
ಸಮಾಜಕ್ಕೆ ಆದರ್ಶವಾದ ಬದುಕು: ಸೂರ್ಯಕಾಂತ್ ಜಯ ಸುವರ್ಣರಿಂದ ನುಡಿನಮನ
ಬಂಟ್ವಾಳ, ಡಿ. 13:
ಬಂಟ್ವಾಳ ತಾಲೂಕಿನ ಬಡಗಬೈಲೂರು ಕೊಪ್ಪಳದ ಜೆ. ನಾಗಮ್ಮ ಶ್ರೀ ನಿವಾಸಿ, ಭಾರತ್ ಬ್ಯಾಂಕ್ನ ನಿರ್ದೇಶಕರಾದ ಶ್ರೀ ಗಂಗಾಧರ್ ಜೆ. ಪೂಜಾರಿಯವರ ಪಿತೃರಾದ ಶ್ರೀ ಜಾರಪ್ಪ ಪೂಜಾರಿಯವರು ಅಲ್ಪಾವಧಿಯ ಅಸೌಖ್ಯದಿಂದ ನಿಧನರಾಗಿದ್ದು, ಅವರ ಉತ್ತರಕ್ರಿಯೆಯು ಡಿ. 12 ರಂದು ಬಡಗಬೈಲೂರು ಶ್ರೀ ಕಾವೇಶ್ವರ ದೇವಸ್ಥಾನದ ಆವರಣದಲ್ಲಿ ನಡೆಯಿತು.
ಶ್ರದ್ಧಾಂಜಲಿ ಸಭೆ
ಉತ್ತರಕ್ರಿಯೆಗೂ ಮುನ್ನ ಪೂರ್ವಭಾವಿಯಾಗಿ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಅಪಾರ ಸಂಖ್ಯೆಯಲ್ಲಿ ಕುಟುಂಬಸ್ಥರು, ಹಿತೈಷಿಗಳು ಹಾಗೂ ಗ್ರಾಮಸ್ಥರು ಪಾಲ್ಗೊಂಡು ಜಾರಪ್ಪ ಪೂಜಾರಿಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಶ್ರದ್ಧಾಂಜಲಿ ಸಭೆಯಲ್ಲಿ ಭಾಗವಹಿಸಿದ್ದ ಮುಂಬೈನ ಭಾರತ್ ಬ್ಯಾಂಕ್ನ ಕಾರ್ಯಧ್ಯಕ್ಷರಾದ ಶ್ರೀ ಸೂರ್ಯಕಾಂತ್ ಜಯ ಸುವರ್ಣ ಅವರು ಜಾರಪ್ಪ ಪೂಜಾರಿಯವರ ಕುರಿತು ಮಾತನಾಡಿದರು. “ಅವರ ಸಾಮಾಜಿಕ ಸೇವೆ ಮತ್ತು ಗ್ರಾಮಸ್ಥರೊಂದಿಗೆ ಅವರು ಹೊಂದಿದ್ದ ಸಂಬಂಧ ಇಂದಿನ ಈ ಕಾರ್ಯಕ್ರಮದಲ್ಲಿ ಸಾಕ್ಷಿಯಾಗಿದೆ. ಅವರು ತಮ್ಮ ಕುಟುಂಬ ಮತ್ತು ಮಕ್ಕಳಿಗೆ ಸಮಾಜದಲ್ಲಿ ಆದರ್ಶವಾಗುವಂತೆ ಮಾರ್ಗದರ್ಶನ ನೀಡಿ ಬೆಳೆಸಿದ್ದಾರೆ. ಅದಕ್ಕಾಗಿಯೇ ಅವರ ಎಲ್ಲ ಸುಪುತ್ರರು, ಪುತ್ರಿಯರು ಮತ್ತು ಕುಟುಂಬಸ್ಥರು ಸಮಾಜದಲ್ಲಿ ಉತ್ತಮ ನಡೆ-ನುಡಿಯೊಂದಿಗೆ ಬೆಳೆಯುತ್ತಿದ್ದಾರೆ,” ಎಂದು ಸ್ಮರಿಸಿದರು.
ಸ್ಥಳೀಯ ರಾಜಕೀಯ ಮುಖಂಡರಾದ ಶ್ರೀ ದೇವಪ್ಪ ಪೂಜಾರಿಯವರು ಕೂಡ ಜಾರಪ್ಪ ಪೂಜಾರಿಯವರ ಸೇವಾ ಕಾರ್ಯಗಳನ್ನು ಈ ವೇಳೆ ನೆನಪಿಸಿಕೊಂಡರು.
ಮೃತರು ಪತ್ನಿ, ಮಕ್ಕಳು, ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.
ಸಭೆಯಲ್ಲಿ ಮಾಜಿ ಶಾಸಕರಾದ ಶ್ರೀ ರುಕ್ಮಯ ಪೂಜಾರಿ, ಶ್ರೀ ಕಾವೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಮುಂಬೈನ ಶ್ರೀ ರಘು ಎಲ್. ಶೆಟ್ಟಿ, ಸ್ಥಳೀಯ ರಾಜಕೀಯ ಮುಖಂಡರು, ಸಾಮಾಜಿಕ ಸೇವಕರು, ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಇತರರು ಸೇರಿದಂತೆ ಅಪಾರ ಸಂಖ್ಯೆಯ ಗಣ್ಯರು ಪಾಲ್ಗೊಂಡಿದ್ದರು.




