
ನಾಸಿಕ್: “ನಾವು ಎಷ್ಟೇ ವಿದ್ಯಾವಂತರಾಗಿ, ವಿಶ್ವದ ಯಾವುದೇ ಮೂಲೆಯಲ್ಲಿದ್ದರೂ ನಮ್ಮ ನಾಡಿನ ಆಚಾರ-ವಿಚಾರ ಹಾಗೂ ಸಂಸ್ಕೃತಿಯನ್ನು ಮರೆಯಬಾರದು. ಮನುಷ್ಯರ ನಡುವಿನ ಅನ್ಯೋನ್ಯ ಪ್ರೀತಿಯೇ ನಿಜವಾದ ಮಾನವೀಯ ಸಂಬಂಧ,” ಎಂದು ಬಾಂಬೆ ಬಂಟ್ಸ್ ಅಸೋಸಿಯೇಶನ್ನ ನಿಕಟಪೂರ್ವ ಅಧ್ಯಕ್ಷ ಸಿ.ಎ. ಸುರೇಂದ್ರ ಕೆ. ಶೆಟ್ಟಿ ಬೇಲಾಡಿ ಅಭಿಪ್ರಾಯಪಟ್ಟರು.
ಇಲ್ಲಿನ ಹೊಟೇಲ್ ಮಸಾಲ ಝೇನ್ ಸಭಾಭವನದಲ್ಲಿ ಇತ್ತೀಚೆಗೆ ಆಯೋಜಿಸಲಾಗಿದ್ದ ನಾಸಿಕ್ ಬಂಟರ ಸಂಘದ 20ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
“ಸಮಾಜ ಬಾಂಧವರು ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಒಗ್ಗೂಡಿ ಸಂಘಟನೆಯ ಬಲವರ್ಧನೆಗೆ ಶ್ರಮಿಸುತ್ತಿರುವುದು ಶ್ಲಾಘನೀಯ. ‘ನಾನು ನಿಮ್ಮವನು, ನೀವೆಲ್ಲ ನಮ್ಮವರು’ ಎಂಬ ಭಾವನೆ ನಮ್ಮಲ್ಲಿರಬೇಕು. ಈ ಪ್ರೀತಿಯೇ ಸೌಹಾರ್ದತೆಯ ಮೂಲಮಂತ್ರ. ಉದ್ಯೋಗ ನಿಮಿತ್ತ ಮಕ್ಕಳು ವಿದೇಶಕ್ಕೆ ಹೋದರೂ ತಂದೆ-ತಾಯಿಯ ಸೇವೆಯನ್ನು ಮರೆಯಬಾರದು. ನಾವು ಮಾಡುವ ಪ್ರತಿಯೊಂದು ಕೆಲಸದಲ್ಲೂ ಹೃದಯ ಮತ್ತು ಮನಸ್ಸನ್ನು ತೊಡಗಿಸಿಕೊಳ್ಳಬೇಕು,” ಎಂದು ಅವರು ಕಿವಿಮಾತು ಹೇಳಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ನಾಸಿಕ್ ಬಂಟರ ಸಂಘದ ಅಧ್ಯಕ್ಷ ರಾಮಚಂದ್ರ ಶೆಟ್ಟಿ ಮಾತನಾಡಿ, “ಬಂದ ದಾರಿಯನ್ನು ಮರೆಯದೆ ಮುಂದಿನ ಪೀಳಿಗೆಗೆ ನಮ್ಮ ಸಂಸ್ಕಾರವನ್ನು ದಾಟಿಸುವ ಕೆಲಸವಾಗಬೇಕು. ಯುವಜನತೆಯನ್ನು ಸಂಘದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಬೇಕು. ಹಿರಿಯರ ಕನಸಿನಂತೆ ಸಂಘದ ಭವನ ಮತ್ತು ಶಿಕ್ಷಣ ಸಂಸ್ಥೆಯ ನಿರ್ಮಾಣಕ್ಕೆ ನಾವೆಲ್ಲರೂ ಶ್ರಮಿಸೋಣ,” ಎಂದರು.
ಇದೇ ಸಂದರ್ಭದಲ್ಲಿ ಸಿ.ಎ. ಸುರೇಂದ್ರ ಕೆ. ಶೆಟ್ಟಿ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. ಯಕ್ಷಗುರು ರಾಜಶೇಖರ ಉಚ್ಚಿಲ್ ಅವರನ್ನು ಶಾಲು ಹೊದಿಸಿ, ಸ್ಮರಣಿಕೆಯನ್ನಿತ್ತು ಗೌರವಿಸಲಾಯಿತು.
ಸಂಘದ ಸಂಸ್ಥಾಪಕ ಅಧ್ಯಕ್ಷ ಕೊಡೆತ್ತೂರುಗುತ್ತು ಲಿಂಗಪ್ಪ ಕೆ. ಶೆಟ್ಟಿ, ಸಲಹಾ ಸಮಿತಿ ಸದಸ್ಯ ಹಾಗೂ ಮಾಜಿ ಅಧ್ಯಕ್ಷ ರಾಜ್ಗೋಪಾಲ್ ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಶೆಟ್ಟಿ, ಗೌರವ ಕೋಶಾಧಿಕಾರಿ ಅಮಿತ್ ಎಲ್. ಶೆಟ್ಟಿ, ಮತ್ತು ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಆಶಾ ವಿ. ಶೆಟ್ಟಿ ಉಪಸ್ಥಿತರಿದ್ದರು.
ವಾರ್ಷಿಕ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ವಿವಿಧ ಸ್ಪರ್ಧಾ ತಂಡಗಳ ಟ್ರೋಫಿಗಳನ್ನು ನಗ್ರಿಗುತ್ತು ರೋಹಿತ್ ಶೆಟ್ಟಿ ಪ್ರಾಯೋಜಿಸಿದ್ದರು.
ಸಾಂಸ್ಕೃತಿಕ ಕಾರ್ಯಕ್ರಮದ ಭಾಗವಾಗಿ ಸಂಘದ ಕಲಾವಿದರಿಂದ ‘ಶಿವ ಶಕ್ತಿ ಸಂಗಮ’ ನೃತ್ಯ ವೈಭವ ಹಾಗೂ ಮಹಾತ್ಮಾ ನಗರದ ಭ್ರಾಮರಿ ತಂಡದವರಿಂದ ‘ಹರಿ ಲೀಲಾಮೃತ’ ನೃತ್ಯ ರೂಪಕ ಪ್ರದರ್ಶನಗೊಂಡು ಗಮನ ಸೆಳೆದವು.
ರವೀಂದ್ರ ಕೆ. ಶೆಟ್ಟಿ ಅತಿಥಿಗಳನ್ನು ಪರಿಚಯಿಸಿದರು. ಪ್ರದೀಪ್ ಕೆ. ರೈ, ಜ್ಯೋತಿ ಸತೀಶ್ ಶೆಟ್ಟಿ ಮತ್ತು ಧೀರಜ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದ ಕಾರ್ಯಾಧ್ಯಕ್ಷ ಪ್ರಮೋದ್ ಶೆಟ್ಟಿ ಹಾಗೂ ಸಂಘದ ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಬಂಟ್ ಸಮಾಜದ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.




