
ಡೊಂಬಿವಲಿ: ಹೊರನಾಡ ಕನ್ನಡಿಗರ ಪ್ರತಿಷ್ಠಿತ ಸಂಸ್ಥೆಗಳಲ್ಲೊಂದಾಗಿರುವ ಕರ್ನಾಟಕ ಸಂಘ ಡೊಂಬಿವಲಿ ಇದರ ಲಲಿತ ಕಲಾ ಹಾಗೂ ಮಹಿಳಾ ವಿಭಾಗಗಳ ವತಿಯಿಂದ ನ. 9ರಂದು ಅದ್ಧೂರಿ ನಾಡಹಬ್ಬ ಸಂಭ್ರಮವನ್ನು ಆಯೋಜಿಸಲಾಗಿದೆ. ಡೊಂಬಿವಲಿ ಪೂರ್ವದ ಎಂಐಡಿಸಿ ಪರಿಸರದ ಶಿವಂ ಹೊಟೇಲ್ ಸಭಾಗೃಹದಲ್ಲಿ ಅಪರಾಹ್ನ 3 ಗಂಟೆಯಿಂದ ಈ ಕಾರ್ಯಕ್ರಮ ಜರಗಲಿದೆ.
ಸಂಘದ ಅಧ್ಯಕ್ಷರಾದ ಸುಕುಮಾರ್ ಎನ್. ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಸಮಾರಂಭವನ್ನು ಸಂಘದ ಕಾರ್ಯಾಧ್ಯಕ್ಷರಾದ ದಿವಾಕರ ಶೆಟ್ಟಿ ಇಂದ್ರಾಳಿ ಅವರು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮಕ್ಕೆ ಶ್ರೀ ಆದಿಶಕ್ತಿ ಕನ್ನಡ ಹೈಸ್ಕೂಲ್ನ ನಿವೃತ್ತ ಮುಖ್ಯಾಧ್ಯಾಪಕಿ ಹಾಗೂ ಥಾಣೆ ಬಂಟ್ಸ್ ಅಸೋಸಿಯೇಶನ್ನ ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ ಪ್ರಮೋದಾ ಎಸ್. ಮಾಡ, ಕರ್ನಾಟಕ ಸಂಘ ವರ್ತಕ್ ನಗರ ಥಾಣೆ ಯ ಅಧ್ಯಕ್ಷರಾದ ಶೇಖರ್ ಶೆಟ್ಟಿ ಅವರು ಅತಿಥಿಯಾಗಿ ಭಾಗವಹಿಸಲಿದ್ದಾರೆ.
ನಾಡಹಬ್ಬದ ನಿಮಿತ್ತ ಹಮ್ಮಿಕೊಂಡಿರುವ ಸಾಂಸ್ಕೃತಿಕ ಕಾರ್ಯಕ್ರಮಗಳು ಹೀಗಿವೆ:
- ಸಮೂಹ ಗಾಯನ ಸ್ಪರ್ಧೆ
- ಸಮೂಹ ನೃತ್ಯ ಸ್ಪರ್ಧೆ
- ಸಂಘದ ಮಹಿಳಾ ವಿಭಾಗದ ಸದಸ್ಯರಿಂದ ಆಕರ್ಷಕ ನೃತ್ಯ ವೈಭವ
- ವಿಶೇಷ ಹಾಸ್ಯ ಕವಿಗೋಷ್ಠಿ
ಹಾಸ್ಯ ಕವಿಗೋಷ್ಠಿಯು ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದು, ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ|| ಪೂರ್ಣಿಮಾ ಸುಧಾಕರ ಶೆಟ್ಟಿ ಅವರು ಇದರ ಅಧ್ಯಕ್ಷತೆ ವಹಿಸಲಿದ್ದಾರೆ.
ಕವಿಗೋಷ್ಠಿಯಲ್ಲಿ ಕವಿಗಳಾದ ಅಂಜಲಿ ಎಂ. ತೊರವಿ, ವೇದಾವತಿ ಭಟ್, ಸವಿತಾ ಸಿ. ಸಾಲ್ಯಾನ್, ಹೇಮಾವತಿ ಹೆಗಡೆ, ಜಯಲಕ್ಷ್ಮಿ ಸಾಲ್ಯಾನ, ಜಯಲಕ್ಷ್ಮೀ ಪಾರ್ವತಿಕರ, ಮೈನ-ಪಿ. ಶೆಟ್ಟಿ, ಗಾಯತ್ರಿ ನಾಗೇಶ್, ದೀಪಾ ಎಚ್ ಶೆಟ್ಟಿ ಹಾಗೂ ಪ್ರಫುಲ್ಲಾದಿನೇಶ್ ಶೆಟ್ಟಿ ಅವರು ಪಾಲ್ಗೊಳ್ಳಲಿದ್ದಾರೆ.
ನಾಡಿನ ನುಡಿ, ಕಲೆ ಹಾಗೂ ಸಂಸ್ಕೃತಿಯ ಪ್ರತೀಕವಾದ ನಾಡಹಬ್ಬದ ಈ ಸಂಭ್ರಮದ ಕಾರ್ಯಕ್ರಮದಲ್ಲಿ ಸಮಸ್ತ ಕನ್ನಡ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು, ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಸಂಘದ ಉಪಾಧ್ಯಕ್ಷ ಲೋಕನಾಥ ಎ. ಶೆಟ್ಟಿ, ಉಪ ಕಾರ್ಯಾಧ್ಯಕ್ಷ ದೇವದಾಸ ಕುಲಾಲ, ಗೌರವ ಪ್ರಧಾನ ಕಾರ್ಯದರ್ಶಿ ಪ್ರೋ. ಅಜಿತ್ ಉಮಾಣಿ, ಗೌರವ ಕೋಶಾಧಿಕಾರಿ ತಾರಾನಾಥ ಅಮೀನ್, ಜತೆ ಕಾರ್ಯದರ್ಶಿ ದಿನೇಶ್ ಬಿ. ಕುಡ್ವ, ಜತೆ ಕೋಶಾಧಿಕಾರಿ ವಿಮಲಾ ವಿ. ಶೆಟ್ಟಿ, ಲಲಿತ ಕಲಾ ವಿಭಾಗದ ಕಾರ್ಯಾಧ್ಯಕ್ಷೆ ಸುಷ್ಮಾ ಡಿ. ಶೆಟ್ಟಿ, ಕಾರ್ಯದರ್ಶಿ ರಮೇಶ್ ಎ. ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಆಶಾ ಎಲ್. ಶೆಟ್ಟಿ, ಕಾರ್ಯದರ್ಶಿ ಮಾಧುರಿಕಾ ಆರ್. ಬಂಗೇರ ಹಾಗೂ ಸಂಘದ ಕಾರ್ಯಕಾರಿ ಮಂಡಳಿಯ ಸದಸ್ಯರು ಪ್ರಕಟನೆಯಲ್ಲಿ ವಿನಂತಿಸಿದ್ದಾರೆ.




