ಮೀರಾ-ಭಾಯಂದರ್:
ತುಳು ಕನ್ನಡ ವೆಲ್ಫೇರ್ ಅಸೋಸಿಯೇಷನ್ ಮೀರಾ-ಭಾಯಂದರ್ ವತಿಯಿಂದ ಆಯೋಜಿಸಲಾದ ಬಿ.ಎಸ್. ಕುರ್ಕಾಲ್ ದತ್ತಿನಿಧಿ ಪ್ರಶಸ್ತಿ ಪ್ರಧಾನ ಸಮಾರಂಭ ಆಗಸ್ಟ್ 17ರಂದು ಮೀರಾ-ರೋಡ್ನ ಸುರಭಿ ಹೋಟೆಲ್ ಸಭಾಂಗಣದಲ್ಲಿ ಜರಗಿತು.
ಈ ವರ್ಷ ಪ್ರಶಸ್ತಿಯನ್ನು ಮುಂಬೈಯ ಹೆಸರಾಂತ ಕವಯತ್ರಿ, ಲೇಖಕಿ ಡಾ. ಜಿ.ಪಿ. ಕುಸುಮ ಅವರಿಗೆ ಪ್ರಧಾನಿಸಲಾಯಿತು.
ಪ್ರಶಸ್ತಿ ಸ್ವೀಕರಿಸಿದ ಡಾ. ಕುಸುಮ ತಮ್ಮ ಅಭಿಪ್ರಾಯ ಹಂಚಿಕೊಂಡು ಹೇಳಿದರು:
“ಸಾಹಿತ್ಯ ಕ್ಷೇತ್ರಕ್ಕೆ ಬಿ.ಎಸ್. ಕುರ್ಕಾಲ್ ಅವರ ಕೊಡುಗೆ ಅಪಾರ. ಮುಂಬೈಯಲ್ಲಿ ದಶಕಗಳ ಕಾಲ ವಾಸವಿದ್ದು ಕನ್ನಡ ಸಾಹಿತ್ಯಕ್ಕಾಗಿ ಅವರು ತೊಡಗಿಕೊಂಡಿದ್ದರು. ತೆರೆಮರೆಯ ಬರಹಗಾರರನ್ನು ಪ್ರೋತ್ಸಾಹಿಸಲು ಸಂಸ್ಥೆ ಸ್ಥಾಪಿಸಿ, ಪ್ರಶಸ್ತಿಗಳ ಮೂಲಕ ಅವರ ಬರವಣಿಗೆಗೆ ಉತ್ತೇಜನ ನೀಡಿದರು. ಅವರ ಹೆಸರಿನ ಈ ಪ್ರಶಸ್ತಿಯನ್ನು ಸ್ವೀಕರಿಸುವುದು ನನಗೆ ಅತ್ಯಂತ ಸಂತೋಷ ತಂದಿದೆ.”
ಮುಖ್ಯ ಅತಿಥಿ ಉದ್ಯಮಿ ಹಾಗೂ ಸಮಾಜಸೇವಕ ಆನಂದ್ ಶೆಟ್ಟಿ ಮಾತನಾಡಿ ಹೇಳಿದರು:
“ತುಳು ಕನ್ನಡ ವೆಲ್ಫೇರ್ ಅಸೋಸಿಯೇಷನ್ ದತ್ತಿನಿಧಿ ಸಂಸ್ಮರಣಾ ಪ್ರಶಸ್ತಿ ಸದಾ ಅರ್ಹರನ್ನು ಗುರುತಿಸುತ್ತ ಬಂದಿದೆ. ಬಿ.ಎಸ್. ಕುರ್ಕಾಲ್ ಸಮಾಜದ ಮಾದರಿ ವ್ಯಕ್ತಿ. ಅವರ ಹೆಸರಿನ ಈ ವರ್ಷದ ಪ್ರಶಸ್ತಿ ಮುಂಬೈಯ ಹಿರಿಯ ಕವಯತ್ರಿ ಡಾ. ಕುಸುಮ ಅವರಿಗೆ ಸಂದಿರುವುದು ನಿಜಕ್ಕೂ ಶ್ಲಾಘನೀಯ.”
ಅತಿಥಿಯಾಗಿ ಹಾಜರಾದ ರಾಜಕೀಯ ನಾಯಕರೂ ಉದ್ಯಮಿಯೂ ಆಗಿರುವ ಪೆಲತ್ತೂರು ಉದಯ ಶೆಟ್ಟಿ ಹೇಳಿದರು:
“ಇಂದಿನ ದಿನಗಳಲ್ಲಿ ಊರಲ್ಲಿ ಸಾಹಿತ್ಯಾಸಕ್ತಿ ಕುಗ್ಗಿದರೂ, ಮುಂಬೈ ಕನ್ನಡಿಗರು ನಡೆಸುತ್ತಿರುವ ಸಾಹಿತ್ಯ ಕಾರ್ಯಕ್ರಮಗಳು ಹಾಗೂ ದತ್ತಿನಿಧಿ ಪ್ರಶಸ್ತಿಗಳು ಪ್ರಶಂಸನೀಯ. ಇಂತಹ ಸಂಸ್ಥೆಗಳಿರುವ ತನಕ ಕನ್ನಡಕ್ಕೆ ಅಳಿವಿಲ್ಲ.”
ಗುರುದೇವ ಸೇವಾ ಬಳಗ ಕಾರ್ಯದರ್ಶಿ ಹಾಗೂ ಬಿ.ಎಸ್. ಕುರ್ಕಾಲ್ ಅವರ ಶಿಷ್ಯ ಪೇಟೆಮನೆ ಪ್ರಕಾಶ್ ಶೆಟ್ಟಿ ಅಭಿಪ್ರಾಯ ವ್ಯಕ್ತಪಡಿಸಿ,
“ಪ್ರತಿ ವರ್ಷವೂ ಈ ಪ್ರಶಸ್ತಿ ಪ್ರದಾನವಾಗುತ್ತಿರುವುದು ಕುರ್ಕಾಲ್ ಅವರಿಗೆ ಸಲ್ಲುವ ಸ್ಮರಣಾ ಗೌರವ. ಇಂಥ ವಿಶಿಷ್ಟ ಕಾರ್ಯವನ್ನು ಅಸೋಸಿಯೇಷನ್ ನಿರಂತರವಾಗಿ ಕೈಗೊಂಡಿರುವುದು ಸಂತೋಷದ ಸಂಗತಿ. ಈ ವರ್ಷದ ಪ್ರಶಸ್ತಿ ಡಾ. ಕುಸುಮ ಅವರಿಗೆ ಸಂದಿರುವುದು ಹೆಮ್ಮೆಯ ವಿಷಯ.” ಎಂದರು.
ವೇದಿಕೆಯಲ್ಲಿ ಭಾರತ್ ಬ್ಯಾಂಕ್ ನಿರ್ದೇಶಕ ನರೇಶ್ ಪೂಜಾರಿ, ಸಂಘದ ಅಧ್ಯಕ್ಷ ಹರೀಶ್ ವಿ. ಸುವರ್ಣ (ಕಣಂಜಾರು), ಮಹಿಳಾ ಕಾರ್ಯಾಧ್ಯಕ್ಷೆ ಆಶಾ ಪಿ. ಶೆಟ್ಟಿ ಉಪಸ್ಥಿತರಿದ್ದರು.
ಸಂಘದ ಕಾರ್ಯದರ್ಶಿ ಅಶೋಕ್ ವಳದೂರು ಬಿ.ಎಸ್. ಕುರ್ಕಾಲ್ ಅವರ ಜೀವನ ಪರಿಚಯದ ಜೊತೆಗೆ ಪ್ರಶಸ್ತಿ ಪುರಸ್ಕೃತೆಯಾದ ಡಾ. ಕುಸುಮ ಅವರ ಪರಿಚಯವನ್ನು ಮಾಡಿಕೊಟ್ಟರು.
ಕಾರ್ಯಕ್ರಮವನ್ನು ಹಿರಿಯ ರಂಗನಟ ಗುಣಪಾಲ್ ಉಡುಪಿ ಸುಸೂತ್ರವಾಗಿ ನಿರೂಪಿಸಿದರು.
ಇದೇ ಸಂದರ್ಭದಲ್ಲಿ ಸಂಘದ ಸ್ಥಾಪಕ ಅಧ್ಯಕ್ಷ ಮತ್ತು ಟ್ರಸ್ಟಿ ಎ.ಕೆ. ಹರೀಶ್, ಟ್ರಸ್ಟಿ ವಸಂತಿ ಶೆಟ್ಟಿ, ಗೌರವಾಧ್ಯಕ್ಷ ರಾಜೇಶ್ ಕುಂದರ್, ಉಪಾಧ್ಯಕ್ಷ ಉಮೇಶ್ ಬಾರ್ಕೂರು, ಕೋಶಾಧಿಕಾರಿ ಗೀತಾ ಶೆಟ್ಟಿ, ಸಹ ಕಾರ್ಯದರ್ಶಿ ಶೈಲ ಹೆಗ್ಡೆ, ಸಾಹಿತ್ಯ ಹಾಗೂ ಕಲಾ ವಿಭಾಗದ ಕಾರ್ಯಾಧ್ಯಕ್ಷೆ ಲೀಲಾ ಗಣೇಶ್ ಕಾರ್ಕಳ, ಕಾರ್ಯದರ್ಶಿ ಪೂರ್ಣಿಮಾ ಪೂಜಾರಿ ಮುಂತಾದವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
ಕಾರ್ಯಕ್ರಮದ ಅಂಗವಾಗಿ ಮುಂಬೈಯ ಸಾಹಿತಿಗಳಿಂದ ಪ್ರಚಲಿತ ವಿಷಯಗಳ ಕುರಿತಂತೆ ವಿಚಾರಗೋಷ್ಠಿ ಕೂಡ ನಡೆಯಿತು.




