
ಕೆ. ಸೋಮಪ್ಪ ಸುವರ್ಣ ನೆನಪು-ನಮನ ಸಮಿತಿ, ಮೂಲ್ಕಿ ವತಿಯಿಂದ ಮಾಜಿ ಶಾಸಕ, ಪ್ರಗತಿಪರ ಕೃಷಿಕ, ಶಿಕ್ಷಣ ತಜ್ಞ ಹಾಗೂ ಸಾಮಾಜಿಕ ನೇತಾರ ಕೆ. ಸೋಮಪ್ಪ ಸುವರ್ಣ ಅವರ 14ನೇ ವರ್ಷದ ಸಂಸ್ಮರಣೆ ಹಾಗೂ 2026ನೇ ಸಾಲಿನ ಪ್ರಶಸ್ತಿ ಪ್ರದಾನ ಸಮಾರಂಭವು ಜನವರಿ 28 ರಂದು ಸಂಜೆ 5:30 ಕ್ಕೆ ಮೂಲ್ಕಿ ಸಮೀಪದ ಕೊಲ್ಲೂರು ಶ್ರೀ ಕಾಂತಾಬಾರೆ ಬೂದಾಬಾರೆ ಜನ್ಮಕ್ಷೇತ್ರದಲ್ಲಿ ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಸಾಪ ಮಾಜಿ ರಾಜ್ಯಾಧ್ಯಕ್ಷ ಹಾಗೂ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ವಹಿಸಿದ್ದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಮಾತನಾಡಿ, “ಕೃಷಿಕರಾಗಿ, ಮಾಜಿ ಶಾಸಕರಾಗಿ ದಿ. ಸೋಮಪ್ಪ ಸುವರ್ಣ ಅವರು ಸಲ್ಲಿಸಿದ ಸಮಾಜ ಸೇವೆ ಅನುಕರಣೀಯವಾಗಿದೆ. ಅವರ ನೆನಪಿನಲ್ಲಿ ಸಾಧಕರನ್ನು ಗುರುತಿಸಿ ಗೌರವಿಸುವ ಈ ಕಾರ್ಯ ಅಭಿನಂದನೀಯ” ಎಂದು ಶ್ಲಾಘಿಸಿದರು.

ಕೊಲ್ಲೂರು ಕಾಂತಾಬಾರೆ ಬೂದಾಬಾರೆ ಜನ್ಮಕ್ಷೇತ್ರ ಸಮಿತಿಯ ಅಧ್ಯಕ್ಷ ದಾಮೋದರ ದಂಡಕೇರಿ ಹಾಗೂ ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ವಾಮನ ಕೋಟ್ಯಾನ್ ನಡಿಕುದ್ರು ಸಂಸ್ಮರಣಾ ಭಾಷಣ ಮಾಡಿದರು.
ಈ ಸಂದರ್ಭದಲ್ಲಿ ಶಿಕ್ಷಣ ಕ್ಷೇತ್ರದ ಸಾಧಕ ಅಂಡಾರು ಗುಣಪಾಲ ಹೆಗ್ಡೆ, ಕೃಷಿ ಕ್ಷೇತ್ರದ ಸಾಧಕ ರಾಜು ಸೇರಿಗಾರ ಕೊಲ್ಲೂರು ಹಾಗೂ ಸಮಾಜ ಸೇವಾ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆಗೈದ ಕಿನ್ನಿಗೋಳಿಯ ಸೈಂಟ್ ಮೇರಿಸ್ ವಿಶೇಷ ಶಾಲೆಯ ಪರವಾಗಿ ಜೋಸೆಫ್ ಕ್ವಾಡ್ರಸ್ ಅವರನ್ನು ಗೌರವಿಸಲಾಯಿತು.

ಇದೇ ವೇಳೆ ವಿದ್ಯಾರ್ಥಿ ವೇತನ ಹಾಗೂ ಶ್ರೀ ಕಾಂತಾಬಾರೆ ಬೂದಾಬಾರೆ ಕ್ಷೇತ್ರಕ್ಕೆ ಸಹಾಯಧನವನ್ನೂ ಹಸ್ತಾಂತರಿಸಲಾಯಿತು.
ವೇದಿಕೆಯಲ್ಲಿ ಉದ್ಯಮಿ ಚೆನ್ನಕೇಶವ ಸುವರ್ಣ, ಸಮಿತಿಯ ಜಂಟಿ ಕಾರ್ಯದರ್ಶಿ ವಿಜಯ ಕುಮಾರ್ ಕುಬೆವೂರು, ಸದಸ್ಯರಾದ ಜೋಸ್ಸಿ ಪಿಂಟೋ, ಪ್ರಮೋದ್ ಕುಮಾರ್, ಡಾ. ಗಣೇಶ್ ಅಮಿನ್ ಸಂಕಮಾರ್, ವಾಮನ ಕೋಟ್ಯಾನ್ ನಡಿಕುದ್ರು , ವೈ.ಎನ್.ಸಲ್ಯಾನ್, ಶಶಿಂದ್ರ ಎಂ. ಸಲ್ಯಾನ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಸಮಿತಿಯ ಪ್ರಮೋದ್ ಕುಮಾರ್ ಸ್ವಾಗತಿಸಿದರು. ಕಾರ್ಯದರ್ಶಿ ಚಂದ್ರಶೇಖರ ಸುವರ್ಣ ಧನ್ಯವಾದ ಅರ್ಪಿಸಿದರು. ಉದಯ ಅಮಿನ್ ಮಟ್ಟು ಕಾರ್ಯಕ್ರಮವನ್ನು ನಿರೂಪಿಸಿದರು, ಬಳಿಕ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.




