25 C
Mumbai
March 7, 2026
Mumbai News Kannada
ಸುದ್ದಿ

ಮಿಸೆಸ್ ಇಂಡಿಯಾ-2025 ಕಿರೀಟ ಮುಡಿಗೇರಿಸಿದ ಕನ್ನಡತಿ ಡಾ. ರಶ್ಮಾ ಎಂ. ಶೆಟ್ಟಿ





ಜೈಪುರ: ರಾಜಸ್ಥಾನದ ಜೈಪುರದಲ್ಲಿರುವ ಐತಿಹಾಸಿಕ ಜೈಬಾಗ್ ಪ್ಯಾಲೇಸ್‌ನಲ್ಲಿ ಡಿಿಸೆಂಬರ್ 18 ರಿಂದ 21 ರವರೆಗೆ ನಡೆದ ‘ಮಿಸೆಸ್ ಇಂಡಿಯಾ – ಸೀಸನ್ 15’ ಸೌಂದರ್ಯ ಸ್ಪರ್ಧೆಯಲ್ಲಿ ಮೂಲತಃ ದಕ್ಷಿಣ ಕನ್ನಡದವರಾದ, ಮುಲುಂಡ್‌ನ ಪ್ರಕೃತಿ ಚಿಕಿತ್ಸೆ ವೈದ್ಯೆ ಡಾ. ರಶ್ಮಾ ಮೋಹಿತ್ ಶೆಟ್ಟಿ ಅವರು ವಿಜೇತರಾಗಿ ಮಿಂಚಿದ್ದಾರೆ. ಮಿಸೆಸ್ ಇಂಡಿಯಾ ಸಂಸ್ಥೆಯ ರಾಷ್ಟ್ರೀಯ ನಿರ್ದೇಶಕಿ ದೀಪಾಳಿ ಫಡ್ನಿಸ್ ನೇತೃತ್ವದಲ್ಲಿ ನಡೆದ ಈ ಭವ್ಯ ಸಮಾರಂಭದಲ್ಲಿ ಅವರು ಈ ಪ್ರತಿಷ್ಠಿತ ಕಿರೀಟವನ್ನು ತಮ್ಮದಾಗಿಸಿಕೊಂಡರು.

​ಸ್ಪರ್ಧೆಯ ಹಾದಿ ಮತ್ತು ಸಾಧನೆ

​ದೇಶದ ವಿವಿಧ ಭಾಗಗಳಿಂದ ಆಯ್ಕೆಯಾದ 40 ಅಂತಿಮ ಸ್ಪರ್ಧಿಗಳು ಈ ನಾಲ್ಕು ದಿನಗಳ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಪ್ರತಿಭಾ ಸುತ್ತು, ಪ್ರೇರಣಾದಾಯಕ ಜೀವನ ಕಥೆ, ವೈಯಕ್ತಿಕ ಸಂದರ್ಶನ, ರ‍್ಯಾಂಪ್ ವಾಕ್, ರಾಷ್ಟ್ರೀಯ ವೇಷಭೂಷಣ, ಸಾಂಪ್ರದಾಯಿಕ ಹಾಗೂ ಈವಿನಿಂಗ್ ಗೌನ್ ಸುತ್ತುಗಳಲ್ಲಿ ಡಾ. ರಶ್ಮಾ ಅವರು ತೋರಿದ ಆತ್ಮವಿಶ್ವಾಸ ಮತ್ತು ಸರ್ವತೋಮುಖ ಶ್ರೇಷ್ಠತೆಯು ಅವರನ್ನು ಈ ಗೌರವಕ್ಕೆ ಪಾತ್ರರನ್ನಾಗಿಸಿದೆ.

ಹಿಂದಿನ ಸಾಧನೆಗಳು:

  • ಮಿಸೆಸ್ ಇಂಡಿಯಾ ಕರ್ನಾಟಕ 2024: ಪ್ರಥಮ ರನ್ನರ್ ಅಪ್ ಹಾಗೂ ಅತ್ಯುತ್ತಮ ಟ್ಯಾಲೆಂಟ್, ರ‍್ಯಾಂಪ್ ವಾಕ್ ಮತ್ತು ಶಾರ್ಟ್ ಫಿಲ್ಮ್ ವಿಭಾಗಗಳಲ್ಲಿ ಪ್ರಥಮ ಬಹುಮಾನ.
  • ಮಿಸೆಸ್ ಇಂಡಿಯಾ ಕರ್ನಾಟಕ ಮಂಗಳೂರು 2024: ಪ್ರಥಮ ರನ್ನರ್ ಅಪ್.
  • ಆಕಾಂಕ್ಷ ಮಿಸೆಸ್ ಬಂಟ್ಸ್ 2023 (ಬಂಟರ ಸಂಘ ಮುಂಬಯಿ): ಪ್ರಥಮ ರನ್ನರ್ ಅಪ್.

​ವೈಯಕ್ತಿಕ ಮತ್ತು ಕೌಟುಂಬಿಕ ಹಿನ್ನೆಲೆ

​ಡಾ. ರಶ್ಮಾ ಅವರು ನಾರ್ಯಗುತ್ತು ರಘುನಾಥ ಶೆಟ್ಟಿ ಮತ್ತು ಅಮ್ಟೂರು ಬಾಳಿಕೆ ಕಸ್ತೂರಿ ಶೆಟ್ಟಿ ದಂಪತಿಯ ಸುಪುತ್ರಿ. ಪುತ್ತೂರಿನ ಮುಂಡೂರು ಗ್ರಾಮದ ಪೊನೋನಿಯದಲ್ಲಿ ಬೆಳೆದ ಇವರು, ಪ್ರಸ್ತುತ ಮುಂಬೈನಲ್ಲಿ ವೈದ್ಯರಾಗಿ ನೆಲೆಸಿದ್ದಾರೆ. ಇವರು ಮೋಹಿತ್ ಶೆಟ್ಟಿ ಅವರ ಧರ್ಮಪತ್ನಿಯಾಗಿದ್ದು, ದಂಪತಿಗೆ ನೇಸರ ಎಂಬ ಏಳು ವರ್ಷದ ಪುತ್ರಿ ಇದ್ದಾರೆ. ಇವರು ಕಟಪಾಡಿ ಮೂಡುಬೆಟ್ಟು ಹೊಸಮನೆ ಮನೋಹರ್ ಶೆಟ್ಟಿ (ಐನಾಕ್ ಆಪ್ಟಿಕ್ಸ್) ಮತ್ತು ಮುಚ್ಚೂರು ಬರ್ಕೆ ದಿವಂಗತ ಮಮತಾ ಶೆಟ್ಟಿ (ಮಾಜಿ ಅಧ್ಯಕ್ಷರು, ಮುಲುಂಡ್ ಬಂಟ್ಸ್ ಮಹಿಳಾ ವಿಭಾಗ) ಅವರ ಸೊಸೆಯಾಗಿದ್ದಾರೆ.

​ಶಿಕ್ಷಣ ಮತ್ತು ವೃತ್ತಿಜೀವನ

​ಡಾ. ರಶ್ಮಾ ಅವರು ತಮ್ಮ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಪುತ್ತೂರಿನ ಪಾಪೆಮಜಲು ಸರ್ಕಾರಿ ಶಾಲೆಯಲ್ಲಿ ಹಾಗೂ ಪಿಯುಸಿ ಶಿಕ್ಷಣವನ್ನು ಕೊಂಬೆಟ್ಟು ಸರ್ಕಾರಿ ಕಾಲೇಜಿನಲ್ಲಿ ಪೂರೈಸಿದರು. ನಂತರ ಮೂಡುಬಿದಿರೆಯ ಆಳ್ವಾಸ್ ಕಾಲೇಜಿನಲ್ಲಿ ಪ್ರಕೃತಿ ಚಿಕಿತ್ಸೆ ಪದವಿ ಪಡೆದು, ರಾಜೀವ್ ಗಾಂಧಿ ವಿಶ್ವವಿದ್ಯಾಲಯಕ್ಕೆ ಎರಡನೇ ರ‍್ಯಾಂಕ್ ಗಳಿಸಿ ಕಾಲೇಜಿನ ಅತ್ಯುತ್ತಮ ವಿದ್ಯಾರ್ಥಿಯಾಗಿ ಹೊರಹೊಮ್ಮಿದರು.

​ಪ್ರಸ್ತುತ ಇವರು:

  • ​ನವಿ ಮುಂಬೈನ ಡಾ. ಡಿ.ವೈ. ಪಾಟೀಲ್ ಪ್ರಕೃತಿ ಚಿಕಿತ್ಸೆ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕಿ.
  • ​ಮುಲುಂಡ್ ಹಿಲ್ಸ್ ಇನ್ನರ್ ವೀಲ್ ಕ್ಲಬ್‌ನ ಸಮಿತಿ ಕಾರ್ಯದರ್ಶಿ.
  • ​ಮಹಿಳೆಯರ ಆರೋಗ್ಯ ಮತ್ತು ಜೀವನಶೈಲಿ ಕುರಿತು ಲೈವ್ ಸೆಮಿನಾರ್‌ಗಳ ಸಂಘಟಕಿ.

​ಕಲೆ ಮತ್ತು ಕ್ರೀಡೆ

​ವೈದ್ಯಕೀಯ ಕ್ಷೇತ್ರದೊಂದಿಗೆ ಕಲೆ ಮತ್ತು ಕ್ರೀಡೆಯಲ್ಲೂ ಇವರು ಮುಂಚೂಣಿಯಲ್ಲಿದ್ದಾರೆ. ರಾಜ್ಯಮಟ್ಟದ ಅಥ್ಲೆಟಿಕ್ ಮತ್ತು ಥ್ರೋಬಾಲ್ ಆಟಗಾರ್ತಿಯಾಗಿರುವ ಇವರು, ಅಭಿನಯದಲ್ಲೂ ಸೈ ಎನಿಸಿಕೊಂಡಿದ್ದಾರೆ. 2024ರ ಜೂನ್‌ನಲ್ಲಿ ನಡೆದ ‘ಡಾ. ಶಿವರಾಮ ಕಾರಂತ ನಾಟಕೋತ್ಸವ’ದಲ್ಲಿ ಕಲಾ ಸ್ಪಂದನ ಮುಂಬಯಿ ತಂಡದ “ಸ್ವಾಮಿ ಕೊರಗಜ್ಜ” ನಾಟಕದಲ್ಲಿನ ಅಭಿನಯಕ್ಕಾಗಿ ‘ಅತ್ಯುತ್ತಮ ನಟಿ’ (ಪ್ರಥಮ) ಪ್ರಶಸ್ತಿಯನ್ನು ಪಡೆದಿದ್ದಾರೆ.

​ಡಾ. ರಶ್ಮಾ ಅವರ ಈ ಸಾಧನೆಗೆ ಬಂಟರ ಸಂಘ ಮುಂಬಯಿ ಸಂಸ್ಥೆಯ ಅಧ್ಯಕ್ಷರಾದ ಪ್ರವೀಣ್ ಭೋಜ ಶೆಟ್ಟಿ, ಮುಲುಂಡ್ ಬಂಟ್ಸ್ ಅಧ್ಯಕ್ಷರಾದ ಸಿ.ಎ. ಕರುಣಾಕರ್ ಶೆಟ್ಟಿ ಸೇರಿದಂತೆ ಹಲವಾರು ಗಣ್ಯರು ಅಭಿನಂದನೆ ಸಲ್ಲಿಸಿದ್ದಾರೆ.



Related posts

ಕಾಪು ತಾಲೂಕು ಪಂಚಾಯತ್ : ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಸಭೆ.

Mumbai News Desk

ಗೊರೆಗಾಂವ್ ಶ್ರೀ ಶಾಂತಾದುರ್ಗಾದೇವಿ ದೇವಸ್ಥಾನದ ಬ್ರಹ್ಮ ಕಲಶೋತ್ಸವ ಧಾರ್ಮಿಕ ಸಭೆ

Mumbai News Desk

ಹಿರಿಯ ರಂಗಕರ್ಮಿ, ಚಿತ್ರ ನಿರ್ಮಾಪಕ ಸದಾನಂದ ಸುವರ್ಣ ನಿಧನ

Mumbai News Desk

ಮಂಗಳೂರು ವಿವಿ ಘಟಿಕೋತ್ಸವ : ರೋಹನ್ ಮೊಂತೇರೋ, ಕನ್ಯಾನ ಸದಾಶಿವ ಶೆಟ್ಟಿ, ಎಂ. ಎನ್ ರಾಜೇಂದ್ರಕುಮಾರ್ ಗೆ ಗೌರವ ಡಾಕ್ಟರೇಟ್

Mumbai News Desk

ಪಿಯುಸಿ ವಿಜ್ಞಾನ ವಿಭಾಗ ಪರೀಕ್ಷೆ ಕುಮಾರಿ ಜಾನ್ವಿ ರಾಜೇಶ್ ಕುಲಾಲ್ ರವರಿಗೆ 87%_ಅಂಕ

Mumbai News Desk

ಸಾಕ್ಷರತೆ ಆದರೆ ಸಾಲದು, ಜೀವನಕ್ಕೆ ಸ್ಪಂದಿಸುವ ಶಿಕ್ಷಣ ಮುಖ್ಯ: ಬಿ.ಕೆ.ಹರಿಪ್ರಸಾದ್.

Mumbai News Desk