ಮುಂಬೈ ಬೆಂಗಳೂರು ಹೆದ್ದಾರಿಯಲ್ಲಿ ಭೀಕರ ಅಪಘಾತ ಸಂಭವಿಸಿದೆ. ಪುಣೆಯ ಹೊರವಲಯದ ಸೆಲ್ಫಿ ಪಾಯಿಂಟ್ ಬ್ರಿಡ್ಜ್ ಬಳಿ ಈ ದುರ್ಘಟನೆ ನಡೆದಿದೆ. ಕಂಟೈನರ್ ಟ್ರಕ್ನಿಂದ ಸರಣಿ ಅಪಘಾತ ಸಂಭವಿಸಿದೆ. ಟ್ರಕ್ ಡಿಕ್ಕಿಯಾದ ಪರಿಣಾಮ ಕಾರು ಅಪ್ಪಚ್ಚಿಯಾಗಿದೆ. ಇಷ್ಟೇ ಅಲ್ಲ ಬೆಂಕಿ ಹೊತ್ತಿಕೊಂಡು ಟ್ರಕ್, ಕಾರು ಹೊತ್ತಿ ಉರಿದಿದೆ. ಈ ಘಟನೆಯಲ್ಲಿ ಐವರು ಮೃತಪಟ್ಟಿದ್ದರೆ, 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರಗೆ ದಾಖಲಿಸಲಾಗಿದೆ. ಇತ್ತ ಅಗ್ನಿಶಾಮಕ ದಳ, ಪೊಲೀಸರು ಸ್ಥಳದಲ್ಲಿ ಪರಿಸ್ಥತಿ ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ.
ಪುಣೆಯ ನವಲೆ ಸೇತುವೆ ಬಳಿ ಈ ದುರಂತ ಸಂಭವಿಸಿದೆ. ವೇಗಾಗಿ ಬಂದ ಕಂಟೈನರ್ ಟ್ರಕ್ ನಿಯಂತ್ರಣ ಕಳೆದುಕೊಂಡು ಹೆದ್ದಾರಿಯಲ್ಲಿ ಮುಂದೆ ಸಾಗುತ್ತಿದ್ದ ವಾಹನಗಳ ಮೇಲೆ ಹರಿದಿದೆ. 15ಕ್ಕೂ ಹೆಚ್ಚು ವಾಹನಗಳು ಅಪ್ಪಚ್ಚಿಯಾಗಿದೆ. ಈ ಪೈಕಿ ಒಂದು ಕಾರು ಎರಡು ಟ್ರಕ್ ನಡುವೆ ಸಿಲುಕಿ ಸಂಪೂರ್ಣ ನಜ್ಜು ಗುಜ್ಜಾಗಿದೆ. ಟ್ರಕ್ ನಿಯಂತ್ರಣಕ್ಕೆ ಸಿಗದ ಕಾರಣ ಕಾರನ್ನು ಎಳೆದುಕೊಂಡು ಕೆಲ ದೂರ ಹೋಗಿದೆ. ಹೀಗಾಗಿ ಕಿಡಿ ಹೊತ್ತಿಕೊಂಡು ಬೆಂಕಿಯ ಜ್ವಾಲೆ ಆವರಿಸಿದೆ. ಪರಿಣಾಮ ಕಾರು, ಟ್ರಕ್ ಹೊತ್ತಿ ಉರಿದಿದೆ.
ಅಪಘಾತದ ತೀವ್ರತೆಯಲ್ಲಿ ಹೊತ್ತಿಕೊಂಡ ಬೆಂಕಿಯಲ್ಲಿ ಟ್ರಕ್ ಸೇರಿ ಮೂರು ಘನ ವಾಹನಗಳು ಹೊತ್ತಿ ಉರಿದಿದೆ. ಘಟನೆಗೆ ಟ್ರಕ್ ನಿಯಂತ್ರಣ ತಪ್ಪಿದ್ದೆ ಕಾರಣ ಎಂದು ಪ್ರಾಥಮಿಕ ವರದಿ ಹೇಳುತ್ತಿದೆ. ಹದ್ದಾರಿಯಲ್ಲಿ ಈ ಅಪಘಾತ ಸಂಭವಿಸಿದ್ದು, ಟ್ರಾಫಿಕ್ ಜಾಮ್ ಸಂಭವಿಸಿದೆ. ಹೀಗಾಗಿ ಕೀಲೋಮೀಟರ್ ಉದ್ದ ವಾಹನಗಳು ನಿಂತಿದೆ. ವಾಹನಗಳಿಗೆ ಬದಲಿ ಮಾರ್ಗ ಬಳಸಲು ಪೊಲೀಸರು ಸೂಚಿಸಿದ್ದಾರೆ. ಟ್ರಾಫಿಕ್ ಜಾಮ್ನಲ್ಲಿ ನಿಂತಿರುವ ವಾಹನಗಳನ್ನು ಬೇರೆ ಮಾರ್ಗಕ್ಕೆ ತಿರುಗಿಸಲಾಗಿದೆ.




