ್ ಶೆಟ್ಟಿ ತಾಳಿಪಾಡಿಗುತ್ತುರವರು ಮಾತನಾಡಿ, “ದಿನದಿಂದ ದಿನಕ್ಕೆ ಮಕ್ಕಳ ಪ್ರಸ್ತುತಿಯಲ್ಲಿ ಪರಿಪೂರ್ಣತೆ ಹೆಚ್ಚುತ್ತಿರುವುದು ಎದ್ದು ಕಾಣುತ್ತಿದೆ” ಎಂದರು.

ಸಂಚಾಲಕಿ ಆಶಾಲತಾ ಕೊಠಾರಿಯವರು ಎಲ್ಲರನ್ನೂ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾಂದಿವಲಿ ಶಿಬಿರದ ಮಕ್ಕಳು ಪ್ರಾರ್ಥನೆಗೈದರು.
ಶ್ರೀಮತಿ ರೇಣುಕಾ ಭಂಡಾರಿ, ಸಂಚಾಲಕಿ ಗೀತಾ ಹೇರಳ, ವಲಯ ಮುಖ್ಯಸ್ಥೆ ಜಯಲಕ್ಷ್ಮಿ ಶೆಟ್ಟಿ, ವಲಯ ಸಾಂಸ್ಕೃತಿಕ ಮುಖ್ಯಸ್ಥೆ ಸರಿತಾ ಪಾಟ್ಕರ್, ಸಾಂಸ್ಕೃತಿಕ ಮುಖ್ಯಸ್ಥೆ ಸುಮಿತ್ರಾ ದೇವಾಡಿಗ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಎಲ್ಲಾ ಶಿಬಿರದ ಕನ್ನಡ ಮತ್ತು ಭಜನೆ ಶಿಕ್ಷಕಿಯರು, ಶಿಬಿರ ಮುಖ್ಯಸ್ಥರು ಮತ್ತು ಸಾಂಸ್ಕೃತಿಕ ಮುಖ್ಯಸ್ಥರನ್ನು ಗೌರವಿಸಲಾಯಿತು. 10 ಮತ್ತು 12ನೇ ತರಗತಿಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸಹ ಗೌರವಿಸಲಾಯಿತು. ಉಷಾ ಸಪಳಿಗ, ಚಿಣ್ಣರಾದ ಸನ್ನಿಧಿ ದೇವಾಡಿಗ ಮತ್ತು ತ್ರಿಷಾ ಪೂಜಾರಿ ಕಾರ್ಯಕ್ರಮವನ್ನು ನಿರೂಪಿಸಿದರು. ಚಿಣ್ಣರಾದ ಸುವೀಕ್ಷ ಶೆಟ್ಟಿ, ಕುಶಲ್ ಗೌಡ ಮತ್ತು ಅಹನಾ ಗಾಣಿಗ ಅತಿಥಿಗಳನ್ನು ಪರಿಚಯಿಸಿದರು. ವಲಯ ಮುಖ್ಯಸ್ಥೆ ವಿಶಾಲಾಕ್ಷಿ ಶೆಟ್ಟಿ ಧನ್ಯವಾದಗೈದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮವು ಮುಕ್ತಾಯವಾಯಿತು. ಸ್ವಯಂಸೇವಕರು ಮತ್ತು ಪಾಲಕರ ಸಹಕಾರದಿಂದ ಕಾರ್ಯಕ್ರಮವು ಅತ್ಯುತ್ತಮವಾಗಿ ಮೂಡಿಬಂತು.
🏆 ನೈರುತ್ಯ ವಲಯದ ಮಕ್ಕಳ ಪ್ರತಿಭಾನ್ವೇಷಣೆ ಸ್ಪರ್ಧೆಯ ಬಹುಮಾನ ವಿಜೇತರ ಪಟ್ಟಿ 🏆
| ಸ್ಪರ್ಧೆ | ಬಹುಮಾನ | ವಿಜೇತರು |
|---|---|---|
| ಭಜನೆ ಸ್ಪರ್ಧೆ | ಪ್ರಥಮ | ಮೀರಾರೋಡ್ ಶಿಬಿರ |
| ದ್ವಿತೀಯ | ಕಾಂದಿವಲಿ ಶಿಬಿರ | |
| ತೃತೀಯ | ಭಯಂದರ್ ಶಿಬಿರ | |
| ಸೀನಿಯರ್ ಚರ್ಚಾ ಸ್ಪರ್ಧೆ | ಪ್ರಥಮ | ಅನುಶ್ರೀ A ಚಂದನ್ (ಭಯಂದರ್) |
| ದ್ವಿತೀಯ | ದಿಶಾ ಗೌಡ (ಗೋರೇಗಾವ್) | |
| ತೃತೀಯ | ಪೂರ್ವಿ ಕುಲಾಲ್ (ಗೋರೇಗಾವ್) | |
| ಜೂನಿಯರ್ ಭಾಷಣ ಸ್ಪರ್ಧೆ | ಪ್ರಥಮ | ವಿಸ್ಮಯ್ ಪಾಟ್ಕರ್ (ಮಲಾಡ್) |
| ದ್ವಿತೀಯ | ದೊರೇಶ್ ಗೌಡ (ಗೋರೇಗಾವ್) | |
| ತೃತೀಯ | ವಿಜ್ವಲ್ ಪಾಟ್ಕರ್ (ಮಲಾಡ್) | |
| ಜೂನಿಯರ್ ಜಾನಪದ ಗೀತೆ | ಪ್ರಥಮ | ದ್ರುವಿ ಎಸ್ ಶೆಟ್ಟಿ (ಭಯಂದರ್) |
| ದ್ವಿತೀಯ | ಭುವಿ ಗಾಣಿಗ (ಕಾಂದಿವಲಿ) | |
| ತೃತೀಯ | ಅದ್ರಿತ್ ವಿಶಾಲ್ ಉಪಾಧ್ಯ (ಮೀರಾ ರೋಡ್) | |
| ಸೀನಿಯರ್ ಮಕ್ಕಳ ಭಾವಗೀತೆ | ಪ್ರಥಮ | ಧನ್ವಿತ್ ಪೂಜಾರಿ (ಮಲಾಡ್) |
| ದ್ವಿತೀಯ | ಮನಸ್ವಿ ವಿ ಹೆಗ್ಡೆ (ಭಯಂದರ್) | |
| ತೃತೀಯ | ಋತ್ವಿಕ್ ಶೆಟ್ಟಿ (ಮೀರಾ ರೋಡ್) | |
| ಪಾಲಕರ ಸಮೂಹ ಗೀತೆ | ಪ್ರಥಮ | ಭಯಂದರ್ ಶಿಬಿರ |
| ದ್ವಿತೀಯ | ಕಾಂದಿವಲಿ ಶಿಬಿರ | |
| ತೃತೀಯ | ಮಲಾಡ್ ಶಿಬಿರ | |
| ಜಾನಪದ ನೃತ್ಯ | ಪ್ರಥಮ | ಭಯಂದರ್ ಶಿಬಿರ |
| ದ್ವಿತೀಯ | ಮೀರಾ ರೋಡ್ ಶಿಬಿರ | |
| ತೃತೀಯ | ಕಾಂದಿವಲಿ ಶಿಬಿರ |




