
ಪರಿಸರವನ್ನು ಶುದ್ಧವಾಗಿಸುವುದರೊಂದಿಗೆ, ಸ್ವಚ್ಛ ರಾಷ್ಟ್ರ ನಿರ್ಮಿಸುವ ಜವಾಬ್ದಾರಿ ಎಲ್ಲಾ ನಾಗರಿಕರದ್ದು – ಹರೀಶ್ ಮೈಂದನ್
ಮುಂಬಯಿ : ಇಂದು ಪ್ರತಿಯೊಬ್ಬರೂ ಪರಿಸರವನ್ನು ಸ್ವಚ್ಛಗೊಳಿಸಿ, ಸ್ವಚ್ಛ ರಾಷ್ಟ್ರವನ್ನು ನಿರ್ಮಿಸುವ ಜವಾಬ್ದಾರಿಯನ್ನು ಹೊಂದಿದ್ದಾರೆ. ಪರಿಸರವನ್ನು ಶುದ್ಧವಾಗಿಡುವುದು ಪ್ರತಿಯೊಬ್ಬನ ಕರ್ತವ್ಯ. ತುಳು ಸಂಘ ಬೋರಿವಲಿ, ಸ್ವಚ್ಛತಾ ಅಭಿಯಾನವನ್ನು ಯಶಸ್ವಿಯಾಗಿ ನಡೆಸಿ, ಪರಿಸರವನ್ನು ಶುದ್ಧವಾಗಿಸುವುದರೊಂದಿಗೆ, ಸ್ವಚ್ಛ ರಾಷ್ಟ್ರ ನಿರ್ಮಿಸುವ ಜವಾಬ್ದಾರಿಯ ಬಗ್ಗೆ ಜನ ಸಾಮಾನ್ಯರಿಗೆ ತಿಳಿಸುವಂತೆ ಮಾಡಿದೆ ಎಂದು ತುಳು ಸಂಘ ಬೋರಿವಲಿಯ ಅಧ್ಯಕ್ಷ ಹರೀಶ್ ಮೈಂದನ್ ನುಡಿದರು.

ನವೆಂಬರ್ 16 ರಂದು ಬೆಳಿಗ್ಗೆ ತುಳು ಸಂಘ ಬೋರಿವಲಿಯ ಯುವ ವಿಭಾಗದ ವತಿಯಿಂದ, ರೋಟರಿ ಕ್ಲಬ್ ಬೊರಿವಲಿ, ಬೊರಿವಲಿ ಅಡ್ವೋಕೇಟ್ಸ್ ಬಾರ್ ಅಸೋಸಿಯೇಷನ್, ಮುಂಬಯಿ ಮಾರ್ಚ್ ತಂಡ, ಭಾರತ ದೇಶ ಪ್ರಥಮ್ ಇವರ ಹಾಗೂ ವಿಶೇಷವಾಗಿ ಮಹಾನಗರ ಪಾಲಿಕೆಯ ಸಹಾಯಕ ಇಂಜಿನಿಯರ್ ಸಂದೀಪ್ ಮಹಲುಂಕರ್ ಮತ್ತು ಇತರ ಎನ್ ಜಿ ಓ ಗಳ ಸಹಕಾರದೊಂದಿಗೆ ಬೊರಿವಲಿ ಪಶ್ಚಿಮ ಹಾಗೂ ಪರಿಸರದಲ್ಲಿ ನಡೆದ ಸ್ವಚ್ಛತಾ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಬಿಎಂಸಿ ಆರ್ ಸೆಂಟ್ರಲ್ ವಾರ್ಡ್ನ ಸಹಾಯಕ ಆಯುಕ್ತ ಡಾ. ಪ್ರಫುಲ್ ತಾಂಬೆ ಮಾತನಾಡುತ್ತಾ, ನಗರದಲ್ಲಿ ಸ್ವಚ್ಛತೆ ನಿರ್ಮಿಸುವುದು ನಮ್ಮೆಲ್ಲರ ಕರ್ತವ್ಯ. ಇದು ಪರಿಸರ ರಕ್ಷಣೆಗೆ ಪೂರಕ. ಪರಿಸರ ಸ್ವಚ್ಛತೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದ ತುಳು ಸಂಘ ಬೊರಿವಲಿಯ ಪ್ರಯತ್ನ ಪ್ರಶಂಸನೀಯ ಎಂದರು.
ಮಾರ್ಕ್ 10ರ ಅವಿನಾಶ್ ತವಾನಿ, ಸ್ಮಾರ್ಟಾಡ್ಸ್ನ ವಿಜಯಾ ಬಬಾರಿಯಾ, ಭಾರತ್ ದೇಶ್ ಪ್ರಥಮ್ನ ದಿಲೀಪ್ ಪಟೇಲ್, ರೋಟರಿ ಕ್ಲಬ್ನ ಕಾಮೇಶ್ ಪಿಪಲಿಯಾ, ಸೆಲೆಬ್ರಿಟಿ ಅಥ್ಲೀಟ್ ಮತ್ತು ಕೋಚ್ ಮೆಲ್ವಿನ್ ಕ್ರಾಸ್ಟೊ, ಬೊರಿವಲಿ ಅಡ್ವೋಕೇಟ್ಸ್ ಬಾರ್ ಅಸೋಸಿಯೇಷನ್ ಅಧ್ಯಕ್ಷ ಕೆ.ಎಂ. ಗಿರಿ, ಯುವ ತುಳು ಬೊರಿವಲಿಯ ನ್ಯಾ. ರಾಘವ ಎಂ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಪ್ರತಿನಿಧಿಗಳು, ತುಳು ಸಂಘದ ಕಾರ್ಯಕಾರಿ ಸಮಿತಿ, ಮಹಿಳಾ ವಿಭಾಗ ಹಾಗೂ ಯುವ ವಿಭಾಗದ ಅನೇಕರು ಸೇರಿದಂತೆ 600ಕ್ಕೂ ಹೆಚ್ಚು ಮಂದಿ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡಿದ್ದರು.




ಬಿಎಂಸಿ ಕನ್ನಡ ಮಾಧ್ಯಮ ಶಾಲೆ ಸೇರಿದಂತೆ ಪರಿಸರದ ಎಲ್ಲಾ ಶಾಲಾ–ಕಾಲೇಜುಗಳ ವಿದ್ಯಾರ್ಥಿಗಳು ಮತ್ತು ಶಿಕ್ಷಕರು, ಸಹಯೋಗ ಮಹಿಳಾ ಮಂಡಳಿ, SGNP ರನ್ನರ್ಸ್ ಬೊರಿವಲಿ, ಸ್ಕೆಚರ್ಸ್ BNP ತಂಡದ ಪ್ರತಿನಿಧಿಗಳು, ಸೋಶಿಯಲ್ ಮೀಡಿಯಾ ಇನ್ಫ್ಲುವೆನ್ಸರ್ ಹಾಗೂ ಯೂಟ್ಯೂಬರ್ ಚಿತ್ರಾ ಪೂಜಾರಿ ಕಾರ್ಯಕ್ರಮವನ್ನು ನೇರ ಪ್ರಸಾರ ಮಾಡಿದರು. ಭಾಗವಹಿಸಿದ ಎಲ್ಲಾ ತಂಡಗಳಿಗೆ ಪ್ರಶಸ್ತಿ ನೀಡಲಾಯಿತು.
ಸಂಘದ ಅಧ್ಯಕ್ಷ ಹರೀಶ್ ಮೈಂದನ್, ಕೋಶಾಧಿಕಾರಿ ದಿವಾಕರ ಕರ್ಕೇರ, ಪ್ರಧಾನ ಕಾರ್ಯದರ್ಶಿ ಕೃಷ್ಣರಾಜ್ ಸುವರ್ಣ, ಜೊತೆ ಕಾರ್ಯದರ್ಶಿ ತಿಲೋತ್ತಮ ವೈದ್ಯ, ಮಹಿಳಾ ಕಾರ್ಯದರ್ಶಿ ವಿಜಯಲಕ್ಷ್ಮಿ ದೇವಾಡಿಗ, ಜೊತೆ ಕೋಶಾಧಿಕಾರಿ ಟಿ. ವಿ. ಪೂಜಾರಿ, ಮಾಜಿ ಕೋಶಾಧಿಕಾರಿ ಚಂದ್ರಹಾಸ ಬೆಳ್ಚಡ, ಅನಿಲ್ ಕುಮಾರ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶ್ರೀಮತಿ ಪೂನಂ ದಿಲೀಪ್ ಪಟೇಲ್ ಮತ್ತು ಯುವ ವಿಭಾಗದ ಕಾರ್ಯಾಧ್ಯಕ್ಷ ನ್ಯಾ. ರಾಘವ ಎಂ. ನಡೆಸಿಕೊಟ್ಟರು. ಆಯೋಜಕರಿಂದ ಟೀ ಶರ್ಟ್ಗಳು, ಕೈಗವಸುಗಳು, ಕಸದ ಚೀಲಗಳು, ಹೋರ್ಡಿಂಗ್ಗಳನ್ನು ನೀಡಲಾಯಿತು. ಲಘು ಉಪಾಹಾರದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.
ತುಳು ಸಂಘದ ಉಪಸಮಿತಿ ಯುವ ತುಳು, ಬೊರಿವಲಿ, ಪರಿಸರದ ಯುವ ಪ್ರತಿಭೆಗಳಿಗೆ ಅವಕಾಶ ನೀಡುತ್ತಿರುವ ವೇದಿಕೆಯಾಗಿದೆ. ಈಗಾಗಲೇ ಮ್ಯಾರಥಾನ್ಗಳು, ಟರ್ಫ್ ಕ್ರಿಕೆಟ್ ಪಂದ್ಯಾವಳಿ, ತುಳು ಪ್ರೀಮಿಯರ್ ಲೀಗ್, ಬೊರಿವಲಿ ಫ್ರೆಂಡ್ಷಿಪ್ ಪ್ರೀಮಿಯರ್ ಲೀಗ್ ಮುಂತಾದ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿದ್ದಾರೆ.




