ಪಾರದರ್ಶಕ ಆಡಳಿತ, ಸಂಘದ ಅಭಿವೃದ್ಧಿಗೆ ಆದ್ಯತೆ – ಮಂಜುನಾಥ್ ಬಿಲ್ಲವ
ಮುಂಬೈಯ ಪ್ರತಿಷ್ಠಿತ ಸಂಘಟನೆಗಳಲ್ಲಿ ಒಂದಾದ ಬಿಲ್ಲವ ಸೇವಾ ಸಂಘ ಕುಂದಾಪುರ, ಮುಂಬಯಿ ಇದರ ಆಡಳಿತ ಸಮಿತಿಯ ಮಾಸಿಕ ಸಭೆಯು ನವೆಂಬರ್ 9, ಭಾನುವಾರದಂದು ನಡೆಯಿತು. ಈ ಸಭೆಯಲ್ಲಿ, ಸಂಘದ ಗೌರವಾಧ್ಯಕ್ಷರಾಗಿದ್ದ ಸುರೇಶ್ ಪೂಜಾರಿ ಅವರ ನಿಧನದಿಂದ ತೆರವಾದ ಸ್ಥಾನವನ್ನು ತುಂಬುವ ಬಗ್ಗೆ ಕೂಲಂಕಷವಾಗಿ ಚರ್ಚಿಸಲಾಯಿತು.
ಚರ್ಚೆಯ ಬಳಿಕ, ಸಂಘದ ಮಾಜಿ ಅಧ್ಯಕ್ಷ, ಹಿತಚಿಂತಕ, ಮಾರ್ಗದರ್ಶಕ ಹಾಗೂ ಉದ್ಯಮಿ ಮತ್ತು ಕೊಡುಗೈದಾನಿಯಾಗಿರುವ ಮಂಜುನಾಥ್ ಎ. ಬಿಲ್ಲವ ಅವರನ್ನು ಸರ್ವಾನುಮತದಿಂದ ನೂತನ ಗೌರವಾಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು. ಈ ಕುರಿತು ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಸುಧಾಕರ್ ಸಿ. ಪೂಜಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಂಜುನಾಥ್ ಎ. ಬಿಲ್ಲವ ಅವರು ಮುಂಬೈಯ ಖ್ಯಾತ ಉದ್ಯಮಿಯಾಗಿದ್ದು, ಯಕ್ಷಪೋಷಕರು, ಕೊಡುಗೈದಾನಿ ಮತ್ತು ಸಾಮಾಜಿಕ ಕಳಕಳಿಯುಳ್ಳ ವ್ಯಕ್ತಿಯಾಗಿದ್ದಾರೆ. ಅವರು ಈ ಹಿಂದೆ ಆರು ವರ್ಷಗಳ ಕಾಲ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು, ಸಂಘದ ಬೆಳ್ಳಿಹಬ್ಬದ ಆಚರಣೆಯನ್ನು ಸ್ಮರಣ ಸಂಚಿಕೆ ಬಿಡುಗಡೆಯೊಂದಿಗೆ ವಿಜೃಂಭಣೆಯಿಂದ ನೆರವೇರಿಸಿದ್ದರು.
ಗೌರವಾಧ್ಯಕ್ಷರಾಗಿ ಆಯ್ಕೆಯಾದ ಮಂಜುನಾಥ್ ಎ. ಬಿಲ್ಲವ ಅವರು ಮಾತನಾಡಿ, “ನನ್ನ ಮೇಲಿನ ವಿಶ್ವಾಸದಿಂದ ನೀವೆಲ್ಲರೂ ಈ ಜವಾಬ್ದಾರಿಯನ್ನು ವಹಿಸಿದ್ದೀರಿ. ಇದನ್ನು ಗುರುದೇವರ ಪ್ರಸಾದವೆಂದು ಸ್ವೀಕರಿಸುತ್ತೇನೆ. ನಿಮ್ಮೆಲ್ಲರ ಪ್ರೀತಿ, ವಿಶ್ವಾಸಕ್ಕೆ ನಾನು ಸದಾ ಚಿರಋಣಿ. ನಿಮ್ಮೆಲ್ಲರ ಆಶೀರ್ವಾದ ಮತ್ತು ಸಹಕಾರದಿಂದ ದಿ. ಸುರೇಶ್ ಪೂಜಾರಿ ಅವರು ವಹಿಸಿಕೊಂಡಿದ್ದ ಈ ಹುದ್ದೆಗೆ ಯಾವುದೇ ಚ್ಯುತಿ ಬಾರದಂತೆ ಜವಾಬ್ದಾರಿಯನ್ನು ನಿಭಾಯಿಸಲು ಪ್ರಯತ್ನಿಸುತ್ತೇನೆ,” ಎಂದು ಹೇಳಿದರು.
ಸಂಘದಲ್ಲಿ ಹಲವು ವರ್ಷಗಳಿಂದ ಬಾಕಿ ಇರುವ ವಿವಿಧ ದಾಖಲೆ ಪತ್ರಗಳನ್ನು ಸರಿಪಡಿಸಿ ವ್ಯವಸ್ಥೆಗೊಳಿಸುವುದು, ಪಾರದರ್ಶಕ ಆಡಳಿತ ನೀಡುವುದು ಹಾಗೂ ಸಂಘದ ಸರ್ವತೋಮುಖ ಅಭಿವೃದ್ಧಿ ತಮ್ಮ ಮೊದಲ ಆದ್ಯತೆಯೆಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.
ಮಂಜುನಾಥ್ ಎ. ಬಿಲ್ಲವ ಅವರ ಆಯ್ಕೆಗೆ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಸಂತಸ ವ್ಯಕ್ತಪಡಿಸಿದರು. ಸಂಘದ ಅಧ್ಯಕ್ಷ ಸಿ. ಎ. ಪೂಜಾರಿ, ಉಪಾಧ್ಯಕ್ಷರುಗಳಾದ ಎಸ್. ಕೆ. ಪೂಜಾರಿ ಮತ್ತು ಬೇಬಿ ರಂಗ ಪೂಜಾರಿ, ಗೌರವ ಪ್ರಧಾನ ಕಾರ್ಯದರ್ಶಿ ಸುಧಾಕರ್ ಸಿ. ಪೂಜಾರಿ, ಜೊತೆ ಕಾರ್ಯದರ್ಶಿಗಳಾದ ಸದಾನಂದ ಬಿ. ಪೂಜಾರಿ, ಸಂತೋಷ್ ಬಿ. ಪೂಜಾರಿ, ಗೌರವ ಕೋಶಾಧಿಕಾರಿ ರಾಜಶ್ರೀ ಪಿ. ಸಾಲಿಯನ್, ಜೊತೆ ಕೋಶಾಧಿಕಾರಿಗಳಾದ ಗೋಪಾಲ ಎಸ್. ಪೂಜಾರಿ ಮತ್ತು ಹರ್ಷದಾ ಎಚ್. ಹೊಕ್ಕೋಳಿ, ಆಡಳಿತ ಸಮಿತಿ ಮತ್ತು ಎಲ್ಲಾ ಉಪಸಮಿತಿಗಳ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ಹೃತ್ಪೂರ್ವಕವಾಗಿ ಅಭಿನಂದಿಸಿದರು.




