“ಕಾರ್ಲೆ ಶ್ರೀಗುತ್ತ್ಯಮ್ಮ ಭಗವತೀ ಕ್ಷೇತ್ರ” ಕ್ಷೇತ್ರವು ಹಲವಾರು ವೈಶಿಷ್ಟ್ಯತೆ ಚಾರಿತ್ರಿಕ ಹಿನ್ನೆಲೆ ದೃಷ್ಟಾಂತಗಳನ್ನು ಹೊಂದಿರುವ ಕ್ಷೇತ್ರವಾಗಿದೆ. ಮಾಣಿಕ್ಯ ನೌಕೆಯನ್ನೇರಿ ಬಂದ ಶ್ರೀ ಭಗವತಿಗಳು ಕಾರ್ಲೆ ಸಮೀಪದ ಕುದುರೆ ಕಲ್ಲು ಎಂಬಲ್ಲಿ ನಿಂತು ಮೂಡು ಭಾಗಕ್ಕೆ ದೃಷ್ಟಿ ಹಾಯಿಸಿದಾಗ ಪ್ರತಿಷ್ಠಿತ ಬಂಟ ಮನೆತನದ ಪೆರಿಮುಗೇರು ಗುತ್ತು ತರವಾಡಿಗೆ ಬಂದು ಶ್ರೀ ಭಗವತಿಗಳು ಅಂದರೆ ಪಶ್ಚಿಮ ಭಾಗದಿಂದ ದ್ವಾರವನ್ನು ಸಂಕಲ್ಪಿಸಿ ಪ್ರವೇಶ ಮಾಡಿ ಅಲ್ಲಿಯ ಅಧಿದೇವತೆಯಾದ ಶ್ರೀ ಧೂಮಾವತಿ ದೈವ ವನ್ನು ಭೇಟಿಯಾಗಿ ಆ ಪ್ರದೇಶದಲ್ಲಿ ತಾವು ನೆಲೆಗೊಳ್ಳುವ ಅಭಿಲಾಷೆಯನ್ನು ವ್ಯಕ್ತಪಡಿಸಿದಾಗ ತರವಾಡಿಗೆ ಅಭಿಮುಖವಾಗಿರುವ ಎತ್ತರ ಪ್ರದೇಶದಲ್ಲಿ ನೆಲೆಗೊಳ್ಳಲು ದೇವಿ ಒಪ್ಪಿಗೆ ನೀಡುತ್ತಾಳೆ. ಹಿಂದೆ ಪೂರ್ವಾಭಿಮುಖವಾಗಿ ಇದ್ದಂತಹ ದೈವಸ್ಥಾನವು ಶ್ರೀಭಗವತಿಗಳ ಇಚ್ಛೆಯಂತೆ ರಾತ್ರಿ ಬೆಳಗಾಗುವಾಗ ಪಶ್ಚಿಮಾಭಿಮುಖವಾಯಿತು ಎಂದು ಶ್ರೀಭಗವತಿಗಳ ನುಡಿಗಟ್ಟಿನಿಂದಲೂ ಚರಿತ್ರೆಯಿಂದಲೂ ತಿಳಿದು ಬರುತ್ತದೆ.(ಕಾಶಿ ರಾಮೇಶ್ವರಂ ಫೋನುಂಡೆ ಪೋಕುಮ್ ಬರಿ ನೊಂದೆ ಬರಿತ್ತು ಕಾಣುವನು ಪೆರಿಮುಗೇರು ಗುತ್ತು ತಾಯೆಲೆ ತರವಾಡುಂ, ಕಾರ್ಲ್ ಮೇಪ್ಪರಂ ಮೇಲುಟು ಕನ್ನೆರಾಯಿಮ್ ದೀಪತ್ತೋಡು ದೀಪಂ ಕಂಡ್ ನೆಲ ವರ್ಪಿಕ್ಕಾನಿ ತೋರ್ಪಡ ಅಂದರೆ (ತಾನೋಮ್ )ಪಡಿನ್ಯಾರಕ್ಕ್ ತಿರಿ ಚ್ಚೆ ಪರಮಾರ್ತಮ್.) ಇಂತಹ ಸತ್ಯದ ಮಣ್ಣಲ್ಲಿ 1950 ರಿಂದ 1959ರ ಮಧ್ಯೆ ನಡೆದ ಆ ದೈವ ಸಂಕಲ್ಪದ ಘಟನೆ ಸತ್ಯದ ಕನ್ನಡಿಗೆ ಹಿಡಿದ ಸಾಕ್ಷಿಯಾಗಿದೆ. ಕಾರ್ಲೆ ಸ್ಥಾನದ ಪ್ರಮುಖ ವ್ಯಕ್ತಿಗಳಲ್ಲಿ ಒಬ್ಬರಾದ ಹಿರಿಯ ದಿವಂಗತ ಕುಞಪ್ಪ ಹಾಗೂ ದಿವಂಗತ ಪೊನ್ನಮ್ಮ ದಂಪತಿಗಳ ದ್ವಿತೀಯ ಮಗನಾಗಿ ಜನಿಸಿದ 11 ವರ್ಷದ ಪುತ್ರ ಬಾಲಕೃಷ್ಣ ಎಂಬ ಬಾಲಕನಿಗೆ ಶ್ರೀ ವಿಷ್ಣುಮೂರ್ತಿ ದೈವದ ಆವೇಶವಾದದ್ದು ತಮ್ಮ ವಯಸ್ಸಿನ ಮಕ್ಕಳೊಂದಿಗೆ ಆಟವಾಡುತ್ತಿರುವಾಗಲೇ ದೈವ ಪ್ರೇರಣೆಯಿಂದ ಅದ್ಭುತವಾದ ಹಾವಭಾವ ಮುಖ ಗಾಂಭೀರ್ಯದಿಂದ ವರ್ತಿಸುತ್ತಿದ್ದ ಅವರು ಜನರ ಕೌತುಕಕ್ಕೆ ಕಾರಣವಾಗುತ್ತಿದ್ದರು. ಒಮ್ಮೆ ಕಾರ್ಲೆ ಸ್ಥಾನದಲ್ಲಿ ನಡೆಯಲಿರುವ ಯಾವುದೇ ಹೋಮ ಹವನಾದಿಗಳಿಗೆ ಬೇಕಾದ ಭತ್ತದ ಹುಟ್ಟಿನ ಬೂದಿ ಅಂದರೆ ಉಮಿಕರಿ ತಯಾರಿಸಲು ಹಿರಿಯ ರಲ್ಲಿರುವ ಸಮಾಜದ ವ್ಯಕ್ತಿ ಒಬ್ಬರ ಮನೆಯಲ್ಲಿ ಬೆಂಕಿ ಹಾಕಿದಾಗ ಆಕಸ್ಮಿಕವಾಗಿ ಬೆಂಕಿ ಮುಳಿ ಹುಲ್ಲಿನ ಇಡೀ ಮನೆಯನ್ನು ಆವರಿಸುತ್ತದೆ. ಊರಿನವರ ಅರ್ಥನಾದ ಮುಗಿಲು ಮುಟ್ಟುತ್ತದೆ ಈ ಸಮಯದಲ್ಲಿ ಬಾಲಕನಿಗೆ ಉಗ್ರ ರೂಪದಲ್ಲಿ ದೈವ ಕಂಪನವಾಗಿ ಆ ಬೆಂಕಿಗೆ ಹಾರಲು ದಾವಿಸುತ್ತಾನೆ. ಆಗ ಅಲ್ಲಿ ಸೇರಿದವರೆಲ್ಲರೂ ಭಯ ಭಕ್ತಿಯಿಂದ ಕೈಮುಗಿದು ಕಣ್ಣೀರಿನೊಂದಿಗೆ ಪ್ರಾರ್ಥಿಸಿ ಕೊಂಡರು ಎಂಬುದನ್ನು ಈಗಲೂ ಹಿರಿಯರು ನೆನಪಿಸಿಕೊಳ್ಳುತ್ತಾರೆ. ಇದೆಲ್ಲ ಕಾರಣಗಳಿಂದ ಅವರ ಶಾಲಾ ಜೀವನವು 5ನೇ ತರಗತಿಯಲ್ಲಿ ಮೊಟೊಕು ಗೊಳಿಸುವ ಪರಿಸ್ಥಿತಿ ಎದುರಾಯಿತು. ಮತೀಯ ಸಂಘರ್ಷಗಳು ನಡೆಯುತ್ತಿದ್ದ ಕಾಲವದು ಸಿರಿಯ ಶ್ರೀ ಬಬ್ಬರ್ಯ ದೈವಸ್ಥಾನದ ವಾರ್ಷಿಕ ಕೋಲ ಉತ್ಸವಕ್ಕೆ ಮುಟ್ಟ ತರವಾಡಿನಿಂದ ಬಂಡಾರ ಬರುತ್ತಿರುವಾಗ ಶಿರಿಯ ಸಮೀಪದಲ್ಲಿ ಕೆಲವು ಅನ್ಯಮತಿಯರು ತಡೆದರು. ಪರಿಸ್ಥಿತಿ ವಿಕೋಪಕ್ಕೆ ಹೋಗುವ ಸಂದರ್ಭದಲ್ಲಿ ಬಾಲಕನಿಗೆ ದೈವ ದರ್ಶನವಾಗಿ ಶ್ರೀಗಳ ಭಂಡಾರ ಆಯುಧವನ್ನು ಹಿಡಿದ ವ್ಯಕ್ತಿಯ ಕೈಯನ್ನು ಹಿಡಿದು ಭಯಂಕರವಾದ ದೈವ ಓಂಕಾರದೊಂದಿಗೆ ಮುಂದುವರಿದಾಗ ಸೇರಿದ ಅನ್ಯಮತಿಯರು ದಿಗ್ಭ್ರಮೆಗೊಂಡು ಹಿಂದೆ ಸರಿದರು. ದಿನೇ ದಿನೇ ಬಾಲಕನ ಪ್ರತಿ ವರ್ತನೆಯಲ್ಲಿ ದೈವ ವಿಶೇಷತೆ ಕಾಣುತೊಡಗಿದಾಗ ಅವರ ಮಾತಾ ಪಿತೃಗಳು ಅವರನ್ನು ದೈವಸೇವೆಗೆ ಸಮರ್ಪಿಸುವುದಾಗಿ ತೀರ್ಮಾನಿಸಿ ಕ್ಷೇತ್ರದ ಸಭೆಯವರಲ್ಲಿ ತಿಳಿಸಿದಾಗ ಕಾರ್ಲೆ ಶ್ರೀ ಭಗವತಿ ಕ್ಷೇತ್ರದಲ್ಲಿ ಪ್ರಶ್ನೆ ಚಿಂತನೆಯನ್ನು ಸಭೆಯ ಅನುಮತಿ ಮೇರೆಗೆ ಇಡಲಾಯಿತು. ಪೂರ್ವಕಾಲದಲ್ಲಿ ಶ್ರೀ ಭಗವತಿ ಪರಿವಾರ ದೈವಗಳಿಗೆ ಸ್ಥಾನ ನೀಡುವಾಗ ವಿಷ್ಣುಮೂರ್ತಿಗೆ ಸ್ಥಾನ ಕೊಡಲಿಲ್ಲ ಕ್ಷೇತ್ರದ ಉತ್ಸವದ ಸಂದರ್ಭದಲ್ಲಿ ಕಾರ್ಲೆ ಕ್ಷೇತ್ರಕ್ಕೆ ಬಂದಂತಹ ವಿಷ್ಣುಮೂರ್ತಿಯ (ವೇಲಕ್ಕಾಡಿನ ಬೆಳ್ಚಪ್ಪಾಡ ಮಾನ್ಯಚ್ಚ ) ಎಂಬವರಿಗೆ ದೈವ ಆವೇಶವಾಗಿ ನುಡಿ ಕೊಟ್ಟರು. ಲೋಕನಾಥ ಶ್ರೀ ವಿಷ್ಣುಮೂರ್ತಿ ನಾನಾದರೆ ಈ ಕಾರ್ಲೆಪುರದ ಮಣ್ಣಲ್ಲಿ ಸ್ಥಾನ ಪಡೆಯುವೆ ಎಂದು. ದೈವದ ನುಡಿ ಸತ್ಯವಾಯಿತು. ಹಲವಾರು ವಿಶೇಷ ದೃಷ್ಟಾಂತಗಳು ಗೋಚರಿಸಿದಾಗ 1946ರಲ್ಲಿ ಮುಳಿಹುಲ್ಲಿನಿಂದ ನಿರ್ಮಿಸಿದ ಶ್ರೀ ಭಗವತಿಗಳ ಕ್ಷೇತ್ರವನ್ನು ಪುನರ್ ನಿರ್ಮಾಣ ಮಾಡಿ ಹಂಚು ಹಾಕಿ ನಿರ್ಮಿಸುವಾಗ ವಿಷ್ಣುಮೂರ್ತಿಗೂ ಕ್ಷೇತ್ರ ನಿರ್ಮಿಸಿ ಸಾನಿಧ್ಯ ಕೊಡಲಾಯಿತು. ಪ್ರಶ್ನೆ ಚಿಂತನೆಯಲ್ಲಿ ಆ ಸತ್ಯ ಉದಿಸಿ ಬಂತು.ಜ್ಯೋತಿಷ್ಯರು ಶ್ರೀ ವಿಷ್ಣುಮೂರ್ತಿ ದೈವದ ಬಗ್ಗೆ ಮಹತ್ತರವಾದ ದೈವ ಚಿಂತನೆ ನಡೆಸುವ ಸಮಯದಲ್ಲಿ ದಾಟಲು ಅತಿ ಕಷ್ಟಕರವಾದ ಶಿರಿಯ ಹೊಳೆಯ ರೈಲ್ವೆ ಸೇತುವೆಯನ್ನು ಅನಾಯಾಸವಾಗಿ ದಾಟಿ ಶರವೇಗದಿಂದ ಕಾರ್ಯ ಸ್ಥಾನಕ್ಕೆ ಆಗಮಿಸಿ ಪ್ರಶ್ನೆ ರಾಶಿಯ ಮುಂಭಾಗದಲ್ಲಿ ನಿರರ್ಗಳವಾದ ವಾಕ್ ನುಡಿಗಳಿಂದ ಅಭಯವನ್ನಿತ್ತು ಸೇರಿದ ಸಭೆಯವರನ್ನು ನಿಬ್ಬೆರಗಾಗಿಸಿದರು. 1959ನೇ ವರ್ಷ ಕಾರ್ಲೆ ಸ್ಥಾನದ ಚರಿತ್ರೆಯಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡಬೇಕಾದ ಕಾಲವದು. ಬಾಲಕೃಷ್ಣನೆಂಬ 11 ವರ್ಷದ ಪುಟ್ಟ ಬಾಲಕನಿಗೆ ದೈವತ್ತದ ಪಟ್ಟವನ್ನು ಕಟ್ಟಿ ಶ್ರೀ ವಿಷ್ಣುಮೂರ್ತಿ ದೈವದ ನರ್ತಕರಾಗಿ 11 ಕ್ಷೇತ್ರದ ಆಚಾರ ಸ್ಥಾನಿಕರ ಸಭೆಯವರ ಸಮಕ್ಷಮದಲ್ಲಿ ಆಚಾರ ಸ್ಥಾನ ನೀಡಿದ ಸುದಿನ. ಉಡುಪು ಆಭರಣಗಳಿಂದ ಅಲಂಕೃತರಾಗಿ ವಾದ್ಯ ಘೋಷಗಳ ನಡುವೆ ದೈವ ದರ್ಶನದಿಂದ ಮಂದಸ್ಮಿತರಾಗಿ ಆಯುಧ ಧನುರ್ದಾರಿಯಾಗಿ ಕ್ಷೇತ್ರದಿಂದ ಹೊರ ಬರುವ ಅಂದರೆ (ಪೊರಂಬಾಡ್) ಸಂದರ್ಭದಲ್ಲಿ ಸೇರಿದಂತಹ ಸಾವಿರಾರು ಸಂಖ್ಯೆಯ ಭಕ್ತರ,ಮಾತೆಯರ ಕಣ್ಣುಗಳಲ್ಲಿ ಆನಂದದ ಅಶ್ರುಬಿಂದು ತುಂಬಿ ಬಂದದ್ದು ಅಪ್ಪಟ ಸತ್ಯ. ಅದೇ ನಡಾವಳಿಯ ಸಂದರ್ಭದಲ್ಲಿ ಮುಂಬೈ ಹದಿನಾರು ಸಮಸ್ತರ ವತಿಯಿಂದ ಎರಡು ಶ್ರೀ ಭಗವತಿಗಳ ಬಿಂಬಕ್ಕೆ 30 ಪವನಿನ ಸತ್ತಿಗೆ (ಸ್ವರ್ಣ ಕೊಡೆ ) ಮಾಡಿ ಸಮರ್ಪಿಸಲಾಯಿತು. ನಂತರ ಬಾಲಕೃಷ್ಣ ಬೆಳ್ಚಪ್ಪಾಡರನ್ನು ಚೆರಿಯೆ ಬೆಳ್ಚಪ್ಪಾಡ ಅಂದರೆ ಸಣ್ಣ ಬೆಳ್ಚಪ್ಪಾಡ ಎಂದೂ, ಕೃಷ್ಣ ಬೆಳ್ಚಪ್ಪಾಡ ಎಂದು ನಾಮಕರಣ ಮಾಡಿ ಸಂಬೋಧಿಸಲಾಯಿತು. ಬಾಲ್ಯಾವಸ್ಥೆ ಕಳೆದು ಯವ್ವನ ಅವಸ್ಥೆಗೆ ತಲುಪಿದಾಗ ಅವರ ಶಿರದ ಕೂದಲಿನಲ್ಲಿ ಉದ್ದನೆಯ ಜಟೆ ಬೆಳೆಯಿತು. ಗುರು ಉಪದೇಶದಿಂದ ದೈವ ಕಾರ್ಯಕ್ಕೆ ತಮ್ಮನ್ನು ತಾವೇ ಅರ್ಪಿಸಿಕೊಂಡ ಶ್ರೀಯುತರು ದೈವಿಕ ವಿಚಾರದಲ್ಲಿ ಕರ್ಮವೃತಸ್ಥರಾಗಿ ತಮ್ಮ ಸೇವಾ ಕಾರ್ಯವನ್ನು ನಿರ್ವಹಿಸಿದರು. ಉತ್ಸವ ಕಾಲದಲ್ಲಿ ಅವರು ನಡೆಸುತ್ತಿರುವ ದೈವ ನೃತ್ಯದ ಹೆಜ್ಜೆಗಳು,ಆಯುಧ ಬಿಲ್ಲುಗಳನ್ನು ತಾಕಚಕ್ಕತೆಯಿಂದ ತಿರುಗಿಸುವ ಸೊಬಗು ನಿರರ್ಗಳವಾದ ನುಡಿಗಳಿಂದ ಭಕ್ತವೃಂದಕ್ಕೆ ನೀಡುತ್ತಿರುವ ಅಭಯಗಳು, ವರ್ಣಿಸುವುದೇ ಅಸದಳ ಅಸಾಧ್ಯ. ಕಾರ್ಲೆ ಶ್ರೀ ಭಗವತಿ ಕ್ಷೇತ್ರದಲ್ಲಿ ಅವರ ನಂತರದ ಎಲ್ಲಾ ದರ್ಶನ ಪಾತ್ರಿಗಳಿಗೆ ಕರ್ಮಿಗಳಿಗೆ (ಪೂಜಾರಿ) ಕಾರ್ನವರಿಗೆ ಮಾರ್ಗದರ್ಶನ ನೀಡುತ್ತಾ ತನ್ನ ಜೀವಿತಕಾಲದಲ್ಲಿ ಕಾರ್ಲೆ ಶ್ರೀ ಭಗವತಿ ಕ್ಷೇತ್ರಕ್ಕೆ ಸಮಾಜದಿಂದಲೂ ಅನ್ಯ ಸಮಾಜದಿಂದಲೂ ಕೀರ್ತಿ ಪ್ರಶಂಸೆಗಳನ್ನು ಗಳಿಸಿಕೊಟ್ಟ ಕೀರ್ತಿ ಶ್ರೀಯುತರಿಗಿದೆ. ಮುಂದಿನ ಕೆಲವೇ ವರ್ಷಗಳಲ್ಲಿ ವೈವಾಹಿಕ ಜೀವನಕ್ಕೆ ಕಾಲಿರಿಸಿದರು. ಪತ್ನಿ ಶಾಂತ ಕೃಷ್ಣಬೆಳ್ಚಪ್ಪಾಡ ಶಿರಿಯ. (ಮತ್ತು ಇಬ್ಬರು ಹೆಣ್ಣು ಮಕ್ಕಳಾದ ಶೈಲಜಾ ಶ್ರೀಕಾಂತ್ ಐಲ್, ಮತ್ತು ಶ್ವೇತಾ ಕೃಪೇಶ್ ಐಲ್ ) ಶ್ರೀಯುತರ ವೈವಾಹಿಕ ಜೀವನ ಕೇವಲ ಆರು ವರ್ಷಕ್ಕೆ ಕೊನೆಗೊಂಡಿತು. ಜಗದ್ಗುರು ಶ್ರೀ ಶ್ರೀ ಶ್ರೀ ಆದಿಗುರು ಶಂಕರಾಚಾರ್ಯರಂತೆ ದೈವತ್ವಕ್ಕೇರಿ ತಮ್ಮ 36ನೇ ವಯಸ್ಸಿನಲ್ಲಿ 25 ವರ್ಷಗಳ ಕಾಲ ದೈವ ಕಾರ್ಯ ಮಾಡಿದ ಕೃಷ್ಣ ಬೆಳ್ಚಪ್ಪಾಡ ಯಾನೆ, [ಚೆರಿಯೆ ಬೆಳ್ಚಪ್ಪಾಡರು] 1983 ನೇ ಜುಲಾಯಿ ತಿಂಗಳ 20ರಂದು ಕ್ಷೀರಸಾಗರ ಶಯನ ಶ್ರೀ ಮಹಾವಿಷ್ಣುವಿನ ಪಾದರವಿಂದಗಳಲ್ಲಿ ಪರಮಾಕ್ಯವಾದರು. ಅವರ ದೇಹಾಂತ್ಯವಾಗಿ 42 ವರ್ಷ ಕಳೆದರೂ ಇನ್ನೂ ಅವರ ಸ್ಥಾನಕ್ಕೆ ಶ್ರೀ ವಿಷ್ಣುಮೂರ್ತಿ ದೈವದ ದೈವ ಪಾತ್ರಿ ಆಗದಿರುವುದು ವಿಷಾಧನೀಯ. ಅವರು ದೇಹ ತೀತರಾದರು, ಕುಟುಂಬದ ಸದಸ್ಯರ ತಮ್ಮ ತಂಗಿಯಂದಿರ ಸಮಾಜ ಬಾಂಧವರ ಮನೆ ಮನದಲ್ಲಿ ನೆನಪಿನ ಅಂಗಳದಲ್ಲಿ ಅಚ್ಚಳಿಯದೆ ಉಳಿದಿರುವ ಒಂದು ಇತಿಹಾಸವನ್ನು ಬರೆದಿಟ್ಟ ನಮ್ಮ ಮೋಯ ಜನಾಂಗದ ಅಗಲಿದ ದಿವ್ಯ ಚೇತನ ಎಂದು ಹೇಳಬಹುದೇ? *[ವಿಷಯ ಸಂಗ್ರಹಣೆ :::::::: {ಶ್ರೀ ರಾಮುಞ ಕಾರ್ಲೆ, ಮತ್ತು ದಿವಂಗತ ಸದಾಶಿವ ಕಾರ್ಣವ ಕಾರ್ಲೆ.]




