
ಬೈಂದೂರು, ಮಾ.5.ಬೈಂದೂರು ಅಗ್ನಿಶಾಮಕ ಠಾಣೆಯ ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ ರಾಜೇಶ್ ಶೆಟ್ಟಿಯವರು ಪ್ರಸ್ತುತ ವರ್ಷದಲ್ಲಿ ಕೊಡಮಾಡಿದ ಮುಖ್ಯಮಂತ್ರಿಗಳ ಪದಕವನ್ನು ಫೆ.24ರಂದು ಬೆಂಗಳೂರಿನ ಆರ್.ಎ. ಮುಂಡ್ಕಾರ್ ಟ್ರೈನಿಂಗ್ ಸೆಂಟರಿನಲ್ಲಿ ನಡೆದ ಸಮಾರಂಭದಲ್ಲಿ ಕರ್ನಾಟಕ ಸರ್ಕಾರದ ಗೃಹಮಂತ್ರಿ ಜಿ.ಪರಮೇಶ್ವರ್ ರವರಿಂದ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಅಗ್ನಿಶಾಮಕ ವಿಭಾಗದ ಡಿಜಿಪಿ ಪ್ರಶಾಂತ್ ಕುಮಾರ್ ಥಾಕುರ್, ಐಜಿಪಿ ಎಮ್.ನಂಜುಂಡ ಸ್ವಾಮಿ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.
ರಾಜೇಶ್ ಶೆಟ್ಟಿಯವರು ಸುರತ್ಕಲ್ ಕಾಟಿಪಳ್ಳ ನಿವಾಸಿಯಾಗಿದ್ದು 1996ರಲ್ಲಿ ಅಗ್ನಿಶಾಮಕ ಇಲಾಖೆಯಲ್ಲಿ ಫಯರ್ಮೇನ್ ಆಗಿ ಸೇವೆಗೆ ಸೇರಿದ್ದರು. 2002ರಲ್ಲಿ ಅಗ್ನಿಶಾಮಕ ಚಾಲಕನಾಗಿ ಸೇವೆಯಲ್ಲಿ ಮುಂದುವರಿದು ಕದ್ರಿ, ಪಾಂಡೇಶ್ವರ, ಮೂಡುಬಿದಿರೆ, ಬೆಂಗಳೂರು , ಬಂಟ್ವಾಳದಲ್ಲಿ ಕಾರ್ಯ ನಿರತರಾಗಿ ಪ್ರಸ್ತುತ ಪದೋನ್ನತಿ ಗೊಂಡು ಬೈಂದೂರು ಅಗ್ನಿಶಾಮಕ ಠಾಣೆಯ ಸಹಾಯಕ ಠಾಣಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರನ್ನು ಬೈಂದೂರು ಅಗ್ನಿಶಾಮಕ ಠಾಣೆಯ ಸರ್ವ ಸಿಬ್ಬಂದಿಗಳು, ಸಿವೈಸಿ ಕಾಟಿಪಳ್ಳ ಇದರ ಪದಾಧಿಕಾರಿಗಳು ಮತ್ತು ಸದಸ್ಯರು, ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಸಹಿತ ಅವರ ಅಪಾರ ಅಭಿಮಾನಿಗಳು ಅಭಿನಂದಿಸಿದ್ದಾರೆ.




