ಮುಂಬಯಿ: ಇಲ್ಲಿನ ಕುಮಾರ ಕ್ಷತ್ರಿಯ ಸಂಘದ ವತಿಯಿಂದ 60ನೇ ವರ್ಷದ ವಾರ್ಷಿಕ ಶ್ರೀ ಸತ್ಯನಾರಾಯಣ ಮಹಾಪೂಜೆ ಮತ್ತು ವಾರ್ಷಿಕ ಮಹಾಸಭೆಯು ಫೆಬ್ರುವರಿ 22ರಂದು ಸಾಂತಾ ಕ್ರೂಜ್ ಪೂರ್ವದ ಪ್ರಭಾತ್ ಕಾಲನಿಯ ಪೇಜಾವರ ಮಠದ ಮಧ್ವ ಭವನ ಸಭಾಗೃಹದ ತಳಮಹಡಿಯಲ್ಲಿ ಆಯೋಜಿಸಲಾಗಿದೆ.
ಅಂದು ಬೆಳಿಗ್ಗೆ 9.30ರಿಂದ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳೊಂದಿಗೆ ಸತ್ಯನಾರಾಯಣ ಪೂಜೆ ಜರುಗಲಿದೆ. ಸಂಘದ ಅಧ್ಯಕ್ಷ ಎಂ. ಡಿ. ರಾವ್ ಹಾಗೂ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಾಲು ಎಂ. ರಾವ್ ಅವರ ಮುಂದಾಳತ್ವದಲ್ಲಿ ಗಣಪತಿ ಹೋಮ, ಮಹಾಪೂಜೆ ಹಾಗೂ ಮಹಿಳಾ ವಿಭಾಗದವರಿಂದ ಅರಿಶಿನ-ಕುಂಕುಮ ಕಾರ್ಯಕ್ರಮಗಳು ನೆರವೇರಲಿವೆ.
ಮಧ್ಯಾಹ್ನ 12 ಗಂಟೆಗೆ ಸಂಘದ ಅಧ್ಯಕ್ಷ ಎಂ. ಡಿ. ರಾವ್ ಅವರ ಅಧ್ಯಕ್ಷತೆಯಲ್ಲಿ ವಾರ್ಷಿಕ ಮಹಾಸಭೆ ನಡೆಯಲಿದ್ದು, ಇದೇ ಸಂದರ್ಭದಲ್ಲಿ ಸಮಾಜದ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಿ ಗೌರವಿಸಲಾಗುವುದು. ಕಾರ್ಯಕ್ರಮಕ್ಕೆ ಬರುವ ಭಕ್ತಾದಿಗಳಿಗೆ ಬೆಳಿಗ್ಗೆ ಲಘು ಉಪಾಹಾರ ಹಾಗೂ ಮಧ್ಯಾಹ್ನ ಪ್ರೀತಿ ಭೋಜನದ ವ್ಯವಸ್ಥೆ ಮಾಡಲಾಗಿದೆ.
ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಬೇಕೆಂದು ಸಂಘದ ಪದಾಧಿಕಾರಿಗಳಾದ ಕೆ. ಮಾಧವ ರಾವ್ (ಉಪಾಧ್ಯಕ್ಷ), ಉಮಾನಾಥ ವಿ. ರಾವ್ (ಗೌರವ ಪ್ರಧಾನ ಕಾರ್ಯದರ್ಶಿ), ಶಾಂತಾರಾಮ್ ಜೆ. ಮಾಂಗಾಡ್ (ಕೋಶಾಧಿಕಾರಿ), ಸುರೇಂದ್ರ ಎಚ್. ಎ. (ಜತೆ ಕಾರ್ಯದರ್ಶಿ), ಸಾಗರ ಪಿ. ರಾವ್ (ಜತೆ ಕೋಶಾಧಿಕಾರಿ) ಹಾಗೂ ಸಮಿತಿ ಸದಸ್ಯರಾದ ರವಿ ಎಸ್. ಕಲ್ನಾಡ್, ಪ್ರಶಾಂತ್ ಆರ್. ರಾವ್, ಅನೂಪ್ ರಾವ್, ಅನಿಲ್ ಜಿ. ರಾವ್, ಪ್ರಶಾಂತ್ ಪಿ. ನಾಥ್, ರಾಮದಾಸ್ ರಾವ್, ತರುಣ್ ಎಸ್. ರಾವ್, ಜಯೇಶ್ ಚಂದ್ರಗಿರಿ, ಸಂತೋಷ್ ವಿ. ರಾವ್, ಇಂದುಮತಿ ಎ. ರಾವ್, ಕವಿತಾ ರೋಹನ್, ವಿಶಾಲಾಕ್ಷಿ ಎ. ಚಂದ್ರಗಿರಿ, ಪವಿತ್ರಾ ಎಸ್. ರಾವ್, ಬೀನಾ ಎಸ್. ರಾವ್, ರೇಖಾ ಸಾವಂತ್ ಮತ್ತು ರಮ್ಯಾ ಎಸ್. ಮಾಂಗಾಡ್ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.




