
ಡೊಂಬಿವಲಿ ಕರ್ನಾಟಕ ಸಂಘ ದಿಂದ ಜಾತಿ-ಮತ ಭೇದ ಮರೆತು ಹೊರನಾಡ ಕನ್ನಡಿಗರನ್ನು ಒಂದುಗೂಡಿಸುವ ಕಾರ್ಯ – ಸುಕುಮಾರ್ ಶೆಟ್ಟಿ
ಚಿತ್ರ: ಸತೀಶ್ ಶೆಟ್ಟಿ ಡಾಲಿ
ಮೈಸೂರು ರಾಜ್ಯವು ನವೆಂಬರ್ 1, 1973 ರಂದು ‘ಕರ್ನಾಟಕ’ ಎಂದು ಮರು ನಾಮಕರಣಗೊಂಡು 52 ವರ್ಷಗಳು ಪೂರ್ಣಗೊಂಡ ಈ ಶುಭ ಸಂದರ್ಭವನ್ನು ಸ್ಮರಿಸುವ ಸಲುವಾಗಿ, 58 ವರ್ಷಗಳ ಭವ್ಯ ಇತಿಹಾಸವಿರುವ ಕರ್ನಾಟಕ ಸಂಘ ಡೊಂಬಿವಲಿಯು ನಾಡ ಹಬ್ಬವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಿತು.
ಈ ವಿಶೇಷ ಕಾರ್ಯಕ್ರಮವು ಸಂಘದ ಲಲಿತ ಕಲಾ ವಿಭಾಗ ಮತ್ತು ಮಹಿಳಾ ವಿಭಾಗದ ನೇತೃತ್ವದಲ್ಲಿ, ನವೆಂಬರ್ 9 ರ ಭಾನುವಾರದಂದು ಡೊಂಬಿವಲಿ ಎಂ.ಐ.ಡಿ.ಸಿ ಪರಿಸರದ ಹೋಟೆಲ್ ಶಿವಂ ಸಭಾಗೃಹದಲ್ಲಿ ಯಶಸ್ವಿಯಾಗಿ ಜರುಗಿತು. ಕನ್ನಡ ನಾಡು ಶ್ರೀಗಂಧದ, ದಾಸರ, ಶಿವಶರಣರ, ಕವಿಗಳ, ಮತ್ತು ಶಿಲ್ಪಕಲೆಗಳ ಸುಂದರ ನಾಡು ಎಂಬುದನ್ನು ಈ ಕಾರ್ಯಕ್ರಮವು ಮತ್ತೊಮ್ಮೆ ಸಾರಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಸಂಘ ಡೊಂಬಿವಲಿ ಇದರ ಅಧ್ಯಕ್ಷರಾದ ಶ್ರೀ ಸುಕುಮಾರ್ ನಾರಾಯಣ ಶೆಟ್ಟಿ ಅವರು ಮಾತನಾಡಿ, “ಸಂಘವು ಜಾತಿ-ಮತ ಭೇದಗಳನ್ನು ಮರೆತು, 22 ವರ್ಷದವರೆಗಿನ ಮಕ್ಕಳು ಹಾಗೂ ಯುವಕರನ್ನು ಒಂದೇ ವೇದಿಕೆಗೆ ತಂದು ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ಪ್ರೋತ್ಸಾಹಿಸುತ್ತಿದೆ. ಡೊಂಬಿವಲಿ ಕರ್ನಾಟಕ ಸಂಘ ನಮ್ಮ ಕಲೆ, ಸಂಸ್ಕೃತಿ, ಮತ್ತು ಭಾಷೆಯ ಬಗ್ಗೆ ಕನ್ನಡಿಗರು ಹೆಮ್ಮೆ ಪಡುವಂತಹ ಕೆಲಸ ಮಾಡುತ್ತಿದೆ. ಇಂದು ನಡೆದ ದೇಶಭಕ್ತಿ ಗೀತೆಯಲ್ಲಿ 15 ಮತ್ತು ನೃತ್ಯ ಸ್ಪರ್ಧೆಯಲ್ಲಿ 9 ತಂಡಗಳು ಭಾಗವಹಿಸಿ ಉತ್ತಮ ಸ್ಪರ್ಧೆ ನೀಡಿದ್ದಾರೆ. ಕಳೆದ ವರ್ಷ ಮುಂಬಯಿ ಕನ್ನಡಿಗರಾದ ಡಾ. ಪಿ.ವಿ. ಶೆಟ್ಟಿಯವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಭಿಸಿರುವುದು ಹೊರನಾಡ ಕನ್ನಡಿಗರಿಗೆ ಸಂತಸ ತಂದಿದೆ” ಎಂದು ಹರ್ಷ ವ್ಯಕ್ತಪಡಿಸಿದರು.
ಸಂಘದ ಕಾರ್ಯಾಧ್ಯಕ್ಷರಾದ ಡಾ. ದಿವಾಕರ ಟಿ. ಶೆಟ್ಟಿ ಇಂದ್ರಾಳಿ ಅವರು ಮಾತನಾಡುತ್ತಾ, “1956 ರಲ್ಲಿ ಮೈಸೂರು ರಾಜ್ಯವಾಗಿ ಉದಯಗೊಂಡ ನಮ್ಮ ರಾಜ್ಯ, 1973 ರಲ್ಲಿ ದೇವರಾಜ್ ಅರಸರ ಮುಖ್ಯಮಂತ್ರಿ ಕಾಲದಲ್ಲಿ ‘ಕರ್ನಾಟಕ’ ಎಂಬ ನಾಮಕರಣದೊಂದಿಗೆ ಏಕೀಕೃತವಾಯಿತು. ಈ ಏಕೀಕರಣಕ್ಕೆ ಕುವೆಂಪು, ಮಾಸ್ತಿ, ವೆಂಕಟೇಶ ಅಯ್ಯಂಗಾರ್, ಮತ್ತು ಆಲೂರು ವೆಂಕಟರಾವ್ ಅವರಂತಹ ಮಹನೀಯರು ತ್ಯಾಗ ಮಾಡಿದ್ದಾರೆ. ಡಿ.ಎಸ್. ಕರ್ಕಿಯವರ ‘ಹಚ್ಚೇವು ಕನ್ನಡದ ದೀಪ’ ಗೀತೆಯು ಶತಮಾನೋತ್ಸವವನ್ನು ಆಚರಿಸುತ್ತಿದ್ದು, ಅದು ನಮ್ಮ ಮನದಲ್ಲಿ ಶಾಶ್ವತವಾಗಿ ಉಳಿಯಲಿದೆ. ಸಂಘದ ಶೈಕ್ಷಣಿಕ ಸಂಸ್ಥೆಯಾದ ಮಂಜುನಾಥ ವಿದ್ಯಾಲಯವು ಶೇ. 100 ಪ್ರತಿಶತ ಫಲಿತಾಂಶದೊಂದಿಗೆ ಹೆಸರುವಾಸಿಯಾಗಿದ್ದು, ಹೊರನಾಡಿನಲ್ಲಿ ಕನ್ನಡದ ತೇರನ್ನು ಎಳೆಯುವ ಕೆಲಸ ಮಾಡುತ್ತಿದೆ” ಎಂದು ಅಭಿಮಾನದಿಂದ ನುಡಿದರು. ಸಂಘದ ನಾಲ್ಕು ವಿಭಾಗಗಳಾದ ಮಹಿಳಾ ವಿಭಾಗ, ಲಲಿತ ಕಲಾ ವಿಭಾಗ, ವಾಚನಾಲಯ ವಿಭಾಗ, ಮತ್ತು ಕ್ರೀಡಾ ವಿಭಾಗಗಳ ಮೂಲಕ ಉತ್ತಮ ಕೆಲಸ ಕಾರ್ಯಗಳನ್ನು ಮಾಡಲಾಗುತ್ತಿದೆ ಎಂದರು.
















ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮಾಜಿ ಶಿಕ್ಷಕಿ ಶ್ರೀಮತಿ ಪ್ರಮೋದ ಮಾಡ ಅವರು ಮಾತನಾಡಿ, “ಮಹಾರಾಷ್ಟ್ರದ ಮಣ್ಣಿನಲ್ಲಿ ಕನ್ನಡದ ತೇರನ್ನು ಎಳೆಯುವ ಸಂಘದ ಕಾರ್ಯವೈಖರಿ ಇತರ ಸಂಘಟನೆಗಳಿಗೆ ಮಾದರಿ. ಕನ್ನಡ ನಾಡು ಶ್ರೇಷ್ಠ ಶಿಲ್ಪಕಲೆ, ಮತ್ತು ಜಾಗತಿಕ ಮಟ್ಟದ ದೇಗುಲಗಳ ನಾಡು. ಅತೀ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದ ಈ ಭೂಮಿಯಲ್ಲಿ ಜನಿಸಿದ ನಾವು ಧನ್ಯರು. ಮಿನಿ ಕರ್ನಾಟಕದಂತೆ ನೆರೆದ ಕನ್ನಡಾಭಿಮಾನಿಗಳನ್ನು ಕಂಡು ಮನ ಉಕ್ಕಿ ಬಂದಿದೆ” ಎಂದರು.
ಲಲಿತ ಕಲಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ಸುಷ್ಮಾ ದಿವಾಕರ ಶೆಟ್ಟಿ ಅವರು ಅತಿಥಿ ಗಣ್ಯರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ಹೊರನಾಡಿನಲ್ಲಿ ಕನ್ನಡದ ನಾಡು, ನುಡಿ, ಸಂಸ್ಕೃತಿಯನ್ನು ಪ್ರೋತ್ಸಾಹಿಸಿ ನಾಡ ಹಬ್ಬವನ್ನು ಅದ್ದೂರಿಯಾಗಿ ಅಚರಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು. ಚಿತ್ರಕಲಾ ಸ್ಪರ್ಧೆಯಲ್ಲಿ ಸುಮಾರು 100ಕ್ಕೂ ಹೆಚ್ಚು ಮಕ್ಕಳು, ಹಾಗೂ ಮಹಿಳೆಯರ ಅಡುಗೆ ಮತ್ತು ಹೂ ಕಟ್ಟುವ ಸ್ಪರ್ಧೆಯಲ್ಲಿ ಹೆಚ್ಚಿನ ಸಂಖ್ಯೆಯ ಮಹಿಳೆಯರು ಭಾಗವಹಿಸಿದ್ದರು. ಕವಿಗೋಷ್ಠಿಯಲ್ಲಿ 8 ಕವಿಗಳು, ದೇಶ ಭಕ್ತಿ ಗೀತೆಯಲ್ಲಿ 15 ತಂಡಗಳು, ಹಾಗೂ ನೃತ್ಯ ಸ್ಪರ್ಧೆಯಲ್ಲಿ 9 ತಂಡಗಳು ಭಾಗವಹಿಸಿದ್ದವು.












ಕಾರ್ಯಕ್ರಮದ ಆರಂಭವು ಶ್ರೀಮತಿ ಸುನಂದ ಶೆಟ್ಟಿ ಮತ್ತು ಶ್ರೀಮತಿ ಹೇಮಾ ಹೆಗ್ಡೆಯವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. ವೇದಿಕೆಯ ಮೇಲಿದ್ದ ಗಣ್ಯರು ದೀಪ ಪ್ರಜ್ವಲಿಸಿ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮಹಿಳಾ ವಿಭಾಗದ ಸದಸ್ಯರ ನಾಡಗೀತೆಯೊಂದಿಗೆ ತಾಯಿ ಭುವನೇಶ್ವರಿಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು.
ಖ್ಯಾತ ನಿರೂಪಕಿ ಶ್ರೀಮತಿ ಶಿಲ್ಪಾ ಸಂತೋಷ್ ಶೆಟ್ಟಿ ಅವರ ನಿರೂಪಣೆ ಮತ್ತು ನಿರ್ವಹಣೆಯೊಂದಿಗೆ, ಡಾ. ಪೂರ್ಣಿಮಾ ಎಸ್. ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ನೂತನ ಕವಿಗಳಿಂದ ಹಾಸ್ಯ ಕವಿಗೋಷ್ಠಿ ನಡೆಯಿತು. ಈ ಕವಿಗೋಷ್ಠಿಯಲ್ಲಿ ಶ್ರೀಮತಿ ಅಂಜಲಿ ಆರ್. ತೊರವಿ, ಶ್ರೀಮತಿ ಸವಿತಾ ಸಿ. ಸಾಲಿಯಾನ್, ಶ್ರೀಮತಿ ಜಯಲಕ್ಷ್ಮಿ ಪರ್ವತೀಕರ್, ಶ್ರೀಮತಿ ಗಾಯತ್ರಿ ನಾಗೇಶ್, ಶ್ರೀಮತಿ ವೇದಾವತಿ ಭಟ್ಟ, ಶ್ರೀಮತಿ ಹೇಮಾವತಿ ಹೆಗಡೆ, ಶ್ರೀಮತಿ ಮೈನಾ ಪಿ. ಶೆಟ್ಟಿ, ಶ್ರೀಮತಿ ದೀಪಾ ಎಚ್. ಶೆಟ್ಟಿ, ಮತ್ತು ಶ್ರೀಮತಿ ಪ್ರಫುಲ್ಲ ದಿನೇಶ್ ಶೆಟ್ಟಿ ಅವರು ತಮ್ಮ ಕವಿತೆಗಳನ್ನು ವಾಚಿಸಿದರು.
ಕವಿಗೋಷ್ಠಿ, ದೇಶ ಭಕ್ತಿ ಗೀತೆ, ಮತ್ತು ಸಮೂಹ ನೃತ್ಯ ಸ್ಪರ್ಧೆಗಳು ಜರುಗಿದವು.
ಈ ಸಂದರ್ಭದಲ್ಲಿ ಡಾ. ಪೂರ್ಣಿಮಾ ಎಸ್. ಶೆಟ್ಟಿ, ದೇಶ ಭಕ್ತಿ ಗೀತೆಯ ತೀರ್ಪುಗಾರರಾದ ಸಿಎ. ಸುದೇಶ್ ಆರ್. ಶೆಟ್ಟಿ, ವಿದೂಷಿ ಶ್ಯಾಮಲಾ ರಾಧೇಶ್, ನೃತ್ಯ ಸ್ಪರ್ಧೆಯ ತೀರ್ಪುಗಾರರಾದ ನಿಶಾ ಶೆಟ್ಟಿ, ಸುರಬಿ ರಾವ್, ಹಾಗೂ ಚಿತ್ರ ಕಲಾ ಸ್ಪರ್ಧೆಯ ನಿರ್ಣಾಯಕರಾದ ಜಯ ಸಾಲ್ಯಾನ್ ಅವರನ್ನು ವೇದಿಕೆಯ ಮೇಲೆ ಸತ್ಕರಿಸಲಾಯಿತು. ರಮೇಶ್ ಎ. ಶೆಟ್ಟಿ, ಯೋಗಿನಿ ಎಸ್. ಶೆಟ್ಟಿ, ಮತ್ತು ಸುಷ್ಮಾ ಶೆಟ್ಟಿ ಅವರು ಈ ಗಣ್ಯರನ್ನು ಪರಿಚಯಿಸಿದರು.

ಅಡುಗೆ ಮತ್ತು ಹೂ ಕಟ್ಟುವ ಸ್ಪರ್ಧೆಯ ವಿಜೇತರ ಯಾದಿಯನ್ನು ಮಾಧುರೀಕ ಬಂಗೇರ ಅವರು, ಹಾಗೂ ಚಿತ್ರಕಲಾ ಸ್ಪರ್ಧೆಯ ವಿಜೇತರ ಯಾದಿಯನ್ನು ರಮೇಶ್ ಶೆಟ್ಟಿ ಅವರು ಓದಿದರು.
ವಿಜೇತ ತಂಡಗಳ ವಿವರ ಮತ್ತು ಬಹುಮಾನಗಳು:
| ಸ್ಪರ್ಧೆ | ಬಹುಮಾನ | ವಿಜೇತರು | ನಗದು ಬಹುಮಾನ |
|---|---|---|---|
| ದೇಶ ಭಕ್ತಿ ಗೀತೆ | ಪ್ರಥಮ | ತುಳು ವೇಲ್ಫೇರ್ ಎಸೋಸಿಯೇಷನ್ | ₹12,000 |
| ದೇಶ ಭಕ್ತಿ ಗೀತೆ | ದ್ವಿತೀಯ | ನವೋದಯ ಕನ್ನಡ ಸೇವಾ ಸಂಘ, ಥಾಣೆ | ₹10,000 |
| ದೇಶ ಭಕ್ತಿ ಗೀತೆ | ತೃತೀಯ | ಭ್ರಮರಾಂಭಿಕಾ ಭಜನಾ ಮಂಡಳಿ | ₹8,000 |
| ದೇಶ ಭಕ್ತಿ ಗೀತೆ | ಸಮಾಧಾನಕರ | ಶ್ರೀ ವಿಷ್ಣು ಮಂದಿರ, ಡೊಂಬಿವಲಿ | ₹5,000 |
| ನೃತ್ಯ ಸ್ಪರ್ಧೆ | ಪ್ರಥಮ | ದುಂಬಿ ಗ್ರೂಪ್, ಡೊಂಬಿವಲಿ | ₹12,000 |
| ನೃತ್ಯ ಸ್ಪರ್ಧೆ | ದ್ವಿತೀಯ | ಚಿಣ್ಣರ ಬಿಂಬ, ಡೊಂಬಿವಲಿ ಪಶ್ಚಿಮ | ₹10,000 |
| ನೃತ್ಯ ಸ್ಪರ್ಧೆ | ತೃತೀಯ | ಶ್ರೀ ಮಹಾವಿಷ್ಣು ಮಂದಿರ, ಡೊಂಬಿವಲಿ | ನೆನಪಿನ ಕಾಣಿಕೆ |
| ನೃತ್ಯ ಸ್ಪರ್ಧೆ | ಸಮಾಧಾನಕರ | ನವೋದಯ ಕನ್ನಡ ಸೇವಾ ಸಂಘ | ₹5,000 |










ಸಮಾರಂಭದಲ್ಲಿ ಸಂಘದ ಅಧ್ಯಕ್ಷ ಶ್ರೀ ಸುಕುಮಾರ್ ಎನ್. ಶೆಟ್ಟಿ, ಕಾರ್ಯಾಧ್ಯಕ್ಷ ಡಾ. ದಿವಾಕರ ಟಿ. ಶೆಟ್ಟಿ, ಮುಖ್ಯ ಅತಿಥಿ ಶ್ರೀಮತಿ ಪ್ರಮೋದ ಮಾಡ, ಉಪಾಧ್ಯಕ್ಷ ಶ್ರೀ ಲೋಕನಾಥ್ ಶೆಟ್ಟಿ, ಉಪ ಕಾರ್ಯಾಧ್ಯಕ್ಷ ಶ್ರೀ ದೇವದಾಸ್ ಕುಲಾಲ್, ಗೌರವ ಪ್ರಧಾನ ಕಾರ್ಯದರ್ಶಿ ಶ್ರೀ ಅಜಿತ್ ಉಮ್ರಾಣಿ, ಗೌರವ ಕೋಶಾಧಿಕಾರಿ ಶ್ರೀ ತಾರನಾಥ ಅಮೀನ್, ಜೊತೆ ಕಾರ್ಯದರ್ಶಿ ಶ್ರೀ ದಿನೇಶ್ ಬಿ. ಕುಡ್ಡ, ಜೊತೆ ಕೋಶಾಧಿಕಾರಿ ಶ್ರೀಮತಿ ವಿಮಲಾ ವಿ. ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ಆಶಾ ಎಲ್. ಶೆಟ್ಟಿ, ಕಾರ್ಯದರ್ಶಿ ಶ್ರೀಮತಿ ಮಾಧುರೀಕ ಬಂಗೇರ, ಲಲಿತಾ ಕಲಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ಸುಷ್ಮಾ ಡಿ. ಶೆಟ್ಟಿ, ಕಾರ್ಯದರ್ಶಿ ಶ್ರೀ ರಮೇಶ್ ಎ. ಶೆಟ್ಟಿ ಸೇರಿದಂತೆ ಸಂಘದ ಎಲ್ಲಾ ಪ್ರಮುಖರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಂಘಟಕ ಮತ್ತು ನಿರೂಪಕರಾದ ಶ್ರೀ ವಸಂತ ಸುವರ್ಣ ಅವರು ಕಾರ್ಯಕ್ರಮವನ್ನು ನಿರೂಪಿಸಿ, ನೆರೆದ ಸಮಸ್ತ ಕನ್ನಡ ಮನಸ್ಸುಗಳಿಗೆ ವಂದನೆಗಳನ್ನು ಸಲ್ಲಿಸಿದರು. ಈ ಮೂಲಕ ನಾಡ ಹಬ್ಬದ ಆಚರಣೆಯು ಯಶಸ್ವಿಯಾಗಿ ಸಂಪನ್ನಗೊಂಡಿತು.




