
ಮಕ್ಕಳ ಆಸಕ್ತಿ, ಸಾಮರ್ಥ್ಯ ಗುರುತಿಸಿ ಪ್ರೋತ್ಸಾಹಿಸಿ: ಡಾ. ಆರ್. ಕೆ. ಶೆಟ್ಟಿ
ಮುಂಬೈ: “ಪಾಲಕರು ಹಾಗೂ ಶಿಕ್ಷಕರು ಮಕ್ಕಳ ಆಸಕ್ತಿ ಮತ್ತು ಸಾಮರ್ಥ್ಯಗಳನ್ನು ಬಾಲ್ಯದಲ್ಲೇ ಗುರುತಿಸಿ ಅವರಿಗೆ ಸೂಕ್ತ ಪ್ರೋತ್ಸಾಹ ನೀಡಬೇಕು. ಮಕ್ಕಳ ಮೇಲೆ ಪೋಷಕರು ತಮ್ಮ ಆಸೆಗಳನ್ನು ಹೇರಬಾರದು,” ಎಂದು ಬಂಟರ ಸಂಘ ಮುಂಬೈ ಇದರ ಪ್ರಧಾನ ಕಾರ್ಯದರ್ಶಿ ಹಾಗೂ ಖ್ಯಾತ ಹಣಕಾಸು ಸಲಹೆಗಾರ ಡಾ. ಆರ್. ಕೆ. ಶೆಟ್ಟಿ ತಿಳಿಸಿದರು.
ಮೀರಾ ಭಾಯಂದರ್ ಪರಿಸರದ ಸಮಾಜಸೇವಕ, ಶಿಕ್ಷಣ ಪ್ರೇಮಿ ಡಾ. ಅರುಣೋದಯ ರೈ ಅವರ ನೇತೃತ್ವದ ರೈ ಸಮಿತಿ ಎಜುಕೇಶನಲ್ ಟ್ರಸ್ಟ್ ಸಂಚಾಲಿತ ಸೈಂಟ್ ಆಗ್ನೆಸ್ ಇಂಗ್ಲಿಷ್ ಹೈಸ್ಕೂಲ್ನ 19ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.

ವಿದ್ಯಾರ್ಥಿಗಳ ಸಾಂಸ್ಕೃತಿಕ ಪ್ರದರ್ಶನಗಳನ್ನು ಶ್ಲಾಘಿಸಿದ ಡಾ. ಶೆಟ್ಟಿ, “ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಮತ್ತು ಶಿಕ್ಷಕರ ಪರಿಶ್ರಮ ಮೆಚ್ಚುವಂತದ್ದು. ಪೋಷಕರು ಮಕ್ಕಳ ಪ್ರತಿಭೆಗೆ ತಕ್ಕಂತೆ ವೃತ್ತಿ ಆಯ್ಕೆ ಮಾಡಲು ಮುಕ್ತ ಅವಕಾಶ ನೀಡಬೇಕು. ಮನೆಯಲ್ಲಿ ಮಕ್ಕಳ ನಡವಳಿಕೆ, ಚಟುವಟಿಕೆಗಳು ಹಾಗೂ ಅವರ ಸ್ನೇಹ ಬಳಗದ ಬಗ್ಗೆ ಪೋಷಕರು ಸದಾ ನಿಗಾವಹಿಸಬೇಕು,” ಎಂದು ಕಿವಿಮಾತು ಹೇಳಿದರು.
ಇದೇ ಸಂದರ್ಭದಲ್ಲಿ 2024–25ನೇ ಸಾಲಿನ ಎಸ್ಎಸ್ಸಿ (SSC) ಪರೀಕ್ಷೆಯಲ್ಲಿ ಶೇ 90ಕ್ಕಿಂತ ಹೆಚ್ಚು ಅಂಕ ಗಳಿಸಿದ ಸಾಧಕ ವಿದ್ಯಾರ್ಥಿಗಳನ್ನು ಹಾಗೂ ವಿವಿಧ ಕ್ಷೇತ್ರಗಳ ಪ್ರತಿಭಾವಂತ ಮಕ್ಕಳನ್ನು ಗಣ್ಯರು ಸನ್ಮಾನಿಸಿದರು. ನಂತರ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಗಳಾಗಿ ಉದ್ಯಮಿಗಳಾದ ಶಿವರಾಮ ಶೆಟ್ಟಿ ಮತ್ತು ಉದಯ ಶೆಟ್ಟಿ ಮಲಾರ್ ಬೀಡು ಉಪಸ್ಥಿತರಿದ್ದರು. ಟ್ರಸ್ಟಿಗಳಾದ ಸ್ವರ್ಣಲತಾ ಎ. ರೈ, ಜೈ ಕಿರಣ್ ರೈ, ಕಾವ್ಯಶ್ರೀ ಜೆ. ರೈ, ಡಾ. ಸ್ವರೂಪಾ ರೈ ಶೆಟ್ಟಿ ಮತ್ತು ಚೇತನ್ ಶೆಟ್ಟಿ ಅವರು ಕಾರ್ಯಕ್ರಮದ ಯಶಸ್ಸಿಗೆ ಸಾಕ್ಷಿಯಾದರು.
ಕನ್ನಡಿಗರಾದ ಡಾ. ಅರುಣೋದಯ ರೈ ಅವರ ಸಮರ್ಥ ಆಡಳಿತದಲ್ಲಿ ಮುನ್ನಡೆಯುತ್ತಿರುವ ಈ ಸಂಸ್ಥೆಯು 3,000ಕ್ಕೂ ಅಧಿಕ ವಿದ್ಯಾರ್ಥಿ ಬಲವನ್ನು ಹೊಂದಿದೆ. ಪ್ರತಿ ವರ್ಷ ಎಸ್ಎಸ್ಸಿ ಪರೀಕ್ಷೆಯಲ್ಲಿ ಶೇ 100ರಷ್ಟು ಫಲಿತಾಂಶ ದಾಖಲಿಸುತ್ತಿರುವ ಈ ಶಾಲೆ, ಶೈಕ್ಷಣಿಕ ಹಾಗೂ ಸಹಪಠ್ಯ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿದೆ.
ಕಾರ್ಯಕ್ರಮದಲ್ಲಿ ಅಪಾರ ಸಂಖ್ಯೆಯ ಪೋಷಕರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ರಾಷ್ಟ್ರಗೀತೆಯೊಂದಿಗೆ ಸಮಾರಂಭವು ಮುಕ್ತಾಯಗೊಂಡಿತು.




