
ಕುಲಾಲ ಸಂಘ ಮುಂಬೈಯ ಚರ್ಚ್ಗೇಟ್ – ದಹಿಸರ್ ಸ್ಥಳೀಯ ಸಮಿತಿಯಿಂದ ಮಂಗಳೂರು ಕುಲಾಲ ಭವನದ ಉದ್ಘಾಟನಾ ಸಮಾರಂಭದ ಆಹ್ವಾನ ಪತ್ರಿಕೆ ವಿತರಣಾ ಕಾರ್ಯಕ್ರಮವು ಗೋರೇಗಾಂವ್ ಪೂರ್ವದ ಜಯಪ್ರಕಾಶ್ ನಗರದ ಮಾತೃ ಮಂದಿರದಲ್ಲಿ ನಡೆಯಿತು.
ಆಗಸ್ಟ್ 12ರಂದು ನಡೆದ ಈ ಕಾರ್ಯಕ್ರಮದಲ್ಲಿ, ಸಂಘದ ಅಧ್ಯಕ್ಷರಾದ ಶ್ರೀ ರಘು ಎ. ಮೂಲ್ಯಯವರು ಸಮಿತಿಯ ಕಾರ್ಯ ಅಧ್ಯಕ್ಷರಾದ ಶ್ರೀ ಆನಂದ ಕುಲಾಲ್ ಮತ್ತು ಮಹಿಳಾ ವಿಭಾಗದ ಕಾರ್ಯಾಧ್ಯಕ್ಷರಾದ ಶ್ರೀಮತಿ ರತ್ನ ಕುಲಾಲ್ ಅವರಿಗೆ ಆಮಂತ್ರಣ ಪತ್ರಿಕೆ ನೀಡುವ ಮೂಲಕ ವಿತರಣೆಗೆ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಶ್ರೀ ರಘು ಮೂಲ್ಯ ಅವರು, ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಉದ್ಘಾಟನಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಂಘದ ಗೌರವ ಅಧ್ಯಕ್ಷರಾದ ಶ್ರೀ ದೇವದಾಸ ಎಲ್ ಕುಲಾಲ್ ಅವರು ಸಂಘದ ಹಾಗೂ ಕಾರ್ಯಕ್ರಮದ ಸಮಗ್ರ ಮಾಹಿತಿಯನ್ನು ತಿಳಿಸಿ, ಸಮಾಜ ಬಾಂಧವರು ಸಮಯ ಮಾಡಿಕೊಂಡು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ತಿಳಿಸಿದರು.

ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷರಾದ ಶ್ರೀ ಡಿ.ಐ. ಮೂಲ್ಯ, ಕಾರ್ಯದರ್ಶಿ ಶ್ರೀ ಕರುಣಾಕರ್ ಸಾಲಿಯನ್, ಕೋಶಾಧಿಕಾರಿ ಶ್ರೀ ಜಯ ಅಂಚನ್, ಜೊತೆ ಕಾರ್ಯದರ್ಶಿ ಶ್ರೀ ಲಕ್ಷ್ಮಣ್ ಸಿ. ಮೂಲ್ಯ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ಸುಚಿತ್ರ ಬಂಜನ್, ಕಟ್ಟಡ ನಿರ್ಮಾಣ ಸಮಿತಿಯ ಕಾರ್ಯಾಧ್ಯಕ್ಷ ಶ್ರೀ ಗಿರೀಶ್ ಸಾಲಿಯನ್ ಬಂಟ್ವಾಳ, ಕಾರ್ಯದರ್ಶಿ ಶ್ರೀ ಉಮೇಶ್ ಬಂಗೇರ, ಸ್ಥಳೀಯ ಸಮಿತಿಯ ಉಪ ಕಾರ್ಯಧ್ಯಕ್ಷ ಶ್ರೀ ಅರುಣ್ ಬಂಗೇರ, ಮಹಿಳಾ ವಿಭಾಗದ ಉಪ ಕಾರ್ಯಾಧ್ಯಕ್ಷೆ ಶ್ರೀಮತಿ ಆರತಿ ಕೆ. ಸಾಲಿಯನ್, ಕಾರ್ಯದರ್ಶಿ ಶ್ರೀಮತಿ ಭಾರತಿ ಅರ್ಕೆನ್, ಕೋಶಾಧಿಕಾರಿ ಶ್ರೀಮತಿ ನವ್ಯ ಕುಲಾಲ್ ಮತ್ತಿತರರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸಂಘದ ಕಾರ್ಯದರ್ಶಿಯಾದ ಶ್ರೀ ಕರುಣಾಕರ್ ಸಾಲಿಯನ್ ಅವರ ತಾಯಿ ಶ್ರೀಮತಿ ಜಾನಕಿ ಸಾಲ್ಯಾನ್ ಮತ್ತು ಹಿರಿಯ ಸಮಾಜ ಸೇವಕಿ ಶ್ರೀಮತಿ ಪದ್ಮಾವತಿ ಎಸ್. ಕುಲಾಲ್ ಅವರನ್ನು ಗೌರವಿಸಲಾಯಿತು.
ಸಮಿತಿಯ ಕಾರ್ಯದರ್ಶಿ ಶ್ರೀ ಸುಕುಮಾರ್ ಸಾಲಿಯನ್ ಕಾರ್ಯಕ್ರಮವನ್ನು ನಿರೂಪಿಸಿದರು. ಶ್ರೀ ಆನಂದ ಕುಲಾಲ್ ಅವರು ಸ್ವಾಗತಿಸಿದರು. ಶ್ರೀಮತಿ ಭಾರತಿ ಅರ್ಕೆನ್ ಅವರು ವಂದನಾರ್ಪಣೆ ಮಾಡಿದರು. ಸಂಘದ ಮತ್ತು ಕಾರ್ಯಕ್ರಮದ ಬಗ್ಗೆ ಶ್ರೀ ಕರುಣಾಕರ್ ಸಾಲಿಯಾನ್ ಅವರು ಮಾಹಿತಿ ನೀಡಿದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ಗುರುವಂದನಾ ಭಜನಾ ಮಂಡಳಿಯವರಿಂದ ಭಜನೆ ನಡೆಯಿತು. ಬಳಿಕ ಸಮಿತಿಯ ಯುವ ವಿಭಾಗದವರಿಂದ ನೃತ್ಯ ಕಾರ್ಯಕ್ರಮ ನಡೆಯಿತು.




