
ಚಿತ್ರ ವರದಿ: ದಿನೇಶ್ ಕುಲಾಲ್
ಮಂಗಳೂರು: ಜಾಗತಿಕ ಬಂಟರ ಸಂಘಗಳ ಒಕ್ಕೂಟದ 29ನೇ ವಾರ್ಷಿಕ ಮಹಾಸಭೆ, ಬಹಿರಂಗ ಅಧಿವೇಶನ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮವು ನವೆಂಬರ್ 26ರಂದು ಮಂಗಳೂರಿನ ಬಂಟ್ಸ್ ಹಾಸ್ಟೆಲ್ ಬಳಿಯ ಬಂಟರ ಯಾನೆ ನಾಡವರ ಮಾತೃ ಸಂಘದ ಮೈದಾನದಲ್ಲಿ ವಿಜೃಂಭಣೆಯಿಂದ ಜರುಗಿತು.
ಕಾರ್ಯಕ್ರಮವನ್ನು ಅತಿಥಿಗಳು ದೀಪ ಬೆಳಗುವುದರ ಮೂಲಕ ಉದ್ಘಾಟಿಸಿದರು.

‘ಸುಸಂಸ್ಕೃತ ಸಮಾಜಕ್ಕೆ ಇನ್ನೊಂದು ಹೆಸರೇ ನಮ್ಮ ಬಂಟ ಸಮಾಜ’ – ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ
ಸಮಾರಂಭದಲ್ಲಿ ಆಶೀರ್ವಚನ ನೀಡಿದ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಅವರು, “ಸುಸಂಸ್ಕೃತ ಸಮಾಜಕ್ಕೆ ಇನ್ನೊಂದು ಹೆಸರೇ ನಮ್ಮ ಬಂಟ ಸಮಾಜ. ಲಕ್ಷ್ಮಿ, ಜ್ಞಾನಶಕ್ತಿ, ಮತ್ತು ಕ್ರಿಯಾಶಕ್ತಿ- ಈ ಮೂರೂ ಒಗ್ಗೂಡಿದಾಗ ಸಮಾಜದ ಶ್ರೇಯಸ್ಸು ಸಾಧ್ಯವಾಗುತ್ತದೆ. ಬಂಟ ಸಮಾಜಕ್ಕೆ ರಾಜ್ಯವನ್ನು ಆಳುವ ಸಾಮರ್ಥ್ಯವಿದೆ. ವಿಶ್ವದೆಲ್ಲೆಡೆ ಇರುವ ನಮ್ಮ ಬಂಟರು ಒಗ್ಗೂಡಿದರೆ, ರಾಷ್ಟ್ರವು ಸುಭದ್ರವಾಗುತ್ತದೆ” ಎಂದು ನುಡಿದರು.
‘ಬಂಟರ ಸಂಘವು ಜಿಲ್ಲೆಯ ಇತರ ಸಂಘಗಳಿಗೆ ಮಾದರಿ’ – ಯು.ಟಿ.ಖಾದರ್, ವಿಧಾನಸಭಾ ಸ್ಪೀಕರ್
ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಮಾತನಾಡಿ, “ಜಿಲ್ಲೆಗೆ ಗೌರವ ತಂದ ಹಾಗೂ ಇತರ ಸಂಘಗಳಿಗೆ ಮಾದರಿಯಾಗಿರುವ ಸಂಘಟನೆ ಎಂದರೆ ಅದು ಬಂಟರ ಸಂಘ. ಬಂಟ ಸಮಾಜದೊಂದಿಗೆ ಎಲ್ಲ ಸಮಾಜಗಳನ್ನು ಜೊತೆಗೆ ಕೊಂಡೊಯ್ಯುವ ಶಕ್ತಿ ಈ ಸಂಘಕ್ಕಿದೆ. ಭಿನ್ನಾಭಿಪ್ರಾಯಗಳಿದ್ದಾಗಲೂ ಎಲ್ಲ ವರ್ಗದ ಜನರನ್ನು ಪ್ರೀತಿ-ವಿಶ್ವಾಸದಿಂದ ಗೆಲ್ಲುವ ಮೂಲಕ ಸಾಮರಸ್ಯ ಸ್ಥಾಪಿಸುವ ಮಹತ್ತರ ಜವಾಬ್ದಾರಿ ಸಾಮಾಜಿಕ ಸಂಘಟನೆಗಳ ಮೇಲಿದೆ. ಎಲ್ಲ ಸಂಘ ಸಂಸ್ಥೆಗಳು ಇದನ್ನು ಪಾಲಿಸಬೇಕು” ಎಂದು ಕರೆ ನೀಡಿದರು.
‘ವಿಶ್ವದ ಎಲ್ಲ ಬಂಟರು ಬೇಧಭಾವ ಮರೆತು ಒಂದಾಗಬೇಕು’ – ಪ್ರವೀಣ್ ಭೋಜ ಶೆಟ್ಟಿ, ಮುಂಬೈ ಬಂಟರ ಸಂಘದ ಅಧ್ಯಕ್ಷ
ಮುಂಬೈ ಬಂಟರ ಸಂಘದ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ ಮಾತನಾಡಿ, “ವಿಶ್ವದ ಎಲ್ಲ ಬಂಟರು ಬೇಧಭಾವಗಳನ್ನು ಮರೆತು ಒಂದಾಗಬೇಕು. ಬಂಟ ಸಂಘಟನೆಯು ಕೈಗೊಳ್ಳುವ ಸಾಮಾಜಿಕ ಕಾರ್ಯಚಟುವಟಿಕೆಗಳಲ್ಲಿ ಎಲ್ಲರೂ ಮುಕ್ತ ಮನಸ್ಸಿನಿಂದ ತೊಡಗಿಸಿಕೊಳ್ಳಬೇಕು” ಎಂದು ಹೇಳಿದರು.
‘ನೂತನ ಕಟ್ಟಡಕ್ಕೆ ಎಲ್ಲರೂ ಧನಸಹಾಯ ನೀಡಬೇಕು’ – ವಕ್ವಾಡಿ ಪ್ರವೀಣ್ ಶೆಟ್ಟಿ, ದುಬಾಯಿ ಯುಎಇ ಅಧ್ಯಕ್ಷರು
ದುಬಾಯಿ ಯುಎಇ ಅಧ್ಯಕ್ಷರಾದ ವಕ್ವಾಡಿ ಪ್ರವೀಣ್ ಶೆಟ್ಟಿ ಅವರು ಮಾತನಾಡಿ, “ನಾನು ಬಂಟರ ಸಂಘಕ್ಕೆ ಬರಲು ಐಕಳ ಹರೀಶ್ ಶೆಟ್ಟಿ ಅವರೇ ಕಾರಣ. ಜಾಗತಿಕ ಬಂಟರ ಸಂಘಗಳ ಒಕ್ಕೂಟದ ನೂತನ ಪದಾಧಿಕಾರಿಗಳಿಗೆ ಅಭಿನಂದನೆಗಳು. ಹೊಸ ತಂಡವು ಉತ್ಸಾಹದಿಂದ ಕಾರ್ಯನಿರ್ವಹಿಸುವ ಮೂಲಕ ಇಲ್ಲಿ ನಿರ್ಮಾಣ ಆಗಬೇಕಿರುವ ನೂತನ ಕಟ್ಟಡಕ್ಕೆ ಎಲ್ಲರೂ ಧನಸಹಾಯ ನೀಡಬೇಕು” ಎಂದು ಕೋರಿದರು.
‘ಬಡವರ ಕಣ್ಣೀರು ಒರೆಸುವ ಕೆಲಸ ನಿರಂತರ’ – ಐಕಳ ಹರೀಶ್ ಶೆಟ್ಟಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರು
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಮಾತನಾಡಿ, “ಜಾಗತಿಕ ಬಂಟರ ಸಂಘಗಳ ಒಕ್ಕೂಟವು ನಿರಂತರವಾಗಿ ಬಡವರ ಕಣ್ಣೀರನ್ನು ಒರೆಸುವ ಕೆಲಸವನ್ನು ಮಾಡುತ್ತಿದೆ. ಸಂಘವು ಏನೇ ಸಾಧನೆ ಮಾಡಬೇಕಿದ್ದರೂ ಅದಕ್ಕೆ ದಾನಿಗಳ ನೆರವು ಮತ್ತು ನಿರಂತರ ಪ್ರೋತ್ಸಾಹ ಅಗತ್ಯ. ನಮ್ಮ ಬೆನ್ನುತಟ್ಟುವ ದಾನಿಗಳು ಸದಾ ಜೊತೆಗಿರುವುದೇ ನಮ್ಮ ಯಶಸ್ಸಿನ ಸೂತ್ರಧಾರ” ಎಂದು ದಾನಿಗಳನ್ನು ಸ್ಮರಿಸಿದರು.

ಸಮಾರಂಭದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು, ಪತ್ರಕರ್ತರು ಹಾಗೂ ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ ಮಾಡಲಾಯಿತು.
ವೇದಿಕೆಯಲ್ಲಿ ಬಂಟರ ಯಾನೆ ನಾಡವರ ಮಾತೃಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ, ಮುಂಬೈ ಬಂಟರ ಸಂಘದ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ, ಅಶೋಕ್ ಶೆಟ್ಟಿ ಬಿಲ್ಲಾಡಿ, ಉಮಾ ಶೆಟ್ಟಿ, ಶಶಿಧರ್ ಶೆಟ್ಟಿ ಇನ್ನಂಜೆ, ಅಜಿತ್ ಶೆಟ್ಟಿ, ಒಕ್ಕೂಟದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿ, ಕೋಶಾಧಿಕಾರಿ ಉತ್ತೂರು ಮೋಹನ್ ದಾಸ್ ಶೆಟ್ಟಿ, ಜೊತೆ ಕಾರ್ಯದರ್ಶಿಗಳಾದ ಚಂದ್ರಹಾಸ್ ಶೆಟ್ಟಿ ರಂಗೋಲಿ, ಮುನಿಯಾಲು ಉದಯ ಕುಮಾರ್ ಶೆಟ್ಟಿ, ಗಿರೀಶ್ ಶೆಟ್ಟಿ ತೆಳ್ಳಾರ್, ಪೃಥ್ವಿರಾಜ್ ರೈ, ಎಸಿ ಭಂಡಾರಿ, ಸುಧಾಕರ್ ಎಸ್ ಪೂಂಜಾ, ಮಂಜುನಾಥ್ ಶೆಟ್ಟಿ ಕೊಡ್ಲಾಡಿ, ಆನಂದ್ ಶೆಟ್ಟಿ ಐಕಳ, ನಾಗೇಶ್ ಶೆಟ್ಟಿ, ಅನಿಲ್ ಶೆಟ್ಟಿ, ರಾಜೀವ್ ಭಂಡಾರಿ, ಮತ್ತು ಒಕ್ಕೂಟದ ಸಂಚಾಲಕ ಬಾಲಕೃಷ್ಣ ರೈ ಕೊಲ್ಲಾಡಿ ಮತ್ತಿತರರು ಉಪಸ್ಥಿತರಿದ್ದರು.
ಒಕ್ಕೂಟದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ ಅವರು ಪ್ರಾಸ್ತಾವಿಕ ಮಾತನ್ನಾಡಿದರು. ನಿತೇಶ್ ಶೆಟ್ಟಿ ಎಕ್ಕಾರ್, ಪ್ರಿಯಾ ಹರೀಶ್ ಶೆಟ್ಟಿ, ಮತ್ತು ರಾಜೇಶ್ವರಿ ಡಿ ಶೆಟ್ಟಿ ಸುರತ್ಕಲ್ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.




