
“ನಾನೇ ನೀನು ನೀನೇ ನಾನು ತತ್ವದ ಅಡಿಯಲ್ಲಿ ಕಾರ್ಯಾಚರಿಸುತ್ತಿರುವ ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ಹಲವು ವರ್ಷಗಳಿಂದ ಸಮಾಜಮುಖಿ ಕಾರ್ಯಕ್ರಮ ಆಯೋಜಿಸಿಕೊಂಡು ಬರುತ್ತಿದ್ದು, ಸಮಾಜ ಸೇವೆಯೇ ಇವರ ಮೂಲ ಉದ್ದೇಶವಾಗಿದೆ, ಸಾಮಾಜಿಕ ಸೇವೆಯಲ್ಲಿ ಗುರುತಿಸಿಕೊಂಡವರನ್ನು ಗುರುತಿಸಿ ಗೌರವಿಸುವ ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ನ ಕಾರ್ಯ ಶ್ಲಾಘನೀಯಾ” ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣ ಮಧ್ಯ ಕ್ಷೇತ್ರಿಯ ಸಂಘಚಾಲಕ್ ಡಾ. ಪಿ. ವಾಮನ ಶೆಣೈ ಅಭಿಪ್ರಾಯ ವ್ಯಕ್ತಪಡಿಸಿದರು.

ಅವರು ನವಂಬರ್ 16ರಂದು ಮಂಗಳೂರಿನ ಶಾರದ ವಿದ್ಯಾಲಯ ಸಭಾಂಗಣದಲ್ಲಿ ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ಆಯೋಜಿಸಿದ್ದ ಮೂಲತ್ವ ವಿಶ್ವ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡುತಿದ್ದರು.
ಮುಂದುವರಿದು ಮಾತನಾಡಿದ ಅವರು “ಸಾಧಕರನ್ನು ಗುರುತಿಸಿ ಗೌರವಿಸುವ ಕಾರ್ಯ ಸಮಾಜಮುಖಿಯಾಗಿದೆ. ಸಾಧನೆ, ಗೌರವ ಎಲ್ಲವೂ ನಮ್ಮ ದೃಷ್ಟಿಕೋನದಲ್ಲಿ ಅಡಗಿದೆ, ನಮ್ಮ ದೃಷ್ಟಿಕೋನ ಸರಿಯಾಗಿದ್ದರೆ ಬದುಕು ಸುಂದರವಾಗಿ ಕಾಣುತ್ತದೆ. ಸಮಸ್ಯೆ ಎದುರಾದಾಗ ಗೆಲ್ಲುವ ಛಲ ನಮ್ಮದಾಗಬೇಕು” ಎಂದರು

11ನೇ ಮೂಲತ್ವ ವಿಶ್ವ ಪ್ರಶಸ್ತಿ ಸ್ವೀಕರಿಸಿದ ಬೆಂಗಳೂರಿನ ನೆಲೆ ಫೌಂಡೇಶನ್ ನ ಅಧ್ಯಕ್ಷ ಶಿವಕುಮಾರ್ ಅವರು “ಅವಕಾಶ ವಂಚಿತ ಮಕ್ಕಳನ್ನು ಮತ್ತು ಸಮುದಾಯಗಳನ್ನು ಸಬಲೀಕರಣ ಗೊಳಿಸುವಲ್ಲಿ ನೆಲೆ ಫೌಂಡೇಶನ್ ನಿರತವಾಗಿದೆ. ಹಕ್ಕುಗಳಿಂದ ವಂಚಿತರಾದವರನ್ನು ಸಬಲೀಕರಣಗೊಳಿಸಿ ಸಾಮಾಜಿಕ ನ್ಯಾಯ ಒದಗಿಸುವುದೇ ನಮ್ಮ ಉದ್ದೇಶ.ನಮ್ಮ ಸೇವಾ ಕಂಕರ್ಯಕ್ಕೆ ಮೂಲತ್ವ ಪ್ರಶಸ್ತಿ ಮತ್ತಷ್ಟು ಉತ್ಸಾಹ ನೀಡಿದೆ ಎಂದರು.

ಭಾರತ್ ಕೋ- ಆಪರೇಟಿವ್ ಬ್ಯಾಂಕ್ ನ ಕಾರ್ಯಾಧ್ಯಕ್ಷ ಸೂರ್ಯಕಾಂತ್ ಜಯ ಸುವರ್ಣ, ಶಾರದಾ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ ಮಂಗಳೂರು ಇದರ ಅಧ್ಯಕ್ಷ ಡಾ. ಎಂ ಬಿ ಪುರಾಣಿಕ್, ಉದ್ಯಮಿ ಹಾಗೂ ಚಲನಚಿತ್ರ ನಿರ್ಮಾಪಕ ರವಿ ರೈ ಕಳಸ , ನೆಲೆ ಫೌಂಡೇಶನ್ನ ಟ್ರಸ್ಟಿ ಸುರೇಶ್,
ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ನ ಸ್ಥಾಪಕ ಪ್ರಕಾಶ್ ಮೂಲತ್ವ, ಟ್ರಸ್ಟಿಗಳಾದ ಕಲ್ಪನಾ ಪಿ ಕೋಟ್ಯಾನ್, ಶೈನಿ ಮೂಲತ್ವ, ಲಕ್ಷ್ಮೀಶ ಪಿ ಕೋಟ್ಯಾನ್, ಅಕ್ಷತಾ ಕದ್ರಿ , ಡಿ. ಎಂ ಜಯಕುಮಾರ್ ಉಪಸ್ಥಿತರಿದ್ದರು.
ಪ್ರಾರಂಭದಲ್ಲಿ ಮೂಲತಃ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ನ ಸಂಸ್ಥಾಪಕ ಪ್ರಕಾಶ್ ಕೋಟ್ಯಾನ್ ಪ್ರಾಸ್ತಾವಿಕವಾಗಿ ಮಾತನಾಡಿ ” ಹಿಂದೂ ಸೇವಾ ಪ್ರತಿಷ್ಠಾನದ ಯೋಜನೆಯಾಗಿ 2000ನೇ ಇಸವಿಯಲ್ಲಿ ಆರಂಭಗೊಂಡು 2014 ರಿಂದ ಸ್ವತಂತ್ರ ಟಸ್ಟ್ ಆಗಿ ಕಾರ್ಯ ನಿರ್ವಹಿಸುತ್ತಿರುವ ನೆಲೆ ಫೌಂಡೇಶನ್ ಅನಾಥ, ಬಡ ಮಕ್ಕಳಿಗೆ ಮೌಲ್ಯಾಧಾರಿತ ವಾತಾವರಣ ಒದಗಿಸುವ ಮನೆಯಾಗಿದೆ.ಪ್ರಸ್ತುತ 12 ಆರೈಕೆ ಕೇಂದ್ರಗಳಲ್ಲಿ 415 ಮಕ್ಕಳಿಗೆ ಆಶ್ರಯ ನೀಡುತ್ತಿದೆ. ಇದುವರೆಗೆ ಸಂಸ್ಥೆಯ ಮೂಲಕ 2 ಸಾವಿರಕ್ಕೂ ಮಿಕ್ಕಿದ ಮಕ್ಕಳು ಪುನರ್ವಸತಿ ಹೊಂದಿದ್ದಾರೆ. ಮಕ್ಕಳಿಗೆ ಆಹಾರ, ಬಟ್ಟೆ, ವಸತಿ, ಆರೋಗ್ಯ ಸೇವೆ, ಶಿಕ್ಷಣ, ಸಮಗ್ರ ಬೆಳವಣಿಗೆ, ವೈಯಕ್ತಿಕ ಅಭಿವೃದ್ದಿಗೆ ಪೂರಕ ವ್ಯವಸ್ಥೆಯನ್ನು ಕಲ್ಪಿಸಿರುವ ನೆಲೆ ಪೌಂಡೆಷನ್ ನನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ಪ್ರಶಸ್ತಿ 1,00,001ರೂಪಾಯಿ ನಗದು ಒಳಗೊಂಡಿದೆ ಎಂದರು.
ಮೂಲತ್ವ ವಿಶ್ವ ಪ್ರಶಸ್ತಿ ಸಂಚಾಲಕ ಬಿ ಎಂ ಜಯಕುಮಾರ್ ವಂದಿಸಿದರು. ಡಾ. ಮಂಜುಳಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.




