
ಮುಂಬಯಿಯಲ್ಲಿ “ಕರ್ನಾಟಕ ಭವನ” ಸ್ಥಾಪನೆ ಮಾಡಲು ಸಿದ್ದರಾಗೋಣ – ಡಾ. ಎಂ.ಜೆ. ಪ್ರವೀಣ್ ಭಟ್
ಮುಂಬಯಿ : ಮಂಬಯಿ ಮಹಾನಗರದಲ್ಲಿ ಹಲವಾರು ಕನ್ನಡ ಸಂಘಗಳಿವೆ. ಇವೆಲ್ಲಾ ಸಂಘಗಳ ಒಂದು ಭವನ ಸ್ಥಾಪನೆಯಾಗುವ ಅಗತ್ಯವಿದೆ. ಇಲ್ಲಿನ ಎಲ್ಲಾ ಕನ್ನಡ ಸಂಘಗಳು ಒಂದಾಗಿ ಈ ಮಹಾನಗರದಲ್ಲಿ ಒಂದು ಕರ್ನಾಟಕ ಭವನ ಸ್ಥಾಪನೆ ಮಾಡೋಣ ಎಂದು ನೂತನವಾಗಿ ಸ್ಥಾಪನೆಗೊಂಡ ಸಯಾನ್ ಕರ್ನಾಟಕ ಸಂಘದ ಸ್ಥಾಪಕ ಅಧ್ಯಕ್ಷರೂ ಹೆಸರಾಂತ ಅಂತರಾಷ್ಟ್ರೀಯ ಮಟ್ಟದ ಜ್ಯೋತಿಷ್ಯರೂ ಆದ ಡಾ. ಎಂ.ಜೆ. ಪ್ರವೀಣ್ ಭಟ್ ಅವರು ನುಡಿದರು.
ಗೊರೆಗಾಂವ್ ಕರ್ನಾಟಕ ಸಂಘದ 66ನೇ ಸಂಸ್ಥಾಪನಾ ದಿನಾಚರಣೆ ಅ. 22ರಂದು ಕೇಶವ ಗೋರೆ ಸ್ಮಾರಕ ಟ್ರಸ್ಟಿನ ಎರಡನೇ ಮಹಡಿ, ಗೋರೆಗಾಂವ್ (ಪ.)ಇಲ್ಲಿ ಸಂಘದ ಅಧ್ಯಕ್ಷರಾದ ನಿತ್ಯಾನಂದ ಕೋಟ್ಯಾನ್ ರವರ ಅಧ್ಯಕ್ಷತೆಯಲ್ಲಿ ನಡೆದಿದ್ದು ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಡಾ. ಎಂ.ಜೆ. ಪ್ರವೀಣ್ ಭಟ್ ಅವರು ಮಾತನಾಡುತ್ತಾ ನಾನು ಸಯಾನ್ ಕರ್ನಾಟಕ ಸಂಘದಲ್ಲಿ ಅಧ್ಯಕ್ಷನಾಗಿ ಇಂದು 6 ದಿನ ಪೂರೈಸಿದ್ದು 66 ವರ್ಷ ಪೂರೈಸಿದ ಹಿರಿಯ ಕನ್ನಡ ಸಂಘದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಿರುವೆನು. ಇಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿದ್ದು ಸಂಘದ ಮಹಿಳಾ ವಿಭಾಗದ ಕಾರ್ಯವನ್ನು ಮೆಚ್ಚಬೇಕಾಗಿದೆ. ಯಾವುದೇ ಸಂಘಟನೆಯ ಅಭಿವೃದ್ದಿಯಲ್ಲಿ ಮಹಿಳೆಯರು ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಾರೆ ಎನ್ನುತ್ತಾ ಗೊರೆಗಾಂವ್ ಕರ್ನಾಟಕ ಸಂಘದ ನಿವೇಷಣದ ಪುನರ್ನಿರ್ಮಾಣ ಕಾರ್ಯವು ಬೇಗನೇ ನೆರವೇರಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷರಾದ ನಿತ್ಯಾನಂದ ಕೋಟ್ಯಾನ್ ಅವರು ಸಂಘ ಸ್ಥಾಪನೆಯಾದ ನಂತರ ಸಂಘದಲ್ಲಿ ದುಡಿದ ಹಿರಿಯರನ್ನು ಸ್ಮರಿಸುತ್ತಾ, ನಮ್ಮ ಸಂಘವು ಮಧುಭನದಿಂದ ಪ್ರೇಮ ಬಿಂಧು ವಿಗೆ ಬಂದ ಬಗ್ಗೆ, ತಿಳಿಸುತ್ತಾ, ಸಂಘದ ನಿವೇಷನ ಪುನರ್ನಿರ್ಮಾಣ ಕಾರ್ಯವು ಬೇಗನೇ ಪ್ರಾರಂಭಗೊಂಡು ನಮ್ಮ ಸಂಘಕ್ಕೆ ವಿಶಾಲವಾದ ನಿವೇಶಣ ಬೇಗನೇ ದೊರೆಯುವಂತಾಗಲಿ ಎಂದರು. ನಮ್ಮ ಸಂಘಕ್ಕೆ ಕಾಸರಗೋಡಿನ ಗಡಿನಾಡ ಕನ್ನಡ ರಾಜ್ಯೋತ್ಸವ ಪ್ರಶಸ್ತಿ 2023 ಈಗಾಗಲೇ ಪ್ರಕಟಣೆ ಗೊಂಡಿದೆ ಮಾತ್ರವಲ್ಲದೆ ನಮ್ಮ ಸಂಘದ ಬಗ್ಗೆ ಮುಂಬಯಿ ವಿಶ್ವವಿದ್ಯಾಲಯದಿಂದ ಗ್ರಂಥವು
ರಚನೆಯಾಗುತ್ತಿದೆ ಎನ್ನಲು ಅಭಿಮಾನವಾಗುತ್ತಿದೆ ಎನ್ನುತ್ತಾ ಸಂಘದ ಕಾರ್ಯಕಾರಿ ಸಮಿತಿ ಮತ್ತು ಎಲ್ಲಾ ಸಮಿತಿಗಳ ಉತ್ಸಾಹ ಭರಿತ ಕಾರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಅಮ್ಮೆಂಬಳ ಸದಾಶಿವ ನಾವಡರು ಸ್ಥಾಪಿಸಿದ ಎ. ಎಸ್. ನಾವಡ ಯಕ್ಷಗಾನ ಪ್ರಶಸ್ತ್ಥಿಯನ್ನು ಮುಂಬೈಯ ಹೆಸರಾಂತ ಯಕ್ಷಗಾನ ಕಲಾವಿದ ಲಕ್ಷ್ಮೀನಾರಾಯಣ ಹೊಸಬೆಟ್ಟು ಅವರಿಗೆ ಗಣ್ಯರ ಉಪಸ್ಥಿತಿಯಲ್ಲಿ ಪ್ರಧಾನಿಸಲಾಯಿತು. ಸನ್ಮಾನ ಪತ್ರವನ್ನು ಜೊತೆ ಕಾರ್ಯದರ್ಶಿ ಶಾಂತ ಶೆಟ್ಟಿಯವರು ವಾಚಿಸಿದರು.
ಗೌರವ ಕೋಶಾಧಿಕಾರಿ ಎಂ. ಆನಂದ್ ಶೆಟ್ಟಿ ಮತ್ತು ಸಂಘದ ಉಪಾಧ್ಯಕ್ಷರಾದ ವಿಶ್ವನಾಥ ಶೆಟ್ಟಿ ಶೆಟ್ಟಿಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಎ. ಎಸ್. ನಾವಡ ಯಕ್ಷಗಾನ ಪ್ರಶಸ್ತ್ಥಿಯನ್ನು ಸ್ಥಾಪಿಸಿದ ಅಮ್ಮೆಂಬಳ ಸದಾಶಿವ ನಾವಡರ ಬಗ್ಗೆ ಮಾಜಿ ಗೌ. ಪ್ರಧಾನ ಪ್ರಧಾನ ಕಾರ್ಯದರ್ಶಿ ಗುಣೋದಯ ಎಸ್. ಐಲ್ ಅವರು ಮಾಹಿತಿಯಿತ್ತರು. ಗ್ರಂಥಾಲಯದ ನಿರ್ದೇಶಕಿ ಉಷಾ ಶೆಟ್ಟಿಯವರು ರಸ ಪ್ರಶ್ನೆಯೊಂದಿಗೆ ಸಭಿಕರನ್ನು ರಂಚಿಸಿದರು.
ಸುಗುಣಾ ಬಂಗೇರ ಅವರು ಕವನ ವಾಚಿಸಿದ್ದು, ಯುವ ವಿಭಾಗದ ಕಾರ್ಯಾಧ್ಯಕ್ಷೆ ಶಿವಾನಿ ಆಚಾರ್ಯ ಯಕ್ಷಗಾನ ನೃತ್ಯವನ್ನು ಸಾದರಪಡಿಸಿದರು.
ಸಂಘದ ಮಾಜಿ ಅಧ್ಯಕ್ಷ ಹಾಗೂ ಟ್ರಷ್ಟಿ ದೇವಲ್ಕುಂದ ಭಾಸ್ಕರ ಶೆಟ್ಟಿ ಅಭಿನಂದನಾ ಬಾಷಣ ಮಾಡಿದರು.
ಸಂಘದ ನಿಕಟಪೂರ್ವ ಗೌ. ಪ್ರಧಾನ ಕಾರ್ಯದರ್ಶಿ ವಾಣಿ ಶಟ್ಟಿ ಅತಿಥಿಯನ್ನು ಪರಿಚಯಿಸಿದರು.
ಯುವ ವಿಭಾಗದ ಸದಸ್ಯರು ದೇವಿಯ ಭಕ್ತಿ ಗೀತೆಯನ್ನು ಹಾಡಿದರು.
ಗೌರವ ಪ್ರಧಾನ ಕಾರ್ಯದರ್ಶಿ ಸರಿತಾ ಸುರೇಶ್ ನಾಯಕ್ ಎಲ್ಲರನ್ನು ಸ್ವಾಗತಿಸಿ ಕಾರ್ಯಕ್ರಮವನ್ನು ನಿರ್ವಹಿಸಿದರು. ಸಂಘದ ಮಾಜಿ ಪದಾಧಿಕಾರಿಗಳನ್ನು ಈ ಸಂದರ್ಭದಲ್ಲಿ ಗೌರವಿಸಲಾಯತು.
ಜೊತೆ ಕೋಶಾಧಿಕಾರಿ ಸುಜಾತ ಶೆಟ್ಟಿಯವರು ಕೊನೇಗೆ ಧನ್ಯವಾದ ಸಮರ್ಪಿಸಿದರು.
=====

ಪ್ರಶಸ್ತ್ಥಿಯನ್ನು ಸ್ವೀಕರಿಸಿದ ಲಕ್ಷ್ಮೀನಾರಾಯಣ ಹೊಸಬೆಟ್ಟು ಅವರ ನುಡಿ.
ಈ ಶುಭ ದಿನದಂದು ನನ್ನನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸಿದ್ದು ನನ್ನ ತಂದೆಯವರು ಮಾಡಿದ ಪುಣ್ಯದ ಕೆಲಸದಿಂದ ಸಾದ್ಯವಾಗಿದೆ. ನನ್ನ ಗುರುಗಳಿಗೆ ಇದನ್ನು ನಾನು ಸಮರ್ಪಿಸುತ್ತಿರುವೆನು. ನಾವಡರು ನನ್ನ ದೂರದ ಸಂಮಂಧಿಕರು. ಅವರ ದತ್ತಿನಿಧಿ ನನಗೆ ಸಿಕ್ಕಿದ್ದು ಸಂತೋಷ ತಂದಿದೆ. ಯಕ್ಷಗಾನವು ಒಂದು ಆರಾಧನ ಕಲೆಯಾಗಿದ್ದು, ಇದನ್ನು ಗಂಡುಗಲೆ ಎಂದು ಕರೆದರೂ ಮಹಿಳೆಯರು ಮತ್ತು ಮಕ್ಕಳು ಯಕ್ಷಗಾನದಲ್ಲಿ ಬಾಗವಹಿಸುತ್ತಿರುವುದು ಅಭಿನಂದನೀಯ.