
ವರದಿ: ಜಯ ಸಿ ಪೂಜಾರಿ, ಕೆಳಾರ್ಕಳ ಬೆಟ್ಟು.
ಧಾರ್ಮಿಕ ಮತ್ತು ಸಾಂಸ್ಕೃತಿಕ ನಗರಿ ಉಡುಪಿಯಲ್ಲಿ ಜರುಗಿದ ಶೀರೂರು ಪರ್ಯಾಯ ಮಹೋತ್ಸವದ ಅಂಗವಾಗಿ ನಗರದ ಕಿನ್ನಿಮೂಲ್ಕಿ ಜಂಕ್ಷನ್ ಬಳಿ ಶ್ರೀ ಕೃಷ್ಣ ಗ್ರೂಪ್ ಆಫ್ ಡ್ಯಾನ್ಸ್ ವತಿಯಿಂದ ಅದ್ಧೂರಿ ನೃತ್ಯ ಮತ್ತು ರಸಮಂಜರಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದ ಉದ್ಘಾಟನೆಯನ್ನು ಕರ್ನಾಟಕ ವಿಧಾನಸಭೆಯ ಗೌರವಾನ್ವಿತ ಸಭಾಧ್ಯಕ್ಷರಾದ ಯು.ಟಿ. ಖಾದರ್ ಅವರು ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕರಾವಳಿಯ ಸಾಂಸ್ಕೃತಿಕ ಶ್ರೀಮಂತಿಕೆಗೆ ಪರ್ಯಾಯ ಮಹೋತ್ಸವಗಳು ಸಾಕ್ಷಿಯಾಗಿದ್ದು, ಯುವ ಪ್ರತಿಭೆಗಳಿಗೆ ಇಂತಹ ವೇದಿಕೆಗಳು ಸ್ಫೂರ್ತಿದಾಯಕ ಎಂದರು.

ಸಮಾರಂಭದ ಆಕರ್ಷಣೆಯಾಗಿ ಕನ್ನಡ, ಹಿಂದಿ, ಮರಾಠಿ ಹಾಗೂ ತುಳು ಚಿತ್ರರಂಗದ ಹೆಸರಾಂತ ತಾರೆಗಳು ಭಾಗವಹಿಸಿದ್ದು ವಿಶೇಷವಾಗಿತ್ತು. ಬಿಗ್ ಬಾಸ್ ಖ್ಯಾತಿಯ ಕಿಚ್ಚ ಸುದೀಪ್ ಅವರ ಅಳಿಯ ಹಾಗೂ ಬಹುನಿರೀಕ್ಷಿತ ‘ಮಕ್ಕಿ’ ಮತ್ತು ‘ಮ್ಯಾಂಗೋ ಪಚ್ಚ’ ಚಿತ್ರದ ನಟ ಸಂಚಿತ್ ಸಂಜೀವ್, ಮುಂಬೈ ಮೂಲದ ಬಹುಭಾಷಾ ನಟಿ ಕಾಜಲ್ ಗಣೇಶ್ ಕುಂದರ್ ಅವರು ಕನ್ನಾರ್ಪಾಡಿ ಶ್ರೀ ದುರ್ಗಾ ಪರಮೇಶ್ವರಿ ಅಮ್ಮನವರ ಸನ್ನಿಧಿಗೆ ಮತ್ತು ಉಡುಪಿ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿ ದರ್ಶನ ಪಡೆದ ಬಳಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ವೇದಿಕೆಯಲ್ಲಿ ಮಾತನಾಡಿದ ಸಂಚಿತ್ ಸಂಜೀವ್, ತಾವು ನಟಿಸಿರುವ ನೂತನ ಕನ್ನಡ ಸಿನಿಮಾ ಫೆಬ್ರವರಿ ತಿಂಗಳಲ್ಲಿ ತೆರೆಗೆ ಬರಲಿದ್ದು, ಸಿನೆಮಾ ಪ್ರೇಮಿಗಳು ಪ್ರೋತ್ಸಾಹ ನೀಡಬೇಕೆಂದು ಕೋರಿದರು.

ಇದೇ ಸಂದರ್ಭದಲ್ಲಿ ಚಿತ್ರರಂಗ ಮತ್ತು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿರುವ ಪೂರ್ಣಿಮಾ ರಾಜ್ಕುಮಾರ್, ಧನ್ಯ ರಾಮ್ ಕುಮಾರ್, ಶೈನ್ ಶೆಟ್ಟಿ, ಕೃತಿ ಬಿ. ಶೆಟ್ಟಿ ಹಾಗೂ ಜೆ.ಪಿ. ತುಂಬಿನಾಡು ಸೇರಿದಂತೆ ಅನೇಕ ಗಣ್ಯರನ್ನು ಶ್ರೀ ಕೃಷ್ಣ ಗ್ರೂಪ್ ಆಫ್ ಡ್ಯಾನ್ಸ್ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು. ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಕೆ. ಕೃಷ್ಣಮೂರ್ತಿ ಆಚಾರ್ಯ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಅತಿಥಿಗಳನ್ನು ಸ್ವಾಗತಿಸಿದರು.
ಕಾರ್ಯಕ್ರಮದ ಯಶಸ್ಸಿಗೆ ಪತ್ರಕರ್ತ ರೂಪೇಶ್ ಕಲ್ಮಾಡಿ, ಕೃಷ್ಣಮೂರ್ತಿ ಅವರ ಪತ್ನಿ ಹಾಗೂ ಪುತ್ರರಾದ ಕವನ್ ಮತ್ತು ಪ್ರಥಮ್, ಡೆಂಜಿಲ್ ಜತ್ತನ್, ಪವಿತ್ರ ಹಾಗೂ ಸುಧೇಶ್ ಭಂಡಾರಿ ಅವರು ಸಹಕರಿಸಿದರು. ಹಿರಿಯ ನಿರೂಪಕ ಸತೀಶಚಂದ್ರ ಶೆಟ್ಟಿ ಇಡೀ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾದರು.




