
—–
ಉಡುಪಿ ಜಿಲ್ಲೆಯ ಕಾಪು ನಗರಕ್ಕೆ ತನ್ನದೇ ಅದ ಇತಿಹಾಸವಿದೆ. ಕಾಪು ನಿವಾಸಿಗರಿಗೆ ಲಕ್ಷ್ಮೀ ಜನಾರ್ದನ ದೇವಸ್ಥಾನ ಪ್ರಮುಖವಾದರೆ, ಇತ್ತೀಚೆಗೆ ಅದ್ದೂರಿಯಾಗಿ ಜೀರ್ಣೋದ್ಧಾರಗೊಂಡು ಲಕ್ಷಾಂತರ ಭಕ್ತರನ್ನು ದೇಶ, ವಿದೇಶಗಳಿಂದ ಆಕರ್ಷಿಸಿ ಭಕ್ತರ ಭಕ್ತಿಯ ಕ್ಷೇತ್ರವಾಗಿ ಕಾಪು ಹೊಸ ಮಾರಿಗುಡಿ ಮೆರೆಯುತ್ತಿದೆ.
ಅದೇ ರೀತಿ ಪ್ರವಾಸಿಗರಿಗೆ ಕಾಪು ದೀಪ ಸ್ತಂಭ ಮತ್ತು ಬೀಚ್ ಗಾಗಿಯೂ ಕಾಪು ಪ್ರಸಿದ್ದಿಯನ್ನು ಪಡೆದಿದೆ. ಅಭಿವೃದ್ಧಿಯ ಪಥದತ್ತ ಸಾಗುತ್ತಿರುವ ಕಾಪು ನಗರವನ್ನು ಸರಕಾರ ತಾಲೂಕು ಎಂದು ಘೋಷಿಸಿದೆ. ಇಂತಹ ಪುರಾಣ ಪ್ರಸಿದ್ಧ ಸ್ಥಳವಾಗಿದೆ ಕಾಪು.

ಕರಾವಳಿಯ ಜಾತೀಯ ಸಂಘಟನೆಗಳಲ್ಲಿ ಅಗ್ರ ಪಂಕ್ತಿಯಲ್ಲಿರುವ ಬಂಟರ ಸಂಘ ಮಂಬಯಿ ಇದರ ಜತೆ ಕೋಶಾಧಿಕಾರಿ, ನಾಲಾಸೋಪರ ತುಳು ಕೂಟ ಫೌಂಡೇಶನ್ ಇದರ ಅಧ್ಯಕ್ಷ, ವಸಾಯಿ – ವಿರಾರ್ ಪರಿಸರದ ಖ್ಯಾತ ಸಮಾಜ ಸೇವಕ ಇನ್ನಂಜೆ ಶಶಿಧರ ಶೆಟ್ಟಿ ದಂಪತಿಯ ಮುಂದಾಳುತ್ವದಲ್ಲಿ ಇದೀಗ ಕಾಪುವಿನ ಹೃದಯ ಭಾಗದ ರಾಷ್ಟ್ರೀಯ ಹೆದ್ದಾರಿ 66 ರ ಹಾಗೂ ಹೊಸ ಮಾರಿಗುಡಿಯ ಸಮೀಪದಲ್ಲಿ ಕಾಪುವಿನಲ್ಲಿ ಪ್ರಥಮ ಬಾರಿ ತಿರುಪತಿ ನಿವಾಸಿ ಶ್ರೀ ಶ್ರೀನಿವಾಸ ದೇವರ ಅತೀ ಪ್ರೀತಿಯ ಪೂಜೆಯೆನಿಸಿರುವ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವವು ನೂತನವಾಗಿ ನಿರ್ಮಾಣಗೊಂಡ ಸೃಷ್ಟಿ ರೆಸಿಡೆನ್ಸಿಯ ಸಭಾಗೃಹದಲ್ಲಿ ದಿನಾಂಕ 2-5-2025 ರ ಶುಕ್ರವಾರದಂದು ನೆರವೇರಲಿದೆ.
ಅಂದು ಬೆಳಿಗ್ಗೆ 6 ಘಂಟೆಯಿಂದ ತಿರುಮಲ ತಿರುಪತಿ ದೇವಸ್ಥಾನ ಇದರ ಅರ್ಚಕರಾದ ಡಾ. ಎನ್ ತನುಜಾ ವಿಷ್ಣುವರ್ಧನ್ ಇವರ ಮಾರ್ಗದರ್ಶನದಲ್ಲಿ, ಹೊಸ ಮಾರಿಗುಡಿ ದೇವಸ್ಥಾನದ ಅರ್ಚಕರಾದ ಕಲ್ಯಾಲು ಶ್ರೀನಿವಾಸ ತಂತ್ರಿ ಇವರ ಉಪಸ್ಥಿತಿಯಲ್ಲಿ, ಕೊಯ್ಯೂರು ಬ್ರಹ್ಮಶ್ರೀ ನಂದಕುಮಾರ ತಂತ್ರಿ ಇವರ ನೇತೃತ್ವದಲ್ಲಿ ವಿಶ್ವ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ, ಮುಂಬಯಿ ,ಸಾಯಿ ಪ್ಯಾಲೇಸ್ ಹೋಟೆಲ್ ಸಂಸ್ಥಾಪಕ, ಸಾಯಿ ರಾಧಾ ಗ್ರೂಪ್ ಕಂಪೆನಿಯ ಮ್ಯಾನೇಜಿಂಗ್ ಡೈರೆಕ್ಟರ್ ರವಿ ಶೆಟ್ಟಿ, ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ, ಮಾಜಿ ಮಂತ್ರಿ ವಿಜಯಕುಮಾರ್ ಸೊರಕೆ, ವಿಶ್ವ ಬಂಟರ ಸಂಘಗಳ ಒಕ್ಕೂಟದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಜನತಾದಳ ಜಿಲ್ಲಾ ಅಧ್ಯಕ್ಷ ಯೋಗೆಶ್ ವಿ. ಶೆಟ್ಟಿ ಮತ್ತಿತರ ಗಣ್ಯರ ಉಪಸ್ಥಿತಿಯಲ್ಲಿ ಇತಿಹಾಸ ಪ್ರಸಿದ್ಧ ಕಾಪುವಿನಲ್ಲಿ ಪ್ರಥಮ ಬಾರಿ ಕಲಿಯುಗದ ಶ್ರೇಷ್ಠ ಪೂಜೆಯಾದ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ ವಿಜ್ರಂಭಣೆಯಿಂದ ಜರಗಲಿದೆ.
ಏನಿದು ಶ್ರೀನಿವಾಸ ಕಲ್ಯಾಣಂ?
ಶ್ರೀನಿವಾಸ ಕಲ್ಯಾಣಂ ಭಗವಾನ್ ಶ್ರೀ ಮಹಾವಿಷ್ಣುವಿನ (ಭಗವಾನ್ ಶ್ರೀನಿವಾಸ ಅಥವಾ ಬಾಲಾಜಿ ಎಂದೂ ಕರೆಯಲ್ಪಡುವ) ಮತ್ತು ಪದ್ಮಾವತಿ ದೇವಿಯ ಅವತಾರವಾದ ಭಗವಾನ್ ಶ್ರೀ ವೆಂಕಟೇಶ್ವರನ ದೈವಿಕ ವಿವಾಹವು ಹಿಂದೂ ಸಂಪ್ರದಾಯದಲ್ಲಿ ಅಪಾರ ಮಹತ್ವವನ್ನು ಹೊಂದಿದೆ. ಇದು ದೈವಿಕ ಪ್ರೀತಿ ಮತ್ತು ಬದ್ಧತೆಯ ಸಂಕೇತವಾಗಿದೆ. ಮದುವೆಯು ದೈವಿಕ ದಂಪತಿಗಳ ನಡುವಿನ ಶಾಶ್ವತ ಬಂಧ ಮತ್ತು ಪ್ರೀತಿಯನ್ನು ಈ ಕಲ್ಯಾಣೋತ್ಸವ ಪ್ರತಿನಿಧಿಸುತ್ತದೆ.

ಈ ಕಲ್ಯಾಣವು ಭಗವಾನ್ ಶ್ರೀ ವೆಂಕಟೇಶ್ವರ ಮತ್ತು ಪದ್ಮಾವತಿ ದೇವಿಯ ಪೌರಾಣಿಕ ವಿವಾಹವನ್ನು ಪುನರಾರಂಭಿಸುತ್ತದೆ, ಭಕ್ತರ ನಂಬಿಕೆ ಮತ್ತು ಭಕ್ತಿಯನ್ನು ಬಲಪಡಿಸುತ್ತದೆ.
“ಕಲ್ಯಾಣವು ಮಾನವ ಜೀವನದ ಅಂತಿಮ ಗುರಿಯನ್ನು ಪ್ರತಿನಿಧಿಸುವ ಅಂತಿಮ ವಾಸ್ತವದೊಂದಿಗೆ (ಪರಮಾತ್ಮ) ವೈಯಕ್ತಿಕ ಸ್ವಯಂ (ಜೀವಾತ್ಮ) ಸಮ್ಮಿಲನವನ್ನು ಸಂಕೇತಿಸುತ್ತದೆ. ಇದನ್ನು ಸಾಮಾನ್ಯವಾಗಿ ಮಂಗಳಕರ ಸಮಯದಲ್ಲಿ ನಡೆಸಲಾಗುತ್ತದೆ ಮತ್ತು ಪವಿತ್ರ ವ್ರತಗಳು (ಸಂಕಲ್ಪಂ) ಮತ್ತು ಆಚರಣೆಗಳನ್ನು ಒಳಗೊಂಡಿರುತ್ತದೆ, ಇದು ಕಲ್ಯಾಣ ಮಹೋತ್ಸವದ ಆಯೋಜಕರು ಮತ್ತು ಅವರ ಕುಟುಂಬಕ್ಕೆ ಮಂಗಳಕರ ಯೋಜನೆಗಳನ್ನು ಆಶೀರ್ವದಿಸುತ್ತದೆ.

ವೈಶಾಖ ಶುದ್ಧ ದಶಮಿಯಂದು ಶ್ರೀಶ್ರೀನಿವಾಸ ದೇವರು ಶ್ರೀಪದ್ಮಾವತಿ ದೇವಿಯ ಪಾಣಿಗ್ರಹಣ ಮಾಡಿದ ಪುಣ್ಯ ಕಾಲ.
ಶ್ರೀಪದ್ಮಾವತಿ ದೇವಿಯನ್ನು ಪಾಣಿಗ್ರಹಣ ಮಾಡಿದ ಶ್ರೀನಿವಾಸ ದೇವರು ತಾನು ಸರ್ವತ್ರ ವ್ಯಾಪ್ತನಾಗಿದ್ದರು ಲೋಕ ಶಿಕ್ಷಣ ಕ್ಕಾಗಿ ಅಗಸ್ತ್ಯ ಮಹರ್ಷಿಗಳ ಆಶ್ರಮದಲ್ಲಿ ಆರು ತಿಂಗಳುಗಳ ಕಾಲ ತಂಗಿ,ಅವರಿಗೆ ಅನುಗ್ರಹಿಸಿದರು.
ಆರು ತಿಂಗಳ ನಂತರ ಪರ್ವತ ಏರಿ ಬಂದ ಆದಿದಂಪತಿಗಳಿಗೆ ದೇವಶಿಲ್ಪಿಯಾದ ವಿಶ್ವಕರ್ಮನಿಂದ ನಿರ್ಮಿಸಿದ ರಥದಲ್ಲಿ ಕುಳ್ಳಿರಿಸಿಕೊಂಡು ಶ್ರೀಬ್ರಹ್ಮ ದೇವರು ಹತ್ತು ದಿನಗಳ ಕಾಲ ಮೆರವಣಿಗೆ ಯನ್ನು ಮಾಡಿದರು.
ಆಶ್ವೀಜ ಶುದ್ಧ ದಶಮಿಯಂದು ಬ್ರಹ್ಮೋತ್ಸವ ನಡೆಯುವುದು.
ಸಾಧ್ಯ ವಾದರೆ ಇವೆರಡು ಮಾಸದಲ್ಲಿ ಅಂದರೆ ವೈಶಾಖ ಮತ್ತು ಆಶ್ವೀಜ ಮಾಸದಲ್ಲಿ ವೆಂಕಟಪರ್ವತಕ್ಕೆ ಹೋಗಿ ಆ ಪರಬ್ರಹ್ಮ ನಾದ ಶ್ರೀನಿವಾಸದೇವರ ದರ್ಶನ ಮಾಡಬೇಕು.
ಕಲಿಯುಗದಲ್ಲಿ ಈ ಮಂಗಳಮಯ ಹಾಗು ಪುಣ್ಯಕರವಾದ ಈ ಚರಿತ್ರೆಯನ್ನು ಭಕ್ತಿ ಶ್ರದ್ಧೆಯಿಂದ ಕೇಳಿದರೆ,ಹೇಳಿದರೆ,ಓದಿದರೆ ಎಲ್ಲಾ ದುಃಖಗಳು ಪರಿಹಾರವಾಗುವವು…
ಲೌಕಿಕದ ಎಲ್ಲಾ ಅಪೇಕ್ಷೆ ಗಳನ್ನು ಸ್ವಾಮಿ ನೆರವೇರಿಸುವರು ಎಂದಿದೆ ಶಾಸ್ತ್ರ.
ಶ್ರೀನಿವಾಸ ಕಲ್ಯಾಣವನ್ನು ಗತಕಾಲದ ಕರ್ಮದಿಂದ ಮಾನವರನ್ನು ವಿಮೋಚನೆಗೊಳಿಸಲು, ಸಮೃದ್ಧಿ, ಅದೃಷ್ಟ ಸಂತೋಷ ಮತ್ತು ಮೋಕ್ಷವನ್ನು ನೀಡಲು ಭಕ್ತಜನರು ಅನುಸರಿಸುತ್ತಾ ಬಂದಿದ್ದಾರೆ. ಇದು ಜೀವನದಲ್ಲಿ ಅಡೆತಡೆಗಳು ಮತ್ತು ಸವಾಲುಗಳನ್ನು ಬಾರದಂತೆ ವಿಘ್ನಗಳನ್ನು ಅಳಿಸಿಹಾಕುತ್ತದೆ ಮತ್ತು ಆಧ್ಯಾತ್ಮಿಕ ಬೆಳವಣಿಗೆಯ ಆತ್ಮಾವಲೋಕನವನ್ನು ಸುಗಮಗೊಳಿಸುತ್ತದೆ ಎಂದು ಹೇಳಲಾಗುತ್ತದೆ.
“ಶ್ರೀನಿವಾಸ ಕಲ್ಯಾಣ” ಇದರ ಕಥೆಯು ಭವಿಷ್ಯೋತ್ತರ ಪುರಾಣ, ಸ್ಕಂಧ ಪುರಾಣ, ಆದಿತ್ಯ ಪುರಾಣಗಳಲ್ಲಿ ನಮಗೆ ಲಭ್ಯವಿದೆ. ಶ್ರೀನಿವಾಸ ಕಲ್ಯಾಣವನ್ನು ಪ್ರತಿವರ್ಷ ಎರಡು ಸಾರಿ ನಡೆಸುವ ಸಂಪ್ರದಾಯವಿದೆ – ವೈಶಾಖ ಶುದ್ಧ ದಶಮಿ ಮತ್ತು ಆಶ್ವೀಜ ಶುದ್ಧ ದಶಮಿಯಂದು.
ವೈಶಾಖ ಶುದ್ಧ ದಶಮಿ ಶ್ರೀನಿವಾಸ ಪದ್ಮಾವತಿ ದೇವಿಯನ್ನು ವಿವಾಹವಾದ ದಿನವಾಗಿದೆ, ಅಂತೆಯೇ ಆಶ್ವಯುಜ ಶುದ್ಧ ದಶಮಿ ತಿರುಪತಿಯಲ್ಲಿ ಬ್ರಹ್ಮೋತ್ಸವದ ದಿನವಾಗಿದೆ. ಶ್ರೀನಿವಾಸ ವೈಶಾಖದಲ್ಲಿ ಕಲ್ಯಾಣದ ನಂತರ ಆರು ತಿಂಗಳು ಬೆಟ್ಟವನ್ನು ಏರಬಾರದು ಎಂದು ಮಂಗಾಪುರದಲ್ಲಿ ಅಗಸ್ತ್ಯಾಶ್ರಮದಲ್ಲಿ ವಾಸ್ತವ್ಯ ಹೂಡಿದ್ದರು. ನಂತರ ಆಶ್ವಯುಜ ಮಾಸದಲ್ಲಿ ಹತ್ತು ದಿನಗಳ ಕಾಲ ಶ್ರೀನಿವಾಸ ಪದ್ಮಾವತಿ ದೇವಿಯೊಂದಿಗೆ ತಿರುಮಲಕ್ಕೆ ವಿಶ್ವಕರ್ಮನಿಂದ ಮಾಡಲ್ಪಟ್ಟ ವಿಶೇಷ ರಥದಲ್ಲಿ ಪ್ರಯಾಣಿಸಿದರು. ಅದರ ನಿಮಿತ್ತ ಹತ್ತು ದಿನಗಳ ಕಾಲ ತಿರುಪತಿಯಲ್ಲಿ ಬ್ರಹ್ಮೋತ್ಸವ ವನ್ನು ನಡೆಸುವ ವಾಡಿಕೆಯಿದೆ.

ಶೌನಕ ಸೂತಾಚಾರ್ಯರ ಸಂಭಾಷಣೆಯ ಮೂಲಕ ಶ್ರೀನಿವಾಸ ಕಲ್ಯಾಣದ ಕಥೆಯನ್ನು ಶ್ರೀ ವೇದವ್ಯಾಸರು ರಚಿಸಿದ್ದಾರೆ. ಶೌನಕರು ಶ್ರೀನಿವಾಸನ ಮಹಿಮೆ ಕೇಳಲು ಅಪೇಕ್ಷೆಯನ್ನು ಸೂತಾಚಾರ್ಯರಲ್ಲಿ ಭಿನ್ನವಿಸಲು, ಅವರು ತಾವು ವೇದವ್ಯಾಸರಿಂದ ಕೇಳಲ್ಪಟ್ಟ ಕಥಾಭಾಗವನ್ನು ಹೇಳಿದರು ಎಂದು ಧಾರ್ಮಿಕ ನಂಬಿಕೆ.
ಈ ರೀತಿ ಶ್ರೀನಿವಾಸ ಕಲ್ಯಾಣವು ನಂಬಿಕೆ ಮತ್ತು ಭಕ್ತಿಯನ್ನು ಬಲಪಡಿಸುವ ಭಗವಾನ್ ಶ್ರೀ ವೆಂಕಟೇಶ್ವರ ಮತ್ತು ಪದ್ಮಾವತಿಯ ಪೌರಾಣಿಕ ವಿವಾಹವನ್ನು ಮರು ರೂಪಿಸುತ್ತದೆ.
ಹಾಗೆ ನೋಡಿದರೆ ತಿರುಪತಿಯ ಶ್ರೀನಿವಾಸ..… ವೆಂಕಟರಮಣ ನಿತ್ಯವೂ ಕಲ್ಯಾಣ ಪ್ರಿಯ. ಈ ದಿನಗಳಲ್ಲಿ ಭಕ್ತರ ಅನುಕೂಲಕ್ಕಾಗಿ ಅವರ ಅಪೇಕ್ಷೆಯಂತೆ ಅವರ ಮನೆ ಬಾಗಿಲಿಗೆ ದೇವಸ್ಥಾನದ ಉತ್ಸವ ಮೂರ್ತಿಗಳನ್ನು ಕರೆತರುತ್ತಾರೆ. ಅವರ ಸಮ್ಮುಖದಲ್ಲೇ ಆಗಮೋಕ್ತ ಪ್ರಕಾರ ಶ್ರೀನಿವಾಸ ಕಲ್ಯಾಣವನ್ನು ನೆರವೇರಿಸಲಾಗುತ್ತಿದೆ. ಹಲವು ರಾಜ್ಯಗಳಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ ಅದ್ದೂರಿಯಾಗಿ ನಡೆದಿದೆ. ಮುಂಬಯಿಯಲ್ಲೂ ಕಲ್ಯಾಣೋತ್ಸವ ನಡೆದಿರುತ್ತದೆ.ಇದೀಗ ಮುಂಬಯಿಯವರಿಂದಲೇ ಕಾಪುವಿನಲ್ಲಿ ಕಲ್ಯಾಣೋತ್ಸವದ ಸಂಭ್ರಮ.
ಪ್ರತಿ ಕಲ್ಯಾಣ ಮಹೋತ್ಸವದಲ್ಲಿ ವಧೂವರರ ಅಂತರ್ಯಾಮಿಗಳಾದ ಶ್ರೀ ರಮಾನಾರಾಯಣರ ಸ್ಮರಣೆ ಅತ್ಯವಶ್ಯಕ. ಈ ಹಿನ್ನೆಲೆಯಲ್ಲೇ ಶ್ರೀನಿವಾಸ ಕಲ್ಯಾಣಕ್ಕೆ ವಿಶೇಷ ಮಹತ್ವ ಬಂದಿದೆ ಎನ್ನುತ್ತಾರೆ ಧಾರ್ಮಿಕ ಪುರೋಹಿತರು.
—–
ಹೀಗೆ ಭೂಲೋಕದಲ್ಲಿ ಶ್ರೀನಿವಾಸ ದೇವರ ಹಾಗೂ ಪದ್ಮಾವತಿ ದೇವಿಯ ಪೂಜೆಯನ್ನು ಶ್ರೀನಿವಾಸ ಕಲ್ಯಾಣೋತ್ಸವ ಎನ್ನುತ್ತಾರೆ. ಶ್ರೀನಿವಾಸ… ವೆಂಕಟೇಶ್ವರ ನಿತ್ಯವೂ ಕಲ್ಯಾಣ ಪ್ರಿಯ .ಇಂದಿನ ದಿನಗಳಲ್ಲಿ ಭಕ್ತರ ಅನುಕೂಲಕ್ಕಾಗಿ ಅವರ ಅಪೇಕ್ಷೆಯಂತೆ ದೇವರ ಉತ್ಸವ ಮೂರ್ತಿಯನ್ನು ಕರೆತಂದು ಅವರ ಸಮ್ಮುಖದಲ್ಲಿ ಅಗೊಮೋಕ್ತ ಪ್ರಕಾರ ಶ್ರೀನಿವಾಸ ಕಲ್ಯಾಣೋತ್ಸವವನ್ನು ನೆರವೇರಿಸಲಾಗುತ್ತದೆ. ಲೋಕ ಕಲ್ಯಾಣಾರ್ಥವಾಗಿ ಮಾಡುವ ಈ ಪೂಜೆಯನ್ನು ಮಾಡಿದರೆ ಅಥವಾ ಪೂಜೆಯಲ್ಲಿ ಪಾಲ್ಗೊಂಡರೆ ತಮ್ಮ ಕಷ್ಟಗಳು ಪರಿಹಾರವಾಗಿ ಸುಖ, ಸಮೃದ್ಧಿ, ಅದೃಷ್ಟ, ಜೀವನದ ಅಡೆ ತಡೆ ನಿವಾರಣೆಯಾಗಿ ಅಧ್ಯಾತ್ಮಿಕ ಬೆಳವಣಿಗೆಯ ಅತ್ಮಾವಲೋಕನವನ್ನು ಸುಗಮಗೊಳಿಸುತ್ತದೆ ಮೋಕ್ಷ ಲಭಿಸುತ್ತದೆ ಎಂಬ ಪ್ರತೀತಿ ಇದೆ. ಈ ಪೂಜೆಯಿಂದ ಸಮಸ್ತ ಕಾಪು ಜನರ ಅಶೋತ್ತರಗಳು ಪೂರ್ಣಗೊಳ್ಳಲಿ ಎಂಬ ಉದ್ದೇಶದಿಂದ ಶಶಿಧರ ಶೆಟ್ಟಿ ಇನ್ನಂಜೆ ದಂಪತಿ ಈ ಕಲ್ಯಾಣೋತ್ಸವವನ್ನು ಮಾಡಲು ತಿರ್ಮಾನಿಸಿರುವರು.
ಅಂತೆಯೇ ದಿನಾಂಕ- 02-05- 2025 ರ ಶುಕ್ರವಾರ ಕಲ್ಯಾಣೋತ್ಸವದ ಪೂಜಾ ವಿಧಿ- ವಿಧಾನ ಪ್ರಾರಂಭಗೊಳ್ಳಲಿದ್ದು ಬೆಳಿಗ್ಗೆ 6 ರಿಂದ- ಸುಪ್ರಭಾತಮ್, ಉಷಾಕಾಲ ಪೂಜೆ, ವಿಶ್ವ ಶೈನ ಆರಾಧನಮ್, ಗಣಹೋಮ, ಪುಣ್ಯಾಹ ವಾಚನ, ಪಂಚಾಮೃತ ಅಭಿಷೇಕ, ಕಲಶ ಆರಾಧನ, ಕಲಶ ಅಭಿಷೇಕ, ತೋಮಲ ಸೇವಾ, ಮಹಾನಿವೇದನಮ್, ಮಂಗಳಾರಧನಮ್, ಪ್ರಸಾದ ವಿತರಣೆ, ಬ್ರಾಹ್ಮಣ ಸುವಾಸಿನಿ ಆರಾಧನೆ,ಹಾಗೂ ಅನ್ನ ಸಂತರ್ಪಣೆ ನಡೆಯಲಿದೆ.
ಸಾಯಂಕಾಲ 4 ಘಂಟೆಗೆ ವೈಭವೊತ್ಸವ ದೇವರ ಮೆರವಣಿಗೆ, ವಿಶ್ವಕ್ಷೆನಾರಾಧನಮ್, ರಾಕಾಬಂಧನ ಪೂಜಾ, ಲಗ್ನಷ್ಟಾಕಮ್ ಪಠಣಮ್, ಕನ್ಯಾದಾನ, ಮಾಂಗಲ್ಯ ಪೂಜಾ, ಮಾಂಗಲ್ಯ ಧಾರಣಂ, ಅಕ್ಷತಾ ರೋಹಣಂ, ಮಹಾನಿವೇದನ, ದೀಪಾರಾಧನೆ. ಚಾಮರ ಪೂಜಾ, ಪ್ರಸನ್ನ ಪೂಜಾ, ಅಷ್ಟಾವದಾನ ಸೇವಾ, ಅನ್ನದಾನ, ಚತುರ್ವೇದ ಪಠಣ ಶಾಸ್ತ್ರ ಪುರಾಣ ಗದ್ಯ ಅಷ್ಟಕ ಸಂಗೀತ, ಭರತ ನಾಟ್ಯ, ಯಕ್ಷಗಾನ, ವಾದ್ಯ ವಿಶೇಷ ಸನ್ನಿವೇದನ, ಕಲ್ಯಾಣೋತ್ಸವ ಪ್ರವಚನ, ಉತ್ತರ ಪೂಜಾ ಹಾಗೂ ಶಯಾನೋತ್ಸವ ನಡೆಯಲಿದೆ.
03-05-2025ರ ಶನಿವಾರ ಬೆಳಿಗ್ಗೆ 6 ಗಂಟೆಗೆ ಪ್ರಸನ್ನ ಪೂಜಾ- ಮಂತ್ರಾಕ್ಷತೆ ನಡೆಯಲಿದೆ.
ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ ಪೂಜೆಯಲ್ಲಿ ಹೆಚ್ಭಿನ ಸಂಖ್ಯೆಯ ಭಕ್ತರು ಪಾಲ್ಗೊಂಡು ಶ್ರೀ ಶ್ರೀನಿವಾಸ, ಪದ್ಮಾವತಿ ಮತ್ತು ಭೂದೇವಿಯ ಅನುಗ್ರಹಕ್ಕೆ ಪಾತ್ರರಾಗಿ ಪ್ರಸಾದ ಸ್ವೀಕರಿಸಿ ಪುನೀತರಾಗ ಬೇಕೆಂದು ಶಶಿಧರ ಕೆ. ಶೆಟ್ಟಿ, ಶಶಿಕಲಾ ಎಸ್. ಶೆಟ್ಟಿ, ಶೃಷ್ಟಿ ಎಸ್. ಶೆಟ್ಟಿ, ಶಾರದಾ ಕೆ. ಶೆಟ್ಟಿ ಕುಟುಂಬಸ್ಥರು ಕುಂಜಿರಬೆಟ್ಟು ಮಂಡೇಡಿ ಇನ್ನಂಜೆ ಇವರು ವಿನಂತಿಸಿದ್ದಾರೆ.
—–
ರವಿ.ಬಿ.ಅಂಚನ್ ಪಡುಬಿದ್ರಿ