ಮುಂಬೈನ ಪೌರಾಣಿಕ ವಾಚಕ ಸಮಿತಿಯು ತನ್ನ ಸ್ಥಾಪನೆಯ ಸುವರ್ಣ ಮಹೋತ್ಸವ ಹಾಗೂ 50ನೇ ವರ್ಷದ ವಾರ್ಷಿಕ ಶನಿ ಮಹಾಪೂಜೆ ಮತ್ತು ಸುವರ್ಣ ಮಹೋತ್ಸವ ಕಾರ್ಯಕ್ರಮವನ್ನು ಅತ್ಯಂತ ಸಡಗರದಿಂದ ಆಯೋಜಿಸಿದೆ.
1975ರಲ್ಲಿ ದಿ. ಗೋಪಾಲ ಎ. ಕೋಟ್ಯಾಂಕರ್, ನಾರಾಯಣ ಪದ್ಮಶಾಲಿ, ಕೇಶವ ಬಂಗೇರ, ರತ್ನಾಕರ ಬಂಗೇರ ಮುಂತಾದ ಧಾರ್ಮಿಕ ಚಿಂತಕರ ನೇತೃತ್ವದಲ್ಲಿ ಸ್ಥಾಪಿಸಲ್ಪಟ್ಟ ಈ ಸಮಿತಿಯು ತನ್ನ 50 ವರ್ಷಗಳ ಸಾರ್ಥಕ ಪಯಣದ ಸಂಭ್ರಮದಲ್ಲಿದೆ.
ಫೆ. 28ಕ್ಕೆ ಸಮಿತಿಯ 50ನೇ ವಾರ್ಷಿಕ ಶ್ರೀ ಶನಿ ಮಹಾಪೂಜೆ ಮತ್ತು ಮಾ. 1ರಂದು ಸುವರ್ಣ ಮಹೋತ್ಸವ ಆಚರಣೆ, ಮುಂಬೈನ ಅಂಧೇರಿ (ಪಶ್ಚಿಮ) ವೀರಾ ದೇಸಾಯಿ ರಸ್ತೆಯಲ್ಲಿರುವ ಶ್ರೀ ಲಕ್ಷ್ಮಿ ನಾರಾಯಣ ಮಂದಿರದಲ್ಲಿ ನಡೆಯಲಿದೆ.
ಸಮಿತಿಯ ಅಧ್ಯಕ್ಷರಾದ ರತ್ನಾಕರ ಬಿ. ಬಂಗೇರ, ಗೌರವ ಪ್ರಧಾನ ಕಾರ್ಯದರ್ಶಿ ಲೋಕನಾಥ ಪಿ. ಕಾಂಚನ್ ಹಾಗೂ ಗೌರವ ಕೋಶಾಧಿಕಾರಿ ಸದಾಶಿವ ಎನ್. ಸುವರ್ಣ ಅವರ ನೇತೃತ್ವದಲ್ಲಿ ಈ ಸಮಾರಂಭವು ಜರುಗಲಿದೆ. ಕಾರ್ಯಕ್ರಮದ ಭಾಗವಾಗಿ ನಡೆಯುವ ‘ಗ್ರಂಥ ಪಾರಾಯಣ’ದಲ್ಲಿ ವಾಚಕರಾಗಿ ಸಂಜೀವ ಸಿ. ಬಂಗೇರ, ವ್ಯಾಖ್ಯಾನಕಾರರಾಗಿ ಚಂದ್ರಶೇಖರ್ ಬಿ. ಬಂಗೇರ, ಅರ್ಚಕರಾಗಿ ಚಂದ್ರಶೇಖರ ಬಿ ಬಂಗೇರ, ಕೇಶವ ಬಂಗೇರ, ಹಾಗೂ ಭಜನಾ ಭುವಜಿಯಾಗಿ ಲೋಕನಾಥ ಪಿ. ಕಾಂಚನ್ ಅವರು ಪಾಲ್ಗೊಳ್ಳಲಿದ್ದಾರೆ.
ಸಮಿತಿಯ ಪದಾಧಿಕಾರಿಗಳು ಈ ಭಕ್ತಿಪೂರ್ವಕ ಕಾರ್ಯಕ್ರಮಕ್ಕೆ ಎಲ್ಲಾ ಸದ್ಧರ್ಮ ಪ್ರೇಮಿಗಳನ್ನು ಕುಟುಂಬ ಸಮೇತವಾಗಿ ಪ್ರೀತಿಯಿಂದ ಆಹ್ವಾನಿಸಿದ್ದಾರೆ.
ಕಾರ್ಯಕ್ರಮಗಳ ವಿವರ :
2026ರ ಫೆಬ್ರವರಿ 28ರ ಶನಿವಾರದಂದು ಬೆಳಿಗ್ಗೆ 10.00 ರಿಂದ 10.30 ರವರೆಗೆ ಕಲಶ ಮುಹೂರ್ತದೊಂದಿಗೆ ಪಾರಾಯಣ ಚಾಲನೆಗೊಳ್ಳಲಿದೆ. ತದನಂತರ ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 3.30 ರವರೆಗೆ ಗ್ರಂಥ ಪಾರಾಯಣ ನಡೆಯಲಿದ್ದು, ಮಧ್ಯಾಹ್ನ 12.30 ರಿಂದ 2.00 ರವರೆಗೆ ಸಾರ್ವಜನಿಕ ಅನ್ನಸಂತರ್ಪಣೆ ಇರಲಿದೆ. ಸಂಜೆ 3.30 ರಿಂದ 4.00 ರವರೆಗೆ ಭಜನೆ ಹಾಗೂ 4.00 ರಿಂದ 4.30 ರವರೆಗೆ ಮಂಗಳಾರತಿ ಮತ್ತು ಪ್ರಸಾದ ವಿನಿಯೋಗದೊಂದಿಗೆ ಮೊದಲ ದಿನದ ಕಾರ್ಯಕ್ರಮಗಳು ಸಂಪನ್ನಗೊಳ್ಳಲಿವೆ.
ಎರಡನೇ ದಿನವಾದ ಮಾರ್ಚ್ 1ರ ಭಾನುವಾರದಂದು ಬೆಳಿಗ್ಗೆ 9.00 ಗಂಟೆಯಿಂದ ವಿವಿಧ ಆಹ್ವಾನಿತ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮವು ಆರಂಭವಾಗಲಿದೆ. ಅಂದು ಮಧ್ಯಾಹ್ನ 12.30 ರಿಂದ 2.00 ರವರೆಗೆ ಭಕ್ತಾದಿಗಳಿಗೆ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿದೆ. ಸಂಜೆ 4.30 ರಿಂದ 5.30 ರವರೆಗೆ ಧಾರ್ಮಿಕ ಸಭಾ ಕಾರ್ಯಕ್ರಮ ಹಾಗೂ ಸನ್ಮಾನ ಸಮಾರಂಭ ನಡೆಯಲಿದ್ದು, ಸಂಜೆ 6.00 ಗಂಟೆಯ ನಂತರ ಕುಣಿತ ಭಜನೆ ನಡೆಯಲಿದೆ.
ಶ್ರೀ ಶನಿ ಮಹಾದೇವನಿಗೆ ವಿವಿಧ ಸೇವೆಗಳನ್ನು ಅರ್ಪಿಸಲು ಇಚ್ಛಿಸುವ ಭಕ್ತರಿಗಾಗಿ ಸಮಿತಿಯು ಅವಕಾಶ ಕಲ್ಪಿಸಿದೆ. ಅನ್ನಸಂತರ್ಪಣೆಗೆ 15,000 ರೂ., ಪ್ರಸಾದ ಸೇವೆಗೆ 2,500 ರೂ., ಹೂವಿನ ಅಲಂಕಾರಕ್ಕೆ 2,000 ರೂ. ಹಾಗೂ ಲೈಟಿಂಗ್ ಮತ್ತು ಸೌಂಡ್ ಸಿಸ್ಟಮ್ ಸೇವೆಗೆ 2,000 ರೂ. ನಿಗದಿಪಡಿಸಲಾಗಿದೆ. ಇದರೊಂದಿಗೆ ಎಳ್ಳೆಣ್ಣೆ ಸೇವೆಗೆ 201 ರೂ. ನೀಡಿ ಭಕ್ತರು ಪುನೀತರಾಗಬಹುದಾಗಿದೆ.




