
ಹರಿಶ್ಚಂದ್ರ ಎ. ಸಾಲಿಯಾನ್ರವರು ಸರ್ಕಾರಿ ಸೇವೆಯಿಂದ ನಿವೃತ್ತರಾದ ನಂತರ ತುಳು ಮತ್ತು ಕನ್ನಡ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಇವರು ‘ಹೊಸ ಅಂಗಣ’ ಮಾಸ ಪತ್ರಿಕೆಯನ್ನು ಆರಂಭಿಸಿ 10 ವರ್ಷಗಳ ಕಾಲ ಯಶಸ್ವಿಯಾಗಿ ನಡೆಸುತ್ತಾ, ಲೇಖಕರಿಗೆ ಬರವಣಿಗೆಯ ವೇದಿಕೆಯನ್ನು ಕಲ್ಪಿಸಿಕೊಟ್ಟಿದ್ದಾರೆ. ಇವರಿಗೆ ನಾವೆಲ್ಲರೂ ಪ್ರೋತ್ಸಾಹ ನೀಡಬೇಕು ಎಂದು ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಅವರು ಹೇಳಿದರು.
ಅವರು ಕೆ. ಎಸ್. ರಾವ್ ನಗರದ ಬಿಲ್ಲವ ಸಮಾಜ ಸೇವಾ ಸಂಘದ ಸಭಾಂಗಣದಲ್ಲಿ ಮಾರ್ಚ್ 10ರಂದು ಹೊಸ ಅಂಗಣ ಪ್ರಕಾಶನಾಲಯದ ಅಡಿಯಲ್ಲಿ ಪ್ರಕಟವಾದ ಹರಿಶ್ಚಂದ್ರ ಎ. ಸಾಲಿಯಾನ್ರವರ 22ನೇ ಕೃತಿ ‘ತುಳುನಾಡ್ಡ ತುಳು ಗಾದೆಲು’ ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡುತ್ತಿದ್ದರು.

ಸಾಹಿತ್ಯ ಲೋಕದಲ್ಲಿ ಇಂತಹ ಗಾದೆಗಳ ಕೃತಿಗಳನ್ನು ಬರೆಯುವವರು ತೀರಾ ಕಡಿಮೆ. ಇಂತಹ ಉತ್ತಮ ಕೆಲಸ ಮಾಡಿದ ಹರಿಶ್ಚಂದ್ರ ಸಾಲಿಯಾನ್ ಅವರಿಗೆ ನಮ್ಮ ಬೆಂಬಲ ಸದಾ ಇರಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ‘ಯುಗಪುರುಷ’ದ ಸಂಪಾದಕ ಭುವನಾಭಿರಾಮ ಉಡುಪ ಅವರು ಮಾತನಾಡಿ, ಹರಿಶ್ಚಂದ್ರ ಸಾಲಿಯಾನ್ ಅವರ ಮೊದಲ ಕೃತಿಯನ್ನು ಯುಗಪುರುಷ ಪ್ರಕಾಶನಾಲಯವೇ ಪ್ರಕಟಿಸಿತ್ತು. ಅವರ ‘ಮದು-ಮದಿಪು ನುಡಿಕಟ್ಟು’ ಕೃತಿ ಈಗಾಗಲೇ ಜನಪ್ರಿಯವಾಗಿದೆ. ಅದೇ ರೀತಿ ಈ ನೂತನ ಕೃತಿಯೂ ಅಪಾರ ಜನಮೆಚ್ಚುಗೆ ಗಳಿಸುವುದರಲ್ಲಿ ಸಂದೇಹವಿಲ್ಲ ಎಂದರು.
ವೇದಿಕೆಯಲ್ಲಿ ಉದ್ಯಮಿ ಸದಾಶಿವ ಆಚಾರ್ಯ, ಬಂಟರ ಸಂಘದ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ, ಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘದ ಅಧ್ಯಕ್ಷ ಮಹಾಬಲ ಎನ್. ಸನಿಲ್, ತುಳು ಪತ್ರಿಕೆ ಸಂಪಾದಕ ಪೂವರಿ ವಿಜಯ್ ಕುಮಾರ್ ಭಂಡಾರಿ ಪುತ್ತೂರು, ಸಾಮಾಜಿಕ ಕಾರ್ಯಕರ್ತ ಜಗದೀಶ್ ಬಂಗೇರ, ಗೋಪಿನಾಥ್ ಪಡಂಗ, ದಿನೇಶ್ ಕೊಲ್ನಾಡು , ಜಯಪಾಲ ಶೆಟ್ಟಿ, ಯೋಗ್ ಕ್ಯಾಡ್ವಾಸ್, ನಿವೃತ್ತ ಪೊಲೀಸ್ ಅಧಿಕಾರಿ ಕೆ. ಎನ್. ಕೋಟ್ಯಾನ್, ಸರೋಜಿನಿ ಸುವರ್ಣ, ಇಂದಿರಾ, ವಿಜಯ್ ಎಚ್. ಸಾಲಿಯಾನ್, ಕೇಶವಾನಂದ ಗುರೂಜಿ, ಕರುಣಾಕರ ಸುವರ್ಣ, ಜಿ. ಟಿ. ಆಚಾರ್ಯ,ಮುಂಬೈ, ಜೆ . ಎಸ್.ಕರ್ಕೇರ ಅವರು ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಪ್ರತಿಭಾವಂತ ಲೇಖಕಿ ಶರೋನ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಜೆಸಿ ದಿನೇಶ್ ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿದರೆ, ವಾಸು ಪೂಜಾರಿಯವರು ವಂದನಾರ್ಪಣೆ ಮಾಡಿದರು.




