
ಮೀರಾರೋಡ್ ಪೂರ್ವದ ಮೀರಾಗಾಂವ್ ರಾಷ್ಟ್ರೀಯ ಹೆದ್ದಾರಿ ಸಮೀಪದಲ್ಲಿರುವ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನವೆಂಬರ್ 10 ರಂದು ಅಪರಾಹ್ನ ಕಾರ್ತಿಕ ದೀಪೋತ್ಸವವು ವಿವಿಧ ಪೂಜಾ-ಕೈಂಕರ್ಯಗಳೊಂದಿಗೆ ಸಂಪನ್ನಗೊಂಡಿತು.
ಶ್ರೀ ಸನ್ನಿಧಿಯ ಪ್ರಧಾನ ಅರ್ಚಕರಾದ ಸಾತಿಂಜ ಜನಾರ್ದನ ಭಟ್ ಅವರ ಪೌರೋಹಿತ್ಯದಲ್ಲಿ, ಶಿಮಂತೂರು ಮಜಲ ಗುತ್ತು ಬಾಬಾ ರಂಜನ್ ಶೆಟ್ಟಿ ಅವರ ಮುಂದಾಳತ್ವದಲ್ಲಿ, ಸಾಂತಿಂಜ ಮಾಧವ ಭಟ್ ಹಾಗೂ ವಿಪ್ರವೃಂದದವರ ಸಹಕಾರದಲ್ಲಿ ವಿಶೇಷ ಪೂಜೆಗಳು ನೆರವೇರಿದವು. ಹೂವಿನ ಪೂಜೆ, ರಂಗ ಪೂಜೆ, ದೀಪಾರಾಧನೆ ಹಾಗೂ ಪರಿವಾರ ದೇವರುಗಳಾದ ಶ್ರೀ ಗಣಪತಿ, ಶ್ರೀ ದುರ್ಗಾಮಾತೆ ಮತ್ತು ನವಗ್ರಹಗಳಿಗೆ ವಿಶೇಷ ಪೂಜೆಗಳನ್ನು ಸಲ್ಲಿಸಲಾಯಿತು.

ಪ್ರಸಾದ ವಿತರಿಸಿ ಆಶೀರ್ವಚನ ನೀಡಿದ ಜನಾರ್ದನ ಭಟ್ ಅವರು, “ಕಾರ್ತಿಕ ದೀಪವನ್ನು ಬೆಳಗಿಸುವುದು ಕೇವಲ ಧಾರ್ಮಿಕ ಆಚರಣೆ ಮಾತ್ರವಲ್ಲ, ಅದು ಬೆಳಕಿನ ಶುದ್ಧತೆ ಮತ್ತು ಶಾಂತಿಯ ಸಂಕೇತವಾಗಿದೆ. ದೀಪವು ಲೌಕಿಕ ಹಾಗೂ ಅಲೌಕಿಕ ಸಂಬಂಧಗಳ ಕೊಂಡಿಯಾಗಿದೆ. ಕತ್ತಲನ್ನು ಹೊಡೆದೋಡಿಸುವ ಜ್ಯೋತಿಯು ಮನೆ-ಮನವನ್ನು ಬೆಳಗಿಸುವ ವಿಶಿಷ್ಟ ಶಕ್ತಿಯಾಗಿದೆ. ಅಸಂಖ್ಯಾತ ದೀಪಗಳ ಪ್ರಜ್ವಲನೆಯಿಂದ ನಮ್ಮಲ್ಲಿರುವ ಲೌಕಿಕ ಚಿಂತನೆಗಳು ದೂರವಾಗಿ ಮನಸ್ಸು ಚಿತ್ತ ಶಾಂತಿಯಲ್ಲಿರುತ್ತದೆ. ದೇವಸ್ಥಾನಗಳು ಪೂಜಾ ಸ್ಥಳಗಳಾಗಿದ್ದು, ಆಧ್ಯಾತ್ಮಿಕ, ಸಾಂಸ್ಕೃತಿಕ ಮತ್ತು ಧಾರ್ಮಿಕ ಕೇಂದ್ರಗಳಾಗಿವೆ. ಇವುಗಳು ನಮ್ಮ ಸಂಪ್ರದಾಯ, ಸಂಸ್ಕೃತಿ ಮತ್ತು ಇತಿಹಾಸವನ್ನು ಬಿಂಬಿಸುತ್ತವೆ. ಅವುಗಳನ್ನು ಸಂರಕ್ಷಿಸುವುದು ನಮ್ಮ ಆದ್ಯತೆಯಾಗಿರಬೇಕು,” ಎಂದರು.

ಇದೇ ಸಂದರ್ಭದಲ್ಲಿ ಬಂಟ್ಸ್ ಫೋರಂ ಮೀರಾ-ಭಾಯಂದರ್ ಮತ್ತು ಶ್ರೀ ಮಹಾಲಿಂಗೇಶ್ವರ ಭಜನಾ ಮಂಡಳಿಯ ಸದಸ್ಯರಿಂದ ಭಜನಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳಾದ ಡಾ. ಅರುಣೋದಯ ರೈ, ಅಮಿತಾ ಶೆಟ್ಟಿ ಕುತ್ಯಾರು, ನವೀನಾ ಭಂಡಾರಿ, ಉದಯ ಶೆಟ್ಟಿ ಪೆಲತ್ತೂರು, ಗಿರೀಶ್ ಶೆಟ್ಟಿ ತೆಳ್ಳಾರು, ಉದಯ ಎಂ. ಶೆಟ್ಟಿ ಮಾಲಾರ್ ಬೀಡು, ರಾಜೇಶ್ ಶೆಟ್ಟಿ ಕಾಪು, ಪ್ರಸನ್ನ ಶೆಟ್ಟಿ ಕುರ್ಕಾಲು, ಪ್ರಸನ್ನ ಬಿ. ಶೆಟ್ಟಿ ಬೋಳ, ಸಂಸ್ಥಾಪಕ ಕೃಷ್ಣ ಜಿ. ಶೆಟ್ಟಿ ಪರಿವಾರ ಸೇರಿದಂತೆ ಮಹಿಳಾ ಸದಸ್ಯೆಯರು, ವಿವಿಧ ಸಂಘ ಸಂಸ್ಥೆಗಳು, ಸಮುದಾಯ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಕನ್ನಡಿಗೇತರರು ಅಪಾರ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಪ್ರಸಾದ ಸ್ವೀಕರಿಸಿದರು.




