
ಚಿತ್ರ ವರದಿ: ಉಮೇಶ್ ಕೆ. ಅಂಚನ್
ಮುಂಬಯಿ, ಸೆಪ್ಟೆಂಬರ್ 25: ಫೋರ್ಟ್ ಪ್ರದೇಶದ ಹೆಸರಾಂತ ಧಾರ್ಮಿಕ ಸಂಸ್ಥೆಯಾದ ಶ್ರೀ ಸಾಯಿಬಾಬಾ ಪೂಜಾ ಸಮಿತಿ, ಕಾಲಘೋಡ ಇದರ ವತಿಯಿಂದ ನಡೆಯುತ್ತಿರುವ ಹೊಲಿಗೆ ತರಬೇತಿ ತರಗತಿಯಲ್ಲಿ ತರಬೇತಿ ಪಡೆದ ವಿದ್ಯಾರ್ಥಿನಿಯರಿಗೆ ಪ್ರಮಾಣಪತ್ರ ವಿತರಣಾ ಕಾರ್ಯಕ್ರಮವನ್ನು ಸೆಪ್ಟೆಂಬರ್ 21ರಂದು ಬೊರಿವಿಲಿ ಚುಕುವಾಡಿಯ ಭೂಷಣ್ ಪಾರ್ಕ್ ವ್ಯೂ ಕಟ್ಟಡದಲ್ಲಿರುವ ಸಂಸ್ಥೆಯ ಕಚೇರಿಯಲ್ಲಿ ಆಯೋಜಿಸಲಾಗಿತ್ತು.

ಸಾಯಿ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಸಮಿತಿಯ ಅಧ್ಯಕ್ಷರಾದ ಮಾಧವ ಎಸ್. ಶೆಟ್ಟಿಯವರು ಮಾತನಾಡಿ, ಧಾರ್ಮಿಕ ಸೇವೆಯ ಜೊತೆಗೆ ಸಮಿತಿಯು ಶೈಕ್ಷಣಿಕ, ಆರ್ಥಿಕ ಹಾಗೂ ವೈದ್ಯಕೀಯ ಸೇವೆಗಳಿಗೆ ವರ್ಷದಲ್ಲಿ ಹಲವಾರು ಲಕ್ಷ ರೂಪಾಯಿಗಳನ್ನು ಖರ್ಚು ಮಾಡುತ್ತಿದೆ. ಬಹಳಷ್ಟು ದಾನಿಗಳು ಸಮಿತಿಯ ಸಮಾಜ ಸೇವೆಗೆ ಸಹಕರಿಸುತ್ತಿದ್ದಾರೆ. ಆರ್ಥಿಕವಾಗಿ ಹಿಂದುಳಿದ ಅಬಲೆಯರಿಗಾಗಿ ಕಳೆದ 16 ವರ್ಷಗಳಿಂದ ಉಚಿತ ಹೊಲಿಗೆ ತರಬೇತಿ ತರಗತಿಯನ್ನು ನಡೆಸಲಾಗುತ್ತಿದೆ. ಇದರ ಪ್ರಯೋಜನವನ್ನು ನೂರಾರು ಸ್ತ್ರೀಯರು ಪಡೆದಿದ್ದಾರೆ. ಇಂತಹ ಸಮಾಜಮುಖಿ ಕಾರ್ಯಕ್ರಮಗಳಿಗೆ ಸಾಯಿಭಕ್ತರು ಸಮಿತಿಗೆ ಕೈಜೋಡಿಸಿ ಸಹಕರಿಸಬೇಕೆಂದು ಅವರು ವಿನಂತಿಸಿದರು.
ಅಧ್ಯಕ್ಷರು ಮತ್ತು ಪದಾಧಿಕಾರಿಗಳು ವಿದ್ಯಾರ್ಥಿನಿಯರಿಗೆ ಪ್ರಮಾಣಪತ್ರಗಳನ್ನು ವಿತರಿಸಿದರು ಹಾಗೂ ಪ್ರತಿ ವರ್ಷ ಉತ್ತಮ ವಿದ್ಯಾರ್ಥಿನಿಗೆ ಕೊಡಮಾಡುವ ಹೊಲಿಗೆ ಯಂತ್ರವನ್ನು ಉಷಾ ಜಾದವ್ ಅವರಿಗೆ ನೀಡಿ ಗೌರವಿಸಿದರು. ದ್ವಿತೀಯ ಬಹುಮಾನವನ್ನು ಸುಜಾತಾ ಆರ್. ಕಟ್ಕುರಿ ಹಾಗೂ ತೃತೀಯ ಬಹುಮಾನವನ್ನು ಶೋಭಾ ಎಮ್. ವಾಲಾ ಅವರಿಗೆ ನೀಡಲಾಯಿತು. ಈ ಸಂದರ್ಭದಲ್ಲಿ ಹೊಲಿಗೆ ತರಬೇತಿ ತರಗತಿಯ ಶಿಕ್ಷಕಿ ಪ್ರೇಮಲತಾ ಪ್ರಜಾಪತಿಯವರನ್ನು ಅಭಿನಂದಿಸಲಾಯಿತು.
ಜೊತೆ ಕಾರ್ಯದರ್ಶಿ ರಮೇಶ್ ಬಿ. ಶೆಟ್ಟಿ ಮಿಜಾರು ಸ್ವಾಗತಿಸಿದರು. ಗೌರವ ಕಾರ್ಯದರ್ಶಿ ಪ್ರೊ. ಕೇಶವ ಎಚ್. ಕರ್ಕೇರ ಅವರು ಸಮಿತಿಯ ಕಾರ್ಯವೈಖರಿಯ ಬಗ್ಗೆ ಮಾತನಾಡಿ, ಕಾರ್ಯಕ್ರಮವನ್ನು ನಿರೂಪಿಸಿದರು.
ಸಮಿತಿಯ ಉಪಾಧ್ಯಕ್ಷ ಜಯ ಎಸ್. ಶೆಟ್ಟಿ, ಕೋಶಾಧಿಕಾರಿ ರವೀಂದ್ರ ಡಿ. ಶೇಣವ, ಜೊತೆ ಕೋಶಾಧಿಕಾರಿ ಭಾಸ್ಕರ್ ಎಮ್. ಶೆಟ್ಟಿ, ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ ಸುಧಾಕರ್ ಎಮ್. ಶೆಟ್ಟಿ, ಸತೀಶ್ ಭಂಡಾರಿ, ಕೃಷ್ಣ ದೇವಾಡಿಗ, ಪ್ರಸಾದ್ ಶೆಟ್ಟಿ, ಪ್ರದೀಪ್ ಸುವರ್ಣ, ರವಿ ಎಸ್. ಶೆಟ್ಟಿ, ಅಬೂಬಕ್ಕರ್, ಹರ್ಷದ್ ಶೆಟ್ಟಿ, ಪಾರಿತೋಷ್ ಎನ್. ರೈ ಹಾಗೂ ಇತರ ಸದಸ್ಯರು ಉಪಸ್ಥಿತರಿದ್ದರು.
31ನೇ ವಾರ್ಷಿಕ ಮಹಾಸಭೆ
ನಂತರ, ಅಧ್ಯಕ್ಷ ಮಾಧವ ಎಸ್. ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಸಮಿತಿಯ 31ನೇ ವಾರ್ಷಿಕ ಮಹಾಸಭೆ ನಡೆಯಿತು. ಗೌರವ ಕಾರ್ಯದರ್ಶಿ ಪ್ರೊ. ಕೆ.ಎಚ್. ಕರ್ಕೇರ ಅವರು ವಾರ್ಷಿಕ ವರದಿಯನ್ನು ಓದಿದರು, ಕೋಶಾಧಿಕಾರಿ ರವೀಂದ್ರ ಡಿ. ಶೇಣವ ಅವರು ಲೆಕ್ಕಪತ್ರವನ್ನು ಮಂಡಿಸಿದರು. ಇವುಗಳನ್ನು ಸಭೆಯಲ್ಲಿ ಸರ್ವಾನುಮತದಿಂದ ಅಂಗೀಕರಿಸಲಾಯಿತು.
ಪ್ರಸ್ತುತ ವರ್ಷದ 55ನೇ ಸಾಯಿಬಾಬಾ ಮಹಾಪೂಜೆಯನ್ನು ಅಕ್ಟೋಬರ್ 21ರಂದು ಶ್ರೀ ಸತ್ಯನಾರಾಯಣ ಮಹಾಪೂಜೆಯೊಂದಿಗೆ ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಲಾಯಿತು.
ಗೌರವ ಕಾರ್ಯದರ್ಶಿ ಪ್ರೊ. ಕರ್ಕೇರ ಅವರು ಮಾತನಾಡಿ, ಮಹಾನಗರಪಾಲಿಕೆಯು ಸಾಯಿ ಮಂದಿರವನ್ನು ಕೆಡವಿದ ನಂತರ ಸಮಿತಿಯ ಆದಾಯ ಬಹಳ ಕಡಿಮೆಯಾಗಿದೆ. ಸದಸ್ಯರು ಅಥವಾ ಸಾಯಿಭಕ್ತರು ತಿಂಗಳಿಗೊಬ್ಬರಂತೆ ವಾರದ ಪೂಜೆಯ ಸೇವೆಯನ್ನು ನೀಡಿದಲ್ಲಿ ಸಮಿತಿಗೆ ಹೆಚ್ಚಿನ ಸಮಾಜ ಸೇವೆ ಮಾಡಲು ಅವಕಾಶ ಸಿಗಬಹುದು. ಅಲ್ಲದೆ, ಸಮಿತಿಯ ವೆಬ್ಸೈಟ್ ಅನ್ನು ಸಾಯಿಭಕ್ತರಿಗೆ ಮತ್ತು ದಾನಿಗಳಿಗೆ ಪರಿಚಯಿಸಬೇಕು ಎಂದರು. ಸದಸ್ಯರು ಕೆಲವೊಂದು ಸಲಹೆ ಸೂಚನೆಗಳನ್ನು ನೀಡಿದರು. ಧನ್ಯವಾದಗಳೊಂದಿಗೆ ಮಹಾಸಭೆಯು ಮುಕ್ತಾಯವಾಯಿತು.




