
ಮಂಗಳೂರಿನ ವಾಮಂಜೂರು ತಿರುವೈಲುಗುತ್ತು ಸಂಕುಪೂಂಜ-ದೇವಪೂಂಜ ಜೋಡುಕರೆ ಕಂಬಳ ಟ್ರಸ್ಟ್ ವತಿಯಿಂದ ತಿರುವೈಲು ಅಮೃತೇಶ್ವರ ದೇವಾಲಯದ ಮುಂಭಾಗದ ಕಂಬಳ ಗದ್ದೆಯಲ್ಲಿ 14ನೇ ವರ್ಷದ ತಿರುವೈಲೋತ್ಸವ ಇತ್ತೀಚಿಗೆ ವಿಜೃಂಭಣೆಯಿಂದ ಜರಗಿತು.
ಅದಾನಿ ಫೌಂಡೇಶನ್ ಅಧ್ಯಕ್ಷ ಕಿಶೋರ್ ಆಳ್ವ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಶಾಸಕ ಡಾ ಭರತ್ ಶೆಟ್ಟಿ ಮಾತನಾಡುತ್ತಾ “ತುಳುನಾಡಿನ ಕಂಬಳ, ದೈವಾರಾಧನೆ, ಜಾತ್ರೆ ಮತ್ತು ಉತ್ಸವಗಳೊಂದಿಗೆ ಈ ನೆಲದ ವಿಶಿಷ್ಟ ಸಂಸ್ಕೃತಿ ದೇಶದ ಬೇರೆಲ್ಲೂ ಕಾಣಲು ಸಾಧ್ಯವಿಲ್ಲ. ಇಂತಹ ಸಮೃದ್ಧ ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕು. ಕಷ್ಟದ ಸವಾಲುಗಳಿದ್ದರೂ ಜಾನಪದ ಕಂಬಳ ಕ್ರೀಡೆ ಆಯೋಜಿಸುತ್ತಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಸಾಧಕರಾದ ಡಾ. ಅಶ್ವಿನ್ ಶೆಟ್ಟಿ (ಶಿಕ್ಷಣ, ಧಾರ್ಮಿಕ), ರಕ್ಷಿತ್ ಡಿ. ಬಂಗೇರ (ಕ್ರೀಡೆ) ಮತ್ತು ಮುಂಬೈಯ ಖ್ಯಾತ ಜ್ಯೋತಿಷಿ ಮತ್ತು ಪುರೋಹಿತರಾದ ಡಾ. ಎಂ. ಜೆ. ಪ್ರವೀಣ್ ಭಟ್ ಅವರನ್ನು ಸನ್ಮಾನಿಸಲಾಯಿತು.

ತಿರುವೈಲುಗುತ್ತು ಕಂಬಳ ಸ್ಥಾಪಕಾಧ್ಯಕ್ಷ ತಿರುವೈಲುಗುತ್ತು ನವೀನ್ಚಂದ್ರ ಆಳ್ವ, ಕಾರ್ಯಾಧ್ಯಕ್ಷ ಪ್ರವೀಣ್ಚಂದ್ರ ಆಳ್ವ, ಪ್ರಧಾನ ಕಾರ್ಯದರ್ಶಿ ರಾಜ್ಕುಮಾರ್ ಶೆಟ್ಟಿ, ಕಂಬಳ ಸಮಿತಿ ಪ್ರಧಾನ ಸಂಚಾಲಕ ಪ್ರಸಾದ್ ಮಲ್ಲಿ, ಡಾ. ಅಭಿಲಾಷ್ ಪಿ.ವಿ., ಮಾಜಿ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ವಾಮಂಜೂರು ಅಮೃತೇಶ್ವರನಿಗೆ ವಿಶೇಷ ರಂಗಪೂಜೆ ನೆರವೇರಿಸಿದ ಬಳಿಕ ಗಂಧ ಪ್ರಸಾದವನ್ನು ಕಂಬಳದ ಗದ್ದೆಗೆ ಹಾಕುವ ಮೂಲಕ ಸಾಂಪ್ರದಾಯಿಕ ವಿಧಿವಿಧಾನಗಳನ್ನು ಪೂರೈಸಲಾಯಿತು.

ತುಳುನಾಡಿನ ಜಾನಪದ ಕ್ರೀಡೆ ಕಂಬಳವನ್ನು 24 ಗಂಟೆಗಳಿಗೆ ಮುಗಿಸಬೇಕೆಂದು ಸುಪ್ರೀಂ ಕೋರ್ಟ್ ನಿರ್ದೇಶನವಿದ್ದರೂ, 35 – 40 ಗಂಟೆಗಳವರೆಗೆ ನಡೆದು ಬಾರಿ ಟೀಕೆಗೆ ಕಾರಣವಾಗಿತ್ತು. ಆದರೆ ಭಾನುವಾರ ಸಮಾನಗೊಂಡ ತಿರುವೈಲು ಕಂಬಳ ಕಂಬಳ ಕೇವಲ 22 ಗಂಟೆಗಳಲ್ಲಿ ಮುಗಿದು ಧಾಖಲೆಗೆ ಕಾರಣವಾಯಿತು.
ಶನಿವಾರ ಬೆಳಿಗ್ಗೆ 10:00ಗೆ ಕಂಬಳ ಆರಂಭವಾಗಿದ್ದು ಭಾನುವಾರ ಬೆಳಿಗ್ಗೆ 8:55 ಕ್ಕೆ ಮುಕ್ತಾಯವಾಗುವ ಮೂಲಕ ಸುಮಾರು 20 ವರ್ಷಗಳ ಬಳಿಕ ಅತಿ ಕಡಿಮೆ ಅವಧಿಯಲ್ಲಿ ಮುಗಿದ ಕಂಬಳ ಎಂಬ ಹಿರಿಮೆಗೆ ಪಾತ್ರವಾಗಿದೆ. ಕಂಬಳದ ಯಶಸ್ಸಿಗೆ ಸಂಘಟನಾ ಚಾತುರ್ಯತೆ, ಶಿಸ್ತು, ಕೋಣದ ಮಾಲೀಕರ ಸಮಯ ಪಾಲನೆ, ಕೋಣ ಬಿಡುವವರು , ರೆಫರಿಗಳ ಬದ್ಧತೆ ಮುಖ್ಯ ಕಾರಣವಾಗಿದೆ.




