
ಚಿತ್ರ, ವರದಿ.. ಉಮೇಶ್ ಕೆ. ಅಂಚನ್.
ಮುಂಬಯಿ, ಮಾ. 4: ಮೀರಾರೋಡ್ ಪೂರ್ವದ ಸಿಲ್ವರ್ ಪಾರ್ಕ್ ಶ್ರೀ ದುರ್ಗಾ ಭಜನ್ ಮಂಡಳಿಯ 18ನೇ ವಾರ್ಷಿಕ ಮಹಾಪೂಜೆಯು ಫೆ. 2ರಂದು ವಿವಿಧ ಧಾರ್ಮಿಕ ಪೂಜೆಯೊಂದಿಗೆ ದಿನಪೂರ್ತಿ ಮೀರಾರೋಡ್ ಭಾರತಿ ಪಾರ್ಕ್ ನಲ್ಲಿರುವ ಬಾಲಾಜಿ ಇಂಟರ್ನ್ಯಾಷನಲ್ ಹೋಟೇಲಿನ ಸಭಾಗ್ರಹದಲ್ಲಿ ನಡೆಯಿತು.

ಮಂಡಳದ ಪದಾಧಿಕಾರಿಗಳು, ಸದಸ್ಯರು ಹಾಗೂ ಪರಿಸರದ ರಾಜಕೀಯ ನೇತಾರೆ ರಂಜನಾ ಕತಾವಟೆ ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಆರಂಭದಲ್ಲಿ ಶ್ರೀ ಸತ್ಯನಾರಾಯಣ ಮಹಾಪೂಜೆ, ಶ್ರೀಲಕ್ಷ್ಮೀ ಕುಂಕುಮಾರ್ಚನಾ ಪೂಜೆ ಹಾಗೂ ಬಿಲ್ಲವರ ಅಸೋಸಿಯೇಷನ್ ಮೀರಾರೋಡ್ ಸ್ಥಳೀಯ ಸಮಿತಿಯ ಸದಸ್ಯರಿಂದ ಭಜನಾ ಕಾರ್ಯಕ್ರಮ ನಡೆಯಿತು.

ಮದ್ಯಾಹ್ನ ಜಯ ಅಮೀನ್ ರವರಿಂದ ಕಳಸ ಪ್ರತಿಷ್ಠೆ ನಡೆದು ಮೀರಾರೋಡ್ ಓಂಕಾರ್ ಭಜನಾ ಮಂಡಳಿಯವರಿಂದ ಯಕ್ಷಗಾನ ತಾಳಮದ್ದಳೆ ರೂಪದಲ್ಲಿ ಶನಿಗ್ರಂಥ ಪಾರಾಯಣ ನಡೆಯಿತು. ರೋಶನಿ ಮತ್ತು ರಾಕೇಶ್ ದಾಸ್ ದಂಪತಿಗಳು ಪೂಜಾ ಕಾರ್ಯಗಳಲ್ಲಿ ಉಪಸ್ಥಿತರಿದ್ದರು. ಮಹಿಳಾ ವಿಭಾಗದ ವತಿಯಿಂದ ಹಳದಿಕುಂಕುಮ,ಭಜನೆ, ಬಾಲಕೃಷ್ಣ ಭಜನಾ ಮಂಡಳಿ ಭಾಯಿಂದರ್, ಬಿಲ್ಲವರ ಅಸೋಸಿಯೇಷನ್ ಮೀರಾರೋಡ್ ಸ್ಥಳೀಯ ಕಚೇರಿಯ ಹಾಗೂ ಲಕ್ಷ್ಮೀನಾರಾಯಣ ಭಜನಾ ಮಂಡಳಿಯ ಮಕ್ಕಳಿಂದ ಕುಣಿತ ಭಜನೆ ನಡೆಯಿತು. ಕೊನೆಯಲ್ಲಿ ಮಹಾಮಂಗಳಾರತಿ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.

ಕಾರ್ಯಕ್ರಮಕ್ಕೆ ಆಗಮಿಸಿ ಯಶಸ್ಸಿಗೆ ಸಹಕರಿಸಿದ್ದ ಸರ್ವರಿಗೂ ಮಂಡಳಿಯ ಅದ್ಯಕ್ಷ ರಾಮ. ಕೆ. ಪೂಜಾರಿ ಕೃತಜ್ಞತೆ ಸಲ್ಲಿಸಿದರು.
ಗೌರವಾದ್ಯಕ್ಷ ಶ್ಯಾಮ್ ಸಿ ಅಮೀನ್, ಕಾರ್ಯದರ್ಶಿ ಸುಜಯ ಎ. ಶೆಟ್ಟಿ, ಕೋಶಾಧಿಕಾರಿ ಜನಾರ್ಧನ್ ಎಸ್. ಆಚಾರ್ಯ, ಉಪಾದ್ಯಕ್ಷ ಕೇಶವ ಶೆಟ್ಟಿ, ಜೊತೆ ಕಾರ್ಯದರ್ಶಿ ಪ್ರವೀಣಾ ಅಂಚನ್, ಜೊತೆ ಕೋಶಾಧಿಕಾರಿ ಪಾಂಡು ಶೆಟ್ಟಿ, ಅರ್ಚಕ ನಾರಾಯಣ ಅಂಚನ್, ಭುವಾಜಿ ಸುಧೀರ್ ಶೆಟ್ಟಿ ಹಾಗೂ ಸಲಹೆಗಾರರಾದ ಕೆ. ವಿ. ಮಹಾಬಲ್ ಮತ್ತು ಗುಣಪಾಲ್ ಉಡುಪಿ, ಮಹಿಳಾ ವಿಭಾಗ ಹಾಗೂ ಸದಸ್ಯರು ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ್ದರು.
