ಸಂಘದ ಚಟುವಟಿಕೆಗಳನ್ನು ಉನ್ನತ ಮಟ್ಟಕ್ಕೇರಿಸುವಲ್ಲಿ ಸದಸ್ಯರೆಲ್ಲರ ಸಹಕಾರ ಅಗತ್ಯ – ಹರೀಶ್ ಮೈಂದನ್
ಮುಂಬಯಿ : ತುಳು ಸಂಘ ಬೋರಿವಲಿ ಈಗಾಗಲೇ ಹಲವಾರು ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಂಡು ಸಮಾಜ ಪರ ಕೆಲಸ ಮಾಡುವುದರೊಂದಿಗೆ ತುಳು ಭಾಷೆ ಹಾಗೂ ಸಂಸ್ಕೃತಿಯನ್ನು ಹೊರನಾಡಿನಲ್ಲಿ ಉಳಿಸಿ ಬೆಳೆಸುವ ಕಾರ್ಯವನ್ನು ನಿರಂತರವಾಗಿ ಮಾಡುತ್ತಿದೆ. ಈ ಬಗ್ಗೆ ಸಂಘದ ಕಾರ್ಯಕಾರಿ ಸಮಿತಿ, ಉಪಸಮಿತಿಗಳು ಹಾಗೂ ಸಂಘದ ಹಿರಿಯರ ಕಾರ್ಯ ಪ್ರಶಂಸನೀಯ. ಸಂಘದ ಚಟುವಟಿಕೆಗಳನ್ನು ಇನ್ನೂ ಉನ್ನತ ಮಟ್ಟಕ್ಕೇರಿಸಲು ಮಾತ್ರವಲ್ಲದೆ ನಮ್ಮ ಮುಂದಿನ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ಸಂಘದ ಎಲ್ಲಾ ಸದಸ್ಯರ ಸಹಕಾರ ಹಾಗೂ ಪ್ರೋತ್ಸಾಹದ ಅಗತ್ಯವಿದೆ ಎಂದು ತುಳು ಸಂಘ ಬೋರಿವಲಿಯ ಅಧ್ಯಕ್ಷರಾದ ಹರೀಶ್ ಮೈಂದನ್ ತಿಳಿಸಿದರು.
ಸೆ. 19ರಂದು ಬೋರಿವಲಿ ಪಶ್ಚಿಮ, ಯೋಗಿನಗರ ಹೌಸಿಂಗ್ ಸೊಸೈಟಿ ಹಾಲ್ನಲ್ಲಿ ನಡೆದ ಸಂಘದ ಸರ್ವ ಸದಸ್ಯರ 15ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.
ಪ್ರಧಾನ ಕಾರ್ಯದರ್ಶಿ ಕೃಷ್ಣರಾಜ್ ಸುವರ್ಣ ಸ್ವಾಗತಿಸಿ, ಹಿಂದಿನ ಸಭೆಯ ವರದಿಯನ್ನು ಮಂಡಿಸಿದರು. ಸಂಘದ ವಾರ್ಷಿಕ ಲೆಕ್ಕಪತ್ರವನ್ನು ಗೌರವ ಕೋಶಾಧಿಕಾರಿ ದಿವಾಕರ ಕರ್ಕೇರ ಅವರು ಸಭೆಯಲ್ಲಿ ಮಂಡಿಸಿದರು.
ಸಂಘದ ಮಾಜಿ ಅಧ್ಯಕ್ಷ ಕರುಣಾಕರ ಶೆಟ್ಟಿ ಅವರು ಮಾತನಾಡಿ, ಸಂಘದಲ್ಲಿ ಸದಸ್ಯರಿಗೆ ವೈದ್ಯಕೀಯ ನೆರವು ನೀಡಲು ಪ್ರತ್ಯೇಕ ಸಮಿತಿ ಹಾಗೂ ನಿಧಿ ರಚಿಸಲು ಸೂಚಿಸಿದರು, ಅದಕ್ಕೆ ತಮ್ಮ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದರು. ಸಂಘದ ಸ್ಥಾಪಕಾಧ್ಯಕ್ಷ ವಾಸು ಪುತ್ರನ್ ಮಾತನಾಡಿ, ಸಂಘದ ಆದಾಯದ ಕೆಲವು ಅಂಶವನ್ನು ಶಿಕ್ಷಣ ಮತ್ತು ವೈದ್ಯಕೀಯ ನೆರವಿಗೆ ಬಳಸಬೇಕು. ಸದಸ್ಯರಿಂದ ಸಹಾಯ ನಿಧಿಗೆ ದೇಣಿಗೆ ಸಂಗ್ರಹಿಸುವ ಮೂಲಕ ವೈದ್ಯಕೀಯ ಶಿಬಿರಗಳು ಮತ್ತು ರಕ್ತದಾನ ಶಿಬಿರಗಳನ್ನು ಆಯೋಜಿಸುವಂತೆ ಸಲಹೆ ನೀಡಿದರು.
ಶ್ರೀಮತಿ ಲಕ್ಷ್ಮೀ ದೇವಾಡಿಗ ಅವರು ಮನೆ ಮನೆಗೆ ತೆರಳಿ ಧನಸಂಗ್ರಹ ಮಾಡುವ ಬಗ್ಗೆ ಸಭೆಯಲ್ಲಿ ತಿಳಿಸಿದರು.
ಸಂಘದ ಮಾಜಿ ಅಧ್ಯಕ್ಷ ಪ್ರಕಾಶ್ ಶೆಟ್ಟಿ ಪೇಟೆಮನೆ ಮಾತನಾಡಿ, ಸಂಘದ ಕಾರ್ಯಚಟುವಟಿಕೆಗಳ ಬಗ್ಗೆ ಅಭಿನಂದನೆ ಸಲ್ಲಿಸಿ, ವೈದ್ಯಕೀಯ ತಪಾಸಣಾ ಶಿಬಿರವನ್ನು ಆಯೋಜಿಸುವಂತೆ ಪ್ರಸ್ತಾಪಿಸಿದರು.
ಸಂಘದ ಯುವ ವಿಭಾಗದ ಕಾರ್ಯಾಧ್ಯಕ್ಷ ನ್ಯಾ. ರಾಘವ ಎಂ. ಮಾತನಾಡಿ, ಯುವ ವಿಭಾಗದ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು. ತುಳು ಯುವ ಲೋಗೋ ಬಿಡುಗಡೆ ಬಗ್ಗೆ ತಿಳಿಸುತ್ತಾ, ಡಿಸೆಂಬರ್ನಲ್ಲಿ ಆಯೋಜಿಸಲಾಗಿದ್ದ ಮ್ಯಾರಥಾನ್ ಯಶಸ್ವಿಯಾಗಿ ನಡೆದ ಬಗ್ಗೆ ಮಾಹಿತಿ ನೀಡಿ ಮುಂದಿನ ದಿನಗಳ ಕಾರ್ಯಕ್ರಮಗಳ ಬಗ್ಗೆ ತಿಳಿಸಿದರು. ಮುಂದಿನ ಕ್ರಿಕೆಟ್ ಲೀಗ್ ಪಂದ್ಯದಲ್ಲಿ ಭಾಗವಹಿಸುವಂತೆ ಸದಸ್ಯರಿಗೆ ತಿಳಿಸಿದರು. ವೆಬ್ಸೈಟ್, ಫೇಸ್ಬುಕ್, ಇನ್ಸ್ಟಾಗ್ರಾಂಗೆ ಸಹಕರಿಸಿದ ಅನಿಲ್ ಶೆಟ್ಟಿಗೆ ಧನ್ಯವಾದ ವ್ಯಕ್ತಪಡಿಸಿದರು.
ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ರಜಿತ್ ಸುವರ್ಣ, ಜೊತೆ ಕಾರ್ಯದರ್ಶಿ ತಿಲೋತ್ತಮ ವೈದ್ಯ, ಜೊತೆ ಕೋಶಾಧಿಕಾರಿ ಟಿ. ವಿ. ಪೂಜಾರಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶೋಭಾ ಎಸ್. ಶೆಟ್ಟಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಶ್ರೀ ಕೃಷ್ಣರಾಜ್ ಸುವರ್ಣ ಧನ್ಯವಾದ ಸಮರ್ಪಿಸಿದರು.




