
ಮೂಲ್ಕಿ ಕೀರ್ತಿಶೇಷರ ಕುರಿತ ಕೃತಿ ಅಭಿನಂದನೀಯ – ಇನಾಯತ್ ಆಲಿ
ಮೂಲ್ಕಿಯ ಹೊಸ ಅಂಗಣ ಪ್ರಕಟಣಾಲಯವು ಪ್ರಕಟಿಸಿದ, ಜಾನಪದ ಲೇಖಕ ಹಾಗೂ ಸಂಘಟಕ ಹರಿಶ್ಚಂದ್ರ ಪಿ. ಸಾಲ್ಯಾನ್ ಅವರ 22ನೇ ಕೃತಿ “ಮೂಲ್ಕಿಯ ಕೀರ್ತಿಶೇಷ ಸಾಧಕರು” ಕೃತಿ ಬಿಡುಗಡೆ ಸಮಾರಂಭವು ನವೆಂಬರ್ 30ರಂದು ಆದಿತ್ಯವಾರ ಸಂಜೆ ಮೂಲ್ಕಿಯ ಪುನರೂರು ಟೂರಿಸ್ಟ್ ಹೋಮ್ ಸಭಾಂಗಣದಲ್ಲಿ ಜರುಗಿತು.

ಕಾರ್ಯಕ್ರಮದಲ್ಲಿ ಕೆ.ಪಿ.ಸಿ.ಸಿ. ಪ್ರಧಾನ ಕಾರ್ಯದರ್ಶಿ ಇನಾಯತ್ ಆಲಿ ಅವರು ಕೃತಿಯನ್ನು ಬಿಡುಗಡೆ ಮಾಡಿ ಮಾತನಾಡಿದರು. “ಮೂಲ್ಕಿಯ ಕೀರ್ತಿಶೇಷ ಸಾಧಕರ ಬಗ್ಗೆ ಬರೆದ ಈ ಕೃತಿಯು ಅಭಿನಂದನೀಯವಾದುದು. ಮೂಲ್ಕಿಯಲ್ಲಿ ಉತ್ತಮ ಕಾರ್ಯಗಳನ್ನು ಮಾಡಿ ಜನರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿರುವ ಕೀರ್ತಿಶೇಷ ವ್ಯಕ್ತಿಗಳ ಕುರಿತು ಬರೆದಿರುವ ಈ ಕೃತಿಯು ಬಹಳ ಒಳ್ಳೆಯದಾಗಿ ಮೂಡಿಬಂದಿದೆ. ಇಂತಹ ಕೃತಿಗಳನ್ನು ರಚಿಸುವವರು ಇಂದು ಹೆಚ್ಚಾಗಿ ಇಲ್ಲ. ಸಮಾಜಕ್ಕೆ ಸೇವೆ ಸಲ್ಲಿಸಿರುವ ಅಂತಹ ಸಾಧಕರನ್ನು ಗುರುತಿಸಿ ಹರಿಶ್ಚಂದ್ರ ಪಿ. ಸಾಲ್ಯಾನ್ ಅವರು ಮಹತ್ವದ ಕೆಲಸ ಮಾಡಿದ್ದಾರೆ. ಅವರನ್ನು ಕರೆದು ಪ್ರಶಸ್ತಿ ನೀಡಿದರೆ, ಕೃತಿ ಬರೆದವರಿಗೆ ಮತ್ತಷ್ಟು ಸಂತೋಷವಾಗುತ್ತದೆ” ಎಂದು ನುಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು, ಇದರ ಮಾಜಿ ರಾಜ್ಯಾಧ್ಯಕ್ಷರಾದ ಧರ್ಮದರ್ಶಿ ಹರಿಕೃಷ್ಣ ಪುನರೂರು ಅವರು ವಹಿಸಿದ್ದರು. ಅವರು ಮಾತನಾಡಿ, “ಹೊಸ ಅಂಗಣ ಪತ್ರಿಕೆಗೆ 10 ವರ್ಷ ತುಂಬಿದೆ. ನಿರಂತರವಾಗಿ ಪತ್ರಿಕೆಯನ್ನು ನಡೆಸಿಕೊಂಡು ಬಂದ ಸಂಪಾದಕರಿಗೆ ಅಭಿನಂದನೆಗಳು” ಎಂದರು.

ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಮೂಲ್ಕಿ ನರ್ಸಿಂಗ್ ಹೋಮ್ನ ವೈದ್ಯ ಡಾ. ಅರುಣ್ ಕುಡ್ವ, ಧನಂಜಯ್ ಅಂಚನ್ ಕೆ.ಎಸ್. ಮತ್ತು ಬಂಕಿ ನಾಯಕ್ ಅವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ಸಮಾಜ ಸೇವಕ ಕೆ.ಎಂ. ಕೋಟ್ಯಾನ್ ಚಿತ್ರಾಪು ಅವರು ಕೃತಿ ಪರಿಚಯ ಮಾಡಿ, “ಹರಿಶ್ಚಂದ್ರ ಪಿ. ಸಾಲ್ಯಾನ್ ಅವರು ಒಂದು ಒಳ್ಳೆಯ ಕೆಲಸ ಮಾಡಿದ್ದಾರೆ, ಅವರಿಗೆ ಅಭಿನಂದನೆಗಳು” ಎಂದು ಹೇಳಿದರು.
ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಭಾಸ್ಕರ್ ಬಂಗೇರ ಅವರನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಗೋಪಿನಾಥ ಪಡಂಗ, ವಾಸು ಪೂಜಾರಿ ಚಿತ್ರಾಪು, ಶಿವರಂಜಿ ಜಿ. ಅಮೀನ್, ದಿನೇಶ್ ಸಾಲಿಯಾನ್ ಕೋಲ್ನಾಡು, ದಿನೇಶ್ ಶೆಟ್ಟಿ, ಮತ್ತು ಜಯಪಾಲ ಶೆಟ್ಟಿ ಐಕಳ ಮುಂತಾದ ಗಣ್ಯರು ಉಪಸ್ಥಿತರಿದ್ದರು.




