
ವರದಿ: ದಿನೇಶ್ ಕುಲಾಲ್
ಮುಂಬಯಿ: ಅಂಧೇರಿ ಪಶ್ಚಿಮದ ವೃಂದಾವನ ವೆಜ್ ರೆಸ್ಟೋರೆಂಟ್ನ ಆಡಳಿತ ಪಾಲುದಾರರ ಆಶ್ರಯದಲ್ಲಿ ಕಲಿಯುಗ ವರದ ಶ್ರೀ ಅಯ್ಯಪ್ಪ ಸ್ವಾಮಿಯ 28ನೇ ವಾರ್ಷಿಕ ಮಹಾಪೂಜೆಯು ಡಿ. 29ರ ಸೋಮವಾರದಂದು ಅತ್ಯಂತ ವಿಜ್ರಂಭಣೆಯಿಂದ ನೆರವೇರಿತು.

ಅಂಧೇರಿ (ಪಶ್ಚಿಮ) ಮೆಟ್ರೋ ನಿಲ್ದಾಣದ ಆಜಾದ್ ನಗರ ಸಮೀಪದ ಎಸ್ಪಿಜೆಐಎಂಆರ್ (SPJIMR) ಭವನ್ಸ್ ಕಾಲೇಜು ಕ್ಯಾಂಪಸ್ನಲ್ಲಿ ಈ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ವೃಂದಾವನ ರೆಸ್ಟೋರೆಂಟ್ನ ಪ್ರವೀಣ್ ಶೆಟ್ಟಿ ಹಾಗೂ ಆಡಳಿತ ಪಾಲುದಾರರ ನೇತೃತ್ವದಲ್ಲಿ ನಡೆದ ಈ ಪೂಜಾ ಕೈಂಕರ್ಯಗಳಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.

ಜರಿಮರಿಯ ನಿತ್ಯಾನಂದ ಗುರುಸ್ವಾಮಿ ಹಾಗೂ ವಾಶಿಯ ದಿನಕರ್ ಪಕ್ಕಳ ಗುರುಸ್ವಾಮಿ ಅವರು ಶ್ರೀ ಅಯ್ಯಪ್ಪ ಸ್ವಾಮಿಯ ಶರಣು ಘೋಷಣೆಗಳನ್ನು ನಡೆಸಿಕೊಟ್ಟರು. ಇನ್ನಂಜೆ ಚಂದ್ರಹಾಸ್ ಗುರುಸ್ವಾಮಿಯವರು ಮಹಾಪೂಜೆಯ ಮಂಗಳಾರತಿಯನ್ನು ನೆರವೇರಿಸಿದರು. ಪೂಜೆಯ ನಂತರ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು.

ಸಂಜೆ ಕಾರ್ತಿಕ್ ನಿತ್ಯಾನಂದ ಸ್ವಾಮಿ ಮತ್ತು ದಿನೇಶ್ ಕೋಟ್ಯಾನ್ ಬಳಗದವರಿಂದ ನಡೆದ ಸ್ಯಾಕ್ಸೋಫೋನ್ ವಾದನವು ಭಕ್ತರ ಮನ ಸೆಳೆಯಿತು. ತದನಂತರ ನಗರದ ಪ್ರಸಿದ್ಧ ಸಂಗೀತ ಕಲಾವಿದ ವಿಜಯ್ ಶೆಟ್ಟಿ ಮೂಡುಬೆಳ್ಳೆ ಅವರಿಂದ ಭಕ್ತಿಗಾನ ಸುಧೆ ಜರುಗಿತು.
ಈ ಪೂಜಾ ಮಹೋತ್ಸವದಲ್ಲಿ ಅಯ್ಯಪ್ಪ ಸ್ವಾಮಿಯ ಮಾಲಾಧಾರಿಗಳು, ಹೋಟೆಲ್ ಸಂಚಾಲಕರ ಹಿತೈಷಿಗಳು, ಬಂಧು-ಮಿತ್ರರು ಹಾಗೂ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸ್ವಾಮಿಯ ಕೃಪೆಗೆ ಪಾತ್ರರಾದರು.




