
ಮಹಾರಾಷ್ಟ್ರ ರಾಜ್ಯ ಶಿಕ್ಷಣ ಮಂಡಳಿಯ ವತಿಯಿಂದ 2023-2024ರ ಶೈಕ್ಷಣಿಕ ಸಾಲಿನ ಎಸ್. ಎಸ್. ಸಿ ಬೋರ್ಡ ಪರೀಕ್ಷೆಯಲ್ಲಿ ಮುಂಬಯಿ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಒಂದಾದ ಬಿಲ್ಲವರ ಅಸೋಷಿಯೇಶನ್ ನಡೆಸಿಕೊಂಡು ಬರುತ್ತಿರುವ ಗುರು ನಾರಾಯಣ ರಾತ್ರಿ ಪ್ರೌಢ ಶಾಲೆಗೆ ಶೇ 100 ಫಲಿತಾಂಶ ದೊರಕಿದೆ. ಈ ಶಾಲೆಯಲ್ಲಿ ಹತ್ತನೇ ವರ್ಗದಲ್ಲಿ ಎಲ್ಲರೂ ತೇರ್ಗಡೆಯಾಗಿದ್ದು ಶಾಲೆಗೆ ಶೇ 100 ಫಲಿತಾಂಶ ತರುವಲ್ಲಿ ಯಶಸ್ವಿಯಾಗಿದ್ದಾರೆ.
ಶಾಲೆಯ ವಿದ್ಯಾರ್ಥಿನಿಯಾದ ಮೀನಾಕ್ಷಿ ಹೇಮಾನಾಥ ಪೂಜಾರಿ ಶೇ 82 ಅಂಕಗಳನ್ನು ಪಡೆದು ಮುಂಬೈ ಕನ್ನಡ ಮಾಧ್ಯಮದ ರಾತ್ರಿ ಪ್ರೌಢ ಶಾಲೆಗಳಲ್ಲಿಯೇ ಪ್ರಥಮ ಸ್ಥಾನ ಪಡೆದು ಶಾಲೆಗೆ ಕೀರ್ತಿ ತಂದಿದ್ದಾಳೆ. ವಿದ್ಯಾರ್ಥಿನಿಯರಾದ ಸರಸ್ವತಿ ಹನುಮಂತ ಕಾಂಬಳೆ ಶೇ 67 ಅಂಕಗಳನ್ನು ಗಳಿಸಿ ದ್ವಿತೀಯ ಸ್ಥಾನ ಮತ್ತು ವಿದ್ಯಾರ್ಥಿ ಸಂದೀಪ ಸೋಮಶೇಖರ ಶೇ 61.80 ಅಂಕಗಳನ್ನು ಪಡೆದು ತೃತೀಯ ಸ್ಥಾನ ಪಡೆದಿದ್ದಾರೆ.
ಉತ್ತೀರ್ಣರಾದ ಎಲ್ಲಾ ವಿದ್ಯಾರ್ಥಿಗಳಿಗೆ ಸಹಕರಿಸಿದ ಪಾಲಕರಿಗೆ ಹಾಗೂ ಮಾರ್ಗದರ್ಶನ ನೀಡಿದ ಮುಖ್ಯಾಧ್ಯಾಪಕ ಮಲ್ಲಿಕಾರ್ಜುನ ಬಡಿಗೇರ ಮತ್ತು ಸಹಕರಿಸಿದ ಶಿಕ್ಷಕರ ವೃಂದದವರಿಗೆ ಮಾತೃಸಂಸ್ಥೆ ಬಿಲ್ಲವರ ಅಸೋಶಿಯೇಶನ್ ಇದರ ಅಧ್ಯಕ್ಷ ಶ್ರೀ ಹರೀಶ ಜಿ.ಅಮೀನ,ಗೌರವ ಪ್ರದಾನ ಕಾರ್ಯದರ್ಶಿ ಶ್ರೀ ಹರೀಶ. ಜಿ.ಸಾಲಿಯಾನ್, ಶಿಕ್ಷಣ ಸಮಿತಿಯ ಕಾರ್ಯಾಧ್ಯಕ್ಷ ಶ್ರೀ ಜಯ ವಿ. ಪೂಜಾರಿ, ಮಾರ್ಗದರ್ಶಕರಾದ ಬನ್ನಂಜೆ ರವೀಂದ್ರ ಅಮೀನ್ ಮತ್ತು ಸರ್ವ ಪದಾಧಿಕಾರಿಗಳು ಅಭಿನಂದನೆಗಳು ಸಲ್ಲಿಸಿದ್ದಾರೆ.
ಶಾಲೆಯಲ್ಲಿ 8 ರಿಂದ 10ನೇ ವರ್ಗದವರೆಗೂ ಕಲಿಯುವ ಮಕ್ಕಳಿಗೆ ಉಚಿತವಾಗಿ ಶಿಕ್ಷಣ ನೀಡಲಾಗುತ್ತಿದೆ. ಶೈಕ್ಷಣಿಕ ವರ್ಷ 2024-2025 ರಲ್ಲಿ ಹೊಸದಾಗಿ ಪ್ರವೇಶ ಪಡೆಯಲು ಇಚ್ಛಿಸುವ ವಿದ್ಯಾರ್ಥಿಗಳಿಗೆ ಸಂಪೂರ್ಣವಾಗಿ ಕಲಿಕಾ ಉಪಕರಣ, ಬಸ್ಸು ಪಾಸ್, ಸಮವಸ್ತ್ರ ಒದಗಿಸಿ ಕೊಡಲಾಗುವುದು ಎಂದು ಬಿಲ್ಲವರ ಅಸೋಷಿಯೇಶನ್ ಇದರ ಗೌರವ ಪ್ರದಾನ ಕಾರ್ಯದರ್ಶಿ ಹರೀಶ. ಜಿ. ಸಾಲಿಯಾನ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.