
ವಿವಶ…. ಈ ಧಾರಾವಾಹಿಯ ಈ ಹಿಂದಿನ ಸಂಚಿಕೆಗಳ ಲಿಂಕ್ ಕೆಳಗೆ ಇದೆ…
💢 ಧಾರಾವಾಹಿ ಭಾಗ – 1
https://mumbainewskannada.blogspot.com/2023/10/aaaaar-aa-aavaau-aanvaua-eegaqaa.html
💢 ಧಾರಾವಾಹಿ ಭಾಗ – 2
https://mumbainewskannada.blogspot.com/2023/10/blog-post_181.html
💢 ಧಾರಾವಾಹಿ ಭಾಗ – 3
http://mumbainewskannada.blogspot.com/2023/10/blog-post_425.html
⭕ ಧಾರವಾಹಿ ಭಾಗ – 4
https://mumbainewskannada.blogspot.com/2023/10/blog-post_636.html
⭕ ಧಾರವಾಹಿ ಭಾಗ – 5
https://mumbainewskannada.blogspot.com/2023/11/blog-post.html
ಧಾರವಾಹಿ ಭಾಗ – 6
ಕಾಸರಬೆಟ್ಟು ತಾಲೂಕಿನ ಅಡ್ಡಪಡ್ಪು ಗ್ರಾಮದವರಾದ ಲಕ್ಷ್ಮಣ ಮತ್ತು ಸರೋಜ ಸುಮಾರು ಇಪ್ಪತ್ತು ಮಂದಿ ಸದಸ್ಯರಿದ್ದ ಅವಿಭಕ್ತ ಕುಟುಂಬದಲ್ಲಿ ಜನಿಸಿದವರು. ಕೃಷಿಯೇ ಈ ಕುಟುಂಬದ ಜೀವಾಳ. ಇವರ ಹಿರಿಯರು ಯಾರೂ ವಿದ್ಯೆ ಕಲಿತವರಲ್ಲ. ತಮ್ಮ ಜೀವಿತಾವಧಿಯನ್ನು ಪೂರ್ತಿ ಬೇಸಾಯಕ್ಕೆ ಸಮರ್ಪಿಸಿಕೊಂಡು, ‘ಕಾಯಕವೇ ಕೈಲಾಸ’ ಎಂಬ ನಾಣ್ಣುಡಿಗೆ ತಕ್ಕ ಹಾಗೆ ಬಾಳಿ ಬದುಕುತ್ತ ಬಂದವರು ಹಾಗೂ ತಮ್ಮ ಮಕ್ಕಳು ಕೂಡಾ ಭೂಮಾತೆಯ ಸೇವೆಯಲ್ಲಿಯೇ ಜೀವನ ಸಾರ್ಥಕ್ಯವನ್ನು ಪಡೆಯಬೇಕು ಎಂದು ಆಶಿಸಿದವರು. ಆದರೆ ಸುತ್ತಲಿನ ಜಗತ್ತು ಮೆಲ್ಲಮೆಲ್ಲನೆ ತನ್ನ ಹಸುರು ವೈಭವವನ್ನು ಕಳೆದುಕೊಂಡು ಆಧುನಿಕತೆಯ ತೆಕ್ಕೆಗೆ ಸರಿಯುತ್ತಿದ್ದುದನ್ನು ಗಮನಿಸುತ್ತ ಬಂದವರಿಗೆ, ಇನ್ನು ತಮ್ಮ ಮಕ್ಕಳಿಗೂ ವಿದ್ಯೆಯ ಅವಶ್ಯಕತೆಯಿದೆ ಎಂದೆನ್ನಿಸತೊಡಗಿತು. ಆದರೂ ಹೆಚ್ಚಿನ ಶಿಕ್ಷಣದ ಅಗತ್ಯವಿಲ್ಲ. ವ್ಯವಹಾರಕ್ಕೆಷ್ಟು ಬೇಕೋ ಅಷ್ಟನ್ನು ಓದಿ, ಬರೆಯಲು ಕಲಿತರೆ ಸಾಕು ಎಂಬ ಧೋರಣೆ ಅವರದ್ದಾಗಿತ್ತು.

ಲಕ್ಷ್ಮಣ ತೆಳ್ಳಗೆ ಕೆಂಪಗೆ ಓಟಗಾರನಂಥ ದೇಹ ಸಿರಿಯ ತರುಣ. ಇಂದಿನ ಹುಡುಗರ ಹಾಗೆ ಜಿಮ್ಗೆ ಹೋಗಿ ಗಂಟೆಗಟ್ಟಲೆ ಬೆವರಿಳಿಸಿ, ಬೇಕು ಬೇಡದ್ದನ್ನೆಲ್ಲ ತಿಂದು, ‘ವರ್ಕ್ಔಟ್’ ಮಾಡಿ ಬೆಳೆಸಿಕೊಳ್ಳುವ ‘ಸಿಕ್ಸ್ಪ್ಯಾಕ್’ ಲಕ್ಷ್ಮಣನಿಗೆ ರಕ್ತಗತವಾಗಿ ಬಂದಿತ್ತು. ಚಿಕ್ಕಪ್ಪ ಮಾವ ಅತ್ತೆ ಮತ್ತು ಅಣ್ಣಂದಿರ ಪ್ರೀತಿ, ವಾತ್ಸಲ್ಯದೊಂದಿಗೆ ತನ್ನ ಅತಿಯಾದ ತುಂಟತನ, ಕೀಟಲೆಗಳಿಗೆ ಪ್ರತಿಯಾಗಿ ಆಗಾಗ ಬಿಸಿಬಿಸಿ ಕಜ್ಜಾಯ ಸೇವೆಯೂ ಅವರಿಂದಲೇ ಯಥೇಚ್ಛವಾಗಿ ಸ್ವೀಕರಿಸುತ್ತಿದ್ದವನು ಮಹಾ ಪೋಕರಿಯಾಗಿ ಬೆಳೆಯುತ್ತಿದ್ದ. ತನ್ನನ್ನು ಸುಖಾಸುಮ್ಮನೆ ಕೆಣಕಿದವರನ್ನು ಮಣ್ಣುಮುಕ್ಕಿಸದೆ ಬಿಡುವವನಲ್ಲ. ಒಂದೊಮ್ಮೆ ಕೋಪದ ಪಿತ್ತ ನೆತ್ತಿಗೇರಿತೆಂದರೆ ದೊಡ್ಡವರು ಸಣ್ಣವರೆಂಬ ಬೇಧಭಾವವಿಲ್ಲದೆ ಎಂಥವರೊಡನೆಯೂ ಹೊಡೆದಾಡಲು ಮುಂದಾಗುವವನು. ಆದರೆ ಕೆಲವೊಮ್ಮೆ ತನ್ನ ಅಜಾಗರೂಕತೆಯಿಂದಲೇ ಜಾರಿ ಬೀಳುವುದಿತ್ತಾದರೂ ಆಗೆಲ್ಲಾ, ‘ಹೇ ಹೋಗಿರನಾ…! ಏನೋ ಆಯ ತಪ್ಪಿ ಬಿದ್ದೆನಷ್ಟೆ. ನಾನೇನು, ಒಮ್ಮೊಮ್ಮೆ ಮಠದ ಆನೆಯೂ ಬೀಳುತ್ತದಂತೆ!’ ಎನ್ನುತ್ತ ತನ್ನ ಚಿಗುರು ಮೀಸೆಯನ್ನು ಕುಣಿಸಿ ಅಂಗಿಯ ರಾಜ್ಕುಮಾರ್ ಕಾಲರನ್ನು ರಪ್ಪನೆ ಕೊಡವಿ ಎದೆ ಸೆಟೆಸಿ ನಿಲ್ಲುತ್ತಿದ್ದ.
ಸರೋಜ, ಲಕ್ಷ್ಮಣನ ತಂದೆಯ ಸಹೋದರಿ, ಚಿನ್ನಕ್ಕನ ಮಗಳು. ಅವಳು ತನ್ನ ಉಳಿದ ದಾಯಾದಿಗಳನ್ನು ಅಣ್ಣತಮ್ಮಂದಿರೆoದೇ ಭಾವಿಸುತ್ತಿದ್ದಳಾದರೂ ಲಕ್ಷ್ಮಣ ಮಾತ್ರ ಅವಳಿಗೆ ಬಾಲ್ಯದಿಂದಲೂ ಪ್ರತ್ಯೇಕನಾಗಿ ಮತ್ತು ಎಲ್ಲರಿಗಿಂತಲೂ ಆತ್ಮೀಯನಾಗಿಬಿಟ್ಟಿದ್ದ. ಹಾಗಾಗಿ ಆಟೋಟವಿರಲಿ ಅಥವಾ ಇನ್ನಿತರ ಕೆಲಸಕಾರ್ಯಗಳಿರಲಿ ಎಲ್ಲದರಲ್ಲೂ ಅವಳು ಅವನ ಒಡನಾಟವನ್ನು ಬಯಸುತ್ತ ಅವನಿಗಂಟಿಕೊoಡೇ ಇರಲು ಇಷ್ಟಪಡುತ್ತಿದ್ದಳು. ಅತ್ತ ಲಕ್ಷ್ಮಣನೂ ಅವಳನ್ನು ಅಷ್ಟೇ ಹಚ್ಚಿಕೊಂಡಿದ್ದ. ಆದರೂ ಕೆಲವೊಮ್ಮೆ ಇಬ್ಬರ ನಡುವೆ ಸಣ್ಣಪುಟ್ಟ ವಿಷಯಕ್ಕೆ ಮನಸ್ತಾಪವೇಳುತ್ತಿದ್ದುದುಂಟು. ಬಳಿಕ ಅದು ತಟ್ಟನೆ ಮುನಿಸಿಗೂ ತಿರುಗಿ ಮತ್ತೆ ಮೂರು ನಾಲ್ಕು ದಿನಗಳ ಕಾಲ ಅವನ ಮುಖ ಆಚೆಗೆ, ಇವಳ ಮುಖ ಈಚೆಗೆ ಎಂಬoತೆ ತಿರುಚಿಕೊಳ್ಳುತ್ತಿದ್ದುದು ಸಾಮಾನ್ಯವಾಗಿತ್ತು. ಅಂಥ ಸಮಯದಲ್ಲಿ ಆಗಾಗ ಇಬ್ಬರೂ ಹಾವು ಮುಂಗುಸಿಗಳ ಹಾಗೆ ಕಚ್ಚಾಡಿಕೊಳ್ಳುತ್ತಿದ್ದರಾದರೂ ಕೊನೆಯಲ್ಲಿ ತನ್ನ ಕೋಪದ ಹೆಡೆಯನ್ನು ತಣ್ಣಗೆ ಮುದುಡಿಸಿಕೊಂಡು ಅವಳತ್ತ ಬರುವ ಸರಧಿ ಲಕ್ಷ್ಮಣನದ್ದಾಗಿರುತ್ತಿತ್ತು. ಲಕ್ಷ್ಮಣನ ಕೆಚ್ಚೆದೆಯ ಸ್ವಭಾವ ಮತ್ತು ತನ್ನ ಸುತ್ತಮುತ್ತಲಿನ ಇತರ ಪಡ್ಡೆ ಹುಡುಗರಿಗಿಂತ ಇವನ ನಡೆನುಡಿಗಳು ಭಿನ್ನವಾಗಿದ್ದುದನ್ನು ಕಾಣುತ್ತ ಬೆಳೆದ ಸರೋಜಾಳಲ್ಲಿ ಅವನ ಮೇಲೆ ಅವಳಿಗೇ ಅರ್ಥವಾಗದಂಥ ಆಕರ್ಷಣೆಯೊಂದು ಚಿಗುರಿಬಿಟ್ಟಿತ್ತು. ಜೊತೆಗೆ ಅವಳು ಅವನಲ್ಲಿ ಮೆಚ್ಚಿದ್ದ ಇನ್ನೊಂದು ವಿಶೇಷ ಗುಣವೆಂದರೆ ಅವನು ಆವರೆಗೆ ಬೇರೆ ಯಾವ ಹುಡುಗಿಯರ ಸೆಳೆತಕ್ಕೂ ಸಿಲುಕಿದವನಲ್ಲ ಎಂಬುದು. ಆದ್ದರಿಂದಲೇ ಅವಳಿಗೆ ಲಕ್ಷ್ಮಣನ ಮೇಲೆ ವಯೋಸಹಜವಾದ ಮೋಹಕ ಒಲವು ಅರಳಲು ಕಾರಣವಾಯಿತು.

ಲಕ್ಷ್ಮಣನಿಗಿಂತ ಸರೋಜ ಒಂದು ವರ್ಷ ಚಿಕ್ಕವಳು. ಆಗಷ್ಟೇ ಹದಿನೆಂಟರ ಹರೆಯಕ್ಕೆ ಕಾಲಿಟ್ಟಿದ್ದ ಅವಳು ಮೈಕೈ ತುಂಬಿಕೊoಡು ದಂತದ ಗೊಂಬೆಯoತಿದ್ದಳು. ಹಾಗಾಗಿ ಆಸುಪಾಸಿನ ಯುವಕರ ಆಸೆಯ ಕಣ್ಣುಗಳು ಸದಾ ಅವಳನ್ನು ಹಿಂಬಾಲಿಸುತ್ತ ಅವಳ ಸೌಂದರ್ಯವನ್ನು ಸವಿಯಲು ಹವಣಿಸುತ್ತಿದ್ದುವು. ಆದರೆ ಅವಳ ಕನಸು ಮನಸಿನಲ್ಲೂ ಲಕ್ಷ್ಮಣನೇ ತುಂಬಿರುತ್ತಿದ್ದ. ಅವನ ಒಡನಾಟದಲ್ಲಿ ಅವಳ ಮೈಮನಸ್ಸುಗಳು ಸದಾ ಅರಳಿ ನಳನಳಿಸುವ ಹೂಗಳಾಗುತ್ತಿದ್ದವು. ಅವನಿಂದ ಸಿಗುತ್ತಿದ್ದ ಮೃದು ಮಧುರವಾದ ಭದ್ರತೆಯೊಂದು, ಅವನೇ ತನ್ನ ಜೀವದ ಗೆಳೆಯನೆಂದು ಅವಳು ನಿರ್ಧರಿಸುವಂತೆ ಮಾಡಿತ್ತು. ಹೀಗಾಗಿ ಅವಳು ಅವನ ಸ್ನೇಹ ಮತ್ತು ಸಾಮಿಪ್ಯಕ್ಕಾಗಿ ಪ್ರತಿಕ್ಷಣವೂ ಹಂಬಲಿಸುತ್ತಿದ್ದಳು. ಆದರೆ ಆರಂಭದಲ್ಲಿ ಕೆಲವು ಕಾಲ ಇಂಥ ಮನಸ್ಥಿತಿಯು ಅವಳಲ್ಲಿ ತಪ್ಪಿತಸ್ಥ ಭಾವನೆಯನ್ನೂ ಭಯವನ್ನೂ ಸೃಷ್ಟಿಸಿ ಅವನಿಂದ ದೂರವಿರುವಂತೆ ಮಾಡುತ್ತಿತ್ತು. ಆಗೆಲ್ಲ ಒಂಟಿಯಾಗಿ ಕುಳಿತು ಯೋಚಿಸುತ್ತಿದ್ದವಳು, ತಾವಿಬ್ಬರೂ ರಕ್ತ ಸಂಬoಧಿಗಳಲ್ಲವಾ…? ನಮ್ಮನ್ನು ಗಂಡ ಹೆಂಡತಿಯರಾಗಲು ಮನೆಯವರು ಒಪ್ಪುತ್ತಾರಾ…? ಎಂದುಕೊoಡು ವಿಚಲಿತಳಾಗುತ್ತಿದ್ದಳು. ಮರುಕ್ಷಣ ಇಲ್ಲ, ಇಲ್ಲ. ಖಂಡಿತಾ ಯಾರೂ ಒಪ್ಪಲಿಕ್ಕಿಲ್ಲ. ಯಾಕೆಂದರೆ ನಮ್ಮಿಬ್ಬರನ್ನೂ ಅವರು ಅಣ್ಣ ತಂಗಿಯರoತೆಯೇ ಬೆಳೆಸಿದವರು ಮತ್ತು ನಾವು ಕೂಡಾ ಹಾಗೆಯೇ ಇರುವಂತೆ ಸೂಕ್ಷ್ಮವಾಗಿ ಎಚ್ಚರಿಸುತ್ತಲೂ ಬಂದವರು. ಹೀಗಾಗಿ ನಮ್ಮ ಸಂಬoಧದ ಬಗ್ಗೆ ತಿಳಿದರೆ ಸುಮ್ಮನಿರುತ್ತಾರಾ? ಅಷ್ಟಲ್ಲದೆ ಆನಂತರ ಅವರ ಮುಂದೆ ತಲೆಯೆತ್ತಿ ತಿರುಗುವುದಾದರೂ ಹೇಗೆ…? ಎಂದೆಲ್ಲ ಚಿಂತಿಸುತ್ತ ಮೌನವಾಗಿ ಕಣ್ಣೀರಿಡುತ್ತಿದ್ದಳು. ಆದರೆ ಮತ್ತೆ, ಅದೇನೇ ಆದರೂ ನನ್ನ ಲಕ್ಷ್ಮಣನನ್ನು ಬಿಟ್ಟು ಬದುಕುವ ಶಕ್ತಿ ಖಂಡಿತಾ ತನಗಿಲ್ಲ. ಅವನು ನನ್ನ ಪ್ರಾಣ! ನಾನು ಮದುವೆಯೆಂದು ಆಗುವುದಾದರೆ ಅವನನ್ನೇ ಹೊರತು ಬೇರೆ ಯಾರನ್ನೂ ಕಣ್ಣೆತ್ತಿಯೂ ನೋಡುವುದಿಲ್ಲ! ಎಂದು ನಿರ್ಧರಿಸಿ ನಿರಾಳಳಾಗುತ್ತಿದ್ದಳು. ಹೀಗೆ ಸರಿ, ತಪ್ಪುಗಳು ಯಾವುವು? ಎಂದರಿಯದ ವಯಸ್ಸಿನಲ್ಲಿದ್ದ ಅವಳು ಲಕ್ಷ್ಮಣನ ಮೇಲಿನ ರಕ್ತ ಸಂಬoಧವೆoಬ ಭಾವಬಂಧನದಿoದ ನಿಧಾನವಾಗಿ ಕಳಚಿಕೊಂಡುಬಿಟ್ಟಳು.
ಆದರಿತ್ತ ಲಕ್ಷ್ಮಣನ ಸ್ಥಿತಿ ಹೇಗಿತ್ತೆಂದರೆ, ತನ್ನ ಮನೆಮಂದಿಯೆಲ್ಲ, ‘ನಿನ್ನ ಸಹೋದರಿ ಸಮಾನಳು!’ ಎಂದೆನ್ನುತ್ತಿದ್ದ ಹುಡುಗಿಯೊಬ್ಬಳನ್ನು ತನ್ನ ಸಂಗಾತಿಯೆoದು ಅಥವಾ ಗಂಡೊoದು ಹೆಣ್ಣನ್ನು ಬಯಸುವ ರೀತಿಯಲ್ಲಿ ಸರೋಜಾಳಷ್ಟು ಬೇಗನೇ ಮತ್ತು ಅದೇ ತೀವ್ರತೆಯಲ್ಲಿ ಬಯಸಲು ಹಾಗೂ ಮನಸಾರೆ ಒಪ್ಪಿಕೊಳ್ಳಲು ಅವನ ಮನಸ್ಸಿನ್ನೂ ಪರಿಪಕ್ವವಾಗಿರಲಿಲ್ಲ. ಹಾಗಾಗಿ ಪುಟ್ಟ ಬಾಲಕಿಯಾಗಿ ಚುರುಕಿನ ಹುಡುಗಿಯಾಗಿ ಆಪ್ತ ಗೆಳತಿಯಾಗಿ ಒಡನಾಡುತ್ತ ಬೆಳೆದವಳೊಬ್ಬಳು ವಯಸ್ಸಿಗೆ ಬಂದ ಮೇಲೆ ತನ್ನನ್ನು ಕಾಣುವಾಗಲೆಲ್ಲ ವಯ್ಯಾರದಿಂದ ವರ್ತಿಸುತ್ತ ವಿಚಿತ್ರ ನಾಚಿಕೆಯಿಂದ, ‘ಏನೋ ಒಂಥರಾ…!’ ನೋಡತೊಡಗಿದ್ದುದು ಮತ್ತು ಹೋದಲ್ಲಿ ಬಂದಲ್ಲಿ, ನಿಂತಲ್ಲಿ ಕುಳಿತಲ್ಲಿ ಸದಾ ತನ್ನ ಸಾಂಗತ್ಯವನ್ನೇ ಬಯಸುತ್ತಿದ್ದುದರ ಒಳಾರ್ಥವು ಅವನಿಗೆ ಮೊದಮೊದಲು ಹೊಳೆಯಲೇ ಇಲ್ಲ. ಆದರೆ ಆ ‘ಏನೋ ಒಂಥರಾ!’ ಕ್ಕೆ ಸಂಬoಧಿಸಿದ ಭಾವನೆ, ಯೋಚನೆಗಳು ತನ್ನೊಳಗೂ ಮೂಡುತ್ತಿದ್ದುದು ಮಾತ್ರ ಅವನಿಗೂ ಅಚ್ಚರಿಯೆನಿಸುತ್ತಿತ್ತು.
ಆಗೀಗೊಮ್ಮೆ ತಮ್ಮ ನಡುವೆ ಹುಟ್ಟುತ್ತಿದ್ದ ಮುನಿಸು, ಕಚ್ಚಾಟದಲ್ಲಿ ನಾವು ಒಬ್ಬರನ್ನೊಬ್ಬರು ಬಯಸುವ ರೀತಿಯನ್ನು ಗಮನಿಸುತ್ತ ಬರುತ್ತಿದ್ದ ಹೆತ್ತವರು ನಮ್ಮನ್ನು ಸೂಕ್ಷ್ಮವಾಗಿ ಎಚ್ಚರಿಸಲೆಂದೋ ಅಥವಾ ಖುಷಿಯಿಂದಲೋ, ‘ಹೇ, ಲಕ್ಷ್ಮಣಾ ಯಾಕೆ ಮಾರಾಯಾ ಅವಳನ್ನು ಯಾವಾಗಲೂ ಸತಾಯಿಸುತ್ತೀ…? ನಿನ್ನ ತಂಗಿಯಲ್ಲವನಾ ಅವಳು! ಹಾಗೆಲ್ಲ ನೋಯಿಸಬಾರದನಾ…!’ ಎನ್ನುತ್ತಿದ್ದವರು, ‘ಲೇ, ಸರೋಜಾ ನೀನೂ ಯಾಕೆ ಮಾರಾಯ್ತೀ ಅವನಿಗೆ ಸರಿಸಮವಾಗಿ ಜಗಳಕ್ಕೆ ನಿಲ್ಲುತ್ತೀ…? ಅವನೊಡನೆ ಗುದ್ದಾಡಿ ಗೆಲ್ಲಲು ಸಾಧ್ಯ ಉಂಟಾ ನಿನ್ನಿಂದ! ಅವನು ನಿನ್ನ ಅಣ್ಣನಲ್ಲವನಾ…ಯಾಕೆ ಗೋಳು ಹೊಯ್ದುಕೊಳ್ಳುತ್ತೀ…?’ ಎಂದು ಮೃದುವಾಗಿ ಗದರಿಸುತ್ತಿದ್ದುದೂ ಲಕ್ಷ್ಮಣನನ್ನು ಆಗಾಗ ಗೊಂದಲಕ್ಕೀಡು ಮಾಡುತ್ತಿತ್ತು. ಆದರೂ, ‘ಸರೋಜ ತನ್ನ ತಂಗಿಯ ಸಮಾನಳು!’ ಎಂಬ ಭಾವನೆಯು ಅವನಲ್ಲೆಂದೂ ಹುಟ್ಟಿರಲಿಲ್ಲ. ಅಷ್ಟಲ್ಲದೇ ಅವನು ಯಾವ ವಿಷಯವನ್ನೇ ಆಗಲಿ ಅಷ್ಟೊಂದು ಗಂಭೀರವಾಗಿ ಯೋಚಿಸುವ, ಸ್ವೀಕರಿಸುವ ಸ್ವಭಾವದವನೂ ಅಲ್ಲ ಮಾತ್ರವಲ್ಲದೇ ಅಂಥದ್ದನ್ನೆಲ್ಲ ತರ್ಕಿಸುತ್ತ ಕೂರುವ ವಯಸ್ಸೂ ಅವನದಾಗಿರಲಿಲ್ಲ.

ಆದ್ದರಿಂದ ಸರೋಜಾಳ ಮೇಲೆ ಅವನಲ್ಲೂ ವಿಶೇಷ ಆಕರ್ಷಣೆಯೊಂದು ಮೊಳೆತು ಅದಕ್ಕೆ ಸರಿಯಾಗಿ ಹದಿಹರೆಯದ ಕಾಮನೆಗಳೆದ್ದು ಅವಳ ಸೌಂದರ್ಯದ ಮೂಲಕ ಅವನನ್ನು ಕಾಡಲಾರಂಭಿಸಿದವು. ಅವನ ಅಂಥ ಭಾವನೆಗಳಿಗೆ ಇನ್ನಷ್ಟು ಇಂಬು ನೀಡುತ್ತಿದ್ದ ಇನ್ನೊಂದು ಮುಖ್ಯ ಸಂಗತಿಯೆoದರೆ, ‘ನಮ್ಮ ಸರೋಜ ಹೋಲಿಕೆಯಲ್ಲಿ ಥೇಟ್ ಸಿನೇಮಾ ತಾರೆ ಶ್ರೀದೇವಿಯಂತೆಯೇ ಇದ್ದಾಳಲ್ಲವಾ!’ ಎಂದು ಮನೆಮಂದಿಯು ಆಗಾಗ ಅವನೆದುರು ಹೊಗಳುತ್ತಿದ್ದುದೂ ಅವನೊಳಗೆ ಮಾರ್ದನಿಸುತ್ತ, ಮೋಹಕ ತಾರೆ ಶ್ರೀದೇವಿಯೇ ಸರೋಜಾಳ ರೂಪದಲ್ಲಿ ತನ್ನೊಂದಿಗಿರುವoತೆ ಅವನು ಭಾವಿಸುತ್ತಿದ್ದವನು ಅದೇ ಭ್ರಮೆಯಿಂದ ಅವಳನ್ನು ಗಾಢವಾಗಿ ಪ್ರೇಮಿಸತೊಡಗಿದ್ದ. ಹೀಗಿದ್ದವರು ಆವತ್ತೊಂದು ದಿನ ಸಂಜೆ ಸೂರ್ಯನ ಹೊಂಗಿರಣಗಳು ತೋಟದೊಳಗೆಲ್ಲ ಮೃದುವಾಗಿ ಹರಡಿದ್ದ ಸಮಯದಲ್ಲಿ ಹಕ್ಕಿಪಕ್ಷಿಗಳ ಇಂಪಾದ ಕಲರವದ ನಡುವಿನ ಮನೋಹರ ಪರಿಸರದೊಳಗೆ ಸುಮಾರು ಹೊತ್ತು ಜೋಡಿ ಹಕ್ಕಿಗಳಂತೆ ವಿಹರಿಸುತ್ತ ಮುದಗೊಂಡರು. ಆದರೆ ತಮ್ಮೊಳಗಿನ ಹತ್ತಿಕ್ಕಲಾರದಂಥ ಭಾವ ತೀವ್ರತೆಗಳೆಲ್ಲಿ ಎಲ್ಲೇ ಮೀರುತ್ತವೋ ಎಂದು ಭಯಪಟ್ಟವರು ಕತ್ತಲಾಗುವ ಮೊದಲೇ ಮನೆಗೆ ಹಿಂದಿರುಗಿದರು.
ಸರೋಜಾ, ಕೈಕಾಲು ತೊಳೆಯಲೆಂದು ಬಚ್ಚಲು ಕೋಣೆಯನ್ನು ಹೊಕ್ಕವಳು ತನ್ನ ಉದ್ದ ಲಂಗವನ್ನು ಮೊಣಗಂಟಿನವರೆಗೆತ್ತಿ ಸೊಂಟಕ್ಕೆ ಸಿಲುಕಿಸಿಕೊಂಡು ಹಂಡೆಯಿoದ ನೀರನೆತ್ತಿ ಕಾಲು ತೊಳೆಯಲು ಬಾಗಿದಳು. ಆಗಲೂ ಅವಳ ಹಿಂದೆಯೇ ಬಂದಿದ್ದ ಲಕ್ಷ್ಮಣನು ಅವಳ ಬಾಗಿದ ಭಂಗಿಯನ್ನು ಕಂಡು ಒಂದುಕ್ಷಣ ತನ್ನನ್ನು ತಾನು ಮರೆತು ಅವಳ ಹಿಂದಿನಿoದ ಬಾಚಿ ತಬ್ಬಿಕೊಂಡುಬಿಟ್ಟ. ಸರೋಜಾ ಒಮ್ಮೆಲೆ ಬೆಚ್ಚಿಬಿದ್ದಳು. ಮರುಕ್ಷಣ ಅವಳಿಗೆ ವಿಪರೀತ ಭಯವಾಗಿ ದೇಹವಿಡೀ ಕಂಪಿಸಿತು. ರಪ್ಪನೇ ಅವನಿಂದ ಕೊಸರಾಡಿ ತಪ್ಪಿಸಿಕೊಂಡು ಒಳಗೆ ಓಡಿದಳು. ಆದರೆ ಕೋಣೆಗೆ ಹೋಗಿ ಕುಳಿತವಳು ನಡುಗುತ್ತಿದ್ದ ತನ್ನ ದೇಹವನ್ನೂ ತಾಳ ತಪ್ಪಿದ ಹೃದಯನ್ನೂ ಹಿಡಿತಕ್ಕೆ ತಂದುಕೊಳ್ಳಲು ಹೆಣಗುತ್ತ ಅದೇ ಘಟನೆಯ ಬಗ್ಗೆ ಯೋಚಿಸಿದಳು. ಆಗ ಅವಳಿಗೆ ತನ್ನ ಅಂಥ ಸ್ಥಿತಿಯಲ್ಲೂ ಒಂದು ವಿಷಯ ಸ್ಪಷ್ಟವಾಯಿತು. ‘ಲಕ್ಷ್ಮಣನೂ ತನ್ನನ್ನು ಬಯಸುತ್ತಿದ್ದಾನೆ!’ ಅಷ್ಟನ್ನಿಸುತ್ತಲೇ ಅವಳ ಮನಸ್ಸು ಅರಳಿ ಹೂವಾಯಿತು. ಆವತ್ತಿನಿಂದ ಇಬ್ಬರೂ ಸಂಪೂರ್ಣ ಬದಲಾಗಿಬಿಟ್ಟರು. ಮನೆಮಂದಿಯ ಜೊತೆಯಲ್ಲಿರುವಾಗ ಏನೂ ಅರಿಯದ ಮುಗ್ಧರಂತೆ ಇರುತ್ತಿದ್ದವರಿಗೆ ಒಂದಿಷ್ಟು ಏಕಾಂತ ದೊರಕುತ್ತಲೇ ಅವರೊಳಗಿನ ಪ್ರೀತಿಯ ಭಾವನೆಗಳು ಗರಿಗೆದರಿ ಕುಣಿಯುತ್ತಿದ್ದವು. ಹಗಲಲ್ಲಿ, ಮನೆಯಲ್ಲಿ ಯಾರೂ ಇಲ್ಲದ ಸಮಯ ಮತ್ತು ಇದ್ದರೂ ಅವರು ಮಧ್ಯಾಹ್ನದ ಹೊತ್ತು ನಿದ್ರಿಸುವ ಸಣ್ಣ ವೇಳೆಯೂ ಈ ಪ್ರೇಮಿಗಳಿಗೆ ರಸಮಯ ಸಂದರ್ಭವಾಗುತ್ತಿತ್ತು. ಆಗೆಲ್ಲಾ ವಿಶಾಲವಾದ ದನದ ಹಟ್ಟಿಯ ಮೇಲಿನ ಅಟ್ಟವೂ ಮತ್ತು ಹಿತ್ತಲ ತೋಟದ ಗಿಡಮರ, ಬಳ್ಳಿಗಳೂ ಇವರ ಪ್ರೇಮ ಸಲ್ಲಾಪದ ಮಾಧುರ್ಯಕ್ಕೆ ಸಾಕ್ಷಿಯಾಗುತ್ತಿದ್ದವು.
ಸುಮಾರು ನಾಲೈದು ತಲೆಮಾರುಗಳು ಬದುಕಿ ಬಾಳಿದಂಥ ತುಂಡುಪ್ಪರಿಗೆಯ ಮನೆ ಸರೋಜ ಮತ್ತು ಲಕ್ಷ್ಮಣರದ್ದು. ಮನೆಯ ಹಿಂದುಗಡೆ ಮಾವು, ಗೇರು, ಹುಣಸೆ, ಅಂಬಟೆ, ನುಗ್ಗೆ ಮತ್ತು ಹಲಸಿನ ಮರಗಳಿದ್ದ ಕಾಡಿನಂಥ ವಿಶಾಲ ತೋಟ. ಅದರಲ್ಲಿ ಮನೆಯಷ್ಟೇ ಪುರಾತನವಾದ ಮತ್ತು ಮೂರಾಳುಗಳು ಬಳಸಿ ಹಿಡಿಯುವಷ್ಟು ಅಗಲವಾದ ಹಲಸಿನ ಮರವೊಂದಿತ್ತು. ಹಿಂದಿನಿoದಲೂ ಸಮೃದ್ಧ ಫಲ ನೀಡುತ್ತಿದ್ದ ಆ ಮರದ ‘ಬಕ್ಕೆ’ ಹಣ್ಣುಗಳನ್ನು ತಿನ್ನುತ್ತ ಅದರ ಸುತ್ತಮುತ್ತ ಖುಷಿಯಿಂದ ಓಡಾಡುತ್ತ ಮರ ಕೋತಿ, ಮುಟ್ಟಾಟಗಳನ್ನಾಡುತ್ತ ಬೆಳೆದ ಸರೋಜ, ಲಕ್ಷ್ಮಣರ ಇಂದಿನ ಪ್ರಣಯದಾಟಕ್ಕೂ ಅದೇ ಮರವು ರಹಸ್ಯ ವೇದಿಕೆಯಾಗಿ ಮಾರ್ಪಟ್ಟಿತ್ತು. ಆ ಮರವೂ ತನ್ನ ದೈತ್ಯ ರೆಂಬೆಕೊoಬೆಗಳನ್ನು ಚಾಚಿಕೊಂಡು ಎಳೆಯ ಪ್ರೇಮಿಗಳನ್ನು ತನ್ನತ್ತ ಸೆಳೆಯುತ್ತ ಅವರ ಹದಿಹರೆಯದ ನವಿರು ಭಾವನೆಗಳಿಗೆ ಜೀವ ತುಂಬುತ್ತಿತ್ತು. ಈ ವರ್ಷವೂ ಆ ಮರ ತನ್ನ ಮೈತುಂಬಾ ನೂರಾರು ಹಲಸುಗಳನ್ನು ತುಂಬಿಕೊoಡು ಪ್ರಸವಕ್ಕೆ ಅಣಿಯಾದ ಬಸುರಿಯಂತೆ ಕಾಣುತ್ತಿತ್ತು. ಅದೊಂದು ಸಂಜೆಯ ಹೊತ್ತು ಈ ಪ್ರೇಮಿಗಳು, ಮರದ ದೈತ್ಯ ಕೊಂಬೆಯೊoದರ ಮೇಲೆ ಮರೆಯಾಗಿ ಕುಳಿತುಕೊಂಡು ಸರಸ ಸಲ್ಲಾಪದಲ್ಲಿ ಮೈಮರೆತಿದ್ದರು.
ಇತ್ತ ಸರೋಜಾಳ ತಂದೆ ವಿಶ್ವನಾಥ ಆ ಮರದಲ್ಲಿ ಬಲಿತಿದ್ದ ಕೆಲವು ಹಲಸುಗಳನ್ನು ಹಿಂದಿನ ದಿನವೇ ಗುರುತಿಸಿ ಇಟ್ಟಿದ್ದ. ಆದರೆ ನಾಳೆ ಕೊಯ್ದರಾಯ್ತೆಂದುಕೊoಡು ಮರುದಿನ ಗದ್ದೆಯ ಕೆಲಸ ಮುಗಿಸಿ ಸೀದಾ ತೋಟ ಹೊಕ್ಕು ಮರದ ಬುಡಕ್ಕೆ ಬಂದು ನಿಂತ. ಮತ್ತೊಮ್ಮೆ, ‘ಎಷ್ಟು ಹಲಸುಗಳು ಬಲಿತಿವೆ…?’ ಎಂದು ಕೊರಳೆತ್ತಿ ಪರೀಕ್ಷಿಸತೊಡಗಿದ. ಅದೇ ಸಮಯಕ್ಕೆ ಸಿಹಿಮುತ್ತಿನ ಲೋಕದಲ್ಲಿ ಕಳೆದು ಹೋಗಿದ್ದ ಯುವಜೋಡಿಗೆ ಮರದ ಕೆಳಗೆ ಯಾರೋ ಬಂದು ನಿಂತದ್ದು ಅರಿವಿಗೆ ಬರಲೇಇಲ್ಲ. ಇತ್ತ ಯಾರದೋ ಗುಸುಗುಸು ಸದ್ದು, ಮುಲುಗುವಿಕೆಯನ್ನು ಆಲಿಸಿದ ವಿಶ್ವನಾಥ, ‘ಯಾರದು…?’ ಎಂದು ಜೋರಾಗಿ ಅಂದವನು ಸುತ್ತಲೊಮ್ಮೆ ದಿಟ್ಟಿಸಿದ. ಯಾರೂ ಕಾಣಿಸಲಿಲ್ಲ. ಅನುಮಾನದಿಂದ ಉಸಿರು ಬಿಗಿಹಿಡಿದು ಕಿವಿಗೊಟ್ಟ. ಸಂಭಾಷಣೆಯು ಮರದ ಮೇಲಿನಿಂದ ಬರುತ್ತಿದ್ದುದು ತಿಳಿಯಿತು.
ಕಾಡು ಮಂಗನoತೆ ನಿಶ್ಶಬ್ದವಾಗಿ ಮರ ಹತ್ತಿದ. ಆದರೆ ಅಲ್ಲಿನ ದೃಶ್ಯವನ್ನು ಕಂಡು ಅವಕ್ಕಾದ. ‘ಅಯ್ಯಯ್ಯೋ, ಹಡಬೆಗಳೇ…! ಇದೆಂಥದನಾ ನಿಮ್ಮ ಕೆಲಸಾ…? ಥೂ…ಇಳಿರಾ ಬೇವರ್ಸಿಗಳಾ…!’ ಎಂದು ಗುಡುಗಿದ. ಲಕ್ಷö್ಮಣ ಮತ್ತು ಸರೋಜ ಅವನನ್ನು ಕಂಡವರು ಬೆಚ್ಚಿಬಿದ್ದರು. ಲಕ್ಷ್ಮಣ, ಮಾವನನ್ನು ಗಾಬರಿಯಿಂದ ದಿಟ್ಟಿಸಿದವನು ತಲೆತಗ್ಗಿಸಿ ಕುಳಿತುಬಿಟ್ಟ. ಸರೋಜಾಳ ಮೈಯಿಡೀ ಭಯದಿಂದ ಕಂಪಿಸುತ್ತಿತ್ತು. ಅವಳು, ‘ಅಯ್ಯಯ್ಯೋ…ಅಪ್ಪಾ…!’ ಎಂದು ಕಿರುಚಿ ಬೆಕ್ಕಿನ ಮರಿಯಂತೆ ತಲೆಯನ್ನು ಮೊಣಗಂಟುಗಳೊಳಗೆ ತೂರಿಸಿ ಬಿಕ್ಕಳಿಸುತ್ತ ಕುಳಿತಳು. ವಿಶ್ವನಾಥ ರೋಷದಿಂದ ಮರವಿಳಿದವನು, ‘ಥೂ! ಮಾನಮರ್ಯಾದೆ ಬಿಟ್ಟ ನಾಯಿಗಳೆಲ್ಲಿಯಾದರೂ…! ಇಳಿತಿರಾ ಇಲ್ವಾ…!’ ಎಂದು ಮತ್ತೊಮ್ಮೆ ಅಬ್ಬರಿಸಿದ.
ಆಗ ಇಬ್ಬರೂ ಅಳುಕುತ್ತ ಇಳಿದರು. ಲಕ್ಷ್ಮಣ ಕೆಳಗಿಳಿಯುತ್ತಲೇ ವಿಶ್ವನಾಥ ರಪ್ಪನೆ ಅವನ ಕತ್ತಿನ ಪಟ್ಟಿಯನ್ನು ಹಿಡಿದು ರಪರಪನೆ ಕೆನ್ನೆಗೆ ಬಾರಿಸುತ್ತ, ‘ಬೋಳಿಮಗನೇ, ಯಾವತ್ತಿನಿಂದ ನಡೀತಾ ಇದೆಯಾ ಈ ನಿಮ್ಮ ಹಲ್ಕಟ್ ಕಿತಾಪತಿ…? ನಿನ್ನ ತಂಗಿಯoಥವಳ ಮೇಲೆಯೇ ಕಣ್ಣು ಹಾಕಿಬಿಟ್ಟೆಯಲ್ಲವನಾ ನಾಯೀ…!’ ಎಂದೆನ್ನುತ್ತ ಅವನನ್ನು ಒದ್ದು ದೂರ ತಳ್ಳಿದವನು, ಮಗಳ ಜುಟ್ಟು ಹಿಡಿದು ಬೆನ್ನಿಗೆ ದಬದಬನೇ ಗುದ್ದುತ್ತ ಮನೆಯತ್ತ ಎಳೆದೊಯ್ದ. ಮಾವನ ಒರಟು ಹಸ್ತದೇಟಿಗೆ ಲಕ್ಷ್ಮಣನ ಕೆನ್ನೆಗಳೆರಡೂ ನೋವಿನಿಂದ ಚರ್ರ್ ಗುಟ್ಟುತ್ತಿದ್ದವು. ಅತ್ತ ಅಪ್ಪನ ಹೊಡೆತ ತಾಳಲಾಗದೆ ಸರೋಜಾಳೂ ಚೀರುತ್ತ ಹೋಗುತ್ತಿದ್ದಳು. ಅದನ್ನು ಕಂಡ ಲಕ್ಷ್ಮಣನಿಗೆ ರೋಷ ಉಕ್ಕಿ ಬಂತು. ಆದರೆ ಅದರ ಹಿಂದೆ ತಮ್ಮ ಕಳ್ಳಾಟ ಬಯಲಾದ ದಿಗಿಲೂ ಅವನನ್ನು ಕಾಡತೊಡಗಿತು. ಆದ್ದರಿಂದ ಕೋಪದಿಂದ ಕೈಕೈ ಹಿಸುಕಿಕೊಳ್ಳುತ್ತ ಗುಡ್ಡದ ಕಡೆಗೆ ದಾಪುಗಾಲಿಕ್ಕಿದ.
‘ಛೀ! ನೀನೆಂಥದು ಮಾರಾಯಾ ಮಾತಾಡುವುದು…ಸರಿಯಾಗಿ ನೋಡಿಕೊಂಡು ಮಾತಾಡ್ತಿದ್ದೀಯಾ ಹೇಗೇ…?’
‘ಇನ್ನು ನನ್ನ ಬೊಜ್ಜ ನೋಡುವುದೊಂದು ಬಾಕಿ ಭಾವಾ. ಅವುಗಳ ದರಿದ್ರದ ಆಟವನ್ನು ಇದೇ ಹಾಳು ಕಣ್ಣುಗಳಿಂದ ಈಗಷ್ಟೇ ನೋಡಿ ಬಂದೆ. ಸುಳ್ಳು ಹೇಳಲಿಕ್ಕೆ ನಂಗೇನು ಹುಚ್ಚು ಹಿಡಿದಿದೆಯಾ…?’ ಎಂದು ವಿಶ್ವನಾಥ ಇನ್ನಷ್ಟು ಕುದಿಯುತ್ತ ಅಂದ.
‘ಥೂ! ಈ ಮಕ್ಕಳಿಗೆ ಎಂಥ ಚರ್ಬಿ ಬಂತಪ್ಪಾ…! ಎಲ್ಲಿದ್ದಾವೆ ಅವು? ಕರೆ ಆ ನಾಯಿಗಳನ್ನು…!’
‘ನಿನ್ನ ಮಗ ಎತ್ತಲೋ ಓಡಿ ಹೋಗಿದ್ದಾನೆ. ಇವಳನ್ನು ಹಿಡಿದು ತಂದು ಕೋಣೆಯಲ್ಲಿ ಕೂಡಿ ಹಾಕಿದ್ದೇನೆ!’ ಎಂದ ವಿಶ್ವನಾಥನಿಗೆ ಭಾವನೂ ಕೆರಳಿದ್ದು ಒಣ ಪೊದೆಗೆ ಬೆಂಕಿಯಿಟ್ಟoತಾಯಿತು.
‘ಯಾವುದಕ್ಕೂ ಅವನೊಮ್ಮೆ ಮನೆಗೆ ಬಂದುಕೊಳ್ಳಲಿ. ಇಬ್ಬರ ಹುಚ್ಚನ್ನೂ ಒಟ್ಟಿಗೆ ಬಿಡಿಸಲಿಕ್ಕುಂಟು!’ ಎಂದು ವಿಶ್ವನಾಥ ಧುಮುಗುಟ್ಟುತ್ತ ಹೊರಗೆ ನಡೆದ. ಈ ವಿಷಯವು ಕೂಡಲೇ ಮನೆಮಂದಿಗೆಲ್ಲ ತಿಳಿಯಿತು. ಲಕ್ಷ್ಮಣನ ತಾಯಿ ರತ್ನಕ್ಕ, ಅಜ್ಜ, ಅಜ್ಜಿ, ಅಕ್ಕ, ತಂಗಿ, ಅಣ್ಣ, ತಮ್ಮಂದಿರೂ ಮತ್ತು ಪುಟ್ಟ ಮಕ್ಕಳೆಲ್ಲ ವರಾಂಡದಲ್ಲಿ ಸೇರಿ, ‘ಅಯ್ಯಯ್ಯೋ ದೇವರೇ! ಮುಂದೆನಾಗುವುದೋ…?’ಎoಬ ಭಯ, ದುಃಖದಿಂದ ಮಂಕಾಗಿ ಕುಳಿತುಕೊಂಡರು. ಒಂದು ಗಳಿಗೆಯ ಹಿಂದಷ್ಟೇ ಆನಂದೊಲ್ಲಾಸದಿoದ ತುಂಬಿ ತುಳುಕುತ್ತಿದ್ದ ಆ ಮನೆಯು ಕ್ಷಣಾರ್ಧದಲ್ಲಿ ತೀವ್ರ ವಿಷಾದದ ಸುಳಿಯಲ್ಲಿ ಸಿಲುಕಿ ನರಳತೊಡಗಿತು.
(ಮುಂದುವರೆಯುವುದು)