
ಮದ್ಮೇದ ಮಾರ್ಕೆಟ್, ಬಂಗಾರ್ದ ಬೊಲ್ಪು, ಬೇಲಿದ ಪೂ, ದೇವರುಲ್ಲೆರ್, ರಜನಿ, ಪರ್ಧೆದ ಪಿರಾವುದ ನಾಟಕ, ಅಂಚಿ ಇಂಚಿ, ಬಲೇ ಇಡ್ಲಿ ತಿನ್ನ, ಬಜೀ ದೆತ್ಪಾಡಿನ್ಕಲ್ಲು ಮುಂತಾದ ತುಳು ನಾಟಕಗಳನ್ನು ರಚಿಸಿರುವ ಹಾಗೂ ಇಡ್ಲಿ ತಿನ್ನುವ ಸ್ಪರ್ಧೆ, ನುಂಗಣ್ಣ ಆಯೋಗದ ವರದಿ ಮತ್ತು ಹನಿ-ಧ್ವನಿ ಕನ್ನಡ ಕೃತಿಗಳನ್ನು ಹೊರ ತಂದಿರುವ ಮುಂಬಯಿಯ ಖ್ಯಾತ ಕವಿ ಹಾಗೂ ಲೇಖಕ ಸೋಮನಾಥ ಎಸ್. ಕರ್ಕೇರರ ಹೊಸ ತುಳು ಹನಿಗವನಗಳ ಸಂಕಲನ “ಪೆರ್ಗ”ವು ರವಿವಾರ ದಿನಾಂಕ 15/03/2026 ರಂದು ಸಂಜೆ ಗಂಟೆ 4.30 ಕ್ಕೆ ಡೊಂಬಿವಲಿ ಪೂರ್ವದ ಮಾನ್ಪಾಡ ರಸ್ತೆಯ ಗಾಂವ್ದೇವಿ ಮಂದಿರದ ಎದುರುಗಡೆಯ ಬಿ/6 ಮೌಲಿ ಕೋ-ಅಪರೇಟಿವ್ ಸೊಸೈಟಿಯ ಆವರಣದಲ್ಲಿ ಲೋಕಾರ್ಪಣೆಗೊಳ್ಳಲಿದೆ. ತುಳು ವೆಲ್ಫೇರ್ ಅಸೋಸಿಯೇಶನ್ ಡೊಂಬಿವಲಿ ಇದರ ಆಶ್ರಯದಲ್ಲಿ ಜರುಗಲಿರುವ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಸೋಸಿಯೇಶನ್ ಅಧ್ಯಕ್ಷ ರವಿ ಎಸ್. ಸನಿಲ್ ವಹಿಸಲಿದ್ದು, ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿ ಇದರ ಡೊಂಬಿವಲಿ ಶಾಖೆಯ ಕಾರ್ಯಾಧ್ಯಕ್ಷ ಯದುವೀರ ಬಿ. ಪುತ್ರನ್ ಕೃತಿ ಬಿಡುಗಡೆ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ಕವಿ, ಸಾಹಿತಿ ಹಾಗೂ ನಿರ್ದೇಶಕ ಸಾ.ದಯಾ ಕೃತಿ ಪರಿಚಯ ಮಾಡಿಕೊಡಲಿದ್ದಾರೆ. ತುಳುಶ್ರೀ ಕೋ-ಅಪರೇಟಿವ್ ಕ್ರೆಡಿಟ್ ಸೊಸೈಟಿಯ ಕಾರ್ಯಾಧ್ಯಕ್ಷೆ ಪ್ರತಿಭಾ ಡಿ. ಕರ್ಕೇರ ಅತಿಥಿಯಾಗಿ ಆಗಮಿಸಲಿದ್ದು, ಸಂಘಟಕ ವಸಂತ ಎನ್. ಸುವರ್ಣ ಕಾರ್ಯಕ್ರಮವನ್ನು ನಿರ್ವಹಿಸಲಿದ್ದಾರೆ.

ಬಳಿಕ ಲೇಖಕಿ ಹಾಗೂ ಕವಯಿತ್ರಿ ಶಾರದಾ ಎ ಅಂಚನ್ ಅವರ ಅಧ್ಯಕ್ಷತೆಯಲ್ಲಿ ತುಳು ಕವಿಗೋಷ್ಠಿ ನಡೆಯಲಿದ್ದು, ಈ ಗೋಷ್ಠಿಯಲ್ಲಿ ಕುಮುದಾ ಡಿ. ಶೆಟ್ಟಿ, ದೀಪಾ ಹರೀಶ್ ಶೆಟ್ಟಿ, ಸವಿತಾ ಸಿ. ಸಾಲ್ಯಾನ್, ಮೈನಾ ಪಿ. ಶೆಟ್ಟಿ ಮತ್ತು ಪ್ರಫುಲ್ಲಾ ಡಿ. ಶೆಟ್ಟಿ ತಮ್ಮ ಸ್ವರಚಿತ ಕವನಗಳನ್ನು ಸಾದರಪಡಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ತುಳು ಪ್ರೇಮಿಗಳು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ತುಳು ವೆಲ್ಫೇರ್ ಅಸೋಸಿಯೇಶನ್ ಕಾರ್ಯಾಧ್ಯಕ್ಷ ಯು ಲಕ್ಷ್ಮಣ್ ಸುವರ್ಣ, ಉಪಾಧ್ಯಕ್ಷ ವಸಂತ ಎನ್. ಸುವರ್ಣ, ಗೌರವ ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ ಸಿ. ಮೂಲ್ಯ ಮತ್ತು ಗೌರವ ಕೋಶಾಧಿಕಾರಿ ಪ್ರಕಾಶ್ ವಿ. ಅಮೀನ್ ಪತ್ರಿಕಾ ಪ್ರಕಟಣೆಯ ಮೂಲಕ ವಿನಂತಿಸಿಕೊಂಡಿದ್ದಾರೆ.

“ಪೆರ್ಗ” ಕೃತಿಯನ್ನು ಪ್ರತಿಯೊಬ್ಬ ತುಳುವರ ಮನೆ ಮನೆಗೂ ತಲುಪಿಸಲಾಗುವುದು ಮಾತ್ರವಲ್ಲದೆ, ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವ ಎಲ್ಲರಿಗೂ ತುಳುನಾಡಿನ ಸಂಪ್ರದಾಯದಂತೆ ಬೆಲ್ಲ-ನೀರು ಮತ್ತು ಮಹಿಳೆಯರಿಗೆ ವಿಶೇಷವಾಗಿ ತುಳುನಾಡಿನಿಂದ ತರಿಸಲಾದ ಮಲ್ಲಿಗೆ ಹೂವನ್ನು ಹಂಚಲಾಗುವುದು ಎಂದು ಪೆರ್ಗದ ಪ್ರಕಾಶಕರಾದ ಕಾಪುವಿನ ಪೂ-ಪನ್ನೀರ್ ಪ್ರಕಾಶನದವರು ತಿಳಿಸಿದ್ದಾರೆ.




