ಮುಂಬೈ, ನವೆಂಬರ್ 2: ಕರ್ನಾಟಕ ಸರ್ಕಾರದ ಅತ್ಯುನ್ನತ ಗೌರವಾನ್ವಿತ ಪ್ರಶಸ್ತಿಯಾದ ‘ಕನ್ನಡ ರಾಜ್ಯೋತ್ಸವ’ ಪ್ರಶಸ್ತಿಯನ್ನು ನವೆಂಬರ್ 1 ರಂದು ಕರ್ನಾಟಕ ಸರ್ಕಾರದ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಶ್ರೀ ಡಿ.ಕೆ. ಶಿವಕುಮಾರ್ ಸಹಿತ ರಾಜ್ಯದ ಗೌರವಾನ್ವಿತ ಸಚಿವರ ಉಪಸ್ಥಿತಿಯಲ್ಲಿ ಸ್ವೀಕರಿಸಿ ಮುಂಬೈಗೆ ಆಗಮಿಸಿದ ಡಾ. ಪಿ.ವಿ. ಶೆಟ್ಟಿ ಶಿಮಂತೂರು ನಡಿಗುತ್ತು ಅವರಿಗೆ ಮುಂಬೈ ವಿಮಾನ ನಿಲ್ದಾಣದಲ್ಲಿ ಆತ್ಮೀಯ ಸ್ವಾಗತ ನೀಡಲಾಯಿತು.
ಜಾಗತಿಕ ಬಂಟರ ಸಂಘಗಳ ಒಕ್ಕೂಟದ ನಿರ್ದೇಶಕರು, ಮುಂಬೈ ಬಂಟರ ಸಂಘದ ಮಾಜಿ ಅಧ್ಯಕ್ಷರು ಹಾಗೂ ಮುಂಬೈ ಕ್ರಿಕೆಟ್ ಅಸೋಸಿಯೇಷನ್ನ ಮಾಜಿ ಜಂಟಿ ಕಾರ್ಯದರ್ಶಿಗಳಾದ ಡಾ. ಪಿ.ವಿ. ಶೆಟ್ಟಿ ಅವರನ್ನು, ನವೆಂಬರ್ 2 ರಂದು, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಶ್ರೀ ಐಕಳ ಹರೀಶ್ ಶೆಟ್ಟಿಯವರು ಮತ್ತು ಪದಾಧಿಕಾರಿಗಳು ಬರಮಾಡಿಕೊಂಡರು.
ಪ್ರಶಸ್ತಿಗಳೊಂದಿಗೆ ಮುಂಬೈಗೆ ಆಗಮಿಸಿದ ಡಾ. ಪಿ.ವಿ. ಶೆಟ್ಟಿ ಮತ್ತು ಅವರ ಧರ್ಮಪತ್ನಿ ಶ್ರೀಮತಿ ಶಕಿಲ ಪಿ.ವಿ. ಶೆಟ್ಟಿ ದಂಪತಿಯನ್ನು, ಶ್ರೀ ಐಕಳ ಹರೀಶ್ ಶೆಟ್ಟಿಯವರು ಶಾಲು, ಮೈಸೂರು ಪೇಟ ಮತ್ತು ಬೃಹತ್ ಹೂವಿನ ಹಾರವನ್ನು ಅರ್ಪಿಸಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಕೋಶಾಧಿಕಾರಿ ಶ್ರೀ ಉಳ್ತೂರು ಮೋಹನದಾಸ್ ಶೆಟ್ಟಿ, ನಿರ್ದೇಶಕರಾದ ಶ್ರೀ ಶಶಿಧರ ಕೆ. ಶೆಟ್ಟಿ ಇನ್ನಂಜೆ, ಶ್ರೀ ಗಿರೀಶ್ ಶೆಟ್ಟಿ ತೆಳ್ಳಾರ್, ಕಾರ್ಯಕಾರಿ ಸಮಿತಿ ಸದಸ್ಯರಾದ ಶ್ರೀ ಗುಣಪಾಲ್ ಶೆಟ್ಟಿ ಐಕಳ, ಡಾ. ಪಿ.ವಿ. ಶೆಟ್ಟಿಯವರ ಮಗಳು ಶ್ರೀಮತಿ ಅನಿಷಾ ಪಿ.ವಿ. ಶೆಟ್ಟಿ, ಶ್ರೀಮತಿ ಶರ್ಮಿಳಾ ರಮಾನಾಥ ಪಯ್ಯಡೆ, ಶ್ರೀ ಗೌರವ್ ರಮಾನಾಥ ಪಯ್ಯಡೆ ಮತ್ತು ಶ್ರೀ ಧೀರಜ್ ಶೆಟ್ಟಿ ಉಪಸ್ಥಿತರಿದ್ದರು.
ಶ್ರೀ ಐಕಳ ಹರೀಶ್ ಶೆಟ್ಟಿಯವರು ಡಾ. ಪಿ.ವಿ. ಶೆಟ್ಟಿಯವರನ್ನು ಅಭಿನಂದಿಸಿ, “ಕರ್ನಾಟಕ ಸರ್ಕಾರದ 2025ನೇ ಸಾಲಿನ ಪ್ರತಿಷ್ಠಿತ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಲಭಿಸಿರುವುದು ನಮಗೆಲ್ಲರಿಗೂ ಅತೀವ ಸಂತೋಷ ತಂದಿದೆ. ಓರ್ವ ಸಮಾಜ ಸೇವಕರಾಗಿ, ವೈದ್ಯರಾಗಿ, ಉತ್ತಮ ಸಂಘಟಕರಾಗಿ, ಹೊಟೇಲು ಉದ್ಯಮಿಯಾಗಿ, ಕ್ರೀಡಾ ಮುಖ್ಯಸ್ಥರಾಗಿ, ಸಮಾಜ ಬಾಂಧವರ ಹಿತಚಿಂತಕರಾಗಿ, ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಮತ್ತು ಕ್ರೀಡಾತ್ಮಕ ಚಟುವಟಿಕೆಗಳ ಮೂಲಕ ಸಲ್ಲಿಸಿದ ಸೇವಾ ಕಾರ್ಯಗಳಿಗೆ ಸಂದ ಗೌರವವಿದು. ತಮ್ಮ ಸೇವಾ ವೈಖರಿಗಳು ಇತರರಿಗೂ ಮಾದರಿಯಾಗಿವೆ. ತಾವು ನಂಬಿದ ದೈವ-ದೇವರ ಅನುಗ್ರಹ ತಮಗೆ ಸದಾ ಇರಲಿ. ಭವಿಷ್ಯದಲ್ಲಿ ಸಕಲೈಶ್ವರ್ಯ, ಆಯುರಾರೋಗ್ಯ ಭಾಗ್ಯದೊಂದಿಗೆ ಇನ್ನಷ್ಟು ಪ್ರಶಸ್ತಿ ಪುರಸ್ಕಾರಗಳು ತಮಗೆ ಲಭಿಸಲಿ” ಎಂದು ಹಾರೈಸಿ ಅಭಿನಂದನೆಗಳನ್ನು ಸಲ್ಲಿಸಿದರು.




