
*ಜಯ ಸುವರ್ಣರಂಥ ವ್ಯಕ್ತಿ ಬಿಲ್ಲವ ಸಮಾಜಕ್ಕೆ ಇನ್ನು ಸಿಗಲು ಸಾಧ್ಯವಿಲ್ಲ: ಮಾಜಿ ಸಚಿವ ಜನಾರ್ದನ ಪೂಜಾರಿ*
ಮಂಗಳೂರು: ‘ಜಯ ಸುವರ್ಣರ ಜೀವನ ಸಾಧನೆಯ ಗ್ರಂಥ ಇಂದು ನಮ್ಮೆದುರಿಗಿದೆ. ನನಗೆ ಬಹಳ ಆತ್ಮೀಯರಾದ ಅವರು ತೀರಿಕೊಂಡಾಗ ಅತ್ತಷ್ಟು, ನನ್ನ ತಂದೆ ತಾಯಿ ತೀರಿಕೊಂಡಾಗಲೂ ಅತ್ತಿರಲಿಲ್ಲ. ಇನ್ನು ಜಯ ಸುವರ್ಣರಂಥ ವ್ಯಕ್ತಿಯನ್ನು ತಯಾರು ಮಾಡಲಿಕ್ಕೆ ಬಿಲ್ಲವ ಸಮಾಜದಿಂದ ಸಾಧ್ಯವಿಲ್ಲ. ಪ್ರತಿ ದಿವಸ ಅವರನ್ನು ನೆನೆದು ಕಣ್ಣೀರು ಸುರಿಸುತ್ತ ಇದ್ದೇನೆ. ಜಯ ಸುವರ್ಣರಿಗೆ ಸರಿಸಾಟಿ ಬೇರೆ ಯಾರೂ ಇಲ್ಲ. ಇಂಥ ಮತ್ತೊಬ್ಬ ವ್ಯಕ್ತಿಯನ್ನು ಈ ಜನ್ಮದಲ್ಲಿ ನಾವು ಕಾಣಲು ಸಾಧ್ಯವಿಲ್ಲ’ಎಂದು ಕುದ್ರೋಳಿ ಕ್ಷೇತ್ರದ ಜಯ ಸಿ. ಸುವರ್ಣ ಸಭಾಂಗಣದಲ್ಲಿ ಕಳೆದ ರವಿವಾರ ಜನವರಿ14ರಂದು ನಡೆದ ಸಮಾರಂಭದಲ್ಲಿ ಕೇಂದ್ರದ ಮಾಜಿ ಸಚಿವ ಹಾಗೂ ಶ್ರೀಗೋಕರ್ಣ ನಾಥ ಕ್ಷೇತ್ರದ ಅಭಿವೃದ್ಧಿ ರೂವಾರಿಯೂ ಆದ ಬಿ.ಜನಾರ್ದನ ಪೂಜಾರಿಯವರು ನುಡಿದರು.
ಲೇಖಕಿ, ಅನಿತಾ ಪಿ.ತಾಕೊಡೆ ರಚಿಸಿದ ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗ ಪ್ರಕಟಿಸಿರುವ ‘ಸುವರ್ಣಯುಗ’ ಗ್ರಂಥವನ್ನು ಬಿಡುಗಡೆಗೊಳಿಸಿ ಮಾತನಾಡಿದ ಜನಾರ್ದನ ಪೂಜಾರಿಯವರು, ಜೀವನದಲ್ಲಿ ಜಯ ಸುವರ್ಣರಂತೆ ಮತ್ತೊಬ್ಬರು ಸಿಕ್ಕಿಲ್ಲ. ಅವರನ್ನು ಈ ಸಮಾಜಕ್ಕೆ ಮತ್ತೆ ಯಾವ ರೀತಿ ತರಬಹುದೆಂದು ಯೋಚಿಸಿ ಕಣ್ಣೀರು ಹಾಕಿದ್ದೆ ಎಂದು ತಮ್ಮ ಆತ್ಮೀಯತೆಯ ನೆನಪುಗಳನ್ನು ಭಾವುಕರಾಗಿ ತೆರೆದಿಟ್ಟರು.
ಜನಮನದ ನಾಯಾಕ, ಬ್ಯಾಂಕಿಂಗ್ ಕ್ಷೇತ್ರದ ಮುತ್ಸದ್ದಿ ಜಯ ಸಿ. ಸುವರ್ಣ ಅವರ ಸುಪುತ್ರ, ಭಾರತ್ ಬ್ಯಾಂಕ್ನ ಕಾರ್ಯಾಧ್ಯಕ್ಷರಾದ ಸೂರ್ಯಕಾಂತ್ ಜಯ ಸುವರ್ಣ ಅವರ ಅಧ್ಯಕ್ಷತೆಯಲ್ಲಿ ಈ ಕಾರ್ಯಕ್ರಮವು ಬಹಳ ಅದ್ದೂರಿಯಾಗಿ ನೆರವೇರಿತು.

ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಆರ್. ಪದ್ಮರಾಜ್ ಅವರು ಅಭಿನಂದನ ಭಾಷಣದಲ್ಲಿ, ಸರಳತೆಯ ಮುಖೇನವೇ ಬಿಲ್ಲವ ಸಮಾಜದ ಹಾಗೂ ಸಮಸ್ತರ ಏಳಿಗೆಗಾಗಿ ನಿರಂತರ ಶ್ರಮಿಸಿದ ಜಯ ಸಿ.ಸುವರ್ಣ ಅವರು ಸಮಾಜದ ಅಮೂಲ್ಯ ರತ್ನ ಎಂದು ಹೇಳಿದರು.
ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿಯವರು ಮಾತನಾಡಿ ಸಾಮಾಜಿಕ ಚಿಂತಕ ಜಯ ಸುವರ್ಣ ಅವರ ವ್ಯಕ್ತಿತ್ವದ ಬಗ್ಗೆ ಅಭಿಮಾನ ವ್ಯಕ್ತಪಡಿಸಿ, ಜಯ ಸುವರ್ಣರು ಎಲ್ಲ ಸಮಾಜವನ್ನು ಪ್ರೀತಿಸಿ, ಗೌರವಿಸಿ ಸಹಕಾರ ನೀಡಿದವರು. ಅವರು ಬದುಕಿನಲ್ಲಿ ಅನೇಕ ಸವಾಲುಗಳನ್ನು ಗೆದ್ದು ಬಂದವರು. ಅವರ ವ್ಯಕ್ತಿತ್ವ ಸಮಾಜಕ್ಕೆ ಮಾದರಿಯಾಗಿದ್ದು, ಅವರ ದಾರಿಯಲ್ಲಿ ನಾವು ಮುನ್ನಡೆಯಬೇಕಾಗಿದೆ ಎಂದರು. ಮಾಜಿ ಸಚಿವ, ಕೆಪಿಸಿಸಿ ಉಪಾಧ್ಯಕ್ಷ ರಮಾನಾಥ ರೈ, ವಿನಯ ಕುಮಾರ್ ಸೊರಕೆ, ರುಕ್ಕಯ ಪೂಜಾರಿ ಜಯ ಸುವರ್ಣರ ಕುರಿತು ತಮ್ಮ ಮನದಾಳದ ಮಾತುಗಳನ್ನಾಡಿದರು..
ವೇದಿಕೆಯಲ್ಲಿ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಅಧ್ಯಕ್ಷ ಹೆಚ್.ಎಸ್ ಸಾಯಿರಾಂ, ಕ್ಷೇತ್ರದ ಕಾರ್ಯದರ್ಶಿ ಮಾಧವ ಸುವರ್ಣ, ಬೆಂಗಳೂರು ಬಿಲ್ಲವ ಅಸೋಸಿಯೇಶನ್ ಅಧ್ಯಕ್ಷ ಎಂ. ವೇದಕುಮಾರ್, ಭಾರತ್ ಬ್ಯಾಂಕ್ ನಿರ್ದೇಶಕ ಭಾಸ್ಕರ್ ಎಂ.ಸಾಲ್ಯಾನ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ಸತ್ಯಜಿತ್ ಸುರತ್ಕಲ್, ಹರಿಕೃಷ್ಣ ಬಂಟ್ವಾಳ್, , ಕಂಕನಾಡಿ ಗರಡಿ ಕ್ಷೇತ್ರದ ಅಧ್ಯಕ್ಷ ಚಿತ್ತರಂಜನ್ ಗರಡಿ, ಗೆಜ್ಜೆಗಿರಿ ಕ್ಷೇತ್ರದ ಅಧ್ಯಕ್ಷ ಪಿತಾಂಬರ ಹೆರಾಜೆ, ಕ್ಷೇತ್ರದ ಅಭಿವೃದ್ಧಿ ಸಮಿತಿ ಸದಸ್ಯ ಲೀಲಾಕ್ಷ ಕರ್ಕೆರಾ. ಗೀತಾಂಜಲಿ ಸುವರ್ಣ, ಕೇಂದ್ರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಮಹೇಶ್ ಕುಮಾರ್ ಗಣೇಶ್ ಅಮೀನ್ ಸಂಕಮಾರ್, ದೇವೇಂದ್ರ ಪೂಜಾರಿ, ಎಸ್.ಕೆ.ಸಾಲ್ಯಾನ್, ಬಿ.ಎನ್.ಶಂಕರ ಪೂಜಾರಿ ಮತ್ತಿತರ ಗಣ್ಯರು ಉಪಸ್ಥಿತರಿದ್ದು,
ಕೃತಿಕರ್ತೆ ಅನಿತಾ ಪಿ.ತಾಕೊಡೆ ಅವರನ್ನು ಅಭಿನಂದಿಸಿ ಸನ್ಮಾನಿಸಿದರು. ನಿವೃತ್ತ ಪ್ರಾಧ್ಯಾಪಕರಾದ ಅಡ್ಡೆ ರವೀಂದ್ರ ಪೂಜಾರಿಯವರು ಸುವರ್ಣಯುಗ ಗ್ರಂಥವನ್ನು ಪರಿಚಯಿಸಿದರು. ಮೋಹನ್ ಪಡಿಲ್ ಪ್ರಾರ್ಥನೆಯನ್ನಾಡಿದರು. ಚಂದ್ರಹಾಸ್ ಕಳಂಜ ಮತ್ತು ನಿತ್ಯಾನಂದ ಡಿ. ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು. ಗಂಗಾಧರ್ ಜೆ ಪೂಜಾರಿ , ಅಶೋಕ್ ಸಸಿವಿತ್ಲು ಮತ್ತಿತರರು ಸಹಕರಿಸಿದರು,